ಮಹಾನಗರವೆಂದರೆ ಸುಮ್ಮನೆ ಅಲ್ಲ. ಬಟ್ಟೆಯನ್ನು ಶಿಲೆಗಲ್ಲಿಗೆ ಕುಟ್ಟಿ, ಬ್ರಷ್ ನಲ್ಲಿ ಉಜ್ಜಿ, ನೀರಲ್ಲಿ ಮುಳುಗಿಸಿ, ಅಡಿಮೇಲೆ ಮಾಡಿ ಸುಡುಬಿಸಿಲಿಗೆ ನೇತು ಹಾಕುತ್ತೇವಲ್ಲ, ಹಾಗೆ ನಮ್ಮೊಳಗೆ ಹೊಳಪು ತರಲು ಅದು ಮಾಡದಿರುವ ಕಸರತ್ತೇ ಇಲ್ಲ.

ಅವನೋ ಹಳ್ಳಿಯಿಂದ ಬಂದವನು. ಮಹಾನಗರದಲ್ಲಿ ಹೆಜ್ಜೆಯಿಟ್ಟ ಮೊದಲ ದಿನವೇ ಕಂಡಕ್ಟರು ಚೇಂಜ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಸಿಕ್ಕಾಪಟ್ಟೆ ಬೈದ. ಕಾಲೇಜ್ ಹುಡುಗಿಯೊಬ್ಬಳು ಸಿಗ್ನಲ್ ಕ್ರಾಸ್ ಮಾಡಿ ಟ್ರಾಫಿಕ್ ಪೋಲಿಸ್ ಕೈಲಿ ಸಿಕ್ಕಿ ಹಾಕಿಕೊಂಡಾಗ ಸಾರ್, ಎಕ್ಸಾಮ್ ಗೆ ಹೊರ್ಟಿದೀನಿ ಈಗ್ಲೇ ತಡಾ ಆಯ್ತು ಅಂತ ಹಸೀ ಸುಳ್ಳು ಹೇಳಿ ತಪ್ಪಿಸಿಕೊಂಡಿದ್ದನ್ನು ನೋಡಿದ. ರಸ್ತೆಯಲ್ಲಿ ನಡೆವ ಚಿಕ್ಕ ಪುಟ್ಟ ಆಕ್ಸಿಡೆಂಟುಗಳಲ್ಲಿ ಬಾಯ್ಮಾತು ಚೆನ್ನಾಗಿದ್ದವನದೇನೂ ತಪ್ಪಿರಲ್ಲ ಎಂಬುದನ್ನು ಅರಿತ. ಥಿಯೇಟರ್ ನಲ್ಲಿ ಟಿಕೇಟ್ ಸಿಗದೇ ಒದ್ದಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿ ನಿಂತಿದ್ದ ಮಿನಿಸ್ಟ್ರ ಮಗನಿಗೆ ಒಂದು ಫೋನ್ ಕಾಲ್ ಮೂಲಕ ಟಿಕೇಟ್ ಹೇಗೆ ಸಿಕ್ಕಿತು ಎಂದು ಅಚ್ಚರಿ ಪಟ್ಟ. ಟ್ರಾಫಿಕ್ಕಿನಿಂದಾಗಿ ಗಂಟೆಗಟ್ಟಲೆ ಬಸ್ಸೊಳಗೇ ಇರಬೇಕಿದ್ದರೂ ಇದು ಸಾಮಾನ್ಯವೇ ಅಂತ ಸುಮ್ಮನೆ ತಾಳ್ಮೆಯಿಂದ ಕುಳಿತ ಜನರನ್ನು ಕಂಡ. ಒಂದು ಕಾಫಿಗೂ ಹನ್ನೆರಡು ರೂಪಾಯಿ ಕೊಡಬೇಕಾದ, ರೂಮು ರೆಂಟಿಗೇ ಮೂರು ಸಾವಿರ ನೀಡಬೇಕಿರುವ ಈ ಊರಿಗೆ ದೂರದ ಬೀದರಿನಿಂದ ಆರು ಸಾವಿರ ಪಗಾರದ ಸಪ್ಲಾಯರ್ ಕೆಲಸಕ್ಕೆಂದು ಬಂದಿದ್ದ ವ್ಯಕ್ತಿಯ ಜೊತೆ ಕುಶಲೋಪರಿ ಮಾತಾಡಿದ. ನಿನ್ನೆಯಷ್ಟೇ ಪರಿಚಯವಾದ ಒಬ್ಬ ನೇರವಾಗಿ ಲಜ್ಜೆಯಿಲ್ಲದೇ ಒಂದೈದು ಸಾವ್ರ ಸಾಲ ಇದ್ರೆ ಕೊಡ್ತೀಯಾ ಗುರೂ, ನಾಳೆ ವಾಪಸ್ ಮಾಡ್ಬಿಡ್ತೀನಿ ಅಂತ ಆತ್ಮವಿಶ್ವಾಸದಿಂದ ಹೇಳುವುದನ್ನು ಸಾಲ ಕೊಡಲಾಗದ ಗಿಲ್ಟಿನಿಂದ ಕೇಳಿದ. ಇಸ್ತ್ರಿ ಅಂಗಡಿಯಲ್ಲಿ ಎಂಟು ರೂಪಾಯಿ ಬಿಲ್ಲಾದಾಗ ನೀಡಿದ ಹತ್ತು ರೂಪಾಯಿಗೆ ಎರಡು ರೂಪಾಯಿ ವಾಪಸ್ಸು ಬರುವುದೇ ಇಲ್ಲ. ಚೇಂಜಿಲ್ಲ ಎಂಬ ಎರಳ್ಡು ರೂಪಾಯಿ ಬೆಲೆಬಾಳದ ಉತ್ತರ ಸಿಗುತ್ತದೆ. ಚೀಟಿಯಲ್ಲಿ ಕಂಡೆಕ್ಟರು ಬರೆದುಕೊಡುವ ಬಾಕಿ, ತಾನು ಇಳಿವ ಸ್ಟಾಪ್ ಬಂದಾಗ ಕಂಡಕ್ಟರು ಬಸ್ಸಿನ ಮುಂತುದಿಯಲ್ಲಿರುತ್ತಾನೆ. ಆ ರಶ್ಶಿನಲ್ಲಿ ಇಂಥ ಅನೇಕ ಘಟನೆಗಳೇ ಕಂಡಕ್ಟರನ ‘ಗಳಿಕೆ’ಗಳು.

ಇಲ್ಲಿ ಮಾಡಿದ ತಪ್ಪನ್ನೂ ಆತ್ಮವಿಶ್ವಾಸದಿಂದ ಹೇಳುವುದನ್ನು, ಸುಳ್ಳನ್ನು ಸತ್ಯದ ಮೇಲೆ ಪ್ರಮಾಣ ಮಾಡಿ ಹೇಳೋದನ್ನು ಕಲೀಬೇಕು ಬಾಸೂ… ಮೊದಲೆಲ್ಲ ಸಿಗ್ನಲ್ ಎಗರಿಸಿ ಗಾಡಿ ಓಡಿಸಿದರೆ ಟ್ರಾಫಿಕ್ ಪೋಲಿಸ್ ಗಮನಿಸದೇ ಇದ್ದರೂ ತಾನೇ ಹೋಗಿ ಫೈನ್ ಕಟ್ಟಿದ್ದೆ ಅನ್ನುವುದು ಹೀರೋಯಿಸ್ಮ್ ಆಗಿತ್ತು. ಈಗ ಅದನ್ನು ದಡ್ಡತನ ಅಂತಾರೆ. ಹಾಗೆ ಮಾಡಿದವನನ್ನು ಎಲ್ಲರೂ ಅನುಕಂಪದಿಂದ ನೋಡ್ತಾರೆ. ಈಗ ಸಿಗ್ನಲ್ ಜಂಪ್ ಮಾಡಿ ಅದನ್ನ ಯಾವ ರೀತಿ ಸುಳ್ಳು ಹೇಳಿ ಫೈನ್ ನಿಂದ ಬಚಾವಾದೆ ಅಂತ ಯಾರಿಗಾದ್ರೂ ವಿವರಿಸಿ ನೋಡು. ಜಗತ್ತಿನಲಿ ನೀನೇ ದೊಡ್ಡ ಬುದ್ಧಿವಂತ ಅನ್ನೋ ಧಾಟಿಯಲಿ ನೋಡ್ತಾರೆ. ಇದು ಈಗಿನ ಬದುಕು ಬಾಸೂ.. ಬೇಗ ಅಪ್ಡೇಟ್ ಆಗಬೇಕು.. ಅಂತ ರೂಂಮೇಟ್ ಅನ್ನುವುದನ್ನು ವಿಪರೀತ ಮುಗ್ದತನದಲ್ಲಿ ಕೊನೆಯ ಸಾಲಿಗೆ ಬರುವಷ್ಟರಲ್ಲಿ ಒಂದಿಷ್ಟು ಆತಂಕವನ್ನೂ ಬೆರೆಸಿ ನೋಡುತ್ತಾನೆ.

ಅಪ್ಪಾ, ನೀ ಆರಾಮಿದ್ದಿ ಅಲ್ಲ. ಬೀಪಿ ಟ್ಯಾಬ್ಲೆಟ್ಟು ತಗೊಳ್ಳೊದನ್ನ ಮರೀಬೇಡ. ನಾ ಚೆನ್ನಾಗಿದ್ದ ಹಾಗೆ ಇದ್ದೇನೆ. ಈ ಊರಲ್ಲಿ ಯಾರೂ ನನ್ನವರು ಅನ್ನಿಸುವುದಿಲ್ಲ. ಈ ಊರ ಜನರ ಮುಂದೆ ನಾನು ಹದಿನೈದು ವರ್ಷ ಹಿಂದಿನವನಂತೆ ಅನ್ನಿಸುತ್ತಿದ್ದೇವೆ. ನನ್ನ ನಡಿಗೆ ಈ ಊರಿನ ಓಟದ ಮುಂದೆ ಏನೂ ಅಲ್ಲ ಅನಿಸ್ತಿದೆ. ಇಲ್ಲಿ ಬದುಕಲಿಕ್ಕೆ ಸುಳ್ಳು ಹೇಳೋದು ಮಾತ್ರ ಅಲ್ಲ, ಸುಳ್ಳು ಹೇಳುವವರನ್ನು ಗುರುತಿಸುವ ಕಲೇನೂ ತಿಳಿದಿರ್ಬೇಕು. ಮುಖದ ಯಾವ ನೆರಿಗೆಯಲ್ಲೂ ಗಿಲ್ಟಿನ ಲವಲೇಷವೂ ಸುಳಿಯದಂತೆ ಸುಳ್ಳು ಹೇಳೋದಕ್ಕೆ ಬರಬೇಕು.

ಬೆಳಿಗ್ಗೆ ಆಗ್ತಾ ಇದ್ದ ಹಾಗೆ ಎದುರಾಗೋ ಮಂದಿಯಲ್ಲಿ ನನ್ನ ನಾನು ರಕ್ಷಿಸಿಕೊಳ್ತಾ ಬದುಕಬೇಕು. ಒಂಚೂರು ಮೈಮರೆತರೂ ಮೋಸಹೋಗ್ತೀನಿ. ತುಂಬಾ ಕಷ್ಟವಾಗುತ್ತಿದೆ ಅಪ್ಪಾ, ನಾನು ಊರಿಗೆ ಬಂದುಬಿಡುತ್ತೇನೆ. ನೀನು ನನ್ನ ಮೇಲೆ ಜೋಡಿಸಿಟ್ಟ ಅಪಾರ ಕನಸುಗಳ ತೀರಿಸಲಾದದೇ ಹೋದುದಕ್ಕೆ ಇದೊಂದು ಸಲ ಕ್ಷಮಿಸಿಬಿಡು. ನನ್ನನ್ನೂ ನಿನ್ನ ಜೊತೆಯಲೇ ಇರಲು ಬಿಡು.

ಹೀಗೆ ಬರೆದ ಪತ್ರವೊಂದನ್ನು ಅಂಚೆಪೆಟ್ಟಿಗೆ ಹಾಕಲು ಹೋದಾಗ ತಂದೆಯ ಸೋತ ಮುಖ ಎದುರಿಗೆ ಬಂದಂತಾಗಿ ಭಯದಿಂದ ಹರಿದು ಹಾಕುತ್ತಾನೆ.

ಪಾರ್ಕಿನ ಮೂಲೆಯೊಂದರಲ್ಲಿ ಕೂತು ಈ ಊರಲ್ಲಿ ಪಳಗಬೇಕೆಂದರೆ ಒಂದೋ, ಒಬ್ಬೊಬ್ಬರಿಂದಲೂ ಇಂಥ ಅನೇಕ ಕಲೆಗಳನ್ನು ಕಲಿತು ಅವರಲ್ಲೊಬ್ಬರಾಗಬೇಕು. ಇಲ್ಲವೇ, ವ್ಯವಸ್ಥೆಯನ್ನು ದೂರಿಕೊಂಡು ಮೋಸಹೋಗುತ್ತಾ ಬದುಕಬೇಕು. ಈ ಎರಡು ರಸ್ತೆ ಸೇರುವ ಕಾರ್ನರಿನಲ್ಲಿ ಅರ್ಧ ಟೀ ಕುಡಿಯುತ್ತಾ ಆಲೋಚಿಸುತ್ತಿದ್ದ ಅವನು.

ಮಹಾನಗರ, ಬಟ್ಟೆಯನ್ನು ತಿರುವಿಹಾಕಿ ಸುಡುಬಿಸಿಲಲಿ ಒಣಗಿಸಲನುವಾಯ್ತು.

ಅವತ್ತು ಹೊಸ ಚಿತ್ರ ತಂಡವೊಂದರ ಸಂದರ್ಶನವಿತ್ತು.

ನನಗೆ ಅಗತ್ಯವಿದ್ದ ಎಲ್ಲ ಪ್ರಶ್ನೆಗಳ ಸಿದ್ಧತೆ ನಡೆಸಿಕೊಂಡು ತಯಾರಾಗಿದ್ದೆ. ‘ನಿಮಗೆ ಹೇಗನ್ಸುತ್ತೆ?’ ಯಂಥ ಚಿಲ್ಲರೆ ಪ್ರಶ್ನೆಗಳನ್ನು ಮೀರಿದ್ದೇನನ್ನೊ, ಬೇರೆಲ್ಲೂ ಓದಿರದ ಸೂಕ್ಷ್ಮ ಒಳಪದರಗಳನ್ನು ಸ್ಪರ್ಶಿಸಬೇಕು, ಓದುಗರಿಗೆ ಹೊಸ ಸಿನಿಮಾದ ಅಂತರಂಗದ ಹೊಸ ಪಲುಕಗಳನ್ನು ತೋರಿಸಬೇಕೆಂಬುದು ನನ್ನ ಆಶಯವಾಗಿತ್ತು. ಹೊಸ ತಂಡ, ಸಹಜವಾಗಿಯೇ ತುಂಬ ಅಡೆತಡೆಗಳನ್ನು ಮೀರಿ ಸಿನಿಮಾ ಮುಗಿಸಿದ್ದವು. ಪಟ್ಟ ಪಾಡುಗಳನ್ನೆಲ್ಲವನ್ನೂ ವಿವರಿಸುವ ಹಪಾಹಪಿಯಲ್ಲಿರುತ್ತಾರೆ. ಎಲ್ಲವನ್ನೂ ಶಾಂತಿಯಿಂದ ಕೇಳಿಸಿಕೊಂಡು ನನಗೆ ಬೇಕಾದ ಕೆಲವಂಶಗಳನ್ನು ಹೆಕ್ಕಿ ಕೇಳುವುದು ಸಾಮಾನ್ಯವಾಗಿ ಇಂಥ ಸಂದರ್ಶನಗಳಲ್ಲಿ ನನ್ನ ಅಜೆಂಡಾ ಆಗಿರುತ್ತದೆ.

ಸಂದರ್ಶನ ಶುರುವಾಯಿತು. ಎಂದಿನಂತೆ ಒಂದೊಂದೇ ಪ್ರಶ್ನೆಗಳ ಮೆಟ್ಟಿಲು ಹತ್ತುತ್ತಾ ಹೊಸ ಸಿನಿಮಾದ ಬಗ್ಗೆ ವಿವರ ಕಲೆಹಾಕಿಕೊಳ್ಳುತ್ತಿದ್ದೆ. ಹೆಚ್ಚಾಗಿ ಯಾವ ಸಿನಿಮಾದವರೂ ಪೋಷಕವರ್ಗದ ನಟರ ಬಗ್ಗೆ ಎಲ್ಲೂ ಜಾಸ್ತಿ ಹೇಳಿಕೊಳ್ಳುವುದಿಲ್ಲ. ಆದರೆ ಹೊಸ ಚಿತ್ರತಂಡದವರು ಹೇಳಿಕೊಳ್ಳಲು ಬಯಸುತ್ತಾರೆ. ಬಹುಶಃ ಜನಪ್ರಿಯ ಹೆಸರುಗಳಿರುವುದು ಚಿತ್ರದ ಮಾರ್ಕೆಟಿಂಗ್ ಗೆ ಒಂದು ಅಡ್ವಾಂಟೇಜ್ ಆಗಿರುತ್ತದೆಂಬುದು ಅವರ ಉದ್ದೇಶ. ಈ ಚಿತ್ರದ ಪೋಷಕವರ್ಗದ ಬಗ್ಗೆ ಕೇಳಿದಾಗ ನಿರ್ಮಾಪಕ ನಿರ್ದೇಶಕರು ಬಹಳ ಉತ್ಸಾಹದಿಂದ ಕೆಲವು ಪೋಷಕನಟರ ಹೆಸರು ಹೇಳಿದರು. ಅದರಲ್ಲಿ ಕೊನೆಯದಾಗಿ ಮೆಲ್ಲ ಉಸುರಿದ ಪೋಷಕ ನಟನ ಹೆಸರು ಮಾತ್ರ ಹೇಳಲೋ ಬೇಡವೋ ಎಂಬಂತಿತ್ತು.

ಆವರು ಒಂದೆರಡು ವರ್ಷದ ಹಿಂದೆ ವಿಧಿವಶರಾಗಿದ್ದ ಬಹಳ ಹಿರಿಯ ಕಲಾವಿದರು. ಬಹುಶಃ ಈ ಹೊಸ ತಂಡದ ಚಿತ್ರವೇ ಕೊನೆಯ ಚಿತ್ರವಾಗಿದ್ದಿರಬೇಕು. ಹಾಗಾಗಿ ನಾನು ಬಹಳ ಕುತೂಹಲಗೊಂಡೆ. ಅದೇ ವಿಷಯವನ್ನೇ ವಿಚಾರಿಸಿದೆ. ಆದರೆ ಆ ನಿರ್ದೇಶಕ, ನಿರ್ಮಾಪಕರಿಬ್ಬರೂ ಕೊಂಚ ಗಲಿಬಿಲಿಗೊಂಡರು. ಆ ಕಲಾವಿದ ನಿರ್ವಹಿಸಿದ ಪಾತ್ರದ ಕುರಿತು, ಅವರ ಕುರಿತು ಮಾತಾಡಿದರೂ ಕೊನೆಗೆ ಸ್ವಲ್ಪ ಸಂಕೋಚದಿಂದ ‘ಅವರು ಈ ಚಿತ್ರದಲ್ಲಿ ಅಭಿನಯಿಸಿದುದರ ಕುರಿತು ಜಾಸ್ತಿ ಬರೆಯಬೇಡಿ ಸರ್’ ಅಂದರು.

ಅಚ್ಚರಿಯಿಂದ, ‘ಯಾಕ್ರೀ? ಅಂಥ ಒಳ್ಳೇ ಕಲಾವಿದ ನಿಮ್ಮ ಚಿತ್ರದಲ್ಲಿ ಅಭಿನಯಿಸಿದ್ದಕ್ಕೆ ನೀವು ಹೆಮ್ಮೆ ಪಡಬೇಕಲ್ವಾ’ ಅಂತ ಕೇಳಿದಾಗ ಅವರು ಇತ್ತ ಉತ್ತರ ಕೇಳಿ ಒಳಜೀವ ತತ್ತರಿಸಿತು.

ಆ ನಿರ್ದೇಶಕ, ‘ಸರ್, ಅವರು ತೀರಿಹೋಗಿ ಒಂದೆರಡು ವರ್ಷವೇ ಆಯಿತು. ಅವರು ಅಭಿನಯಿಸಿದ್ದನ್ನು ಹೈಲೈಟ್ ಮಾಡಿದರೆ, ಈ ಚಿತ್ರ ಒಂದು ಹಳೆಯ ಪ್ರಾಡಕ್ಟ್ ಅಂತ ಇಡೀ ಚಿತ್ರರಂಗ ಒಂಥರಾ ನಿಷ್ಕಾಳಜಿ ತೋರುತ್ತೆ ಅಲ್ವಾ, ಹಾಗೇನೇ ಪ್ರೇಕ್ಷಕನಿಗೂ ಇದರ ಮೇಲೆ ಇಂಟ್ರಸ್ಟ್ ಕಡಿಮೆ ಆಗುವ ಸಾಧ್ಯತೆ ಇದೆ. ಆ ಅಂಶ ಬಿಟ್ಟು ಉಳಿದ ಕಲಾವಿದರ ಬಗ್ಗೆ ಬರೀರಿ ಸರ್’ ಅಂದರು!

ಅವಧಿ, ಓದುಗರ ಬಳಿ ಕಳೆದ ವರ್ಷ ಓದಿದ ಬೆಸ್ಟ್ ಪುಸ್ತಕಗಳ ಟಾಪ್ ಟೆನ್ ಪಟ್ಟಿ ಕೇಳ್ತಿದೆ. ಅದನ್ನು ನೋಡಿದಾಗ ನನಗೂ ಪಟ್ಟಿ ಮಾಡಬೇಕನ್ನಿಸಿತು. ಕಳೆದ ವರ್ಷ ಓದಿದ ತುಂಬಾ ಕಾಡಿದ ಪುಸ್ತಕಗಳ ಪಟ್ಟಿ ಇದು:-

೧. ಚಾರ್ಮಿನಾರ್ – ಜಯಂತ್ ಕಾಯ್ಕಿಣಿ

೨. The Professional – Subrato Bagchi

೩. ಹಲಗೆ ಬಳಪ – ಜೋಗಿ

tAzaELrA

೪. ಟೆಂಟ್ ಸಿನಿಮಾ – ಬೀಚಿ

೫. ಆಕಾಶಕ್ಕೊಂದು ಕಂದೀಲು! – ವ್ಯಾಸರಾಯ ಬಲ್ಲಾಳ

೬. ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ್

cDuUwUF6

೭. ಬಾಳ್ವೆಯೇ ಬೆಳಕು – ಡಾ. ಶಿವರಾಮ ಕಾರಂತ

೭. ಕಲ್ಲು ಕರಗುವ ಸಮಯ – ಪಿ.ಲಂಕೇಶ್

೮. The Winning Way – Harsha Bhogle

೯. What Young India Wants – Chethan Bhagat

ChetanBhagatWhatYoungIndiaWantsEDIT

೧೦. ಎದೆಗಾರಿಕೆ – ಅಗ್ನಿ ಶ್ರೀಧರ್

(ಈ ಲೇಖನ “ಪೃಥ್ವಿ” ಮ್ಯಾಗಜೀನ್ ಗಾಗಿ ಬರೆದದ್ದು)

ಭಟ್ಟರು, ಉಡಾಫೆ ಮತ್ತು ವಿನಯ!

ಜಯಂತ್ ಕಾಯ್ಕಿಣಿಯವರ ಹಾಡುಗಳು ಅಂದರೆ ಕಾಡಿನ ಮಧ್ಯೆ ಸಿಕ್ಕುವ ಅಪ್ಪಟ ಶುದ್ಧ ನೀರು, ನನ್ನದು ಬಿಡಿ, ಎಲ್ಲಂದರಲ್ಲಿ ಸಿಗಬಹುದಾದ ಬಿಸ್ಲೇರಿ” ಅಂತ ಹೇಳಿ ಒಮ್ಮೆ ತಮ್ಮ ವಿನಯ ಮೆರೆದಿದ್ದ ಯೋಗರಾಜ್ ಭಟ್ಟರು ಈಗ ಮತ್ತೊಮ್ಮೆ ಸಂಗೀತ ಬ್ರಹ್ಮ ಹಂಸಲೇಖಾ ಎದುರು ನಾವೆಲ್ಲಾ ಏನೂ ಅಲ್ಲ ಅಂತ ಹೇಳಿ ತಾವಿನ್ನೂ ಸಾಧಿಸುವುದು ತುಂಬಾ ಇದೆ ಅನ್ನುವುದನು ಸೂಚ್ಯವಾಗಿ ಹೇಳಿದ್ದಾರೆ. ಭಟ್ಟರು ಅಂದರೆ ತಮ್ಮ ಹಾಡುಗಳಲ್ಲಿನ, ಸಂಭಾಷಣೆಯಲ್ಲಿನ ಉಡಾಫೆಯ ಲೇಪಕ್ಕೆ ಹೆಸರುವಾಸಿ. ಆ ಉಡಾಫೆಯನ್ನು ತಮ್ಮ ನಿರ್ದೇಶನದಲ್ಲಿ ಕಥೆಗೂ ವಿಸ್ತರಿಸಿದಾಗ ಪ್ರೇಕ್ಷಕರು ಎಂಥಾ ಗೂಸಾ ಕೊಟ್ಟರೆಂದರೆ ಪುನೀತ್, ಐಂದ್ರಿತಾ, ಅದ್ಭುತ ಹಾಡುಗಳು, ಸುಂದರ ದೃಶ್ಯಾವಳಿ ಇದ್ದರೂ “ಪರಮಾತ್ಮ” ಚಿತ್ರ ನೆಲಕ್ಕಚ್ಚಿತ್ತು.
ಈಗ ಬಹುನಿರೀಕ್ಷೆಯ “ಡ್ರಾಮಾ” ಬರಲಿದೆ. ಎಂದಿನಂತೆ ಮಾತಲ್ಲದೇ, ಕತೆಯೂ ಇದೆ ಅನ್ನುತ್ತಾ ಮಾತುಕತೆಯಾಡುತ್ತಿದ್ದ ಭಟ್ಟರು, ಹಂಸ್ ಸಾವಿರಕ್ಕೂ ಹೆಚ್ಚು ಹಾಡು ಬರೆದವರು, ಜಾನಪದ ಅರೆದು ಕುಡಿದವರು ಅಂಥವರ ಮುಂದೆ ಐವತ್ತು ಅರವತ್ತು ಹಾಡುಗಳನ್ನು ಬರೆದ ತಾವೇನೂ ಅಲ್ಲ ಅಂದರು.

ಹಿರಿಯ ಲೇಖಕರೊಬ್ಬರು “ಬರೆಯುವಾಗ ಆತ್ಮವಿಶ್ವಾಸ ಅಹಂಕಾರದಷ್ಟು ಎತ್ತರವಿರಬೇಕು, ಬರೆದಿದ್ದನ್ನು ತೋರುವಾಗ ವಿನಯ, ವಾಮನ ಬಲಿಯನ್ನು ತುಳಿಯಲು ಹೇಗೆ ಬೆಳೆಯುತ್ತಾನೋ ಹಾಗಿರಬೇಕು” ಅಂದಿದ್ದರು.

ಭಟ್ಟರು ಅಂತದ್ದೇ ಹಾದಿಯಲ್ಲಿ ನಡೆಯುತ್ತಿದ್ದಾರಾ!

****

ನೀವೇ ಹೇಳಿ ಸಾರ್!

ಒಂದಿಷ್ಟು ಸಮಯದ ಹಿಂದೆ, ಎಸ್. ನಾರಾಯಣ್ ಚಿತ್ರರಂಗ ಬಿಡುತ್ತೇನೆ ಎಂದು ಹೆದರಿಸಿದ್ದರು. ಅವರ ಸಮಯಬಧ್ಧತೆ, ಶಿಸ್ತುಪಾಲನೆ ಗಮನಿಸಿದ ಗಾಂಧಿನಗರಿಯ ಮಂದಿ, ಇನ್ನು ನಾರಾಯಣ್ ವಾಪಸ್ಸು ಬರುವುದಿಲ್ಲ, ಆ ವಿಷಯದಲ್ಲಿ ಅವರು ಕೊಟ್ಟ ಮಾತಿಗೆ ಕಟ್ಟುನಿಟ್ಟು ಅಂತಲೇ ಭಾವಿಸಿದ್ದರು. ಅದು ಸುಳ್ಳಾದದ್ದು ಹಳೆಯ ಸುದ್ಧಿಯಾತು. ಈಗ ಅವರು ರಮೇಶ್, ಮೋಹನ್ ಜೊತೆಯಲ್ಲಿ ಹಾಸ್ಯ ಚಿತ್ರವೊಂದನ್ನು ಮಾಡಲು ತಯಾರಾಗಿದ್ದಾರೆ. “ಕುರಿಗಳು ಸಾರ್ ಕುರಿಗಳು” ಚಿತ್ರದಲ್ಲಿ ಈ ಕಾಂಬಿನೇಶನ್ ಕೊನೆಯಬಾರಿ ಕಾಣಿಸಿಕೊಂಡಿತ್ತು. ಈ ಬಾರಿ ಜೊತೆಯಾಗಲಿರುವ ಚಿತ್ರಕ್ಕೆ ಏನು ಹೆಸರು ಸಾರ್ ಅಂತ ಕೇಳಿದರೆ, ಕುರಿಯಾಯ್ತು ಕೋತಿಯಾಯ್ತು, ಇನ್ನೂ ಬೇಜಾನ್ ಪ್ರಾಣಿಗಳಿವೆಯಲ್ಲಾ ತೊಂದರೆಲ್ಲ ಅನ್ನುವಂತೆ ನಕ್ಕರೂ, ನೀವೇ ಏನಾದ್ರೂ ಹೇಳಿ ಸಾರ್ ಅಂತ ಪ್ರೇಕ್ಷಕರನ್ನೇ ಕೇಳ್ತಿದಾರೆ!

***

ಬಿಸಿ ಬಿಸಿ ದೋಸೆ

ಲೂಸ್ ಮಾದ ಯೋಗಿ ಮತ್ತು ಬೆಡಗಿ ರಮ್ಯಾ ಜೋಡೀನಾ ಅಂತ ಮೂಗೆಳೆದಿದ್ದರು ಆಗ. ಅದು ವಿಜಯ ಪ್ರಸಾದ್ ನಿರ್ದೇಶನದ ಮೊದಲ ಚಿತ್ರ, ಸಿದ್ಲಿಂಗು. ಚಿತ್ರರಂಗದಲ್ಲಿ “ಮಾಮೂಲಿ ಕೋತಿಯ ತಾರುಣ್ಯ ಗೀತೆ”ಯಂತಿದ್ದ ಸಿನೆಮಾಗಳೇ ಬರುತಿದ್ದ ಸಮಯ. ಸಿದ್ಲಿಂಗು ತನ್ನ ವಿಭಿನ್ನ ನಿರೂಪಣೆ, ಡೈಲಾಗ್ ಬಾಜಿ, ಸ್ವಲ್ಪ ವಿಚಿತ್ರ ಅನ್ನಿಸುವ ಕತೆಂದ ಗೆದ್ದಿತ್ತು. ಈಗ ಅದೇ ವಿಜಯಪ್ರಸಾದ್ ಮತ್ತೆ ಎಲ್ಲರೂ ಹುಬ್ಬೇರಿಸುವಂಥ ಕಾಂಬಿನೇಷನ್ ತರುತ್ತಿದ್ದಾರೆ. ಚಿತ್ರಕ್ಕೂ “ನೀರ್ ದೋಸೆ” ಅಂತ ಹೆಸರಿಟ್ಟಿದ್ದಾರೆ. ನೀರ್ ದೋಸೆಯಲ್ಲಿ ನೀರೆಯಾಗಿ ರಮ್ಯಾ ಮತ್ತು ದೋಸೆ ಹುಯ್ಯುವ ನಾಯಕನಾಗಿ ಜಗ್ಗೇಶ್ ಇದ್ದಾರೆ. ಜೊತೆಗೆ ನಂಜಿಕೊಳ್ಳಲು ಮಸಾಲೆಭರಿತ ಚಟ್ನಿ, ಐಂದ್ರಿತಾ ರೇ.

ಚಿತ್ರದ ಟಿಕೆಟ್ಟು, ಬಿಸಿ ಬಿಸಿ ದೋಸೆ ಹಾಗೆ ಖರ್ಚಾಗುತ್ತದಾ ಅಂತ ಕಾಲವೇ ಹೇಳಬೇಕು!

***

ನಟನೆ ನನ್ನ ಡ್ಯೂಟಿ

ರಾಧಿಕಾ ಚಿತ್ರರಂಗಕ್ಕೆ ಬರದೇ ೬ ವರ್ಷವಾಗಿತ್ತು. ಲಕ್ಕಿ ಚಿತ್ರದ ನಿರ್ಮಾಣದಲ್ಲಿ ಓಡಾಡುತ್ತಿದ್ದಾಗ ನೋಡಿದವರೆಲ್ಲರೂ ಆಕೆ ತನ್ನ ಸೌಂದರ್ಯ ಕಾಪಾಡಿಕೊಂಡು ಬಂದಿದ್ದನ್ನು ನೋಡಿ ಅಚ್ಚರಿ ವ್ಯಕ್ತಪಡಿಸಿದ್ದರು. ನೀವ್ಯಾವಾಗ ನಟಿಸ್ತೀರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದ್ದರು. ಮರೆಗೆ ಸರಿದದ್ದು ಸುಮ್ಮನೆ, ಬೆಳ್ಳಿತೆರೆಯೇ ನಮ್ಮನೆ ಅಂತ ಈಗ ವಾಪಸ್ಸಾಗಿದ್ದಾರೆ. “ಸ್ವೀಟಿ” ಅನ್ನುವ ಚಿತ್ರದಲ್ಲಿನ ಬ್ಯೂಟಿಯಾಗಿ ತಮ್ಮ ಡ್ಯೂಟಿ ಒಪ್ಪಿಕೊಂಡಿದ್ದಾರೆ.

ಮರೆಯಾಗಿ ರಾಧಿಕಾ ಮಾಡಿದ ಅಲ್ಲೋಲಕಲ್ಲೋಲ ಎಲ್ಲರಿಗೂ ಗೊತ್ತಿರುವ ವಿಷಯ. ಪ್ರೇಕ್ಷಕ ಎಲ್ಲವ ಮರೆತು ಬರೀ ನಟನೆ, ಚಿತ್ರ ಮಾತ್ರ ಗಮನಿಸುತ್ತಾನಾ ಅಂತ ಕಾದು ನೋಡಬೇಕು

***

ಹಂಸಲೇಖಾ, ನೀವೂನಾ!

ಯೂಟ್ಯೂಬಿನಲ್ಲಿ ಮದರ್ ರಷ್ಯಾ, ಐರನ್ ಮೈಡನ್ ಅಂತ ಟೈಪ್ ಮಾಡಿ ಸರ್ಚ್ ಕೊಟ್ಟರೆ ಒಂದು ಹಾಡು ಸಿಗುತ್ತದೆ. ಅದು ಒಂದು ರಷ್ಯಾ ದೇಶದ ಗೀತೆ. ಸುಮ್ಮನೆ ಕೇಳಿ ನೋಡಿದಾಗ, ಈ ಹಾಡು ಎಲ್ಲೋ ಕೇಳಿದ್ದೇನಲ್ಲಾ ಅಂತನ್ನಿಸುತ್ತದೆ. ನಮ್ಮ ಮೆದುಳಪದರವನ್ನು ಇನ್ನೂ ಒಂಚೂರು ಕೆದಕಿದಾಗ “ಪುಟ್ನಂಜ” ಸಿನೆಮಾದ ಹಾಡು ನೆನಪಾಗುತ್ತದೆ. ಅದರಲ್ಲಿ, ರವಿಚಂದ್ರನ್ ನಾಯಕಿ ಮೀನಾಗೆ “ದಸರಾ ಬೊಂಬೆ ನಿನ್ನನು ನೋಡಲು ನಮ್ಮೂರಿಂದ ಬಂದೆ ಕಣೇ” ಅಂತ ರೇಗಿಸುವ ಹಾಡೊಂದಿದೆ. ಆಗ ಒಂದು ಮಟ್ಟಕ್ಕೆ ಜನರಿಗೆ ಇಷ್ಟವಾಗಿದ್ದ ಹಾಡದು.
ಕನ್ನಡದ ಬಹುತೇಕ ಸಂಗೀತ ನಿರ್ದೇಶಕರು ಕಾಪಿ ಮಾಡುತ್ತಾರೆ, ಅದು ಗೊತ್ತಿರುವಂಥ ವಿಷಯವೇ. ಸಾಧು ಕೋಕಿಲ ರಂಥವರು ಯಾರಿಗೂ ಗೊತ್ತಾಗದ ಹಾಗೆ ಹೇಗೆ ಕದಿಯಲಿ ಅಂತಲೇ ರಿಸರ್ಚ್ ಮಾಡುತ್ತಾರೆ. ಗುರುಕಿರಣ್ ರಂಥವರು ಹೊಸ ಹಿಂದಿ ಗೀತೆಗಳಿಂದ ರಾಜಾರೋಷವಾಗಿ ಎತ್ತಿಕೊಳ್ಳುತ್ತಾರೆ. ಹರಿಕೃಷ್ಣ, ಇಂಗ್ಲೀಷಿನಿಂದ ಹೇಗಿದೆ ಹಾಗೆಯೇ “ಸ್ಪೂರ್ತಿ”ಗೊಳ್ಳುತ್ತಾರೆ.
ಆದರೆ ಹಂಸಲೇಖ ಬಗ್ಗೆ ಕನ್ನಡ ಚಿತ್ರರಂಗದಲ್ಲಿ ಬಹಳ ಗೌರವವಿದೆ. ರವಿಚಂದ್ರನ್ ರ ಎಲ್ಲಾ ರೀಮೇಕ್ ಚಿತ್ರಗಳಿಗೆ ಸಂಗೀತ ಕೊಡುತ್ತಾ, ಬೇರೆ ಭಾಷೆಯ ಹಾಡಿನ ರಾಗವನ್ನೇ ಬಳಸಿ ಅಂತ ನಿರ್ಮಾಪಕರುಗಳೇ ತಾಕೀತು ಮಾಡದರೂ ಒಪ್ಪದೇ, ಚಿತ್ರ ರೀಮೇಕ್ ಆದರೂ ಹಾಡು ಇಲ್ಲಿಯವೇ ಆಗಿರಬೇಕು ಅಂತ ಒರಿಜಿನಲ್ಲುಗಳನ್ನು ಕೊಟ್ಟವರು. ದೇಸೀಯತೆ, ಜಾನಪದ ಎಲ್ಲವನ್ನೂ ಮನದಲ್ಲಿ ಕರಗತ ಮಾಡಿಕೊಂಡವರು. ಅವರೂ ಹಾಡುಕೊಡಲು “ರಿಸರ್ಚ್” ಮಾಡಿರುವುದು ನಂಬಲಾಗದ್ದು!

ಆಗ ಈ ಯೂಟ್ಯೂಬ್ ಗಳು, ಗೂಗಲ್ ಗಳೂ ಇದ್ದಿರಲಿಲ್ಲ. ಈಗ ಹಿಂದೆ ಕದ್ದಿದ್ದೂ ತಿಳಿಯದೇ ಹೋಗುವುದಿಲ್ಲ.

ತಮ್ಮ ಹಾಡುಗಳಿಂದ ನಮ್ಮ ಬಾಲ್ಯವನ್ನು ಬೆಳಗಿದ್ದ ಹಂಸಲೇಖಾ ರವರೂ ಹೀಗೆ ಮಾಡುತ್ತಾರೆಂದರೆ, ಚಿತ್ರಗೀತೆ ರಸಿಕರಿಗೆ ನಂಬಲಾಗದ ಸುದ್ಧಿ, ನುಂಗಲಾರದ ತುತ್ತು.

***

ಬರದ ನಾಯಕ

“ಈಗ” ಸುದ್ಧಿಯಾಗಿದ್ದೇ ತಡ, ಅಭಿಮಾನಿಗಳೆಲ್ಲರೂ ಮುಂದಿನದು ಯಾವಾಗ ಅಂತ ಪ್ರಶ್ನಿಸತೊಡಗಿದ್ದಾರೆ ಸುದೀಪ್ ರನ್ನು. “ಬಚ್ಚನ್” ಚಿತ್ರ ಒಂದು ಹಂತಕ್ಕೆ ಮುಗಿದಿದೆ. ಶಶಾಂಕ್ ನಿರ್ದೇಶಕರಾಗಿರುವ ಆ ಚಿತ್ರಕ್ಕೆ ಕನ್ನಡ ಚಿತ್ರರಂಗದಲ್ಲಿ ಬಹಳಷ್ಟು ನಿರೀಕ್ಷೆದೆ. ತಮ್ಮ ತಮ್ಮನಂತಹ ಶಿಷ್ಯ, ಚಿರಂಜೀವಿ ಸರ್ಜಾ ರನ್ನು ಚಿತ್ರರಂಗದಲ್ಲಿ ನೆಲೆಯೂರಲು ಸಹಾಯ ಮಾಡಲು ಒಪ್ಪಿಕೊಂಡಿರುವ ವರದ ನಾಯಕ, ಹೊರಬರಲು ಮಾಡುತ್ತಿರುವ ಸಾಹಸ ದೇವರಿಗೇ ಪ್ರೀತಿ. ತೆಲುಗಿನ “ಲಕ್ಷ್ಯಂ” ಚಿತ್ರದ ನಕಲಾಗಿರುವ ಈ ಚಿತ್ರದ ಬಗ್ಗೆ ಸುದೀಪ್ ಇದ್ದಾರೆ ಅನ್ನುವುದನು ಬಿಟ್ಟರೆ ಅಂಥ ನಿರೀಕ್ಷೆಗಳಿಲ್ಲ.

ಗಾಂಧಿನಗರಿಯ ಗಲ್ಲಿಗಳಲ್ಲಿ, ವರದ ನಾಯಕನನ್ನು “ಬರದ ನಾಯಕ” ಅಂತ ಗೇಲಿ ಮಾಡುತಿರುವುದು ಸುಳ್ಳಿರಲಿಕ್ಕಿಲ್ಲ!

***

ಪ್ರೇಮ್ ಎಲ್ಲಾ ಅವಮಾನಗಳ ಮೆಟ್ಟಿ ನಿಲ್ಲಲಿ

ನಿರ್ದೇಶಕ ಪ್ರೇಮ್ ರ ಅಡ್ಡ ಇನ್ನೇನು ತೆರೆಗೆ ಬರಲಿದೆ. ಎಂದಿನಂತೆ ಅವರ ಸಿನೆಮಾ ವಿವಾದಗಳಿಂದ ಮುಕ್ತವಾಗಿಲ್ಲ. “ಜೋಗಯ್ಯ” ಪ್ರೇಮ್ ಪಾಲಿಗೆ ಕಹಿನೆನಪು. ಸ್ವತಃ ಶಿವರಾಜ್ ಕುಮಾರ್ ಅಭಿಮಾನಿಗಳಿಂದಲೇ ನಿರಾಕರಿಸಲ್ಪಟ್ಟ ಸಿನೆಮಾ. ತ್ರೀಡಿ ವಿಚಾರ ಎಲ್ಲರಿಂದ ಗೇಲಿಗೊಳಗಾತು. “ಮಠ” ಗುರುಪ್ರಸಾದ್ ರಂಥವರು ವಾಹಿನಿಯ ಸಂದರ್ಶನವೊಂದರಲ್ಲೇ ಪ್ರೇಮ್ ರನ್ನು ಹೀಗಳೆದರು. ಗುರುಪ್ರಸಾದ್ ರ “ಡೈರೆಕ್ಟರ್ಸ್ ಸ್ಪೆಷಲ್” ಚಿತ್ರದ ಜಾಹೀರಾತನ್ನೂ ಪ್ರೇಮ್ ಅವಹೇಳನಕ್ಕೆ ಬಳಸಿಕೊಂಡರು.

ಇಂತಿಪ್ಪ ಪ್ರೇಮ್, ಮತ್ತೆ ಕೊಡವಿ ನಿಂತಿದ್ದಾರೆ. ತಮಿಳಿನ ಅದ್ಭುತ ಚಿತ್ರ “ಸುಬ್ರಹ್ಮಣ್ಯಪುರಂ” ದ ರಿಮೇಕ್ ಆದ “ಪ್ರೇಮ್ ಅಡ್ಡ” ಮೂಲಕ ಮರಳಿ ಬಂದಿದಾರೆ. ಕಣ್ಣಲ್ಲಿ ಅದೇ ಗೆಲುವಿಗಾಗಿ ತೀವ್ರ ಹಸಿವು. ಸಿನೆಮಾ ಬಿಟ್ಟರೆ ಮತ್ತೇನೂ ಗೊತ್ತಿಲ್ಲವೆಂಬ ಪ್ಯಾಷನ್.

ಪ್ರೇಮ್ ಅಡ್ಡ ಗೆಲ್ಲಲಿ. ಸೋತ ಪಾಠ ಹೆಚ್ಚಾಯ್ತು. ಗೆಲುವಿನ ಟಚ್ ಸಿಗಲಿ.

ಅಪ್ಪನ ಬೈಗುಳ ನನಗೆ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕಾರಣ ಚಿಕ್ಕದು, ಅಕ್ಕನಿಂದ ಪತ್ರ ಬಂದಿತ್ತು ಅಕ್ಕನೆಂದರೆ ನನ್ನ ಪಾಲಿಗಂತೂ ದೊಡ್ಡ ಧೈರ್ಯಸ್ಥೆ! ಅಷ್ಟುವರ್ಷ ಪ್ರೀತಿಯಿಂದ ಸಾಕಿದ ಅಪ್ಪನನ್ನು ಧಿಕ್ಕರಿಸಿ ಯಾವುದೋ ಹುಡುಗನ ಪ್ರೀತಿಯ ಮಾಯಾಮೃಗಕ್ಕೆ ಆಸೆಪಟ್ಟು, ಕಟ್ಟು ಪಾಡಿನ ಲಕ್ಷಣ ರೇಖೆಯನ್ನು ದಾಟಿದವಳು. ಸದಾ ಮುಗುದೆಯಂತೆ ಮಾಡುತ್ತಿದ್ದ ಅಕ್ಕನಿಗೆ ಅಂತಹ ಮಾನಸಿಕ ಶಕ್ತಿಯನ್ನು ನೀಡಿದ ಮಹಾನ್ ಶಕ್ತಿ ಪ್ರೇಮವೆಂದು ಅಚ್ಚರಿಪಟ್ಟಿದ್ದೆ!

ಅಪ್ಪನ ಕೋಪಕ್ಕೆ ತಲೆಕೆಡಿಸಿಕೊಳ್ಳದೆ ’ಆದದ್ದು ಆಗಿ ಹೋಯಿತು, ಇನ್ನಾದರು ಒಟ್ಟಿಗೆ ಇರೋಣ….’ ಎಂಬ ಸಂಧಾನ ಪತ್ರ ಆಗಾಗ್ಗೆ ಕಳುಹಿಸುತ್ತಲೇ ಇರುತ್ತಾಳೆ. ಈ ಪತ್ರಗಳ ಬಿಸಿಗೆ ಅಪ್ಪನ ಕೋಪದ ಮಂಜುಗಡ್ಡೆ ಇನ್ನು ಕರಗಲೇ ಇಲ್ಲ. ಮತ್ತೆ ಇನ್ನೊಂದು ಪತ್ರ ಹಾಕಿದ್ದಳು.

ಅವಳಿಗಾಗಲೇ ಈ ಬೈಗುಳ. ನನಗೆ ಯಾಕೋ ಕಸಿವಿಸಿ, ಅವರು ಬೈದ ಮಾತುಗಳು ನನಗೂ ತಾಗುತ್ತಿದ್ದವು. ಪ್ರೇಮವೆಂದೊಡನೆ ಎಲ್ಲರ ಮನೆಗಳಲ್ಲಿಯೂ ತಂದೆ ತಾಯಿಗಳ ಮಾಮೂಲಿ ಮಾತುಗಳಿರಬಹುದು ಆದರೆ ನಿಜವಾದ ಪ್ರೀತಿಯಲ್ಲಿ ತೋಯ್ದಿರುವ ನನ್ನಂತವಳಿಗೆ ಇದು ಚುಚ್ಚುವ ಈಟಿಯಂತದ್ದು. ಅಸಲು ದೊಡ್ಡವರಿಗೆ ಪ್ರೀತಿಯ ಮೇಲಿಷ್ಟು ದ್ವೇಷ ಯಾಕೆ ಅಂತ ಅರ್ಥವಾಗುವುದಿಲ್ಲ. ಹರೆಯದ ವಯಸ್ಸಿನಲ್ಲಿ ಅವರೂ ಪ್ರೇಮಿಸಿರಲಿಲ್ಲವೇ? ಪ್ರೇಮದ ಗಾಢತೆ, ಅದರ ಸವಿಸ್ಪರ್ಶ ಅವರೂ ಅನುಭವಿಸಿರಲಿಲ್ಲವೇ? ಆದರೂ ಇದನ್ನೆಲ್ಲ ಧೈರ್ಯವಾಗಿ ನಿರ್ಭಯತೆಯಿಂದ ತಂದೆಯೆದುರು ಹೇಳುವಂತಹ ಅಕ್ಕನ ಧೈರ್ಯ ಧಿಮಾಕು ನನ್ನ ಬಳಿ ಇಲ್ಲ. ಆ ಭಯ ನಿಜಕ್ಕೂ ಧೈರ್ಯವಿಲ್ಲದೆಯಷ್ಟೇ ಅಲ್ಲ, ಇಷ್ಟು ದಿನ ತಂದೆ ತೋರಿದ ಪ್ರೀತಿಯೆ ಅಂತಹ ಮಾತಾಡದಂತೆ ಕಟ್ಟಿಹಾಕಿರುವುದು.

ಹೌದು…. ತಂದೆಗೆ ನನ್ನ ಮೇಲೆ ಅಗಾಧ ಪ್ರೀತಿ. ಅಕ್ಕ ಹೋದ ಮೇಲಂತೂ ಅವರಿಗೆ ನನ್ನ ಮೇಲೆ ಪ್ರೀತಿ ಇಮ್ಮಡಿಯಾಗಿದೆ. ಯಾವ ವಿಷಯಕ್ಕೂ ನನ್ನ ನಿರ್ಧಾರಕ್ಕೆ ಅಡ್ಡಿ ಬರುವವರಲ್ಲ ಅಲ್ಲದೇ ಜಬ್ದಾರಿಯಿಂದ ಬೆಳೆಸಿದ್ದರು. ಆದರೆ ಮದುವೆ ವಿಷಯಕ್ಕೆ ಬಂದರೆ
ಮಾತ್ರ ನನಗೆ ನಿರ್ಣಯದ ಸ್ವಾತಂತ್ರ್ಯ ನೀಡುವುದು ಅನುಮಾನವೇ! ಅದಕ್ಕೆ ಕಾರಣವನ್ನೂ ಆಗಾಗ್ಗೆ ಹೇಳುತ್ತಿರುತ್ತಾರೆ. ‘ಹರೆಯಕ್ಕೆ ಬಂದವರ ಕಣ್ಣು ಕುರುಡಂತೆ’. ಆದರೆ ನನಗೆ ಈ ಅಭಿಪ್ರಾಯದ ಬಗ್ಗೆ ಕೊಂಚವೂ ನಂಬಿಕೆ, ಒಪ್ಪಿಗೆಯಿಲ್ಲ.

ಪಕ್ಕದಲ್ಲೇ ಬಿದ್ದಿದ್ದ ಎಕನಾಮಿಕ್ಸ್ ಪುಸ್ತಕದ ಮಧ್ಯಭಾಗದಲ್ಲಿ ಬಚ್ಚಿಟ್ಟಿದ್ದ ಅವನ ಫೋಟೊ ಕೈಗೆತ್ತಿಕೊಂಡೆ. ಅವನ ತುಟಿಯಂಚಿನ ಮುಗ್ಧ ನಗು ಸೂಜಿಗಲ್ಲಂತೆ ಸೆಳೆಯುತ್ತಿತ್ತು. ಕಣ್ಣ ಹೊಳಪು, ಆಕರ್ಷಣೆಗೆ ಮನ ತಲೆಬಾಗಿತ್ತು. ನಿಜವಾಗಿಯೂ ಹೇಳೆಬೇಕೆಂದರೆ ಆತನ ಸೌಂದರ್ಯವನ್ನು ಇಷ್ಟಪಟ್ಟು ಪ್ರೇಮಿಸಿದ್ದಲ್ಲ. ಸೌಂದರ್ಯಕ್ಕೆ ಮೀರಿದ ರಹಸ್ಯವೇನೋ ಆತನಲ್ಲಿದೆ. ಅದು ಆತನ ನಡೆ, ಮಾತು, ನಗು, ದಿರಿಸು ಏನೂ ಆಗಿರಬಹುದು. ಒಟ್ಟಿನಲ್ಲಿ ಆತನೆಂದರೆ ನಂಗಿಷ್ಟ.

ಆದರೆ ಇವತ್ತಿಗೂ ಚಿಕ್ಕ ಅನುಮಾನದ ಮೊಳಕೆ ಎದೆಯ ಭೂಮಿಯಲ್ಲಿ ಇದ್ದೇ ಇದೆ. ಅದೇನೆಂದರೆ, ಆತನೊಳಗೆ ನನ್ನ ಬಗ್ಗೆ ಪ್ರೇಮದ ಭಾವನೆ ಇದೆಯಾ ಎಂದು. ಯಾಕೆಂದರೆ ಯಾವತ್ತೂ ಅದನ್ನು ಅವನ ಬಳಿ ಕೇಳಿಲ್ಲ. ನನ್ನ ಇಂಟ್ರಾವರ್ಟ್ ಮನಸತ್ವಕ್ಕೆ ಅದು ಸಾಧ್ಯವಾಗುತ್ತದಾ ಇಲ್ಲವಾ ಎಂಬ ಭಯ ನನ್ನಲ್ಲಿದೆ. ಅವನು ಮೊದಲು ಭೇಟಿಯಾದಾಗಿನಿಂದ ಇಲ್ಲಿಯವರೆಗೂ ಒಮ್ಮೆ ಅದೂ ಕಾಲೇಜ್ ಡೇ ದಿನದ ಫೋಟೊ ಆಲ್ಬಮ್‌ನಿಂದ ಆತನ ಫೋಟೊ ಕದ್ದಿದ್ದನ್ನು ಬಿಟ್ಟರೆ, ಪ್ರೇಮ ನಿವೇದನೆಯ ಪ್ರಯತ್ನವಾಗಲೀ, ಲೆಟರ್ ಮೂಲಕ ಹೇಳುವ ಧೈರ್ಯವಂತ ನಿರ್ಧಾರವಾಗಲೀ ಮಾಡಿದ ನೆನಪಿಲ್ಲ. ಆದರೆ ಆತ ನನ್ನೆಡೆಗೆ ನೋಡುವ ನೋಟದಲ್ಲಿನ ಚಿಲುಮೆ, ನೀಡುವ ಗೌರವ, ಯಾವತ್ತೂ ನನ್ನ ಹೃದಯದಲ್ಲಿ ‘ಅವನೂ ಪ್ರೀತಿಸುತ್ತಿದ್ದಾನೆ’ ಎಂಬ ಮಾತು ಮಾರ್ದವಗೊಳ್ಳುವಂತೆ ಮಾಡುತ್ತಿರುತ್ತದೆ.

ಕ್ಲಾಸಿನಲ್ಲಿ ಕೆಲವೊಮ್ಮೆ ಆತನನ್ನು ಗಮನಿಸುತ್ತಿರುತ್ತೇನೆ. ಯಾರ ಬಳಿಯೂ ಹೆಚ್ಚು ಮಾತಿಲ್ಲ. ಅವನಾಯಿತು. ಓದಾಯಿತು ಎಂಬಂತಿರುತ್ತಾನೆ. ನನ್ನಂತೆಯೇ ಶುದ್ಧ ಇಂಟ್ರಾವರ್ಟ್ ಇರಬೇಕು. ಅವನೊಳಗಿರುವ ನನ್ನ ಬಗೆಗಿನ ಪ್ರೇಮವನ್ನು ತೋಡಿಕೊಳ್ಳಲು ಅದೇ ಅಡ್ಡಿ ಬರುತ್ತದೆ ಅಂದುಕೊಂಡು ವಿಲಪಿಸುವ ಹೃದಯಕ್ಕೆ ಸಮಾಧಾನ ಹೇಳುತ್ತಿರುತ್ತದೆ.

ಅವನನ್ನು ಭೇಟಿ ಮಾಡಿದ ಕ್ಷಣಗಳೆಲ್ಲ ಅವಿಸ್ಮರಣೀಯ. ನನ್ನೆಡೆಗೆ ಆತ ನೋಡಿದ ಚಿಕ್ಕ ನೋಟವನ್ನೂ ಕೂಡ ಮನಸ್ಸು ರೆಕಾರ್ಡ್ ಮಾಡಿಟ್ಟುಕೊಂಡಿರುತ್ತದೆ. ಅದನ್ನು ಮನಸ್ಸು ಮೆಲುಕು ಹಾಕಿದಾಗಲೆಲ್ಲ ಹೃದಯ ನವಿಲುಗರಿಬಿಚ್ಚಿ ಕುಣಿದಾಡುತ್ತದೆ. ಅಬ್ಬ! ಪ್ರೇಮವೇ, ನಿನ್ನ ಒಂದು ಚಿಕ್ಕಲಹರಿ ಇಷ್ಟು ಗಾಢವಾಗಿ ಮನ ತಟ್ಟುತ್ತಾ ಎಂದು ಚಿಕ್ಕ ಮಗುವಿನಂತೆ ಅಚ್ಚರಿ ಪಡುತ್ತೇನೆ! ಅಂತಹ ಅನುಭವ ಪಡೆಯದ ಜೀವಗಳನ್ನು ನೋಡಿ ಗೆಲುವಿನ ನಗೆ ಮೂಡುತ್ತದೆ ನನ್ನೊಳಗೆ.

ಸದ್ಯಕ್ಕೆ ಅವನ ಸ್ನಿಗ್ಧ ನಗುವಿನ ಚಿಕ್ಕ ಫೋಟೋನೇ ನನ್ನ ಆಸ್ತಿ. ಅವನ ನಗುವಿನೊಳಗೆ ಮುಳುಗಿ ಒದ್ದೆ ತಂಪಿನ ಸುಲ್ಹ ಅನುಭವಿಸುತ್ತೇನೆ. ಖುಷಿಯಾದಾಗ ದುಃಖವಾದಾಗ ಏನೂ ಭಾವನೆ ಮೂಡದಿರುವಾಗ – ಯಾವಾಗಲೂ ಅವನೊಳಗೇ ಇರುವಾಸೆ ಮನಸ ಬಸಿರಿಗೆ. ಈ ಆಸೆಯ ಬಸಿರಿಗೆ ಹೆರಿಗೆ ಯಾವಾಗ?

ಸ್ವಲ್ಪ ದಿನ ಕಳೆಯಿತು. ಒಮ್ಮೆ ತಂದೆ ಮನೆಗೆ ಬರುವಾಗ ಎಂದಿನಂತಲ್ಲದೆ ಬಹಳ ಉತ್ಸಾಹದಿಂದ ಬಂದರು. ಅವರು ತಂದ ಸುದ್ದಿಗೆ ನನ್ನ ಮನಕ್ಕೆ ಬುದ್ಧಿ ಭ್ರಮಣೆಯಾದಂತಾಯಿತು. ನನ್ನ ಮದುವೆಗೆ ಯಾವುದೋ ಹುಡುಗನನ್ನು ಹುಡುಕಿದ್ದು ನನ್ನ ನೋಡಲು ಒಂದೆರಡು ದಿನಗಳಲ್ಲಿ ಬರುತ್ತಾನಂತೆ. ಒಂದೇ ಉಸಿರಿಗೆ ರೂಮಿಗೆ ಓಡಿದೆ. ಅವರು ನಾಚಿಕೆ ಅಂದುಕೊಂಡರು. ಬಾಗಿಲು ಹಾಕಿಕೊಂಡು ಹಾಸಿಗೆಯಲ್ಲಿ ಬಿದ್ದು ಮನಸಾರೆ ಅತ್ತೆ. ಮನದ ರೋದನ ಮುಸಲ ಧಾರೆಯಾಗಿ ದಿಂಬನ್ನೆಲ್ಲ ಒದ್ದೆಯಾಗಿಸಿತು. ಮೌನ ಎಷ್ಟು ಅಸಹನೀಯ! ಪ್ರೀತಿ ಅವನಲ್ಲೂ ಇದೆ. ಆದರೆ ಅವರ ಮಧ್ಯೆ ಹಾಳು ಭಯವಿದೆಯಲ್ಲ! ಭಯದ ಮಗುವಾದ ಮೌನದ ಹೊರೆಯಿದೆಯಲ್ಲ ಅದನ್ನು ಸರಿಸುವವರು ಯಾರು? ಅವನಾ..? ನಾನಾ..?

ಗಂಡಸರಿಗೇನಾಗಬೇಕು? ಮರೆತೂ ಸುಖವಾಗಿರಬಲ್ಲರು. ಆದರೆ ಹೆಂಗಸಿನ ಪ್ರಥಮ ಪ್ರೇಮವಿದೆಯಲ್ಲ, ಅಂಟಿಕೊಂಡರೆ ಬಿಡದು. ಬದುಕಿನುದ್ದಕ್ಕೂ ಹೃದಯದ ಹೊಟ್ಟೆಯಲ್ಲಿಟ್ಟುಕೊಂಡೇ ಬಾಳಬೇಕು. ಆ ಹಾಳು ಹಾದರ ಯಾರಿಗೆ ಬೇಕು?

ಇಷ್ಟಕ್ಕೂ ಒಂದು ವಿಷಯ ಮಾತ್ರ ಖಂಡಿತ. ಹೃದಯಕ್ಕೆ ಬೇರಾರೂ ಬೇಡ. ಅವನಿಗೇ ಮೀಸಲಾಗಿದೆ ಈ ಬದುಕು. ಬೇರೆ ಯಾರನ್ನೂ ಪ್ರೀತಿಸಲಾರೆ. ಬೇರಾರಿಗೂ ಒಲವಧಾರೆ ಎರೆಯಲಾರೆ.

ಆದರೆ ಇದನ್ನೆಲ್ಲ ತಂದೆಗೆ ಹೇಗೆ ಹೇಳಲಿ? ಹತ್ತೊಂಭತ್ತು ವರ್ಷ ಪೋಷಿಸಿದವರವರು. ತಿದ್ದಿ ತೀಡಿದವರು… ಹೇಗೆ ಎದುರಾಡಲಿ ಅಕ್ಕನಂತೆ.

ಸ್ವಲ್ಪ ಹೊತ್ತು ಕುಳಿತು ಆಲೋಚಿಸಿದೆ. ಇಬ್ಬರ ಪ್ರೀತಿ ನಡುವೆ ಮೌನ ಭಾರ, ಅಸಹನೀಯ. ಅವನ ಬಳಿಯೇ ಹೋಗಬೇಕು. ಭಯ, ಸಂಕೋಚ ಎಲ್ಲದಕ್ಕೂ ತಿಲಾಂಜಲಿ ಕೊಟ್ಟು ಬಿಡಬೇಕು. ನನ್ನೊಳಗಿನೊಲವು ತಿಳಿಸಿಬಿಡಬೇಕು. ನಾಳೆ ಹೇಳುವೆನೆಂದರೆ ಬಾಳೆ ಕೂಪದಲ್ಲಿ ಬಿದ್ದೀತು. ಇವತ್ತೇ ಏನಾದರಾಗಲೀ ಹೇಳಿ ಬಿಡಬೇಕೆಂದು ನಿರ್ಧರಿಸಿದೆ.

ಒಂದುವೇಳೆ ಆತ ಒಲ್ಲೆ ಎಂದರೆ? ದಡ ಕಾಣದ ಹಡಗಿನಂತಾದೀತು ಮನಸು. ಅಂತಹ ಪರಿಸ್ಥಿತಿ ಊಹಿಸಲೂ ನಿರಾಕರಿಸಿತು ಮನ.
……………….

ಪ್ರಿಯ ಸಖನಿಗೆ,
ಭರಿಸಲಾಗದಷ್ಟು ಹೊರೆಯಾಗಿದೆ ಈ ಪ್ರೀತಿ. ಹಂಚಿಕೊಳ್ಳದೇ ವಿಧಿಯಿಲ್ಲ ಎಂಬಂತಾಗಿದೆ. ಕಣ್ಣ ಕುಡಿಯಂಚಿನ ಪ್ರೇಮದಾಟ ಸಾಕು. ಹೃದಯದ ‘ನೀನೇ ಬೇಕೆಂಬ’ ಹಠ ಹೆಚ್ಚಾಗಿದೆ. ನಿನ್ನೊಳಗೂ ನನ್ನ ಬಗ್ಗೆ ಪ್ರೇಮವಿದೆಯಾ? ಇದೆಯಾದರೆ ಹಂಚಿಕೋ. ಇಲ್ಲವಾದರೆ ಈ ಪತ್ರ ಹರಿದು ಚೂರು ಮಾಡು.
ನಿನ್ನ
ಶರ್ಮಿಳ

ಹೀಗೆ ಬರೆದು ಮಡಚಿ ಪುಸ್ತಕದೊಳಗಿಟ್ಟುಕೊಂಡಳು. ಕಾಲೇಜು ಬಿಡುವ ಸಮಯಕ್ಕಾಗಿ ಕಾಯತೊಡಗಿದೆ. ಕ್ಲಾಸಿನಲ್ಲಿ ಅನ್ಯಮನಸ್ಕತೆ ಬದುಕು ಏನಾದೀತೋ ಎಂಬ ಭೀತಿ. ಆತನ ಉತ್ತರವೇನೋ ಎಂಬ ಆತಂಕ. ಏನಾದರಾಗಲಿ ಇಂದೇ ನಿರ್ಧಾರವಾಗಿ ಹೋಗುವುದೆಂಬ ನಿರುಮ್ಮಳತೆ ಮತ್ತೊಂದು ಕಡೆ.

ಸಂಜೆ ಕಾಲೇಜು ಬೀಡುವ ಸಮಯದಲ್ಲಿ ಆಗಸದ ತುಂಬ ಮೋಡ. ಸಣ್ಣ ಮಬ್ಬುಗತ್ತಲೆ. ಉಸಿರು ಬಿಗಿ ಹಿಡಿದು ಕಾಲೇಜು ಗೇಟ ಬಳಿ ನಿಂತೆ. ತುಂಬು ಜನಸಂದಣಿ ಮಧ್ಯೆ ಜಾಗ ಮಾಡಿಕೊಂಡು ಆತ ಬರುತ್ತಿದ್ದ. ಹತ್ತಿರ. ಇನ್ನೂ ಹತ್ತಿರ ಬಂದ. ಹತ್ತಿರ ಬಂದಷ್ಟೂ ಹೆಚ್ಚುವ ಭಯ, ನಡುಕ.

“ಒಂದ್ನಿಮಿಷ ನನ್ನ ಜೊತೆ ಬರ್ತೀರಾ?” ಕೇಳಿದೆ. ಆಶ್ಚರ್ಯಕರ ಮುಖಭಾವದೊಂದಿಗೆ ‘ಸರಿ’ ಎಂದನಾತ.

ಮೈದಾನದೆಡೆಗೆ ಏಕಾಂತವನ್ನರಸಿ ಹೋಗುತ್ತಿದ್ದರೆ ನನ್ನ ಹಿಂದೆಯೇ ಬರುತ್ತಿದ್ದ, ಚಿಕ್ಕದಾಗಿ ಊಟದೆಲೆಗೆ ನೀರು ಚಿಮುಕಿಸಿದಂತೆ ಹೊಯ್ಯುತ್ತಿತ್ತು ಮಳೆ.

ಮೈದಾನದ ಮೂಲೆಗೆ ಕರೆದೊಯ್ದು ನೀಡಿದ ಪತ್ರ, ಆತನ ಕೈಗಿಟ್ಟು ಆತನನ್ನು ಎದುರಿಸಲಾಗದೆ ಈ ಕಡೆ ಬಂದು ಬಿಟ್ಟೆ. ಮರದ ಕೆಳಗೆ ಮರೆಯಲ್ಲಿ ನಿಂತು ಆತನನ್ನು ಗಮನಿಸುತ್ತಿದ್ದೆ.

ಮಳೆ ಸಣ್ಣಗೆ ಬರುತ್ತಿದ್ದುದು ಹೆಚ್ಚುತ್ತಾ ಹೋಯಿತು. ಅಂತೆಯೇ ನನ್ನ ಆತಂಕವೂ! ಆತ ಓದುವುದ ಮುಗಿಸಿ ಕಣ್ಣು ಮುಚ್ಚಿ ನಿಂತಿದ್ದ. ಮೊಗದ ತುಂಬ ಮಳೆನೀರು. ಅಳುತ್ತಿರುವನಾ? ಗೊತ್ತಾಗಲಿಲ್ಲ.

ಸ್ವಲ್ಪಹೊತ್ತು ಕಾದೆ. ಬರಲಿಲ್ಲ. ತಿರುಗಿ ನೋಡಲೂ ಇಲ್ಲ. ಭಯವಾಯಿತು. ಆತನ ಬಳಿ ಓಡಿದೆ. ಆತನಿನ್ನೂ ತೊಯ್ಯುತ್ತಲೇ ಇದ್ದ; ಬಯಲ ಮಧ್ಯದ ಮರದಂತೆ. ಅವನ ಶರಟು ಹಿಡಿದೆ. “ಏನಾಯ್ತು” ಕೇಳಿದೆ. ನಿರ್ಭಾವುಕ ನೋಟ ನನ್ನತ್ತ ಎಸೆದ. “ಸಾರಿ ಶರ್ಮಿಳ ಶರ್ಮಿಳ ಇಷ್ಟು ದಿನ ನಿನ್ನನ್ನು ಕಾಡಿದ್ದಕ್ಕೆ ಪ್ರೀತಿ ನನ್ನಲ್ಲೂ ಇದೆ” ಅಂದ. ನನ್ನ ಮೇಲೆ ಬೀಳುತ್ತಿರುವುದು ನೀರಹನಿಯಲ್ಲ ಪನ್ನೀರ ಸುರಿಮಳೆ ಅನ್ನಿಸಿತು. ಆನಂದದಿಂದ ತಬ್ಬಿಕೊಂಡೆ ಮತ್ತೆ ಹೇಳಿದೆ, “ನಾನೇ ನಿನ್ನ ಬಳಿ ಬಂದು ಕೇಳಬೇಕಿತ್ತು. ಕ್ಷಮಿಸು ಇಷ್ಟು ದಿನ ಹೇಳದಿದುದಕ್ಕೆ ಕಾರಣ ನನಗಿದ್ದ ಭಯವೇ. ನಿನ್ನ ನಿರಾಕರಣೆಯ ಭಯ. ನೀನೇ ಒಪ್ಪಿಕೊಂಡ ಮೇಲೆ ಇನ್ನು ಯಾವ ಭಯವೂ ಇಲ್ಲ.”

“ಆದರೆ ನನ್ನ ತಂದೆ ನನಗೆ ಬೇರೆ ಹುಡುಗನನ್ನು ನೋಡುತ್ತಿದ್ದಾರೆ…” ಅಂದೆ.

“ಇವತ್ತೇ ಹೋಗಿ ಮಾತಾಡುತ್ತೇನೆ. ಪ್ರೀತಿ ಮಾಡಿದರೆ ಭಯ ಪಡಬಾರದು. ಇದೇ ನಾನು ಕಲಿತ ಪಾಠ.”

“ನನ್ನ ತಂದೆ ಒಪ್ಪದಿದ್ದರೆ…?”

“ಒಪ್ಪಿಸುವೆ ಎಂಬ ನಂಬಿಕೆ ನನಗಿದೆ.” ಅಂದ.

ಜಡಿ ಮಳೆಯಲ್ಲಿ ಇಬ್ಬರೂ ಒಟ್ಟಾಗಿ ಒದ್ದೆಯಾದೆವು. ಇನ್ನು ಯಾವ ಬೆದರು ಮಳೇಗೂ ಬಗ್ಗುವವಳಲ್ಲ ನಾನು, ಸಂಗಾತಿಯಾಗಿ ಅವನಿರುವ ತನಕ…

ಹೊರ್ಗೆ ಬೇಜಾನ್ ಮಳೆ ಸುರೀತಾ ಇದೆ. ದೇವ್ರು ಇವತ್ತು ಆಕಾಶದ ಅಣೆಕಟ್ಟಿನ್ ಗೇಟ್ ಓಪನ್ ಮಾಡಿದ ಹಾಗಿದೆ.

ಕುಡೀದೇ ಕಿಕ್ ಕೊಡೋದು ಇಡೀ ಪ್ರಪಂಚದಲ್ಲಿ ಎರಡೇ ಎರಡು ಕಣೇ, ಒಂದು ಜಡಿಮಳೆ ಮತ್ತೊಂದು ನಿನ್ನ ನೆನಪು. ಆಗಾಗ ಅನಿಸುತ್ತೆ, ನಿನ್ನಂಥ ನಿನ್ನನ್ನ ಇಷ್ಟಪಡಬೇಕು ಅಂದ್ರೆ ನಾನು ಯಾವ ಲೆವೆಲ್ಲಿಗೆ ತಯಾರಾಗಬೇಕು? ಅದೆಷ್ಟು ಸಕ್ಸಸ್ಸು ಕಾಣಬೇಕು? ಬದುಕನ್ನು ಅದ್ಯಾವ ರೀತಿ ಪಳಗಿಸಬೇಕು? ಹಣವನ್ನು ಹ್ಯಾಗೆ ನನ್ ಕಂಟ್ರೋಲಲ್ಲಿಟ್ಕೋಬೇಕು? ನಿನ್ನನ್ನ ಇಷ್ಟ ಪಡೋ ನಿನ್ನ ಗಲ್ಲಿಯಲ್ಲಿ ಗುರಾಯ್ಸೋ ಗಯ್ಸ್, ಕಾಡುವ ಕೇಬಲ್ ಬಾಯ್ಸ್, ಕ್ಲಾಸ್ ಫ್ಲಾಪ್ ಹೀರೋಸ್, ಕಾಲೇಜ್ ರೋಮಿಯೋಸ್ ಗಳನ್ನೆಲ್ಲಾ ಮೀರಿದ್ದೇನಾದರೂ ಸಾಧಿಸ್ಬೇಕಲ್ವಾ ಅಂತೆಲ್ಲಾ ಅನಿಸುತ್ತೆ.

Image

ಆದ್ರೆ ಏನ್ ಮಾಡೋದು? ನನ್ನದು ಆಲಸ್ಯ ಗೋತ್ರ, ಸೋಂಬೇರಿ ನಕ್ಷತ್ರ. ಭಾನುವಾರ ನನ್ನ ವಾರದ ದಿನ. ಅವತ್ತು ನಾನು ಹಾಸಿಗೆಯಿಂದ ಏಳೋದು ಅನ್ನೋದಕ್ಕಿಂತ ಕಷ್ಟದ ಕೆಲ್ಸ ಅಂತ ಯಾವ್ದೂ ಅನ್ಸಿಲ್ಲ. ಅಂಥ ಸೋಮಾರಿ ಮಂಜುನಾಥನನ್ನು ಬಡಿದೆಬ್ಬಿಸಿದವಳು ನೀನು. ನಿನ್ನ ಕಂಡ ಮರುದಿನದಿಂದಲೇ ರಾತ್ರಿಯಿಡೀ ನಿನ್ನ ಊಹೆ. ರಾತ್ರಿ ಹತ್ತಕ್ಕೇ ಶುರು, ನಿದಿರೆ ಜತೆ ಫೈಟಿಂಗು, ಮುಂಜಾವಿನ ಆರು ಘಂಟೆಗೆ ವೈಟಿಂಗು. ಹಗಲು ಬಿದ್ದ ಕನಸು ನಿಜವಾಗುತ್ತಂತೆ. ಅದಕ್ಕೇ ನನ್ನ ಬಿದ್ದ ಕನಸುಗಳಲ್ಲಿ ನಿನ್ನ ಪಾತ್ರವೊಂದನ್ನು ತೂರಿಸಲು ವಿಫಲ ಯತ್ನ ನಡೆಸುವ ಫ್ಲಾಪು ನಿರ್ದೇಶಕ. ಆದ್ರೆ ದುರಂತ ನೋಡು, ನೀನು ಸೇಟು ಅಂಗಡಿಗೆ ಬರೋದೆ ಸುಲಭ, ಸೀಮೆಯೆಣ್ಣೆ ಕ್ಯೂ ನಲ್ಲಿ ಕಾಣಸಿಗೋದೇ ಈಸಿ, ವಾರಕ್ ನಾಕ್ ಸಲ ಪಾಲಕ್ ಸೊಪ್ಪಿಗೆ ಚೌಕಾಸಿ ಮಾಡೋದು ನೋಡೋಕೆ ಸಿಗುತ್ತೆ, ಆದ್ರೆ ಕನಸಿಗೆ ಅಪ್ಪಿ ತಪ್ಪಿ ದಾರಿತಪ್ಪಿ ಒಂದ್ಸಲವೂ ಬರದವಳು ನೀನು. ಒಂಥರಾ ಸರಾಗ ಹಣೇಬರಹದ ಇರುವೆ ಸಾಲಿಗೆ ಬಿದ್ದ ಅಡ್ಡಗೆರೆ ನೀನು. ಆಗೆಲ್ಲಾ ಬಾಳಿನ ಸ್ಕ್ರಿಪ್ಟ್ ಬರೆವ ದೇವರು, ನಿರ್ಮಾಪಕರಿಗೆ ನೀರ ತೋರಿಸಿ ಸೋಡಾ ಕುಡಿಸೋ ಗಾಂಧಿನಗರಿಯ ನಿರ್ದೇಶಕ ಅನ್ನಿಸೋದು.

ಏನೇ ಇರಲಿ, ವಿಸ್ಕಿ ಕುಡಿದವ ಬದುಕ್ಕಂಡ, ತೀರ್ಥ ಕುಡಿದವ ತೀರ್ಕಂಡ ಅನ್ನೋ ಮಾತಿನ ಹಾಗೆ ಬದುಕು ಕೆಲ ಸಲ ಇಸ್ತ್ರೀ ಮಾಡ್ಕಂಡಿರೋರನ್ನ ಕೋಟ್ಯಾಧಿಪತಿ ಯನ್ನಾಗಿಸುತ್ತೆ. ಅಟ್ಟರ್ ಫ್ಲಾಪ್ ಅಂದುಕೊಂಡ ಪಿಕ್ಚರ್ ನೂರ್ದಿನ ಓಡುತ್ತೆ. ಅದಕ್ಕೆ ಪ್ಯಾರಾಬೋಲ ಹೊಟ್ಟೆಯ, ಹೊಳೆವ ತಲೆಯ ಅಂಕಲ್ ಗಳಿಗೆ ಅಂದಗಾತಿ ಆಂಟಿಯರು ಸಂಗಾತಿಯಾಗಿರುವುದೇ ಸಾಕ್ಷಿ.

ಹೀಗೆಲ್ಲಾ ಆಗಬಹುದೆಂದರೆ ಹಾಗೆಲ್ಲಾ ಆಗಬಾರದು ಯಾಕೆ?

ಒಂದ್ಸಲ ಯೋಚ್ಸು. ನಿನ್ನ ಒಂದು ಒಪ್ಪಿಗೆಯ ಮುಂದೆ ಜಗತ್ತಿನ ಸಕಲ ರೂಲ್ಸುಗಳು ಮುಂಡಾಮೋಚ್ತಾವೆ.

ಅಲ್ವೇನೆ?

 

 

ಮುಗಿಲೊಡೆವ ಸದ್ದು
ಕೆರೆಯಲ್ಲಿಂದು ಹನಿಯ
ರಂಗಪ್ರವೇಶ
ಭರತನಾಟ್ಯಾಭ್ಯಾಸ
ಕೆಸುವಿನೆಯಲ್ಲಿ ಒಂಚೂರು
ಜಾರುಬಂಡಿಯಾಟ
ಹೆಸರಿಲ್ಲದ್ಯಾವುದೋ
ಹೂವಿಗೆ ಹೊಳೆವ
ಮೂಗುತಿಯಾಗುವ
ಸಂಭವ.

rain drops 03

ಭುವಿಯಲಿ ಜಾತ್ರೆ
ಮುಗಿದನಂತರ
ಸಾಗರದೆಡೆಗಿನ
ರಮ್ಯಯಾತ್ರೆಗೆ
ಅವಸರವಾದರೂ
ಮುದ್ದು ಕೈಯ ಕಾಗದದ ದೋಣಿಗೆ
ವೈಯ್ಯಾರ ಒದಗಿಸುವ ಸಡಗರ

ಕೂತು ನೋಡುವ ಜೀವದ
ಕಣ್ಣ ಮೂಲಕ
ಹೃದಯದೊಳಗೆ
ಕವಿತೆಯ ಬೀಜ ಮೊಳಕೆ.

ಪುಳಕ
ನೆನಪು ಇರುವ ತನಕ
ಮನದೊಳಗಿನ ಕನಕ.