Feeds:
Posts
Comments

ಅವತ್ತು ನೀ ಹಾಗೆ ಬೆನ್ನು ತೋರಿ ಹೊರಡುವಾಗ ನಿನ್ನ ಕಣ್ಣು ನೋಡಬೇಕೆನ್ನಿಸಿತ್ತು ಕಣೇ. ಪ್ರೀತಿಯಿಂದ ತುಳುಕುತಿದ್ದ ಕಣ್ಣ ಭಾವವನ್ನಷ್ಟೇ ಸವಿದು ಅಭ್ಯಾಸವಾಗಿಬಿಟ್ಟಿತ್ತಲ್ಲ; ಮೋಸದ ಕಹಿಯೂ ಅರಿವಾಗಬೇಕಿತ್ತು. ಮೊದಲು ನನ್ನ ಕಂಡೊಡನೆ ತಾರೆಯಂತೆ ಜಗಮಗಿಸುತ್ತಿದ್ದ ಕಣ್ಣುಗಳಲ್ಲಿ ಈ ಬಗೆಯ ನಿರ್ಲಕ್ಷ್ಯ, ’ನಿನ್ನ ಬದುಕು ನಿನಗೆ; ಎಲ್ಲೋ ಹೇಗೋ ಬದುಕಿಕೊಂಡು ಸಾಯಿ’ ಅನ್ನುವಂಥ ದ್ವೇಷ ಹೇಗೆ ಧಗಧಗಿಸುತ್ತದೆ ಎಂದಾದರೂ ಕಾಣಬೇಕಿತ್ತು.

ಅದರಿಂದಲಾದರೂ ನಿನ್ನ ಮೇಲೊಂದಿಷ್ಟು ಸಿಟ್ಟು ಹುಟ್ಟಿ ನಿನ್ನ ಮರೆಯಲು ಸುಲಭವಾಗುತಿತ್ತಲ್ಲವೇ? ಈ ಪರಿ ರಾತ್ರಿಗಳನ್ನು, ನೆನಪುಗಳು ಸುಡುವ ಅವಕಾಶ ಇಲ್ಲವಾಗುತಿತ್ತಲ್ಲವೇನೆ ಗೆಳತೀ?

ಹಾಗೆ ಅಷ್ಟು ನಿರ್ದುಷ್ಟವಾಗಿ ಹೋಗುವಾಗ, ವಿಲವಿಲ ಒದ್ದಾಡುವ ಹೃದಯವನ್ನು ನೇವರಿಸುವಂತಹ ಪುಟ್ಟನೋಟವೊಂದನ್ನು ಇತ್ತು ಹೋಗಿದ್ದರೆ ಜನುಮದ ಕ್ಷಣಗಳನ್ನೆಲ್ಲಾ ಅದರ ತೆಕ್ಕೆಯಲ್ಲಿ ಹಾಕಿ ಖುಷಿಯಿಂದ ಕಳೆದುಬಿಡುತ್ತಿದ್ದೆ. ’ನಿನ್ನದೇನೂ ತಪ್ಪಿಲ್ಲ; ಏನೋ ಸಮಸ್ಯೆಯಿಂದಾಗಿ ಹೊರಟಿದ್ದೀ, ಬದುಕಿನ ಯಾವುದೋ ಒಂದು ಸುಂದರ ತಿರುವಿನಲ್ಲಿ ನನಗಾಗಿ ಕಾಯುತಿರುತ್ತೀ’ ಎಂಬ ಭ್ರಮೆಯನ್ನು ಸತ್ಯವೆಂದೇ ಮನಸ್ಸಿಗೆ ನಂಬಿಸುತ್ತಾ ಅಂತಿಮವಾಗಿ ಸಾವಿನ ತಿರುವು ಬರುವವರೆಗೂ ಕಾಲ ಕಳೆಯುತ್ತಿದ್ದೆ. ನಮ್ಮ ಯುಗಗಳು ದೇವರಿಗೆ ಕ್ಷಣಗಳಂತೆ. ಅಂತಹ ಸಾವಿರ ಕ್ಷಣಗಳನ್ನು ಯುಗಗಳಂತಾದರೂ ಗರ್ಭಗುಡಿಯೊಳಗಿನ ಮೂರ್ತಿಯಂತೆ ಬಾಳಿ ಕಳೆದುಬಿಡುತ್ತಿದ್ದೆ.

ಹಾಗಾಗಲಿಲ್ಲ.

ನೀ ತೊರೆದ ಘಳಿಗೆಯಲ್ಲಿ ನಿಶ್ಯಬ್ದವೂ ಸಂತೈಸಲಿಲ್ಲ; ತಂಗಾಳಿಯೂ ಸಾಂತ್ವನ ಹೇಳಲಿಲ್ಲ. ಮೌನವಾಗಿ ನಿಂತ ನನ್ನ ಹಿಂದೆ ಅದೇ ಯುಗಗಳಂತಹ ಕ್ಷಣಗಳ ಕ್ಯೂ. ನೆನಪಿನ ಜೋಳಿಗೆ ಹೊತ್ತ ಫಕೀರನೆದುರು ಹಸಿದು ನಿಂತ ಬಕಾಸುರನಂತೆ ಕ್ಷಣಗಳು.

ಹಾಗೆ ಹೊರಟುಹೋಗಲು ಕಾರಣವಾದರೂ ಏನಿತ್ತು? ಕೇಳೋಣ ಅಂದುಕೊಂಡಿದ್ದೆ.

ಕೇಳಿಯೇ ಬಿಟ್ಟಿದ್ದರೆ ಮತ್ತೊಂದು ಅನಾಹುತವಾಗುತಿತ್ತು. ಮೊದಲಿಂದಲೂ ಆಸೆಪಟ್ಟದ್ದನ್ನು ಪಡೆದೇ ಅಭ್ಯಾಸ. ಅಮ್ಮನ ಖಾಲಿ ಕೈಗೆ ವಾಚು ಉಡುಗೊರೆ ಮಾಡಬೇಕೆಂದು ಯಾವಾಗನ್ನಿಸಿತ್ತೋ ಅದೇ ದಿನ ಮನೆಮನೆಗೆ ಪೇಪರ್ ಹಾಕಿ ಹಾಲಿನ ಪ್ಯಾಕೆಟ್ಟೆಸೆದು ತಿಂಗಳು ಮುಗಿಯುವುದರೊಳಗೆ ಟೈಟನ್ ವಾಚು ತಂದುಕೊಟ್ಟಿರಲಿಲ್ಲವೇ?

ಕುಡುಮಿ ವಿಧ್ಯಾರ್ಥಿಯೊಬ್ಬನಿಗಿಂತ ಜಾಸ್ತಿ ಮಾರ್ಕ್ಸು ಪಡೆಯಲೇಬೇಕೆಂದು ಯಾವಾಗನ್ನಿಸಿತ್ತೋ ಆಗೆಲ್ಲಾ ನಿದಿರಿಸುವುದೇ ಕಾಲಹರಣ ಅನ್ನಿಸತೊಡಗಿತ್ತಲ್ಲವ? ಮುಂದಿನ ಪರೀಕ್ಷೆಯಲ್ಲಿಯೇ ಹೆಚ್ಚು ಅಂಕ ಗಳಿಸಿ ತೋರಿಸಿರಲಿಲ್ಲವೇ?

ಹಾಗೆಯೇ (ನೀನೆಲ್ಲಾದರೂ ನನ್ನ ದುಃಖ ಕಡಿಮೆಯಾಗುತ್ತದೆಂದು ಊಹಿಸಿ ಸುಳ್ಳಿಗಾದರೂ) ತೊರೆಯಲು ಏನೋ ಒಂದು ಕಾರಣ ಹೇಳಿದ್ದರೆ ಅದನ್ನು ಜಯಿಸಲು ನನಗೆಷ್ಟು ಸಮಯ ಬೇಕಾಗುತಿತ್ತು ಹೇಳು? ಅದಕ್ಕೇ ಕಾರಣ ಕೇಳುತ್ತಿದ್ದ ಮನದ ಕತ್ತನ್ನು ಹಿಸುಕಿ ಮೌನವಾಗಿಸಿದೆ.

Abstract_Painting

ಇನ್ನು ಮುಂದೇನೂ ಇಲ್ಲ. ಕನಸು, ವಾಸ್ತವಗಳು ಸುತ್ತಲಿಂದಲೂ ಅಟ್ಯಾಕ್ ಮಾಡಿದಾಗ ಆಯುಧ ಕಳಕೊಂಡ ಸೈನಿಕ. ಮನಸ್ಸು, ಸಾಗರದ ನಡುಮಧ್ಯೆ ದಿಕ್ಸೂಚಿ ಬೀಳಿಸಿಕೊಂಡ ನಾವಿಕ. ತೂರಾಡುವ ಹಡಗಿಲ್ಲದೇ ಅಲೆಗಳಿಗೂ ಮಜವಿಲ್ಲ. ತೂಗಾಡಿಸುವ ಗಾಳಿಯಿಲ್ಲದೇ ಹೂಗಳಿಗೂ ಖುಷಿಯಿಲ್ಲ. ಸತ್ತವನಂತಿರುವವನಿಗೆ ಬಡಿದು ಪ್ರಯೋಜನವೇನು ಎಂಬಂತೆ ಬೇರೆ ದುಃಖಗಳೆಲ್ಲ ಇನ್ಯಾರನ್ನೋ ಹುಡುಕಿಕೊಂಡು ಹೊರಟಿದೆ. ಜೀವ ಬಸಿದು ಪದಗಳಾಗುತಿರಲು ಬರೆಯಲೂ ಕೈ ನಡುಗುತಿದೆ ; ಬಹುಶಃ ನಿನ್ನ ಮೇಲೆ, ಬದುಕಿನ ಮೇಲೆ, ಪ್ರೀತಿಯ ಮೇಲೆ ಮತ್ತು ದೇವರ ಮೇಲೆ ಬರೆಯುತ್ತಿರುವ ಕೊನೆಯ ಅಕ್ಷರಗಳಿವು.

ಓದಿ, ಲೊಚಗುಟ್ಟಿಯೋ, ಕನಿಕರಿಸಿಯೋ, ಧಿಕ್ಕರಿಸಿಯೋ, ನೇವರಿಸಿಯೋ, ಹರಿದು ಹಾಕಿಯೋ, ಫ್ರೇಮ್ ಹಾಕಿಸಿಯೋ, ಮದುವೆ ಅಲ್ಬಮ್ಮಿನ ಫೋಟೋ ಹಿಂದುಗಡೆ ಯಾರಿಗೂ ಕಾಣದಂತಿರಿಸಿಯೋ, ಚಿಂದಿ ಮಾಡಿ ಕಸದ ಬುಟ್ಟಿಗೆಸೆದೋ….

ಸಾರ್ಥಕವಾಗಿಸು.

ಏಕೋ ವಿಜ್ಞಾನಿಗಳ ಮೇಲೆ ನಂಬಿಕೆಯೇ ಹೊರಟುಹೋಗಿದೆ. ಅವರೂ ಈ ಹವಾಮಾನ ವರದಿ ಹೇಳುವವರ ಥರ ಆಗಿ ಹೋಗಿದ್ದಾರೇನೋ ಅನ್ನಿಸುತ್ತಿದೆ. ಬಹುಶಃ ಈ ಅನಿಸಿಕೆ ಹುಟ್ಟಿದ್ದು, ಚಿಕ್ಕಂದಿನಲ್ಲಿ ಟೀಚರಿನ ಭಯದಿಂದ ಕಷ್ಟಪಟ್ಟು ಕಂಠಪಾಠ ಮಾಡಿದ್ದ ಒಂಭತ್ತು ಗ್ರಹಗಳಲ್ಲಿ ಪ್ಲೂಟೋ ವನ್ನು ಗ್ರಹವಲ್ಲ ಅಂತ ಖಗೋಳ ಶಾಸ್ತಜ್ಞರು ಘೋಷಿಸಿದ್ದಕ್ಕೇ ಇರಬೇಕು. ಆ ವಯಸ್ಸಿನಲ್ಲೇ ಇಂಥ ಘೋಷಣೆ ನಡೆದಿದ್ದಿದರೆ ನಮ್ಮ ಟೀಚರನ್ನೇ ಅಲ್ಲಗಳೆಯಲು ಅವರಿಗೆಷ್ಟು ಧಾರ್ಷ್ಟ್ಯ ಅಂದುಕೊಳ್ಳುತ್ತಿದ್ದೆವಲ್ಲವಾ?! ಈಗಲೂ ಯಾರಾದರೂ ಒಟ್ಟೂ ಎಷ್ಟು ಗ್ರಹವಿದೆ ಎಂಬ ಪ್ರಶ್ನೆ ಕೇಳಿದರೆ ಮೊದಲ ಉತ್ತರ ಒಂಭತ್ತು ಎಂದೇ ಆಗಿರುತ್ತದೆ. ಹಾಗೆ ಹೇಳಿದ ಮೇಲೆ ಕಳೆದ ವರ್ಷ ಖಗೋಳ ಶಾಸ್ತಜ್ಞರ ಹೇಳಿಕೆ ನೆನಪಾಗಿ ಮತ್ತೆ ಕರೆಕ್ಷನ್ ಮಾಡಿಕೊಳ್ಳಲು ಒಂದಿಷ್ಟು ಸಮಯ ಆಗಿಹೋಗಿರುತ್ತದೆ. ಇದಿಷ್ಟೂ ವರ್ಷ ಗ್ರಹವಾಗಿದ್ದ ಪ್ಲೂಟೋ ಜಾತಕದಲ್ಲಿ ರಾಹು-ಕೇತು ತಮ್ಮ ಮನೆ(ಗ್ರಹ) ಬದಲಿಸಿದ್ದೇ ಕಾರಣವಾಗಿ ಗ್ರಹ ಸ್ಥಾನದಿಂದ ಉದುರಿಹೋಯಿತೇನೋ? ನಿಜವಾಗಿಯೂ ಈ ಗ್ರಹಗಳ ಬಗ್ಗೆ, ಖಗೋಳಶಾಸ್ತ್ರದ ವಿಷಯಗಳು ನನಗೂ ಆಳವಾಗಿ ಗೊತ್ತಿದ್ದರೆ ಕಷ್ಟಪಟ್ಟಾದರೂ ಪ್ಲೂಟೋವನ್ನು ಒಂದು ಗ್ರಹವಾಗಿ ಉಳಿಸಿಕೊಳ್ಳುತ್ತಿದ್ದೆನಲ್ಲವೇ?

ವಿಜ್ಞಾನದಲ್ಲಿ ಇದೇ ನಿಜ ಎಂದು ಯಾರೂ ಎದೆ ತಟ್ಟಿ ಹೇಳಲಾರರು. ಇರುವ ಸತ್ಯಗಳೆಲ್ಲ ಈ ಕ್ಷಣದ ಮಟ್ಟಿಗಷ್ಟೇ. ಇವತ್ತಿರುವ ಎಲ್ಲ ನಿಜಗಳನ್ನು ಮುಂದೆ ಯಾವುದೋ ಒಂದು ಫೈನ್ ಡೇ ಮತ್ತೊಬ್ಬ ವಿಜ್ಞಾನಿ ಹೊಸದೊಂದು ವಾದ ಮಂಡಿಸಿ ನೀವು ಓದಿದ್ದೆಲ್ಲಾ ತಪ್ಪು, ತಿಳಿದುಕೊಂಡಿರುವುದೆಲ್ಲಾ ಅಸತ್ಯ ಎಂದು ತಲೆಕೆಳಗಾಗಿಸಬಲ್ಲ. (ಇದು ನನಗೆ ಮೊದಲೇ ಗೊತ್ತಿದ್ದಿದ್ದರೆ ವಿಜ್ಞಾನದಲ್ಲಿ ಕಡಿಮೆ ಅಂಕ ಬಂದಾಗ ಅದಕ್ಕೆ ಇದೇ ವಾದವನ್ನು ನನ್ನ ಕಾರಣವಾಗಿ ಮಂಡಿಸಬಹುದಿತ್ತು!) ಜಗತ್ತು ಮತ್ತೆ ತನ್ನ ಪಠ್ಯಪುಸ್ತಕಗಳನ್ನು ಬದಲಿಸುತ್ತದೆ. ಆ ವಿಜ್ಞಾನಿಯನ್ನು ಪಕ್ಕಕ್ಕೆ ಕೂರಿಸಿ ಹೊಸ ವಾದ ಮಂಡಿಸಿದವನಿಗೆ ಪಟ್ಟ ಒಪ್ಪಿಸಲಾಗುತ್ತದೆ. ಈ ಹೊಸ ವಿಜ್ಞಾನಿ ಅದೇ ಪಟ್ಟದಲ್ಲಿ ವಿರಾಜಮಾನನಾಗುತ್ತಾನೆ ; ಮುಂದೊಂದು ದಿನ ಹೊಸ ವಾದ ಸೃಷ್ಟಿಯಾಗುವವರೆಗೂ! ಈ ತಲೆಕೆಳಗಾಗಿಸುವಿಕೆ ವಿಜ್ಞಾನಕ್ಕೆ ಹೊಸತೇನಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡುಬಂದಿರುವಂತದ್ದೇ!

ಅಪನಂಬಿಕೆಗಳಿಗೆ ಇದೊಂದೇ ಕಾರಣವಲ್ಲ. ಕಳೆದ ವರ್ಷದ ದಿನಪತ್ರಿಕೆಗಳನ್ನು ಹಿಡಿದು ನೋಟ್ ಮಾಡುತ್ತ ಕುಳಿತರೆ ಕೆಲ ವಿಜ್ಞಾನಿಗಳ ಸಾಕಷ್ಟು ವೈರುದ್ಧ್ಯ ಹೇಳಿಕೆಗಳು ಕಾಣಸಿಗುತ್ತದೆ. ಇದೇ ವಿಷಯವಾಗಿ ಜೋಗಿ ಒಂದು ಲೇಖನದಲ್ಲಿ ಈ ರೀತಿ ಬರೆಯುತ್ತಾರೆ, ” ಆಗಾಗ ಈ ವಿಜ್ಞಾನಿಗಳ ಸಾಧನೆ ವರದಿಯಾಗುತ್ತಲೇ ಇರುತ್ತದೆ. ಹಾಲೆಂಡಿನ ವಿಜ್ಞಾನಿಗಳು ಚಹಾ ಕುಡಿದರೆ ಹೃದಯರೋಗ ಅನ್ನುತ್ತಾರೆ. ನೆದರ್ಲ್ಯಾಂಡಿನ ಮಂದಿ ಚಹಾ ಕುಡಿದರೆ ಹೃದಯರೋಗ ವಾಸಿ ಅನ್ನುತ್ತಾರೆ. ಪ್ರತಿಯೊಬ್ಬರೂ ಇಪ್ಪತ್ತೋ ಮೂವತ್ತೋ ಮಂದಿಯನ್ನು ಕಲೆಹಾಕಿ ಅವರ ಮೇಲೆ ನಿರಂತರ ಪ್ರಯೋಗಗಳನ್ನು ಮಾಡುತ್ತ ತಮ್ಮ ಸಂಬಳಗಳನ್ನೂ ಸ್ಥಾನಗಳನ್ನು ಉಳಿಸಿಕೊಳ್ಳುತ್ತಾ ಮಹಾರಾಜನ ಆಸ್ಥಾನದಲ್ಲಿನ ರಾಜ ಪುರೋಹಿತರ ಹಾಗೆ ಮಾನವ ಜನಾಂಗಕ್ಕೆ ವಕ್ಕರಿಸಿಕೊಂಡಿರುತ್ತಾರೆ.” ಜೋಗಿ ಮಾತು ಅಕ್ಷರಶಃ ನಿಜವೆನ್ನಿಸುತ್ತದೆ,

ಇತ್ತೀಚೆಗೆ ಒಂದು ಇ-ಮೈಲ್ ಎಲ್ಲರಲ್ಲಿ ಸುತ್ತಾಡುತ್ತಿದೆ. ಜುಲೈ ತಿಂಗಳಲ್ಲಿ ಸೂರ್ಯಗ್ರಹಣವಿರುವುದರಿಂದ ಒಂದು ದೊಡ್ಡ ಅಪಾಯ ಕಾದಿದೆ ಅನ್ನುವರ್ಥದಲ್ಲಿ ಸುಳಿದಾಡುತಿದೆ. ಜಪಾನಿನ ಪಕ್ಕದ ಸಮುದ್ರದಲ್ಲಿ ಧೂಮಕೇತು ಬಿದ್ದು ಆಗುವ ಸುನಾಮಿಗೆ ಜಗತ್ತಿನ ಕಡಿಮೆ ಸಮುದ್ರಮಟ್ಟದಲ್ಲಿರುವ ಜಾಗವೆಲ್ಲಾ ಅಪಾಯಕ್ಕೆ ಸಿಲುಕುತ್ತದಂತೆ. ಇದು ನಾಸಾ ವಿಜ್ಞಾನಿಗಳ ಹೇಳಿಕೆ ಅಂತಲೂ ನಂಬಿಸುತ್ತಿದೆ. ಸಧ್ಯಕ್ಕೆ ನಾನು ಕೆಲಸ ಮಾಡುತಿರುವ ಮಾಲ್ಡೀವ್ಸ್ ದೇಶ ಸಮುದ್ರ ಮಟ್ಟಕ್ಕಿಂತ ಕೇವಲ ೮ ಫೀಟ್ ಮೇಲಿದೆ. ಅಲ್ಲಿ ತಿಳಿಸಿರುವ ಅಪಾಯಪಟ್ಟಿಯಲ್ಲಿರುವ ದೇಶಗಳಲ್ಲಿ ಮಾಲ್ಡೀವ್ಸ್ ಕೂಡ ಇದೆ. ಆ ಇ-ಮೈಲಿನ ಪ್ರಕಾರ ಇನ್ನು ಹೆಚ್ಚು ದಿನಗಳಿಲ್ಲ. ಜುಲೈ ೨೨ ಕ್ಕೆ ಇದೆಲ್ಲ ಆಗಲಿದೆ ಅನ್ನುತ್ತಿದೆ. ಈ ಸುದ್ಧಿ ನಿಜವಾದದ್ದಾ? ಗೊತ್ತಿಲ್ಲ.

ಒಂದು ವೇಳೆ ನಿಜವೇ ಆದರೆ ಘಟ್ಟದ ಮೇಲಿರುವ ನೀವೆಲ್ಲರೂ ವಿಜ್ಞಾನಿಗಳಿಗೆ ( ಅಥವ ಆ ಇ-ಮೈಲ್ ಸೃಷ್ಟಿಕರ್ತನಿಗೆ) ಅಭಿನಂದನೆಗಳನ್ನು ತಿಳಿಸಿಬಿಡಿ. ನಿಜವಲ್ಲವಾದರೆ ಉಳಿದಿದ್ದಕ್ಕೆ ಹೇಗಿದ್ದರೂ ನನಗೆ ನೀಡುವಿರಲ್ಲ?!

ಮಿಲ್ಕೀವೇ ನಲ್ಲಿ, ಈ ಜಗತ್ತಿನ, ಏಷ್ಯಾ ಖಂಡದಲ್ಲಿನ, ಭಾರತವೆಂಬೋ ರಾಷ್ಟ್ರದ, ಕರ್ನಾಟಕ ರಾಜ್ಯದ, ಉಡುಪಿ ಜಿಲ್ಲೆಯಲ್ಲಿನ ಕುಂದಾಪುರವೆಂಬ ಪುಟ್ಟ ಊರಿನ ವ್ಯಾಸರಾಜ ಮಠದ ಪಕ್ಕದ ಪುಟ್ಟ ಬಾಡಿಗೆ ಮನೆಯಲ್ಲಿ ನನ್ನಮ್ಮ ವಾಸಿಸಿದ್ದಾರೆ. ದಯವಿಟ್ಟು ಯಾರೂ ಅವಳ ಕಿವಿಗೆ ಈ ಇ-ಮೈಲ್ ನ ಸುದ್ಧಿ, ಮತ್ತು ಮಾಲ್ಡೀವ್ಸ್ ಕೇವಲ ಎಂಟೇ ಅಡಿ ಸಮುದ್ರ ಮಟ್ಟಕ್ಕಿಂತ ಮೇಲಿರುವುದನು ತಿಳಿಸದಿರಲಿ!

ರಿಸೆಶನ್ ಇದೆ ಅದಕ್ಕೆ ನಿಮಗೆ ಮನರಂಜನೆ ಇಲ್ಲ ಅಂದ್ರೆ ಜನ ಸುಮ್ಕೆ ಬಿಡ್ತಾರ್ಯೆ? ಕ್ರಿಯೇಟಿಬಿಟಿ ಉಳ್ಳವರು ಕೈ ಕಟ್ಕೊಂಡು ಸುಮ್ನೆ ಕುಂತ್ಕತಾರಾ? ಇದು ಬಾಲಿವುಡ್ಡು ಸ್ವಾಮಿ… ಯಾವ್ದಕ್ಕೂ ಬಗ್ಗೋರಲ್ಲ… ಎಂಥಾ ಟೈಮ್ ಬಂದ್ರೂ ಹಿಂಗಂತಾರೆ…’ಪಿಕ್ಚರ್ ಅಭೀ ಭೀ ಬಾಕಿ ಹೈ ಮೇರೆ ದೋಸ್ತ್!’

ಸಧ್ಯಕ್ಕೆ ಬಾಲಿವುಡ್ಡಿನಲ್ಲಿ ನಾಲ್ಕು ಸಿನೆಮಾಗಳು ಬಹಳ ಭರವಸೆ ಹುಟ್ಟಿಸಿದೆ. ಭಾರಿ ಖರ್ಚುವೆಚ್ಚದಲ್ಲಿ ತಯಾರಾಗಿ ಪ್ರೇಕ್ಷಕರಿಗೆ ತಾವು ಹಿಂದೆಂದೂ ಕಂಡಿರದ ಕೇಳಿರದ ಕಥೆಗಳನ್ನೊಳಗೊಂಡು ಥಿಯೇಟರ್ ಸ್ಕ್ರೀನ್ ಎಂಬ ಕುಂಡದಲ್ಲಿ ತಮ್ಮ ಅಗ್ನಿ ಪರೀಕ್ಷೆಗೆ ಎದೆಯೊಡ್ಡಲು ರೆಡಿಯಾಗಿದೆ.

ಮೊದಲನೆಯದ್ದು ’ಲವ್ ಆಜ್ ಕಲ್’. ಯುವಜನರ ನಾಡಿ ಮಿಡಿತ ಚೆನ್ನಾಗಿ ಅರಿತಿರುವ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಮೂಡಿ ಬರ್ತಿದೆ. ಈ ಇಮ್ತಿಯಾಜ್ ಅಲಿ ’ಜಬ್ ವಿ ಮೆಟ್’ ಅಂಥ ಭರ್ಜರಿ ಯಶಸ್ಸನ್ನ ಮುಂದುವರಿಸಲಿಕ್ಕಾಗಿ ತುದಿಗಾಲಲ್ಲಿದ್ದಾರೆ. ಪ್ರೀತಮ್ ಸಂಗೀತ ಈಗಾಗಲೇ ಸಿಕ್ಕಾಪಟ್ಟೆ ಹಿಟ್ ಆಗಿದೆ. ಚಿತ್ರದ ಟ್ರೈಲರ್ ಎರಡು ಜನರೇಶನ್ ನ ಪ್ರೇಮ ಕತೆ ತೋರಿಸುತ್ತಿದೆ. ಸೈಫ್ ಅಲಿ ಖಾನ್ ಚಿತ್ರಕ್ಕೆ ತಮ್ಮ ನಟನಾ ಕೌಶಲ್ಯವಲ್ಲದೇ ಅರ್ಧಕ್ಕರ್ಧ ದುಡ್ಡೂ ಸುರಿದಿದ್ದಾರೆ. ಅರ್ಥಾತ್ ಸೈಫ್ ಚಿತ್ರದ ಹೀರೋ ಮತ್ತು ನಿರ್ಮಾಪಕ ಕೂಡ. ಕರೀನಾ ಅಭಿನಯದ ಜಬ್ ವಿ ಮೆಟ್ ಗೆ ನಿರ್ದೇಶಕರಾಗಿದ್ದಿದ್ದು ಇಮ್ತಿಯಾಜ್, ನಿರ್ಮಾಪಕ ಸೈಫ್… ಆದರೂ ಇಲ್ಲಿನ “ಟ್ವಿಸ್ಟ್” ಏನಪ್ಪ ಅಂದ್ರೆ ನಾಯಕಿ ಕರೀನಾ ಅಲ್ಲ. ಜಬ್ ವಿ ಮೆಟ್ ನ ಗೀತ್ ಪಾತ್ರದ ಎಲ್ಲಾ ಲಕ್ಷಣಗಳೂ ಇರುವ ಪಾತ್ರಕ್ಕೆ ಕರೀನಾ ಹಾಕಿಕೊಂಡರೆ ರಿಪೀಟ್ ಅನ್ನಿಸುವ ಭಯ ಇರುವುದಿಂದಲೋ ಏನೋ ನಾಯಕಿಯಾಗಿ ದೀಪಿಕಾ ಪಡುಕೋಣೆಯನ್ನು ಕೂರಿಸಲಾಗಿದೆ. ದೀಪಿಕಾ, ಕರೀನಾಳಿಗೇ ಸಡ್ಡುಹೊಡೆಯುವಂತಿದ್ದಾಳೆ.

ಸೋಲಿನ ಶೂಲ(ಶೋಲೆ)ದಲ್ಲಿದ್ದ, ’ರಣ’ವಿವಾದದಲ್ಲಿ ಮುಳುಗಿದ್ದ ರಾಮ್ ಗೋಪಾಲ್ ವರ್ಮಾ ಮತ್ತೆ ಚಿಗುರಿದ್ದಾರೆ. ’ಫ್ಯಾಕ್ಟರಿ’ ಬಾಗಿಲು ಮತ್ತೆ ತೆಗೆದಿದೆ. ಈ ಸಲ ಮತ್ತೆ ಒಂದು ಥ್ರಿಲ್ಲರ್ ಮೊರೆಹೊಕ್ಕಿದ್ದಾರೆ. ಚಿತ್ರ “ಅಗ್ಯಾತ್” . ಶ್ರೀಲಂಕಾದ ಕಾಡುಗಳಲ್ಲಿ ಶೂಟಿಂಗ್ ಸದ್ದಿಲ್ಲದೇ ನಡೆದಿದೆ. ಎಂದಿನಂತೆ ನಮ್ಮನ್ನು ಖುರ್ಚಿಯ ತುದಿಯಲ್ಲಿ ಕೂರಿಸುವಂತೆ ಮಾಡುವ ದೃಶ್ಯಗಳೂ ಕ್ಯಾಮರಾ ಕೋನಗಳೂ ಹೇರಳವಾಗಿದೆ. ತೆಲುಗಿನ ಮುದ್ದುಮೊಗದ ನಿತಿನ್ ಗೆ ಬಾಲಿವುಡ್ಡಿಗೆ ಭಡ್ತಿ ಕೊಟ್ಟಿದಾರೆ ವರ್ಮಾ. ವರ್ಮಾ ಕ್ಯಾಂಪಿನ ಖಾಯಮ್ ನಾಯಕಿ ’ಪೋಲಿ’ ಹುಡುಗಿ (ಅಲ್ಲಲ್ಲ.. ’ರಾಜ್’ ಚಿತ್ರದ ಹುಡುಗಿ) ನಿಶಿತಾ ಕೊಠಾರಿ ಈ ಚಿತ್ರಕ್ಕೂ ಮೊಗ(ಅಷ್ಟೇ!) ತೋರಿಸಿದ್ದಾರೆ. ’ಕಾಡೊಂದರಲ್ಲಿ ಶೂಟಿಂಗ್ ನಲ್ಲಿ ತೊಡಗಿಕೊಳ್ಳುವ ಸಿನೆಮಾ ತಂಡದಲ್ಲಿ ಒಬ್ಬೊಬ್ಬರೇ ಹತ್ಯೆಗೀಡಾಗುವ’ ಎಳೆ ಹಿಡಿದು ಜಗ್ಗಾಡಿರುವ ಚಿತ್ರಕತೆ ಹೊಂದಿದೆ.

ಸಂಜಯ್ ದತ್ ಹಿಂದೆ ಮುಸಾಫಿರ್ ಅನ್ನುವ ಸಿನೆಮಾದಲ್ಲಿ ಒಂದು ಗೆಟ್ ಅಪ್ ನಲ್ಲಿದ್ದರು ನೆನಪಿದೆಯಾ? ಅದೇ ಫ್ರೆಂಚ್ ಗಡ್ಡ, ಡಾನ್ ಗೆಟಪ್ಪು. ಅನಿಲ್ ಕಪೂರ್ ಆ ಚಿತ್ರದ ನಾಯಕನಾಗಿದ್ದ. ಅನಿಲ್ ರ ಪಾತ್ರದ ಹೆಸರು ಲಕ್ಕಿ. ಇದನ್ನೆಲ್ಲಾ ಯಾಕಪ್ಪಾ ತಿಳಿಸ್ತಿದೀನಿ ಅಂದ್ರೆ “ಲಕ್” ಅನ್ನುವ ಹೊಸ ಚಿತ್ರ ಬರ್ತಿದೆ. ಸಂಜೂ ಬಾಬ ಪುನಃ ಆಲ್ಮೋಸ್ಟ್ ಅದೇ ಗೆಟಪ್ ನಲ್ಲಿ ವಾಪಸ್ಸಾಗಿದ್ದಾರೆ. ರಿಯಾಲಿಟಿ ಶೋಗಳು ಮತ್ತು ಬೆಟಿಂಗ್ ಜಗತ್ತಿನ ಕುತೂಹಲಭರಿತ ಎಳೆ ಹೊಂದಿರುವ ಚಿತ್ರದ ಟ್ರೈಲರ್ ಗಳು ರೋಮಾಂಚಕವಾಗಿದೆ. ಆಕ್ಷನ್ ಗಳು ಮೈನವಿರೇಳಿಸುವಂತಿದೆ. ಶ್ರೀಅಷ್ಟಸಿದ್ಧಿವಿನಾಯಕ ಬ್ಯಾನರ್ ನಲ್ಲಿ ಮೂಡಿಬರುತ್ತಿರುವ ಚಿತ್ರದಲ್ಲಿ ಆಮೀರ್ ಖಾನ್ ಸಂಬಂಧಿ ಇಮ್ರಾನ್ ಖಾನ್ ಕೂಡ ಮಹತ್ವದ ಪಾತ್ರದಲ್ಲಿದ್ದಾರೆ. ಶ್ರೀಅಷ್ಟಸಿದ್ಧಿವಿನಾಯಕ… ಸಂಜೂಬಾಬ… ಇಮ್ರಾನ್ ಖಾನ್… ಈ ಮೂರು ಕಾಂಬಿನೇಷನ್ ಎಲ್ಲೋ ಕೇಳಿದಂತಿದೆಯಲ್ಲಾ ಎಂದು ಮೂಗು ಮುರಿಯದಿರಿ ಸ್ವಾಮಿ… ಎಲ್ಲಾ ಚಿತ್ರಗಳೂ ’ಕಿಡ್ನಾಪ್’ ತರ ಆಯ್ತದಾ?

kaminey2

ನಾಲ್ಕನೆಯದ್ದು ಮಾತ್ರ ನಿಮ್ಮೆಲ್ಲರ ಕುತೂಹಲ ಮೀರಿ ಬರುವ ನಿರೀಕ್ಷೆಯಿದೆ. “ಮಕ್ಬೂಲ್” “ಓಂಕಾರ” ಮತ್ತು ” ಬ್ಲೂ ಅಂಬ್ರೆಲ್ಲಾ’ ಅಂತಹ ಅದ್ಭುತ ತ್ರಿವಳಿ ಸಿನೆಮಾ ಕೊಟ್ಟ ಭಾರತದ ಪ್ರತಿಭಾವಂತ ನಿರ್ದೇಶಕರುಗಳ ಲಿಸ್ಟಿನಲ್ಲಿ ಮೇಲ್ಪಂಕ್ತಿಯಲ್ಲಿ ಕಾಣಸಿಗುವ ವಿಶಾಲ್ ಭಾರದ್ವಾಜ್ ರ ನಾಲ್ಕನೇ ಚಿತ್ರ “ಕಮೀನೇ”. ಕರೀನಾ ಜತೆಗೆ ಕಿಸ್ಮತ್ ದೂ ಕನೆಕ್ಷನ್ ಕಳೆದುಕೊಂಡಿರುವ ಶಾಹಿದ್ ಕಪೂರ್ ಇದರಲ್ಲಿ ಡಬಲ್ ಪಾತ್ರದಲ್ಲಿ ಕಾಣಿಸಿಕೊಳ್ತಿದಾರೆ. ಎರಡೂ ವಿಭಿನ್ನ ಪಾತ್ರಗಳು. ಶಾ(ಫಾ)ಹಿದ್”ಮೈ ಫ ಕೋ ಫ ಬೋಲ್ತಾ ಹೂಂ….” ಎನ್ನುವ ಕಾಮಿಡಿ ದೃಶ್ಯ ನೋಡಿದರೆ ವಿಶಾಲ್ ಹಾಸ್ಯಚಿತ್ರ ನಿರ್ದೇಶನ ಮಾಡುವುದರೊಂದಿಗೆ ಎಲ್ಲಾದ್ರಲ್ಲೂ ಸೈ ಅನ್ನಿಸಿಕೊಳ್ಳೊದಕ್ಕೆ ಪ್ರಯತ್ನಿಸುತ್ತಿದಾರೇನೊ ಅನ್ನುವ ಅನುಮಾನ. ಶಾಹಿದ್ ರಿಂದ ಅದ್ಭುತ ಟೈಮಿಂಗ್ ಉಳ್ಳ ನಟನೆ ಬಂದಿದೆ ಅನ್ನುವುದು ಚಿತ್ರತಂಡದವರ ಅಂಬೋಣ. ಫ್ಯಾಶನ್, ದೋಸ್ತಾನಾ ಗಳು ಹಿಟ್ ಆದ ಬಳಿಕ ಪ್ರಿಯಾಂಕಾ ಚೋಪ್ರಾ ಹ್ಯಾಟ್ರಿಕ್ ಪಡೆಯಲು ಪರಿಪೂರ್ಣ ಯತ್ನ ನಡೆಸಿದ್ದಾರೆ.

ವಿಶಾಲ್ ಎಂದಿನಂತೆ ತಮ್ಮ ವಿಚಿತ್ರ ಪಾತ್ರಗಳ ಹೆಸರಿನೊಂದಿಗೆ ಹಾಜರಾಗಿದ್ದಾರೆ. ಹಾಗಾಗಿ ಚಿತ್ರದಲ್ಲಿ “ಗುಡ್ಡು” “ಸ್ವೀಟಿ” ಮುಂತಾದ ಹೆಸರುಗಳು ಹೇರಳವಾಗಿ ಕಾಣಸಿಗುತ್ತದೆ. 
ವಿಶಾಲ್ ಭಾರದ್ವಾಜ್ ತಮ್ಮ ಸಂಗೀತ ನಿರ್ದೇಶನದಿಂದ ಈಗಲೇ  ಕಮೀನೇ ಹೆಸರನ್ನು ಮನೆಮಾತಾಗಿಸಿದ್ದಾರೆ. ಚಿತ್ರದ ಪೋಸ್ಟರ್ ಡಿಸೈನ್ ಗಳೂ ಚಂದ ಇವೆ. ಚಿತ್ರದ ಡಿಸೈನ್ ನಲ್ಲಿ ’ಸ’ ಗೆ ’ಫ’ ಅನ್ನುವ ನಾಯಕ ಪಾತ್ರಧಾರಿಯಂತೆ ’ಸಧ್ಯದಲ್ಲೇ ಬರಲಿದೆ’ ಎಂಬುದಕ್ಕೆ ಕಮಿಂಗ್ ಸೂನ್ ಬದಲು “ಕಮಿಂಗ್ ಫೂನ್” ಅಂತ ಇದೆ. ಏನೇ ಇದ್ದರೂ ಚಿತ್ರದ ಯೂಎಸ್ಪಿ ಶಾಹಿದ್ – ಪ್ರಿಯಾಂಕಾ ರ ವಿಭಿನ್ನ ಗೆಟಪ್, ಮತ್ತು ವಿಶಾಲ್ ಭಾರದ್ವಾಜ್ ಅನ್ನುವ ಮ್ಯಾಜಿಕ್ ಮಾತ್ರ ಅನ್ನಬಹುದು.

“ಬ್ಲೂ”, “ಜಶ್ನ್”, “೩ ಈಡಿಯಟ್ಸ್”, “ಮೈ ನೇಮ್ ಇಸ್ ಖಾನ್” ಇನ್ನೂ ಮತ್ತಷ್ಟು ಚಿತ್ರಗಳು ಹಾಲಿವುಡ್ಡಿಗೆ ಸಡ್ಡು ಹೊಡೆವ ರೀತಿಯಲ್ಲಿ ತಯಾರಾಗುತ್ತಿದ್ದರೂ ಬರಲು ಸಾಕಷ್ಟು ಸಮಯವಿದೆ. ಸಧ್ಯಕ್ಕೆ  ಮಲ್ಟಿಪ್ಲೆಕ್ಸ್- ನಿರ್ಮಾಪಕರ ಜಗಳ ಪರಿಹಾರವಾಗಿದೆ, ಐಪಿಎಲ್ಲೂ – ಐಸೀಸಿ ಕಿರಿಕೆಟ್ಟೂ ಮುಗಿದಿವೆ.

ಇಂತಹ ಒಂದು ಕಮಿಂಗ್ ಸೂನ್ ಜಾಹೀರಾತು ನೋಡಿದೊಡನೆ ಯುವಜನತೆ ತಮ್ಮ ಪಾಕೆಟ್ ಮನಿಯನ್ನು ಕೂಡಿಟ್ಟು ಕಾಯುತ್ತದೆ, ಮಧ್ಯಮ ವರ್ಗದ ಕುಟುಂಬಗಳು ತಮ್ಮ ಕಮಾಯಿಯ ೧೦-೨೦ ಪರ್ಸೆಂಟು ಮತ್ತು ಒಂದು ಸುಂದರ ಭಾನುವಾರವನ್ನು ಥಿಯೇಟರ್ ಗಾಗಿ ಮುಡಿಪಿಡಲು ತಯಾರಾಗುತ್ತದೆ.

ಹಾಗೆಯೇ ಇನ್ನೊಂದು ಕೋನದಲ್ಲಿ ಒಂದು ಸೃಜನಶೀಲ ಪಂಗಡ ತಮ್ಮ ಪ್ರತಿಭೆಯನ್ನೆಲ್ಲಾ ಪಣವಾಗಿಟ್ಟು ಕನಸನ್ನು ಬೆಳ್ಳಿತೆರೆಗೆ ಇಡುತ್ತಿದ್ದಾರೆ.

ಕನಸುಗಳು ಅರಳುತ್ತದಾ? ಮುದುಡುತ್ತದಾ?

ಯಾವುದೋ ಒಂದು ಶುಕ್ರವಾರ ಪ್ರೇಕ್ಷಕಪ್ರಭುಗಳಿಂದ ನಿರ್ಧರಿಸಲ್ಪಡುತ್ತದೆ!

“ಬೇಕಾಗಿದ್ದಾರೆ!

ಇಪ್ಪತ್ತರ ಆಸುಪಾಸಿನಲ್ಲಿರುವ, ಮುಗ್ಧ ಕಂಗಳ, ಚೆಲುವಾದ ಏಳುಮಲ್ಲಿಗೆ ತೂಕವಿರುವ ಹುಡುಗಿಯೊಬ್ಬಳು ಬೇಕಾಗಿದ್ದಾಳೆ. ಕೂಡಲೇ  ಸಂಪರ್ಕಿಸಿ,”

ಜನಪ್ರಿಯ ಪತ್ರಿಕೆಯೊಂದರ ಮೂರನೇ ಪುಟದ ಮೂಲೆಯಲ್ಲಿದ್ದ ಈ ಚಿಕ್ಕ-ಚೊಕ್ಕ ಜಾಹೀರಾತನ್ನು ಓದಿ ಯಾವುದೋ ಶ್ರೀಮಂತ ಪಡ್ಡೆ ಹುಡುಗನ ಕರಾಮತ್ತಿರಬೇಕೆಂದುಕೊಂಡು ಪುಟ ಮಗುಚಿ ಹಾಕಿದವರು ಕೆಲವರಾದರೆ, ’ಏಳು ಮಲ್ಲಿಗೆ ತೂಕದ ಹುಡುಗಿಯಾ!’ ಎಂದು ಮನದಲ್ಲೇ ಚಪ್ಪರಿಸಿ ತಮ್ಮ ಫ್ರೆಂಡ್ಸ್ ಗಳಿಗೆ ಹೇಳಿ ನಗಲು ಒಳ್ಳೆಯ ವಿಷಯ ಸಿಕ್ಕಿತಲ್ಲ ಎಂದು ಸಂಭ್ರಮ ಪಟ್ಟವರು ಕೆಲವರು. ಇನ್ನೂ ಬೇರೆ ಥರದವರು ಎದುರು ಮನೆಯ ಧಡೂತಿ ಹುಡುಗಿಯನ್ನು ಸಂಪರ್ಕಿಸಲು ಹೇಳಿದರೆ ಹೇಗೆ? ಎಂದು ಜೋಕ್ ಮಾಡಿ ನಕ್ಕರು.

ಇಂತಹ ವಿಚಿತ್ರ ಜಾಹೀರಾತು ಪತ್ರಿಕೆಗೆ ನೀಡಿದ ಮಹಾನುಭಾವ ಸಂದೀಪ್ ಜಾಹೀರಾತನ್ನು ನೋಡಿ ಮುಗುಳ್ನಗೆ  ಸೂಸಿದ. ಕೂಡಲೇ ಮೊಬೈಲ್ ನಿಂದ ಪತ್ರಿಕೆಗೆ ಕರೆ ಮಾಡಿದ. ಯಾವುದಾದರೂ ಲೆಟರ್ ಬಂದಲ್ಲಿ ತಕ್ಷಣವೇ ತನಗೆ ಕಾಲ್ ಮಾಡುವಂತೆ ತಿಳಿಸಿದ. ನಂತರ ಅಲೋಚನಾಮಗ್ನನಾದ. ಮನದ ತುಂಬಾ ಒಂದೇ ಪ್ರಶ್ನೆ ಲಾಸ್ಯವಾಡುತಿತ್ತು. ಅಂತಹ ಹುಡುಗಿ ಸಿಗುತ್ತಾಳಾ? ಆ ರೀತಿಯ ಹುಡುಗಿಯೆಂದರೆ ಏಳು ಮಲ್ಲಿಗೆ ತೂಕದ ಹುಡುಗಿಯಲ್ಲ!

ಮತ್ತೆ..?

************

ಬದುಕಿನ ತುಂಬ ಖಾಲಿ ಆಕಾಶದಂತಹ ಏಕತಾನತೆ. ಆಸ್ತಿ, ಅಂತಸ್ತು, ಬಂಗಲೆ ಬ್ಯಾಂಕ್ ಬ್ಯಾಲನ್ಸ್, ತಾಯಿ ಮಮತೆ, ಫ್ರೆಂಡ್ಸ್ ಹರಟೆ, ಹಣ ನೀಡುವ ಆನಂದ ಎಲ್ಲಾ ಇದ್ದರೂ ತುಂಬಿದ ಕೊಡದ ಚಿಕ್ಕ ತೂತಿನಂತಹ ಸಣ್ಣ ಕೊರತೆ. ಮನದಲ್ಲಿ ಬತ್ತಿದ ಉತ್ಸಾಹದ ಒರತೆ.

ಇಂತಹಾ ಖಾಲಿ-ಖಾಲಿಯಾದ ಬದುಕಿನ ಕೊಡದಲ್ಲಿ ಕೊಂಚ  ಉತ್ಸಾಹ, ಉನ್ಮಾದ, ರೋಚಕತೆ, ರಮ್ಯತೆ ತುಂಬುವುದು ಹೇಗೆ?

ಅದಕ್ಕೆ ಉತ್ತರವಾಗಿ ಹೊಳೆದದ್ದೇ ಆ ವಿಚಿತ್ರ ಜಾಹೀರಾತು.

ಎಲ್ಲೋ ದೂರದಲ್ಲಿ, ರೂಮಿನ ಕದವಿಕ್ಕಿ ಮೂಲೆಯೊಂದರಲ್ಲಿ ಕುಳಿತು, ಜಾಹೀರಾತು ಓದಿ ಜಾಣತನದ ಉತ್ತರ ನೀಡುವ ತುಂಟು ಹುಡುಗಿಗಾಗಿ ಈ ಶೈಲಿಯ ಅನ್ವೇಷಣೆಗೆ ಕೈ ಹಾಕಿದ್ದ ಸಂದೀಪ್. ಅಂತಹ ಒಂದು ಅಲೋಚನೆ, ಅದರಲ್ಲಿರುವ ಕುತೂಹಲದಿಂದ ಅವನ ಬದುಕಿಗೆ ಎಂದೂ ಇರದಂತಹ ವಿಚಿತ್ರ ಕಳೆ ಬಂದುಬಿಟ್ಟಿತ್ತು. ತಾನೆಂದೂ ಅರಿಯದ ವಿಚಿತ್ರ ಹುರುಪು ಹುಟ್ಟಿತ್ತು. ಪ್ರತೀದಿನ ಪತ್ರಿಕೆಯ ಫೋನ್ ಕರೆಗಾಗಿ ಕಾಯುತ್ತ ಪರಿತಪಿಸುವುದರಲ್ಲಿ ಏನೋ ಆನಂದ, ಹರುಷ ಅವನಲ್ಲಿ.

ಮೂರು ದಿನ ಕಳೆದರೂ ಪತ್ರಿಕೆಯಿಂದ ಏನೂ ಉತ್ತರ ಬರದಾದಾಗ ತಾನೇ ಪರಿಸ್ಥಿತಿ ತಿಳಿದುಕೊಳ್ಳಲೋಸುಗ ಫೋನ್ ಮಾಡಿದ. “ನಾನು ಸಂದೀಪ್ ಮಾತಾಡ್ತಿರೋದು, ಏನಾದ್ರೂ ರೆಸ್ಪಾನ್ಸ್ ಬಂತೇ ನನ್ನ ಜಾಹೀರಾತಿಗೆ?”

“ಸಾರ್.. ನಿಮ್ಗೆ ಒಂದು ಸ್ಯಾಡ್ ನ್ಯೂಸ್..!” ಅಂದನಾತ.

ಆಶ್ಚರ್ಯದಿಂದ,” ಒಂದೂ ಲೆಟರ್ ಬಂದಿಲ್ವಾ?!”

“ಅಯ್ಯೋ! ಹಾಗಲ್ಲ ಸರ್… ರಾಶಿ-ರಾಶಿ ಲೆಟರ್ಸ್ ಬಂದಿವೆ, ಒಟ್ಟೂ ಸಧ್ಯಕ್ಕೆ ಮುನ್ನೂರ ಎಪ್ಪತ್ನಾಕು ಸರ್!…”

“ಉಸ್ಸ್ ಸ್..” ಎಂಬ ಉದ್ಗಾರ ಅವನಿಗರಿವಿರದಂತೆಯೇ ಹೊರಹೊಮ್ಮಿತು. ಫೋನ್ ಇಟ್ಟ ನಂತರ ಆಲೋಚಿಸಿದಾಗ ನಗು ಉಕ್ಕಿತವನಿಗೆ. ಯಾವುದೇ ಹುಡುಗಿ ತನ್ನ ಸೌಂದರ್ಯದ ಹೊಗಳಿಕೆಯನ್ನು ತನ್ನದಲ್ಲ ಅಂದುಕೊಳ್ಳುತ್ತಾಳಾ? ತನ್ನ ವಯಸ್ಸು ಇಪ್ಪತ್ತಲ್ಲವೆಂದೂ, ತನ್ನ ಕಣ್ಣಲ್ಲಿ ಮುಗ್ಧತೆ ಇಲ್ಲವೆಂದೂ ಯಾವತ್ತಾದರೂ ಒಂದು ಕ್ಷಣವಾದರೂ ಅಲೋಚಿಸುತ್ತಾಳಾ?

ಇಂತಹ ವಿಚಾರ ಮನದಲ್ಲಿ ಮೂಡಿ ಮೊಗದಲ್ಲಿ ನಗು ತರಿಸಿತು.

ಮತ್ತೆ ಆಲೋಚನಾಲಹರಿ ಆ ಕನಸಿನ ಏಳುಮಲ್ಲಿಗೆ ತೂಕದ ಹುಡುಗಿಯತ್ತ ವಾಲಿತು. ಮುನ್ನೂರ ಎಪ್ಪತ್ನಾಕರಲ್ಲಿ ಒಬ್ಬಳಾದರೂ ಅಂತವಳು ಇರುವುದಿಲ್ಲವಾ ಎನ್ನುವ ಆಸೆ ಅವನಲ್ಲಿ ಅರಳಿ ಒಂದು ನಿರ್ಧಾರಕ್ಕೆ ಬಂದ.

ತಾಳ್ಮೆಯಿಂದ, ಪ್ರೀತಿಯಿಂದ ಆ ಎಲ್ಲಾ ಪತ್ರಗಳನ್ನು ಒಂದೊಂದಾಗಿ ಓದುವ ನಿರ್ಧಾರವದು.

***********

“ತೂಕವೇನೋ ಏಳುಮಲ್ಲಿಗೆಯದೇ.. ಕಣ್ಣತಕ್ಕಡಿ ಪ್ರೀತಿಯಿಂದ ಅಳೆದರೆ ಮಾತ್ರ!
ಹೂವ ತೂಕ ಕಟ್ಟಿಕೊಂಡು ದುಂಬಿಗೇನಾಗಬೇಕು?  ಅದಕ್ಕೆ ಸರಾಗವಾಗಿ ಪರಾಗ ಸಿಕ್ಕರೆ ಆಯಿತು. ಆದರೆ ಅನುರಾಗಕ್ಕಾಗಿ ಹುಡುಕುವ ದುಂಬಿ ನೋಡಿದ್ದು ಇದೇ ಮೊದಲ ಬಾರಿ ಕಣ್ರೀ..:)”

ರಾತ್ರಿ ಮೂರು ಘಂಟೆಯಾದರೂ ನಿದ್ರಿಸದೇ, ಸದ್ದಿರದ ನಿಶ್ಯಬ್ಧದಲ್ಲಿ ರಾಶಿ ರಾಶಿ ಪತ್ರಗಳನ್ನು ಗುಡ್ಡೆಹಾಕಿಕೊಂಡು ಒಂದೊಂದೇ ಬಿಡಿಸಿ ಓದುತ್ತಿದ್ದರೆ ಚಿಕ್ಕ ಲಹರಿ ಮೂಡಿಸಿದ್ದೆಂದರೆ ಈ ಪತ್ರವೇ. ಹುಡುಗಿಯನ್ನು ಹೂವಿಗೆ ಹೋಲಿಸಿದರೆ ಆಕೆ ತನ್ನನು ದುಂಬಿಗೆ ಹೋಲಿಸಿ, ಅಲ್ಪ ಕಾವ್ಯಾತ್ಮಕವಾಗಿಯೂ ಸ್ವಲ್ಪ ಹುಡುಗಾಟಿಕೆಯಿಂದಲೂ ಬರೆದದ್ದು ನೋಡಿ ಈಕೆ ಬುದ್ಧಿವಂತೆ ಅನ್ನಿಸಿತವನಿಗೆ. ಪತ್ರದ ಅಡಿಭಾಗದಲ್ಲಿ ಹೆಸರಿಗಾಗಿ ಕಣ್ಣಲ್ಲೇ ತಡಕಾಡಿದ. ಅಲ್ಲಿ ಹೆಸರಿರಲಿಲ್ಲ. ಬದಲಿಗೆ ಚಿಕ್ಕ ನಕ್ಷತ್ರ ಚಿಹ್ನೆಯೂ ಅದರ ಕೆಳಗೆ ದೂರದಿಂದ ನೋಡಿದರೆ ಸಹಿಯಂತೆ ಕಾಣುವ ಪು. ತಿ. ನೋ. ಎಂಬ ಸೂಚನೆಯೂ ಇತ್ತು. ಲಗುಬಗನೇ ಪುಟ ಮಗುಚಿದ.

ಅಲ್ಲಿ-

“ನೀವಿಟ್ಟ ಪರೀಕ್ಷೆಯಲಿ ನಾನು ಯಶಸ್ವಿಯಾಗದೇ ಇದ್ದಿದ್ದರೆ ಈ ಪತ್ರ ಕಸದ ಬುಟ್ಟಿಯಲ್ಲಿರುತ್ತಿತ್ತು. ನನ್ನ ಹೆಸರಿಗಾಗಿ ಇಲ್ಲಿ ನೋಡಿದಿರೆಂದರೆ ಕೊನೆ ಪಕ್ಷ ಇಷ್ಟವಾಯಿತು ಎಂದಾಯ್ತು. ಥ್ಯಾಂಕ್ಸ್. ಆದರೆ ನನ್ನ ಹೆಸರು ಖಂಡಿತಾ ಹೇಳಲಾರೆ.
ನಾನು ಯಾರು ಎಂದು ತಿಳಿದುಕೊಳ್ಳಬೇಕಾದರೆ ತಕ್ಷಣ ಕೆಳಗಿನ ನಂಬರ್ ಗೆ ಡಯಲ್ ಮಾಡಿ.
ಇಷ್ಟವಾಗಿರದಿದ್ದರೆ ಕಸದ ಬುಟ್ಟಿ ಕಾಯುತಿದೆ, ತುಂಬಿಸಿ.”

ತಾನು ಮಾಡುತ್ತಿರುವುದು ಪರೀಕ್ಷೆ ಅಂತಲೂ, ತನ್ನೆದುರಿಗೆ ಪತ್ರಗಳ ರಾಶಿ ಇರುವುದೆಂದೂ ಸರಿಯಾಗಿ ಊಹಿಸಿದ್ದಾಳೆ. ಕಸದ ಬುಟ್ಟಿಯನ್ನು ಕರೆಕ್ಟಾಗಿ ಕಲ್ಪಿಸಿಕೊಂಡಿದ್ದಾಳೆ. ಆದರೆ ಮುಂಜಾವಿನ ಮೂರು ಘಂಟೆ ಎಂಬ ಈಗಿನ ಯುವಜನರ ಅರ್ಧರಾತ್ರಿಯಲ್ಲಿ ಪತ್ರ ಓದುತ್ತಿರುವೆನೆಂದು ಅಂದುಕೊಂಡಿರಲಿಕ್ಕಿಲ್ಲ. ಅಂದುಕೊಂಡಿರಲಾರಳು ಎಂಬ ಕಾರಣಕ್ಕೇ ಈಗಲೇ ಫೋನ್ ಮಾಡಿ ತಾನೇ ಬುದ್ಧಿವಂತನೆನ್ನಿಸಿಕೊಳ್ಳಬೇಕು. ಉಳಿದೆಲ್ಲ ಪತ್ರಗಳನ್ನು ಬದಿಗೆಸೆದು ಫೋನ್ ಗೆ ಕೈ ಹಾಕಿದ.

ಆ ಕಡೆ ಫೋನ್ ರಿಂಗಾಗುತಿತ್ತು. ಸಂದೀಪ್ ಉಸಿರು ಬಿಗಿ ಹಿಡಿದಿದ್ದ. ಮನೆಯಲ್ಲಿ ಬೇರೆ ಯಾರಾದರೂ ಫೋನ್ ಎತ್ತಿದರೆ? .. ” ಹಲೋ..” ಎಂದ ನಿಧಾನವಾಗಿ. ಆ ಕಡೆ ಲೈನ್ ನಲ್ಲಿರುವವರ ಪ್ರತಿಸ್ಪಂದನೆ ಕೇಳುವುದಕ್ಕಾಗಿ ಉತ್ಸುಕನಾಗಿದ್ದ.

“ಯಾರ್ರೀ.. ಅದು ಇಷ್ಟ್ ಹೊತ್ನಲ್ಲಿ..?” ಗೆಡಸು ಹೆಂಗಸಿನ ಬೈಗುಳದಂತಹ ಉತ್ತರ!

” ನಾನು.. ನಾನು.. ಸಂದೀಪ್.. ಅದೂ.. ಏಳು..ಮ..” ಎಮ್ದು ಬಡಬಡಿಸುತ್ತಿರುವಾಗ “ಬೆಳ್ಳಂಬೆಳಿಗ್ಗೆ ಮೂರುಘಂಟೆಗೆ ನಿದ್ರೆ ಹಾಳುಮಾಡಿ ಏಳು ಅನ್ನೋಕೆ ನೀನ್ಯಾವನಯ್ಯ?!” ಎಂದು ಸಿಡುಕಿನಿಂದ ಉತ್ತರಿಸಿದಳಾಕೆ.

ಗೊಂದಲಮಯನಾದ ಸಂದೀಪ್ ಇನ್ನೇನು ಫೋನ್ ಇಡಬೇಕು ಅಂದುಕೊಳ್ಳುತಿರುವಾಗ ಆ ಕಡೆಯಿಂದ ಸಿಟ್ಟಿನ ಗೆಡಸು ಹೆಂಗಸಿನ ಧ್ವನಿ ಮರೆಯಾಗಿ ಸಿಹಿಯಾದ ಉಲಿತವೊಂದು ಕೇಳಿಸಿತು..” ಪ್ಲೀಸ್.. ಫೋನ್ ಇಟ್ಟುಬಿಡಬೇಡಿ!”

ಆಶ್ಚರ್ಯವಾಯಿತವನಿಗೆ. “ಅಂದರೆ ಇಷ್ಟು ಹೊತ್ತು ಮಾತಾಡಿದ್ದು ನೀವೇನಾ?!”

ಅವಳು ನಸುನಕ್ಕು,” ಹ್ಮ್.. ಕಾಲೇಜಿನಲ್ಲಿ ಓದುತ್ತಿದ್ದಾಗ ಮಿಮಿಕ್ರಿಯಲ್ಲಿ ಪ್ರೈಜ್ ಬಂದಿತ್ತು, ಅಮಿತಾಭ್ ಬಚ್ಚನ್ ತರಹ ಮಾತಾಡೋಣ ಅಂದ್ಕೊಂಡೆ. ನಿಮ್ಗೆ ಅನುಮಾನವಾಗುತ್ತದೆಂದು…”

ಸಂದೀಪ್ ಬೇಸ್ತುಬಿದ್ದಿದ್ದ. ತುಂಟ ಹುಡುಗಿಯೊಬ್ಬಳನ್ನು ಗೆಳತಿಯನ್ನಾಗಿ ಮಾಡಿಕೊಳ್ಳೋಣವೆಂದರೆ ತನ್ನನ್ನೇ ಸುಲಭವಾಗಿ ಗೋಳುಹೋಯ್ದುಕೊಂಡಳಲ್ಲಾ ಅಂದುಕೊಂಡ. ಅವಳ ಬಗ್ಗೆ ಮನಸ್ಸು ಏನೆಲ್ಲಾ ಕಲ್ಪಿಸಿಕೊಳ್ಳುತಿತ್ತು. ಕೊಂಚ ಕ್ಷಣಗಳ ಮೌನದಲ್ಲಿ ಅವನ ಮನದಾಳದೊಳಗೆ ಒಂದು ನಿರ್ಧಾರ ಮೆದುವಾಗಿ ಹದಗಟ್ಟುತ್ತಿತ್ತು.

untitled

“ಹಲೋ… ಏನಾಲೋಚಿಸುತ್ತಿದ್ದೀರಿ?”

ನಿರ್ಧಾರ ಗಟ್ಟಿಯಾಯಿತು. ” ನನ್ನನ್ನು ಮದುವೆಯಾಗುವಿರಾ?” ಕೇಳಿದ.

“ವ್ಹಾಟ್?!” ಎಂಬ ಉದ್ಗಾರ ಅವಳಾಶ್ಚರ್ಯದ ಮೇರೆ ಸೂಚಿಸಿತು.

ಅವನಲ್ಲಿ ಅದೇ ಮಾತಿನ ಖಚಿತತೆ. ಅದೇ ನಿರ್ಧಾರದ ಗಟ್ಟಿತನ. ಪುನಃ ಅದೇ ಪ್ರಶ್ನೆ ಕೇಳಿದ.

“ಅಲ್ರೀ.. ನೀವು ನನ್ನನ್ನ ನೋಡೇ ಇಲ್ಲ?!”

” ನೋಡಬೇಕಾಗಿಲ್ಲ!”

“ನಾನು ಮುದ್ಕಿಯಾಗಿರಬಹುದು!” ಎಂದಳು; ದನಿಯಲ್ಲಿ ಶುದ್ಧ ತುಂಟತನ.

“ಪರವಾಗಿಲ್ಲ!”

“ಮ್..ನಿಮಗೆ ಬೇಕಾಗಿರೋದು ಏಳುಮಲ್ಲಿಗೆ ತೂಕದವಳಲ್ಲವೇ? ಆದ್ರೆ ನಾನು ಸ್ವಲ್ಪ ಡುಮ್ಮಿ ರೀ..”

“ಆದರೂ ಸರಿ”

“ಇಷ್ಟಕ್ಕೂ ನನ್ನಲ್ಲೇನು ಇಷ್ಟ ಆಯಿತು ನಿಮಗೆ?”

“ನಿಮ್ಮಲ್ಲಿರೋ ಜೀವಂತಿಕೆ!”

ಒಂದು ಕ್ಷಣದ ಮೌನ. ಆ ಅವಧಿಯಲ್ಲಿ ಇಬ್ಬರೂ ಭಾವವನ್ನು ಅರಗಿಸಿಕೊಳ್ಳಲು ಪ್ರಯತ್ನಿಸಿದರು. ಅವನ ಆ ನಿಜಾಯಿತಿಯ ಉತ್ತರಕ್ಕೆ ಅವಳ ತುಂಟತನ ಅಡಗಿ ತಂಪು ಹವೆಯೊಂದು ತಟ್ಟಿಹೋದಂತೆ ತನ್ಮಯಳಾದಳು. ಸಂದೀಪ್ ಮತ್ತೆ ಮುಂದುವರಿಸಿದ.” … ಹೌದು. ಬತ್ತಿದ ಬದುಕಲ್ಲಿ ಉತ್ಸಾಹ ಮೂಡಿಸುವ ಚಿಲುಮೆ ನಿಮ್ಮಲ್ಲಿ ಧ್ವನಿಸುತ್ತಿದೆ. ನಿಮ್ಮ ಮುಖ ನಿಮ್ಮ ಮಾತಿನ ಲಹರಿಯಲ್ಲೇ ಕಾಣಿಸುತಿದೆ. ನಿಜವಾಗಿಯೂ ನನಗೆ ಬೇಕಿರುವುದು ಏಳುಮಲ್ಲಿಗೆತೂಕದ ಹುಡುಗಿಯ ಸ್ನೇಹವೇ. ಆದರೆ ಆ ತೂಕ ಮನಸ್ಸಿಗೆ ಸಂಬಂಧಿಸಿದ್ದು.ನಿಮ್ಮ ಮನಸ್ಸೂ ಮಲ್ಲಿಗೆಯಂಥದ್ದು, ಅಷ್ಟೇ ಮಧುರ… ಅಷ್ಟೇ ಕಂಪು!”

ಅವಳು ನಕ್ಕಳು,” ಮತ್ತೆ..?”

“ಚೈತನ್ಯದ ಸುಗಂಧ ನಿಮ್ಮಲ್ಲಿದೆ. ಅದರ ಘಮ ಇಲ್ಲೂ ನನಗರಿವಾಗುತಿದೆ. ಹೇಳಿ ನನ್ನನ್ನು ಮದುವೆಯಾಗುತ್ತೀರಾ?”

ಅವಳು ಮತ್ತೊಮ್ಮೆ ನಕ್ಕು ಫೋನ್ ಇಟ್ಟುಬಿಟ್ಟಳು.

ಸಂದೀಪ್ ವಿಜಯದ ನಿಟ್ಟುಸಿರಿಟ್ಟು ಮೆಲುವಾದ ಅವಳ ದನಿಯ ಗುಂಗಿನಲ್ಲಿಯೇ ಪರವಶನಾಗುತ್ತಿದ್ದ.

ಅವಳು ಫೋನಿಟ್ಟು ಎದುರಿಗಿರುವ ಕನ್ನಡಿಯಲ್ಲಿ ತನ್ನ ಮೊಗ ನೋಡಿ ನಸುನಕ್ಕಳು.

***************

ಬದುಕಿನಲ್ಲಿ ಸದಾ ನೆಗೆಟಿವ್ ಆಗಿ ಯೋಚಿಸುವವರನ್ನು, ಪದೇ ಪದೇ ಸೋಲುವವರನ್ನು ಜಗತ್ತು ಹೀನಾಯವಾಗಿ ನೋಡುತ್ತದೆ. ಅವರು ದೂರ ಬರುವುದು ಕಾಣುತ್ತಲೇ ಜನರಿಗೆ ‘ಅರ್ಜೆಂಟು ಕೆಲಸ’ಗಳು ನೆನಪಾಗುತ್ತವೆ. ಬೇಗ ಎರಡೂ ಕಾಲಿಗೆ ಚೆನ್ನಾಗಿ ಬುದ್ಧಿ ಹೇಳಲು ಕಾರಣಗಳು ಸಿಕ್ಕುತ್ತವೆ.

ಆದರೆ ಸದಾ ನಗೆ ಬೀರುವ, ಗೆಲ್ಲುತಲಿರುವ ವ್ಯಕ್ತಿಗೆ ಅಂಥ ಟ್ರೀಟ್ ಮೆಂಟ್ ಸಿಗುವುದಿಲ್ಲ. ಅಂಥವರನ್ನು ನೋಡಲು ಕಾಯುತ್ತಿರುತ್ತಾರೆ. ಅವರ ಜೊತೆಗೆ ಮತ್ತಷ್ಟು ಹೊತ್ತು ನಿಲ್ಲಲು ತವಕಿಸುತ್ತಿರುತ್ತಾರೆ. ಅರ್ಜೆಂಟು ಕೆಲಸಗಳೆಲ್ಲ ಪಕ್ಕಕ್ಕೆ ನಿಂತು ಯಶಸ್ವಿ ವ್ಯಕ್ತಿಗೆ ದಾರಿ ಬಿಡುತ್ತದೆ.

ಆದರೆ ಅಂಥ ಸ್ಥಿತಿ ತಲುಪುವ ದಾರಿ ಸುಗುಮವಾದುದಲ್ಲ.ಮೇಲಕ್ಕೆ ಸರಾಗವಾಗಿ ಕಂಡರೂ ಸಾಕಷ್ಟು ಪರಿಶ್ರಮವಿರುತ್ತದೆ. ಬಾತುಕೋಳಿಯಂತೆ ಮೇಲೆ ಸಲಿಲವಾಗಿ ಈಜುತ್ತಿದ್ದರೂ, ಪಟ ಪಟ ಬಡಿಯುವ ಕಾಲಿನ ಶ್ರಮ ಕಾಣುವುದಿಲ್ಲ. ಗೆಲುವಿಗೆ ಅವರು ಕಂಡ ಕನಸಿನ ಬೀಜ, ಕನಸನ್ನು ಪೋಷಿಸಲು ವಿನಿಯೋಗಿಸಿದ ಶ್ರಮ, ನಿದ್ದೆಗೆಟ್ಟ ರಾತ್ರಿಗಳು, ಪಟ್ಟ ಅವಮಾನಗಳು, ‘ಈ ಗುರಿ ಅಸಾಧ್ಯ’ ಎಂಬ ಲೆವೆಲ್ಲಿನಿಂದ ಮತ್ತೆ ಉತ್ಸಾಹದ ಬುಗ್ಗೆಯೊಡೆದು ಸಾಧಿಸುವ ಶ್ರದ್ಧೆ ಇವ್ಯಾವುದೂ ತೋರದು.

ಸಾಮಾನ್ಯ ಮನುಷ್ಯರಿಗೆ ಕನಸು ಕಾಣುವ ಪ್ರವೃತ್ತಿಯಿರುವುದು ಸಹಜ. ಕೆಲವರು ಅದನ್ನು ಕನಸಿನ ಮಟ್ಟಕ್ಕೇ ಉಳಿಸಿ ಮತ್ತೆ ಜೀವನವನ್ನು ಮಾಮೂಲಾಗಿ ಕಳೆದುಬಿಡುತ್ತಾರೆ. ಉಳಿದವರು ಅದರಿಂದಲೇ ಪ್ರೇರಣೆ ಪಡೆದು ಒಂದಿಷ್ಟು ಪ್ರಯತ್ನ ಮಾಡಿದರೂ ಚಿಕ್ಕ ಸೋಲು ಎದುರಾದೊಡನೆ ಸುಸ್ತಾಗುತ್ತಾರೆ. ಗಾಜು ಮುಚ್ಚಿದ ಕಾರಿನೊಳಗಡೆ ಹಾರುವ ನೊಣ ಒಂದೆರಡು ಬಾರಿ ಪ್ರಯತ್ನಿಸಿ ಸಾಧ್ಯವಾದಾಗ ಒಳಗಿನ ಪರಿಸರಕ್ಕೇ ಅಡ್ಜಸ್ಟ್ ಆಗುವಂತೆ ಮತ್ತೆ ರೊಟೀನ್ ಜೀವನಕ್ಕೆ ಶರಣಾಗುತ್ತಾರೆ. 

 

ಮೊದಲು ಕಂಡ ಕನಸು ನನಸಾಗಿಸುವ ಸಾಮರ್ಥ್ಯ ಇದೆಯಾ? ಅದಕ್ಕೆ ಬೇಕಾಗುವ ಸಮಯ, ಪಡಬೇಕಾದ ಕಷ್ಟದ ಅಂದಾಜು ಮಾಡಿ ಸಾಧಿಸಬಲ್ಲೆವಾ ಎಂದು ನಿಯತ್ತಾಗಿ ಪ್ರಶ್ನಿಸಿಕೊಳ್ಳಬೇಕು. ಒಮ್ಮೆ ಹಠ, ಶ್ರದ್ಧೆ ಮೂಡಿದರೆ ಅದರಲ್ಲೆದುರಾಗುವ ಸೋಲುಗಳನ್ನು ತಾತ್ಮಾಲಿಕ ಎಂದೇ ಪರಿಗಣಿಸಿ ಮುನ್ನುಗ್ಗಬೇಕು. ಮಹಾನ್ ಆಟಗಾರರಲ್ಲಿ ಚಿರವಾಗಿ ಉಳಿಯುವ ಹೆಸರಾದ ಸಚಿನ್ ತೆಂಡುಲ್ಕರ್ ಸಹ ಶೂನ್ಯದಿಂದಲೇ ಟೆಸ್ಟ್ ಕ್ರಿಕೆಟ್ ಶುರು ಮಾಡಿದ್ದು ಎಂಬುದು ನೆನಪಿರಲಿ. ಅಮಿತಾಭ್ ಬಚ್ಚನ್ ದನಿಯನ್ನು ಆಕಾಶವಾಣಿಯಲ್ಲಿ ‘ಚೆನ್ನಾಗಿಲ್ಲ’ ಎಂದು ತಿರಸ್ಕರಿಸಲಾಗಿತ್ತು. ಈಗ ಅಂದಾಜಿಗೆ ಸಾವಿರದೈನೂರು ಕೋಟಿಗೆ ಒಡೆಯನಾಗಿರುವ ಶಾರುಕ್ ಚಿಕ್ಕ ಧಾರಾವಾಹಿಗಳಲ್ಲಿ ನಟಿಸುತ್ತಲೇ ಪದಾರ್ಪಣೆ ಮಾಡಿದ್ದು. ಅವರೆಲ್ಲ ತಮ್ಮ ರಂಗದಲ್ಲೆದುರಾದ ಸೋಲಿಗೆ ಹೆದರಿ ‘ಅಯ್ಯೋ! ನನ್ನಿಂದಾಗುವುದಿಲ್ಲ’ ಎಂದು ನಿರ್ಧರಿಸಿದ್ದರೆ ಏನಾಗುತ್ತಿತ್ತು ಊಹಿಸಬಲ್ಲಿರಾ?

ದೇವರು ಬದುಕೆಂಬ ಖಾಲಿ ಹಾಳೆ ಕೊಟ್ಟು ಏನಾದರೂ ಬರೀರಿ ಎಂದರೆ ಚಿಕ್ಕಪುಟ್ಟದನ್ನು ಯಾಕೆ ಬರೆಯುವಿರಿ? ದೊಡ್ಡ ಕನಸುಗಳನ್ನೇ ಕಾಣಿರಿ ಎಂದವರು ಶಂಕರ್‌ನಾಗ್. ಬೆಳಿಗೆ ಏಳುತ್ತಿದ್ದಂತೆ ಉತ್ಸಾಹ ಮೂಡಬೇಕು. ಉಳಿದ ಪ್ರಾಣಿಗಳಂತೆ ಬರೀ ಹಸಿವು, ಕಾಮ ಮಾತ್ರ ನಮ್ಮ ಉದ್ದೇಶಗಳಲ್ಲ. ನಾಳಿನ ಸೊಗಸಾದ ಜೀವನದ ಕನಸು ಕಾಣಲು ರಾತ್ರಿಗಳಿವೆ. ಅದನ್ನು ಸಾಧಿಸಲು ಚಂದದ ಹಗಲುಗಳಿವೆ. ಸರಿಯಾಗಿ ನೋಡಿದಲ್ಲಿ ಆಕಾಶದಷ್ಟು ಅವಕಾಶವಿದೆ. ಸಾಧಿಸಬೇಕಾದ್ದನ್ನು ಪೂರ್ಣಗೊಳಿಸಲು ಬೇಕಾದ ಶ್ರದ್ಧೆ, ಅಂಕಿತಭಾವ, ಏಕಾಗ್ರತೆ ಎಲ್ಲವೂ ಬೇರೆಲ್ಲೋ ಇಲ್ಲದೇ ನಮ್ಮ ಮೆದುಳಲ್ಲೇ ಇವೆ.

 

ಬಹಳಷ್ಟು ಜನ ಹೀಗೆ ಆಲೋಚಿಸುತ್ತಾರೆ, ತಮ್ಮನ್ನು ಸರಿಯಾದ ಮಾರ್ಗದಲ್ಲಿ ಗೈಡ್ ಮಾಡುವ, ಸೋಲುಗಳಲ್ಲಿ ಧೈರ್ಯ ಹೇಳುವ, ತಮ್ಮ ಅನುಮಾನಗಳನ್ನು ಪರಿಹರಿಸುವ, ಜಗತ್ತಿಗೆ ಜಗತ್ತೇ ತಮ್ಮೆದುರಿಗೆ ತಿರುಗಿ ಬಿದ್ದರೂ ನಮ್ಮ ಜತೆಯಲ್ಲೇ ಇದ್ದು ಹುಮ್ಮಸ್ಸು ನೀಡುವ ಗೆಳೆಯ ಒಬ್ಬನಿದ್ದರೆ ಎಷ್ಟು ಚೆನ್ನ ಅಲ್ಲವಾ ಎಂದು.

ನಿಜ ಅಂಥ ಸ್ನೇಹಿತನಿರಬೇಕು.

ಆದರೆ ಬೇರೊಬ್ಬ ವ್ಯಕ್ತಿಯಲ್ಲಲ್ಲ. ಅವನಲ್ಲೇ ಇರಬೇಕು!

ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಅಂತ ಸ್ನೇಹಿತ ಸಿಕ್ಕರೆ ಅದೃಷ್ಟವೇ. ನಮ್ಮಲ್ಲೇ ಇದ್ದರೆ ಸೋತಾಗ ಹೆಗಲಿಗಾಗಿ ಹುಡುಕುವುದಿಲ್ಲ. ನಮ್ಮೊಳಗಿನ ಶಕ್ತಿಗೆ ಬೇರೆಯವರ ಮೇಲೆ ಆಧಾರ ಪಡಬೇಕಿಲ್ಲ.

ಅಂಥ ಸ್ನೇಹಿತ ನಮ್ಮಲ್ಲಿರಬೇಕಾದರೆ ‘ಅವನು’ ಎಲ್ಲ ತಿಳಿದವನಾಗಿರಬೇಕು. ಧೈರ್ಯದ ಮಾತುಗಳು, ಸರಿಯಾದ ನಿರ್ಧಾರ ತೆಗೆದುಕೊಳ್ಳುವ ಕ್ಷಮತೆ, ಮುನ್ನುಗ್ಗಿಸುವ ಛಾತಿ ಉಳ್ಳವನಾಗಿರಬೇಕಲ್ಲವೆ?

ಅಂತಹ ಸ್ನೇಹಿತನನ್ನು ಬೆಳೆಸಿಕೊಳ್ಳುಲೋಸುಗ ನಾವು ಓದುತ್ತಿರಬೇಕು. ತೆಗೆದುಕೊಳ್ಳುವ ಉಸಿರಿನಂತೆ ಜ್ಞಾನ ದಿನೇ ದಿನೇ ಮೆದುಳ ಜಗದೊಳಗೆ ಸೇರುತ್ತಿರಬೇಕು. ಎದುರಾಗುವ ಸೋಲುಗಳೆಲ್ಲ ಒಳಗಿಳಿಯುವಾಗ ‘ಅನುಭವ’ವಾಗಿ ಮಾರ್ಪಾಡಾಗಬೇಕು.

ಆಗ ಮನ ಮನದ ಒಳಗೂ ಮೂಡುವುದು ಬೆಳಕು. ಹೂದೋಟವಾಗುವುದು ದೇವರು ಕೊಟ್ಟ ಬಯಲು.

ಬೇರೆಯವರಿಗೂ ಸಹಾಯ ಮಾಡುವಷ್ಟು ಬೆಳಕು ನೀಡುವಷ್ಟು ಪ್ರಜ್ವಲಿಸುವುದು ಬದುಕು!

-(ಸಡಗರ ಇ-ಮ್ಯಾಗಜೀನ್ ಗಾಗಿ ಬರೆದಿದ್ದು)

 
untitled

ಅಪರೂಪವಾಗಿ
ಬೇರೆಯೇ ಲೋಕದ ಜನ
ತಿನ್ನುವವರೆಂಬಷ್ಟು ಅಪರಿಚಿತವಾಗಿ
ಹೋಗಿದ್ದ ಜಾಮೂನು ಅಚಾನಕ್ಕಾಗಿ
ಅದೃಷ್ಟದಿಂದ ಆಕೆಗೆ ಸಿಕ್ಕಿದಾಗ
ಅದು ಚಂದ್ರ ಅಪಹಾಸ್ಯ ಮಾಡಿ
ನಗುವ ನಡುರಾತ್ರಿ!

ಮಗುವಿನ ಕನಸನ್ನಲ್ಲಾಡಿಸಿ
ಎಬ್ಬಿಸಿ ತಿನ್ನಿಸಿ
ತಾನು ಖುಷಿಪಟ್ಟಾಗ
ಮಗುವಿನ ಕಣ್ಣಲ್ಲೂ ಅಂದು ಹುಣ್ಣಿಮೆ!

ಹಸಿವಿನ
ಜೋಗುಳ ಹಾಡಿಕೊಂಡೇ
ನಿದಿರಿಸಿದ ಅವ್ವನ ಕನಸಲ್ಲಿ
ಕೊಟ್ಟ ಖುಷಿಯ ಜಾತ್ರೆ

ಬೆಳಗಾತನೆದ್ದು ಕನಸ ಮಧ್ಯದಲ್ಲೇ
ಜಾಮೂನು ತಿಂದು ತೇಗಿದ್ದ ಮಗ
ಅದರ ರುಚಿಯ ನೆನಪಾಗದೇ ಹಲುಬಿದ್ದಾನೆ,
ಬೆಳಿಗ್ಗೆ ಕೊಟ್ಟರಾಗದಿತ್ತೇ ಎಂದು ರೇಗಿದ್ದಾನೆ..

ತಿಂದ ಜಾಮೂನಿನ ರುಚಿ
ಹೇಗಿದ್ದಿರಬಹುದು ಎಂದೂಹೆ ಮಾಡುತ್ತಾ
ಮಗನಿದ್ದರೆ

ಕೈಯ್ಯಲ್ಲಿದ್ದ ಚಂದಿರನಂತಿದ್ದ
ಜಾಮೂನು ಮಗನ ಹೊಟ್ಟೆ ಸೇರಿಯೂ
ಅವನಿಗೆ ಸಂತೋಷವಾಗದಿದ್ದುದ್ದಕ್ಕೆ
ಅವ್ವನಿಗೆ ಹಸಿವು ಹೆಚ್ಚಿದೆ!

 ಕುಂಟುತ್ತಾ ಕುಂಟುತ್ತಾ ಸಾಗುತ್ತಿದ್ದ ಸಡಗರ ಸಡನ್ನಾಗಿ ನಿಂತಿದ್ದು ಎಲ್ಲರಿಗೂ ತಿಳಿದ ವಿಚಾರ. ಮೊದಲು ಸಡಗರ ಮುಚ್ಚಲಿದ್ದೇವೆಂದು ತಿಳಿಸಿದಾಗ ಸಂಪಾದಕರು ಏಪ್ರಿಲ್ ಫೂಲ್ ಮಾಡುತ್ತಿದ್ದಾರೇನೋ ಎಂಬ ಗುಮಾನಿ ಎಲ್ಲರಲೂ. ಪರಿಸ್ಥಿತಿಯ ಅರಿವಿದ್ದುದರಿಂದ ನಿಜ ಅನ್ನುವುದೂ ಮನ ಒಪ್ಪಲಾರದ ಸತ್ಯವಾಗಿತ್ತು. ಪತ್ರಿಕೆ ನಡೆಸಲು ಆಗುವ ಪ್ರಯಾಸಗಳಿಂದ ಹೇಗೋ ಸಾವರಿಸಿಕೊಂಡು ಮತ್ತೆ ಯಾವುದೋ ಒಂದು ದಿನ ’ ಅದು ಸುಮ್ಮನೆ ಏಪ್ರಿಲ್ ಫೂಲ್ ಮಾಡಿದ್ದು.. ಈ ಸಲದ ಪತ್ರಿಕೆ ಹೇಗೆ ಮಾಡೋಣ’ ಅನ್ನುತ್ತಾರೆಂಬ ಆಸೆಯಿತ್ತು. ಪ್ರತೀ ಸಲ ಪತ್ರಿಕೆ ಕೈಗೆ ಬಂದೊಡನೆ ಪರೀಕ್ಷೆಗಳು ನೀಡುವ ಒತ್ತಡಗಳು, ಪರ್ಸನಲ್ ಕೆಲಸಗಳು, ಪತ್ರಿಕೆಯ ಬರಹಗಳ ತಯಾರಿ ಬೇಡುವ ಬೇಜಾನ್ ಸಮಯ ಈ ಎಲ್ಲಾ ಕಷ್ಟಗಳೂ ಇಷ್ಟವಾಗಿಬಿಡುತ್ತಿದ್ದವು. ಸಡಗರ ಬಳಗದವರಿಗೆ ಹೆರಿಗೆ ನಂತರ ಮಗು ನೋಡಿದ ಅಮ್ಮನ ನಲಿವು. ಸಡಗರ ಪತ್ರಿಕೆಯ ಅಂದ, ಒಳಗಿನ ಮುದ್ದಾದ ಬರಹಗಳನ್ನು ಕಂಡು ’ಓ.. ಮನಸೇ ..’ ಪತ್ರಿಕೆ ನಿಂತಿದ್ದು ಯಾಕೇಂತ ಗೊತ್ತಾಯ್ತೀಗ ಅಂತ ಸುಮ್ಮಸುಮ್ಮನೆ ಹೆಮ್ಮೆ ಪಡುತ್ತಿದ್ದೆವು. ಆರ್ಥಿಕ ಬಲವಿದ್ದಿದ್ದಲ್ಲಿ ಅದು ಅಸಾಧ್ಯವೂ ಆಗಿರಲಿಲ್ಲ ಅನ್ನುವ ಆತ್ಮವಿಶ್ವಾಸ, ನಂಬಿಕೆ ಈಗಲೂ ಇದೆ.

 

ನಿಜವಾಗಿಯೂ ಸಡಗರದ ಬಂಡವಾಳ, ಕೆಲ ಹುಡುಗ-ಹುಡುಗಿಯರ ಒಂದಿಷ್ಟು ಕನಸುಗಳು, ಬರೆಯುವ ಉಮೇದು, ಉತ್ಸಾಹಗಳು ಮತ್ತು ಓದುಗರ ಪ್ರೋತ್ಸಾಹ,ಬೆಂಬಲಗಳಷ್ಟೇ ಆಗಿದ್ದವು. ಪ್ರೊಫೆಶನಲ್ ಪತ್ರಕರ್ತರಿಗಿರುವಷ್ಟು ಸಮಯ, ಸೌಲಭ್ಯ, ಸವಲತ್ತುಗಳಿಲ್ಲದೇ, ತಿಂಗಳಿಗೊಂದು ಇಂಟರ್ನಲ್ಸು, ಅಂತಾದ್ದು ಮೂರು ಬರುವುದರೊಳಗೆ ಸೆಮಿಸ್ಟರ್ ಪರೀಕ್ಷೆಗಳು, ಹಾರಿ ಬಂದು ಸೋರಿ ಹೋಗುವ ರಜೆಗಳು ಇವೆಲ್ಲದರ ನಡುವೆಯೂ ಸಡಗರವೆಂಬ ಕನಸು ಸಾವಿರ ತಾವರೆಯಂತೆ ಅರಳಿ ನಿಂತಿತ್ತು. ಪತ್ರಿಕೆಯನ್ನು ಎಲ್ಲಾ ಊರಿನ ಪ್ರತೀ ಸ್ಟಾಲ್ ಗಳಲ್ಲಿ ಮಾರಾಟ ಮಾಡಲು ಜನಬಲ, ಧನಬಲವಿರಲಿಲ್ಲ. ಆದರೂ ಅಂತಿಮವಾಗಿ ಪತ್ರಿಕೆಮೂಡಿ ಓದುಗನೊಬ್ಬ ಹಿಡಿದಾಗ ಅವನ ಮೊಗದಲ್ಲಿ ಅಚ್ಚರಿ ಮೂಡಿಸದೇ ಇರಲಿಲ್ಲ. ಸಿನೆಮಾ ಮಂದಿಯ ಗಾಸಿಪ್ಪುಗಳ ಹಂಗಿಲ್ಲದೇ, ಗೃಹಿಣಿಯರಿಗೆ ಕಿವಿಮಾತುಗಳು, ಗಂಡನನ್ನು ಒಲಿಸಿಕೊಳ್ಳುವ ವಿಧಾನಗಳು, ಮೇಕಪ್ ಮಾಡಿಕೊಳ್ಳುವುದು ಹೇಗೆ? ಇಂತಹ ವಿಷಯಗಳೇನೂ ಇಲ್ಲದೇ, ಯಾವುದೇ ಕ್ರೈಮ್ ಕತೆಗಳ ಫುಲ್ ಡೀಟೈಲ್ಸ್, ಡೇಂಜರಸ್ ಡೀಟೈಲ್ಸ್ ಮುಖಪುಟದಲ್ಲಿ ರಾರಾಜಿಸದೇ ಒಂದು ಸಹೃದಯ ವಿಚಾರಗಳ, ಮಾನಸಿಕ ಪ್ರಬುದ್ಧತೆಗಳುಳ್ಳ ಬರಹಗಳು, ಓದಿದ ನಂತರ ಬದುಕಿನ ಬಗ್ಗೆ, ನಮ್ಮ ಕುರಿತು ನಾವು ಚಿಂತಿಸುವಂತಹ ಲೇಖನಗಳುಳ್ಳದ್ದಾಗಿತ್ತು.

 

ಹೀಗೆ ಕನಸುಗಳು ಒಂದರ ಮೇಲೊಂದು ಅರಳುತ್ತಿದ್ದಾಗ ಲೋಕಕ್ಕೆ ರಿಸೆಶನ್ ರೋಗ ಬಡಿದ ಪರ್ವಕಾಲದಲ್ಲೇ ಪತ್ರಿಕೆಗೂ ಅರ್ಥಿಕ ಹಿಂಜರಿತ ಕಾಡಿತು. ಕೆಲವರು ಬೆಂಬಲಿಸಿ ಮುಂದುವರೆಯಿರಿ ಎಂದರು, ಸಹಾಯ ಮಾಡಲು ಅಣಿಯಾದರು. ಆದರೆ ಇದು ಕೆಲದಿನಗಳ ಉಸಿರಾಟವಷ್ಟೇ ಎಂಬುದು ನಿರ್ಲಕ್ಷಿಸಲಾಗದ, ಅರಗಿಸಿಕೊಳ್ಳಲೇಬೇಕಾದ ಸತ್ಯವಾಗಿತ್ತು. ಸಡಗರ ನಿಂತ ಶಾಕ್ ಗೆ ಗರಬಡಿದವರಂತಿದ್ದ ಬಳಗಕ್ಕೆ ನಿಜವಾಗಿಯೂ ಪತ್ರಿಕೆಗೆ ಮುಖ್ಯ ತಡೆಯಾಗಿದ್ದು ಆರ್ಥಿಕ ವಿಷಯವೇ; ಬೇರೇನೂ ಅಲ್ಲದಿರುವಾಗ ಬ್ಲಾಗ್ ನ ಮೂಲಕ ಯಾಕೆ ಮುಂದುವರಿಸಬಾರದು ಎಂಬ ಆಲೋಚನೆ ಮೂಡುತ್ತಿದ್ದಂತೆ ಮತ್ತೆ ಕನಸುಗಳು ಮೊಳಕೆಯೊಡೆದಿವೆ. ಸಡಗರ ಪತ್ರಿಕೆಯ ಹೆಚ್ಚಿನ ಓದುಗರು ಬ್ಲಾಗಿನ ಓದುಗರೂ ಆದುದು ನಮ್ಮ ನಿರ್ಧಾರಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

 

 ಅರೆ! ನಿಜವಲ್ಲವೇ? ಎಲ್ಲೆಡೆ ಇಂಟರ್ನೆಟ್ಟು ಹಬ್ಬುತ್ತಿರುವ ವೇಗ ನೋಡುತ್ತಿದ್ದರೆ ಇದಕ್ಕಿಂತ ಒಳ್ಳೆಯ ಮಾಧ್ಯಮವುಂಟಾ ಕನಸುಗಳನ್ನು ಹಂಚಿಕೊಳ್ಳಲು ಅನ್ನಿಸಿದ್ದು ಸುಳ್ಳಲ್ಲ. ಮನಸ್ಸಿನ ಹಸುವಿಗೆ ಜ್ಞಾನದ ಹುಲ್ಲುಗಾವಲಿನಲ್ಲಿ ಆರ್ಥಿಕತೆಯ ಬೇಲಿಯಿಲ್ಲ! ಬ್ಲಾಗ್ ಎಂಬುದು ಜನರನ್ನು ಮುಟ್ಟುವ ಸುಲಭ ಮಾರ್ಗವಾಗುವತ್ತ ದಾಪುಗಾಲಿಡುತ್ತಿದೆ. ಇಂಟರ್ನೆಟ್ಟು ಯಾರು ಬಳಸ್ತಾರೆ? ಬ್ಲಾಗ್ ಯಾರು ಓದುತ್ತಾರೆ ಎನ್ನುವವರು ಕೇವಲ ಕನ್ನಡಭಾಷೆಯಲ್ಲಿಯೇ ಸಾವಿರಕ್ಕೂ ಮಿಗಿಲು ಬ್ಲಾಗ್ ಇರುವುದನ್ನು ನೋಡಿ ಮೂಗಿನ ಮೇಲಿಟ್ಟ ಬೆರಳು ಅಚ್ಚರಿಯಿಂದ ಕಣ್ಣಿನವರೆಗೆ ಏರಿದೆ! ಬ್ಲಾಗ್ ಎಂದರೆ ಮೂಗು ಮುರಿಯುವಂತಿದ್ದ ಪ್ರಿಂಟ್ ಮಾಧ್ಯಮಕ್ಕೂ ಇದರ ಮಹತ್ವ ಅರಿವಾಗಿದೆ. ಅದರಲ್ಲೂ ಬ್ಲಾಗ್ ಬರಹಗಳು ಮನ್ನಣೆ ಪಡೆಯುತ್ತಿದೆ. ಸಿನೆಮಾ ನಟರು ತಮ್ಮ ಮೇಲಿನ ಅಪವಾದಗಳನ್ನು, ರೂಮರ್ ಗಳಿಗೆ ಉತ್ತರವನ್ನು, ತಮ್ಮ ಭಾವನೆಗಳನ್ನು ಬ್ಲಾಗ್ ಮೂಲಕ ಹರಿಸಿ ತೀರಿಸಿಕೊಳ್ಳುತ್ತಿದ್ದಾರೆ. ಕೋಲಾರದ ಪೋಲಿಸ್ ವಿಭಾಗ ತಮ್ಮ ಕೆಲಸದ ಪಾರದರ್ಶಕತೆಯನ್ನು ಬ್ಲಾಗಿನಲ್ಲಿ ಈಗಲೂ ತೋರಿಸುತ್ತಿದ್ದಾರೆ. ಯಾವುದೇ ಪತ್ರಕರ್ತರೆನ್ನುವ ಟ್ಯಾಗ್ ಇಲ್ಲದ, ಬರಹಗಾರನೆಂಬ ಹಣೆಪಟ್ಟಿಯಿಲ್ಲದ ಸಾಮಾನ್ಯ ಜನರೂ ತಮ್ಮ ಮನದ ಭಾವನೆಗಳನ್ನು ನಿರ್ವಿಘ್ನವಾಗಿ ಬ್ಲಾಗ್ ಮೂಲಕ ತೋಡಿಕೊಳ್ಳಬಹುದಾಗಿದೆ. ಬಹುಶಃ ಮುಖ್ಯಮಂತ್ರಿಗಳು ಜನತಾದರ್ಶನವೆಂದು ತಮ್ಮ ಅಮೂಲ್ಯ ಸಮಯವನ್ನು ಕೆಲ ಜನರಿಗಷ್ಟೇ ಸೀಮಿತವಾಗಿಡುವ ಬದಲು ಬಿಡುವಾದಾಗ ಬ್ಲಾಗ್ ಮೂಲಕವೇ ಜನರ ಅಹವಾಲುಗಳನ್ನು ಸುಲಭವಾಗಿ ಪಡೆಯಬಹುದು. ಬ್ಲಾಗ್ ಪ್ರಕಾಶಿಸುತ್ತಿರುವ ಪರಿಸ್ಥಿತಿಯಲ್ಲಿ ಬರೀ ಆರ್ಥಿಕತೆಯ ಕಾರಣ ಹೇಳಿ ನಮ್ಮಯ ಸಡಗರವನ್ನು ಮುಚ್ಚುವುದು ಸರಿಯಾದುದಲ್ಲ.

 

ಓದುಗರ ಪ್ರೀತಿ, ತೊಡಗಿಸಿಕೊಳ್ಳುವಿಕೆಯನ್ನು ಇಟ್ಟುಕೊಂಡು ಪತ್ರಿಕೆಯನ್ನು ಬ್ಲಾಗಿನ ಮೂಲಕವೇ ನಡೆಸೋಣ ಎಂದು ನಿರ್ಧರಿಸಿದ್ದೇವೆ. ಇನ್ನು ಪತ್ರಿಕೆಗೆ ಯಾವ ಆರ್ಥಿಕ ಹರ್ಡಲ್ಸ್ ಅಡಚಣೆಯಾಗದು. ಸಮಯಕ್ಕೆ ಸರಿಯಾಗಿ ಪತ್ರಿಕೆ ಕೊಡಲಿಲ್ಲ ಎಂದು (ಪ್ರೀತಿಯಿಂದ) ಬೈಸಿಕೊಳ್ಳುವಂತಿಲ್ಲ. ಬರಹಗಳನ್ನು ಚಂದಗಾಣಿಸಿ ನೀಡಬೇಕೇ ವಿನಃ ಚಂದಾ ಕೇಳಬೇಕಿಲ್ಲ. ಯಾವಾಗ ಇನ್ನೊಂದು ಸಂಚಿಕೆ ಎಂದು ಕಾಯುವ ಅಗತ್ಯವಿಲ್ಲ. ಸಡಗರ ಇನ್ನು ನಿಮ್ಮ ಬೆರಳಿನ ಕ್ಲಿಕ್ಕಿನಷ್ಟು ದೂರ! ಇನ್ನು ಮತ್ತೆ ಮನದ ಗೂಡಿನಲಿ ಕಲರವ-ಸಡಗರ ಇಂಚರಿಸಲಿವೆ. ಸಡಗರ ಬಳಗದ ಮನದಾಗಸದಲ್ಲಿ ವಿಚಾರಗಳ ಮೋಡ ದಟ್ಟೈಸಿವೆ.

ಸಡಗರ ಬ್ಲಾಗ್ ಪತ್ರಿಕೆ ಮಳೆಗಾಲದ ಆರಂಭದ ದಿನದಿಂದ ಹನಿಸಲು ಶುರುವಾಗಿದೆ!

umbrella-man_rain_sherbourne_night
ತನ್ನ ಜೀವವುಳಿಸುವ ಪ್ರಯತ್ನದ ಕುರುಹು ದೊರೆತರೆ
ಬ್ರಹ್ಮ ಎಲ್ಲಿ ಹಣೆಬರಹ ಮತ್ತೆ ಬದಲಾಯಿಸುವನೋ
ಎನ್ನುವ ಭಯದಿಂದಲೇ ಅನ್ನುವಂತೆ
ಮೆಡಿಕಲ್ ಶಾಪಿನವನಿಗೆ ಮಾತ್ರ ಅರ್ಥವಾಗುವ
ಭಾಷೆಯಲಿ ಡಾಕ್ಟರು ಚೀಟಿಯಲೇನೋ ಬರೆದುಕೊಟ್ಟಿದಾನೆ

ಕೈಯ್ಯಲಿ ಸಂಜೀವಿನಿ ಹೊತ್ತಂತೆ ಔಷಧಿ
ಚೀಟಿಯನು ಆ ಪುಟ್ಟ ಪೋರ ಒಯ್ಯುತಿರುವಾಗ
ಅವನ ಅಮ್ಮನಿಗೇನೂ ಆಗದು ಎಂಬ ನಂಬಿಕೆಯೇ
ತಂಗಾಳಿಯಾಗಿ ಮಿದು ಅಂಗೈಯೊಳಗಿನ
ಬೆವರನ್ನು ಹಿತವಾಗಿ ಇಂಗಿಸುತಿತ್ತು!

477f_2
ಜಗದ ಅದ್ಭುತ
ಸೌಂದರ್ಯಗಳೆಡೆ
ದಟ್ಟ ನಿರ್ಲಕ್ಷ್ಯ..
ಕಣ್ಣೆದುರು ಸದಾ
ನಗುಮೊಗದ
ದಿವ್ಯ ಲಾಸ್ಯ…
 
ಮಾಡದ ತಪ್ಪಿಗೆ
ಊರಜನರೆಲ್ಲಾ ಸೇರಿ
ನೀಡುವ ವಿಧವಿಧ ಶಿಕ್ಷೆ..
ಮನ ಬೇಡುವುದು ನಿನ್ನ
ಕಣ್ಣ ತೀರ್ಪು..
 
ಹೊರಗಡಿ ಇಟ್ಟಾಗೆಲ್ಲ
ಹೆಜ್ಜೆ ಹೆಜ್ಜೆಗೂ ವಿಷ..
ಒಳಗೆ ಕಾಯುವುದು
ನಿನ್ನ ಮುತ್ತಿನಮೃತ…
 
ಬದುಕೆತ್ತೆತ್ತಿ ಎಸೆವಾಗ
ನೀಡುವುದು ಬೆಚ್ಚಗಿನಾಶ್ರಯ
ನಿನ್ನ ಸೆರಗಿನ ಜಗ!
Deathspeaksfinal
ಕಥೆ ಹೇಳುವ ಬಗೆ ಒಬ್ಬೊಬ್ಬರದು ಒಂದೊಂದು ತರಹ.

ಮುಂಗಾರುಮಳೆಯ ದೃಶ್ಯ ನೆನಪಿಸಿಕೊಳ್ಳಿ. ಹೀರೋಗೂ ವಿಲನ್ ಗೂ ನಡೆದ ಹೊಡೆದಾಟವನ್ನು ಮನೆಯ ಕೆಲಸಗಾರ, ಅನಂತ್ ನಾಗ್ ಗೆ ತಿಳಿಸುವ ಸನ್ನಿವೇಶ. ” ಮೈಕೈಯೆಲ್ಲಾ ಊದ್ಕಂಬಿಟ್ಟೈತೆ..” ಅನ್ನುವುದರಿಂದ ತನ್ನ ಕಥನವನ್ನು ಶುರು ಮಾಡುತ್ತಾನಾತ. ಹೊಡೆದಾಟ ನಡೆದ ವಿಷಯವನ್ನು ಅವನು ಹೇಗೂ ಪ್ರಾರಂಭಿಸಿ, ಹೇಗಾದರೂ ಮುಗಿಸಬಹುದಿತ್ತು. ಅವನ ಕಥೆ ಹೇಳುವ ಶೈಲಿ ಆ ರೀತಿ. ನಮ್ಮೆಲ್ಲರ ಅಜ್ಜ-ಅಜ್ಜಿಯಂದಿರು ಕಥೆಯಲ್ಲಿ ಎಂಥಾ ಪವಾಡ ನಡೆದರೂ ಅದು ನಡೆಯಬಲ್ಲದು ಎಂದು ನಂಬಿಸಲಿಕ್ಕೇನೋ ಎಂಬಂತೆ ” ಒಂದಾನೊಂದು ಕಾಲದಲ್ಲಿ… ಯಾವುದೋ ಒಂದು ಊರಿನಲ್ಲಿ..” ಅಂತಲೇ ಶುರುಮಾಡುತ್ತಾರೆ. ಅದು ಈ ಊರಾದರೆ, ಈಗಿನ ಕಾಲಘಟ್ಟವಾದರೆ ಕತೆಯ ಮಧ್ಯದ ರೋಮಾಂಚಕತೆಯನ್ನು, ಬೇಕಾದ ಮ್ಯಾಜಿಕಲ್ ರಿಯಲಿಸ್ಮ್ ನ್ನು, ಅನೂಹ್ಯ ತಿರುವುಗಳನ್ನು ಮಕ್ಕಳ ಲಾಜಿಕ್ಕು, ಪ್ರಶ್ನೆಗಳು ತಿಂದುಹಾಕುತ್ತದಲ್ಲವಾ!

ಉಪೇಂದ್ರ ತನ್ನ “ಉಪೇಂದ್ರ” ಎಂಬ ವಿಚಿತ್ರ ಕತೆಯನ್ನು ಹೇಳಲು ಬಳಸಿದ್ದು, ವಿಕ್ರಮ-ಬೇತಾಳ ಕತೆಯೊಳಗೆ ಕತೆಯಾಗಿ. ಅಲ್ಲಿಗೆ ತನ್ನ ಕತೆಯಲ್ಲಿ ಬರುವ ಎಲ್ಲಾ ವಿಚಿತ್ರಗಳಿಗೆ ಒಂದು ಲಾಜಿಕ್ಕಿನ ಚೌಕಟ್ಟು ದೊರಕಿಸಿಕೊಂಡ.

ಜಯಂತ್ ಕಾಯ್ಕಿಣಿ, ಸುನಂದಾ ಕಡಮೆ, ವಸುಧೇಂದ್ರ, ಅಲಕಾ ತೀರ್ಥಹಳ್ಳಿ ಅವರ ಕತೆಗಳು ಕಣ್ಣಮುಂದೆ ನಡೆಯುತ್ತಿವೆ ಎಂಬಂತೆ, ಚಿತ್ರಣಗಳನ್ನು ಪದಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ. ಕತೆಯ ವಿವರಗಳಿಗೆ ಚಂದದ ಹೋಲಿಕೆಗಳ, ಉಪಮೆಗಳ ಲೇಪವಿರುತ್ತದೆ,ಕೊನೆಗೊಂದು ನೆನಪಲ್ಲುಳಿವ ತಿರುವು ಅಥವಾ ಗಾಢವಾದ ಭಾವವಿರುತ್ತದೆ.

ಹೀಗೆ ಉದಾಹರಣೆ ನೀಡುತ್ತಾ ಹೋದರೆ ಇದಕ್ಕೆ ಕೊನೆಯಿರದು.

ಒಂದೇ ಕಥೆಯನ್ನು ಬೇರೆ ಬೇರೆ ಲೇಖಕರಿಗೆ ನೀಡಿದರೆ ಅವರೊಳಗಿನ ಸೃಜನಶೀಲತೆ, ಅನುಭವ, ಬುದ್ಧಿವಂತಿಕೆ, ತಂತ್ರಗಳ ಪ್ರಕಾರ ಪ್ರತೀ ಕಥೆಯೂ ಭಿನ್ನವಾಗಿರುತ್ತದೆ. ಮೂರ್ತಿ ಮಾಡುವವನಿಗೆ ಜೇಡಿಮಣ್ಣು ಸಿಕ್ಕಿದಂತೆ, ಹೊಳಹು ದೊರಕಿದ ಕೂಡಲೇ ಲೇಖಕನ ಮನದೊಳಗೆ ಪಾತ್ರಗಳು ಎದ್ದು ಓಡಾಡುತ್ತದೆ. ಸನ್ನಿವೇಶಗಳು ಕಣ್ಣ ಮುಂದೆ ಸರಿಯುತ್ತಿರುತ್ತದೆ. ಬರೆಯುತ್ತ ಕುಳಿತಾಗ ಪಾತ್ರಗಳೇ ಎದುರುಬಂದು ನಾನಾ ವಿಧದ ಪ್ರಶ್ನೆಗಳನ್ನು ಕೇಳುತ್ತದೆ. ಮಾತಿನ ಶೈಲಿ ಬದಲಾದರೂ ಸಾಕು, ಅನ್ಯಾಯವಾಗಿದೆ ಎಂದು ಮೂದಲಿಸುತ್ತದೆ.

ಕಥೆ ಓದಿಯಾದ ನಂತರ ಓದುಗನಿಗೆ ಒಟ್ಟಾರೆ ಕಥೆ ಏನೆಂದು ಗೊತ್ತಾದ ಬಳಿಕ, ಆ ಲೇಖಕ ಕಥೆ ಹೇಳಲು ಯಾವ ರೀತಿ ಪ್ರಯತ್ನಿಸಿದ್ದಾನೆ ಎಂದು ಊಹಿಸಬಹುದು. ಯಾವ ವಿಷಯ ಮೊದಲು ಪ್ರಸ್ತಾಪಿಸಿದ್ದು? ಕೊನೆಯ ತಿರುವನ್ನು ತಿಳಿಸಲು ಯಾವ್ಯಾವ ತರಹ ತಿಣುಕಾಡಿದ್ದಾನೆ, ಯಾವ ತಂತ್ರ ಬಳಸಿದ್ದಾನೆ, ಪಾತ್ರಪೋಷಣೆಗೆ, ವಿವರಣೆಗಳಿಗೆ, ರೂಪಕಗಳಿಗೆ ಏನೆಲ್ಲಾ ಪ್ರಯತ್ನಿಸಿದ್ದಾನೆ.. ಎಂದೆಲ್ಲಾ ಚಿಂತನೆ ಮಾಡಿದರೆ ಕಥನಕಲೆ ಸ್ವಲ್ಪ ಸ್ವಲ್ಪವಾಗಿ ಅರಗಿಸಿಕೊಂಡಂತೆಯೇ.

ಹೀಗೆ ಅಲ್ಲಿ-ಇಲ್ಲಿ ಕಥೆಗಳನ್ನು ಓದುತ್ತಾ, ಕಥನ ಶೈಲಿಯನ್ನು ಅಭ್ಯಸಿಸುತ್ತಿದ್ದಾಗ ಒಂದು ಕಥೆ ತೀವ್ರವಾಗಿ ಗಮನ ಸೆಳೆಯಿತು. ಇದರ ಲೇಖಕ ಯಾರೋ ತಿಳಿಯದು. ಬಹುಶಃ ಅರಾಬಿಕ್ ಮೂಲದಿಂದ ಬಂದಿರುವಂತದ್ದು. ಸಾಮರ್ಸೆಟ್ ಮಾಮ್ ನ ’ಶೆಪ್ಪಿ’ ನಾಟಕದಲ್ಲೂ ಕಾಣಿಸಿಕೊಳ್ಳುತ್ತದೆ. ಜೆಫ್ರಿ ಆರ್ಚರ್ ತನ್ನ “ಟು ಕಟ್ ಅ ಲಾಂಗ್ ಸ್ಟೋರಿ ಶಾರ್ಟ್” ಎಂಬ ಕಥಾಸಂಕಲನದ ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತಾ “ಸರಳ ರೀತಿಯಲ್ಲಿ ಕತೆ ಹೇಳುವ ಇದಕ್ಕಿಂತ ಒಳ್ಳೆಯ ಉದಾಹರಣೆ ನನಗೆ ಸಿಕ್ಕಿಲ್ಲ..” ಎಂದಿದ್ದಾನೆ.  ಪುಟ್ಟ ಕತೆಯಾದರೂ ಕಥನ ತಂತ್ರ, ಕೊನೆ ತಿರುವು, ಓದುಗನಿಗೆ ತಟ್ಟುವ ಅಂಶದಿಂದ ಬಹಳ ಇಷ್ಟವಾಗುತ್ತದೆ.

ಅನಾಮಿಕ ಅರಾಬಿಕ್ ಲೇಖಕನಿಗೊಂದು ಥ್ಯಾಂಕ್ಸ್ ಹೇಳುತ್ತ ಈ ಕತೆಯ ಅನುವಾದ ನಿಮಗೆ ನೀಡುತ್ತಿದ್ದೇನೆ.

**********

ಸಾವು ಹೇಳಿದ್ದು..!

ಬಾಗ್ದಾದಿನ ವ್ಯಾಪಾರಿಯೊಬ್ಬ ಅಂದು ತನ್ನ ಸೇವಕನನ್ನು ದಿನಸಿ ಸಾಮಾನು ಖರೀದಿಸಲು ಕಳುಹಿಸಿದ್ದ. ಆದರೆ ಹೋದ ಸ್ವಲ್ಪ ಹೊತ್ತಿನಲ್ಲೇ ಸೇವಕ ಭಯಭೀತನಾಗಿ ವಾಪಸ್ಸಾಗಿದ್ದ. ಅವನ ಮುಖದಲ್ಲಿ ಸಾಲು ಸಾಲು ಬೆವರ ಹನಿ. ಭೀತಿಯ ದನಿಯಲ್ಲಿ “ಸಾಹುಕಾರನೇ, ಮಾರ್ಕೆಟ್ಟಿನ ಜನಸಂದಣಿಯಲ್ಲಿ ಓರ್ವ ಹೆಂಗಸು ನನಗೆ ಡಿಕ್ಕಿ ಹೊಡೆದಳು. ಯಾರೆಂದು ತಿರುಗಿ ನೋಡಿದಾಗ ಆಕೆ ಸಾವಾಗಿದ್ದಳು. ನನ್ನತ್ತ ಭಯ ಹುಟ್ಟಿಸುವ ರೀತಿಯಲ್ಲಿ ನೋಡಿದಳು. ಹಾಗಾಗಿ ಅಲ್ಲಿಂದ ಜೀವ ಕೈಯಲ್ಲಿ ಹಿಡಿದು ಓಡಿ ಬಂದಿದ್ದಾಯ್ತು,” ಎಂದು ಸ್ವಲ್ಪ ಸುಧಾರಿಸಿಕೊಂಡು “ಈಗ ನೀವು ತಮ್ಮ ಕುದುರೆ ಕೊಟ್ಟರೆ ಆಕೆಯಿಂದ ತಪ್ಪಿಸಿಕೊಳ್ಳಲು “ಸಮಾರ್ರಾ” ಗೆ ಹೋಗುವೆ, ಅಲ್ಲಿ ಆಕೆಗೆ ತಿಳಿಯದ ಜಾಗದಲ್ಲಿ ಅಡಗಿಕೊಳ್ಳುವೆ…ದಯವಿಟ್ಟು ಕುದುರೆ ಕೊಟ್ಟು ನನ್ನ ರಕ್ಷಿಸಿ” ಎಂದು ಬೇಡಿಕೊಂಡನು.

ವ್ಯಾಪಾರಿಯಿಂದ ಕುದುರೆ ಪಡೆದು, ಏರಿ ಕುಳಿತು, ತಡ ಮಾಡದೇ ಸೇವಕ ವೇಗವಾಗಿ ಸಮಾರ್ರಾ ಕಡೆಗೆ ಓಡಿಸಿದ.

ಕುತೂಹಲದಿಂದ ವ್ಯಾಪಾರಿ ತಾನೇ ಮಾರ್ಕೆಟ್ಟಿಗೆ ಬಂದು ಜನಸಾಗರದಲ್ಲಿ ಹುಡುಕಿ, ನನ್ನ ಕಂಡೊಡನೆ ಬಳಿಗೆ ಬಂದನು. ನೇರವಾಗಿ “ಈ ಬೆಳಿಗ್ಗೆ ನನ್ನ ಸೇವಕ ನಿನಗೆ ಸಿಕ್ಕಿದಾಗ ಅವನತ್ತ ಭಯಹುಟ್ಟಿಸುವ ರೀತಿಯಲ್ಲಿ ನೋಡಲು ಕಾರಣವೇನು?” ಎಂದು ಪ್ರಶ್ನಿಸಿದ.

ನಾನು ಹೇಳಿದೆ,” ವ್ಯಾಪಾರಿಯೇ,ಅದು ಭಯಪಡಿಸುವ ನೋಟವಲ್ಲ. ಆತನನ್ನು ಇಲ್ಲಿ ಬಾಗ್ದಾದಿನಲ್ಲಿ ನೋಡಿದೊಡನೆ ಅಚ್ಚರಿಯಾಯಿತು. ಯಾಕೆಂದರೆ ನನಗೆ ಅವನ ಭೇಟಿ ಇಂದು ರಾತ್ರಿ “ಸಮಾರ್ರಾ”ದಲ್ಲಿ ಎಂದು ನಿಗದಿಯಾಗಿತ್ತು”!

Older Posts »