ಸಿಂಗಪೂರ್ ಝಲಕ್ಕುಗಳು

ಸಿಂಗಪುರ್ ನಲ್ಲಿ ಸಿಂಗ ಅನ್ನುವ ಪದ ಸಿಂಹ ಅನ್ನುವ ಅರ್ಥದಲ್ಲಿ ಬಂದಿದ್ದು. ಇಲ್ಲಿ ನೀರುಗುಳುವ ಸಿಂಹದ ಮೂರ್ತಿ ಪ್ರಸಿದ್ಧ.

ಹೀಗೆ ಒಮ್ಮೆ ಸಿಂಹದ ಊರಿನ ಹೋಟೆಲೊಂದರಲ್ಲಿ ಹೋಗಿದ್ದೆ. ನನ್ನ ಪಕ್ಕದ ಟೇಬಲ್ಲಿನಿಂದ ಪುಟ್ಟ ಹುಡುಗನೊಬ್ಬನ ದನಿ ಕೇಳಿ ಬೆಚ್ಚಿಬಿದ್ದೆ. ಆ ಮಗು, "ಅಮ್ಮ.. ಅಮ್ಮ.. ನಂಗೆ ಲಯನ್ ಜೂಸ್ ಕೊಡ್ಸು" ಅಂತಿತ್ತು!

****

ಎಸ್ಸೆಮ್ ಕೃಷ್ಣ, ಬೆಂಗ್ಳೂರನ್ನ ಸಿಂಗಾಪುರ್ ಮಾಡಹೊರಟ "ಗಣಪತಿ ಮದ್ವೆ ಕಥೆ" ನಿಮ್ಗೆಲ್ಲಾ ಗೊತ್ತಿದ್ದೇ ಇರುತ್ತೆ. ಆದರೆ ಸಿಂಗಾಪೂರ್ ದವರು ನಮ್ ಹಳ್ಳಿ ಭಾಷೆನ ಕದ್ಕೊಂಡಿರೋದು ಗೊತ್ತಿದೆಯಾ?

"ಏನ್ಲಾ? ಸಂದಾಕಿದಿಯೇನ್ಲಾ? ಹೆಂಗೈತೆ ಪ್ಯಾಟೆಲೈಪು? ಮತ್ತೇನ್ಲಾ ಸಮಾಚಾರ?" ಹಳ್ಳಿಬದಿಯಲ್ಲಿ ಇಂಥ ಮಾತುಗಳು ಸರ್ವೇಸಾಮಾನ್ಯ.

ನೋಡಿ, ಪದಗಳ ಕೊನೆಯಲ್ಲಿ "ಲಾ" ಬಳಸುವಾಗ ಮನುಷ್ಯ ಮನುಷ್ಯರ ನಡುವೆ ಎಷ್ಟೊಂದು ಆಪ್ತತೆ ಬರುತ್ತೆ ಅಲ್ವಾ? ಅದಕ್ಕೆ ಇರ್ಬೇಕು, ಸಿಂಗಪೂರ್ ದಲ್ಲೂ ಮಾತಾಡುವಾಗ ಈ ಲಾ ವನ್ನು ಪದಗಳ ಕೊನೆಗೆ ರಾಗವಾಗಿಯೂ ಸರಾಗವಾಗಿಯು ಬಳಸುತ್ತಾರೆ. ನೋ ಲಾ, ಕಾಂಟ್ ಬೀ ಲಾ, ನಥಿಂಗ್ ಲಾ ಹೀಗೆ ಕೇಳಿ ಕೇಳಿ ನಾನೂ ಈಗ ನಾನೂ ಒಬ್ಬ ಸಿಂಗಪೂರಿಯನ್ ಲಾ!

ನಮ್ ಹಳ್ಳಿ ಲಾ ಕದ್ದಿದ್ದಕ್ಕೆ ಸಿಂಗಾಪೂರ್ ಮೇಲೆ ಕೇಸ್ ಹಾಕೋಕೆ ಯಾವುದಾದ್ರೂ "ಲಾ" ಇದೆಯಾ ಹುಡುಕ್ಬೇಕಿದೆ ಈಗ.

*****

merlion

ಇಲ್ಲೂ ಕನ್ನಡ ಸಂಘವಿದೆ, ಸಿಂಗಾರ ಕನ್ನಡ ಸಂಘವೆಂಬ ಚಂದದ ಹೆಸರಿಟ್ಟಿದ್ದಾರೆ. ಇದೇ ಆಗಸ್ಟ್ ಹದಿನೈದಕ್ಕೆ ಮುಖ್ಯಮಂತ್ರಿ ಚಂದ್ರು, ರಿಚರ್ಡ್ ಲೂಯಿಸ್, ಕಿರ್ಲೋಸ್ಕರ್ ಸತ್ಯ, ಅಸ್ದುಲ್ಲಾ ಬೇಗ್, ಗುಂಡೂ ರಾವ್, ಬಸವರಾಜ್ ಮಹಾಮನಿ ಜತೆಗೆ ಇಂಥ ಹಾಸ್ಯ ಉತ್ಸವಗಳಲ್ಲಿ ಹಿಂದೆಂದೂ ಕಾಣಿಸಿಕೊಳ್ಳದ (ಕಾಣಿಸಿಕೊಂಡಿದ್ದರೂ ನನಗೆ ಗೊತ್ತಿಲ್ಲ) ಮಾ| (ಈಗಲಾದರೂ ಮಿಸ್ಟರ್ ಅನ್ನಬಾರದೇನ್ರಿ) ಆನಂದ್ ಬರುತ್ತಿದ್ದಾರೆ.

ಇಂಥ ಉತ್ಸವದ ಬಗ್ಗೆ ಉತ್ಸಾಹದಿಂದ ನನ್ನ ಬ್ಲಾಗಿನಲ್ಲಿ ಬರೆದುಕೊಂಡ ಕಾರಣ ಇಷ್ಟೇ. ಬೇರೆ ತುಂಬಾ ದೇಶದಲ್ಲೂ ಕನ್ನಡ ಸಂಘಗಳಿವೆ. ಆದರೆ ಭಟ್ಟರ ಕೃಪೆ ಇಲ್ಲ!

*****

"ಮೊಟ್ಟೆ ಹಾಕದ ವೆಜಿಟೇರಿಯನ್ ಫ್ರೈಡ್ ರೈಸ್ ಕೊಡಿ!"

ಇದೇನು ವನ್ ವೇ ರಸ್ತೆಯನ್ನು ಎರಡೂ ಕಡೆ ನೋಡಿಕೊಂಡು ದಾಟಿದ ಹಾಗಿದೆಯಾ?

ಹಾಗಲ್ಲ. ಈ ಹಿಂದೆ ಒಮ್ಮೆ ಮತ್ತೊಂದು ದೇಶದಲ್ಲಿದ್ದಾಗ ಅಲ್ಲಿನ ಹೋಟೆಲ್ಲಿನವರು ಮೊಟ್ಟೆಯನ್ನೂ ಸಸ್ಯಾಹಾರಕ್ಕೆ ನನಗರಿವಿರದಂತೆ ಸೇರಿಸಿದ್ದರು. ಹಾಗಾಗಿ ನನ್ನ ಬೇಡಿಕೆಯನ್ನು ಸಾಕಷ್ಟು ಸ್ಪಷ್ಟವಾಗಿ ತಿಳಿಸಲೋಸುಗ ಮೇಲೆ ತಿಳಿಸಿದಂತೆ ಆರ್ಡರ್ ಮಾಡುತ್ತಿದ್ದೆ.

ಸಿಂಗಪೂರ್ ನಲ್ಲಿ ಅಂಥ ಭಯವಿದ್ದುದರಿಂದ ಪಕ್ಕಾ ಸಸ್ಯಾಹಾರಿ ಅನ್ನುವ ಫಲಕ ನೋಡಿಯೇ ಆರಾಮಾಗಿ ಅಡಿಯಿಡುತ್ತಿದ್ದೆ. ಅಂಥ ಫಲಕ ಕಾಣಿಸಿಲ್ಲವೆಂದರೆ ನನ್ನ ಪರಿಸ್ಥಿತಿ ಥೇಟ್ ಯುದ್ಧಪ್ರದೇಶದಲ್ಲಿ ವಾಸಿಸುವ ಸಾಮಾನ್ಯ ನಾಗರಿಕನಂತೆ. ಎಚ್ಚರಾಗಿ ಒಳ ಅಡಿಯಿಡಬೇಕು. ಗಾಜಿನ ಹಿಂಭಾಗದಲ್ಲಿರುವ ಆಹಾರ ಪದಾರ್ಥವನ್ನು ಕಣ್ಣಲ್ಲೇ ಸ್ಕ್ಯಾನ್ ಮಾಡಿ, ಪ್ರಾಣಿಗಳ ರಕ್ತಕ್ಕೂ, ಮಸಾಲೆ ಪದಾರ್ಥಕ್ಕೂ ವ್ಯತ್ಯಾಸ ಪತ್ತೆ ಹಚ್ಚಿ, ಇದು ನನ್ನ ಬಾಯೊಳಗೆ ತೂರುವ ಅರ್ಹತೆ ಹೊಂದಿದೆಯಾ ಅಂತ ಸಮೀಕ್ಷೆಯನ್ನು ಕ್ಷಣಗಳ ಒಳಗೆ ವಿಶ್ಲೇಷಿಸಿ ತಿನ್ನಲು ತಯಾರಾಗಬೇಕು.

ಆದರೆ ಪಕ್ಕಾ ವೆಜಿಟೇರಿಯನ್ ಅಂತ ಬೋರ್ಡ್ ಹಾಕಿಕೊಂಡ ಹೋಟೇಲೊಳಗೆ ಮೆದುಳಿಗೆ ಕಸರತ್ತು ಕಡಿಮೆ. ಅಲ್ಲೇನಿದ್ದರೂ ನಾಲಿಗೆಗೆ.

ಹಾಗೆಯೇ ಒಮ್ಮೆ ಪಕ್ಕಾ ಸಸ್ಯಾಹಾರಿ ಹೋಟೆಲೊಳಕ್ಕೆ ಹೊಕ್ಕಿ ನಿರ್ವಿಘ್ನವಾಗಿ ಕೂತು ಪೂರಿ ಹೇಳಿದ್ದೆ. ಪೂರಿಯ ಜತೆಗೆ ಸಾಗು ನೀಡದೇ ಬೇರೆಂತದ್ದೋ ನೀಡಿದ್ದರಿಂದ ಕುತೂಹಲಕ್ಕೆ ಇದೇನಪ್ಪಾ ಅಂತ ಮಾಣಿಯನ್ನು (ಸರ್ವರ್ ಪದಕ್ಕೆ ಆಪ್ತವಾದ ಕನ್ನಡಪದ) ಕೇಳಿದೆ.

"ಇದು ಚಿಕನ್ ಕರ್ರಿ ಸಾರ್" ಅಂದ.

ಬಿಸಿಎಣ್ಣೆಗಿಳಿದ ಪೂರಿಯಂತೆ ಧಿಗ್ಗನೆದ್ದು ನಿಂತೆ.  ನನ್ನ ಸ್ಥಿತಿ ನೋಡಿ ಮಾಣಿಗೆ ತಾನಂದಿದ್ದು ಏನು ಅನ್ನುವ ಅನುಮಾನ ಮೂಡಿತು. ನಿಜಕ್ಕೂ ತಾನು  ಬಾಯಿತಪ್ಪಿ "ಜಾಪಾಳ ಚಟ್ನಿ" ಅಥವಾ "ಕಾಳಿಂಗ ವಿಷದ ಕರ್ರಿ" ಅಂದುಬಿಟ್ಟೆನಾ ಅಂತ ಅನುಮಾನ ಮೂಡುವಂತೆ ನನ್ನ ಮುಖವಿದ್ದಿರಬೇಕು.

ಇಲ್ಲಿನ ಜನಕ್ಕೆ ಬಹುಶಃ ವೆಜಿಟೇರಿಯನ್ನೆಂದರೆ ಸೊಪ್ಪು ತಿನ್ನುವವರು (ನಮ್ಮಲ್ಲಿ ಪುಳಿಚಾರು ಅಂದಂತೆ) ಅಂತ ಭಾವನೆ ಬರದಿರಲು ಇಂಥ ಪ್ರಯೋಗಗಳನ್ನು ಮಾಡುತ್ತಿದ್ದಿರಬೇಕು. ಆ ಚಿಕನ್ ಕರ್ರಿಯಲ್ಲಿ ಚಿಕನ್ ಏನೂ ಇದ್ದಿರಲಿಲ್ಲ. ಚಿಕನ್ ಕರ್ರಿ ಥರ ಆ ಪದಾರ್ಥವಿರುತ್ತೆ ಅಷ್ಟೆ. ಅದನ್ನು Mock chicken curry  ಅಂತಾರೆ. ಮತ್ತೊಂದು ಕಡೆಯಲ್ಲಿ ನನಗೆ "Mock Fish" ಕೂಡ ಸಿಕ್ಕಿತ್ತು.

ಯಾರಿಗ್ಗೊತ್ತು, ಮುಂದೊಂದು ದಿನ "ಚಿಕನ್ ಇಲ್ಲದ ತರಕಾರಿ ಪಲ್ಯ ಕೊಡಿ" ಮೀನು ಹಾಕದ ವೆಜ್ ಸಾಂಬಾರ್ ಕೊಡಿ" ಅನ್ನಬೇಕಾದರೂ ಅಚ್ಚರಿಯಿಲ್ಲ.

****

ಪ್ರೇಮ ಮತ್ತು ವಿಜ್ಞಾನ..!

 

ನೀನು ಬಳಿ ಸುಳಿವಾಗ

ಮೂಡುವ ಒಳಪುಳಕ

ನಗು ಮೆಲ್ಲಗೆ ನನ್ನೊಳಗೆ ಹರಿದು

ನನ್ನಾತ್ಮ ಖುಷಿಯ ಸಾಗರದೆಡೆಗೆ

ತೆವಳುವಂತಾಗುವಾಗ ಮೂಡುವ ಹಿಗ್ಗು

 

ನಿನ್ನ ಬರುವಿಕೆಗೆ ಮುಂಚೆಯೇ ಸುದ್ಧಿ

ತಲುಪಿಸುವ ಗಂಧ ಮತ್ತೆ ಆ ಕ್ಷಣದಿಂದ

ಕಾಲು ಕತ್ತರಿಸಿಕೊಳ್ಳುವ ಕಾಲ

 

ಹಸಿರು ಹುಟ್ಟಿದಾಗ ಭೂಮಿಗೊಂದು

ಅರ್ಥ ಬಂದಂತೆ ನೀನು ನನ್ನೊಳ ಜೀವ ಊರಿದಾಗ

ಸಿಕ್ಕ ಹೊಂಬೆಳಕು

 

ಹೀಗೆಲ್ಲಾ ಆಗಿ

ಇಡೀ ಭಾಷೆಗೆ ಭಾಷೆಯೇ ಪ್ರೇಮಕ್ಕಿಂತ

ಪ್ರಬಲ ಪದವಿಲ್ಲವೆಂದು ಸೋತುತಲೆಬಗ್ಗಿಸಿರುವಾಗ

12720

ಇದನ್ನೆಲ್ಲಾ ಅಲ್ಲಗಳೆದು

ಇದು ವಯಸ್ಸಿನ ಪ್ರಭಾವ,

ಹಾರ್ಮೋನಿನ ಕರಾಮತ್ತು ಅಷ್ಟೇ

ಅನ್ನುವ

ನಿಮ್ಮ ಈ ವಿಜ್ಞಾನಕ್ಕೆ ನನ್ನ ಧಿಕ್ಕಾರ!

 

******

 

ಫೋಟೋ ಕೃಪೆ : ಈ ವೆಬ್ ಸೈಟ್

Categories: ಕವಿತೆ

ಒಂದು ಗುಂಗಲ್ಲಿ..!

 

ಎದೆಬಡಿತ ಸಂತೆ ಗದ್ದಲ

ಕಣ್ಣು ಅಚ್ಚರಿಯ ಸಾಗರ

ಮಾತು ಮೋಡತುಂಬಿದಾಗಸ

ರೆಕ್ಕೆಯಾಗುವ ಪುಳಕ ಕಾಲಿಗೆ

 

ದಿಕ್ಕಾಪಾಲಾದ ತೆರೆಗೆಲೆ ಮನ

ಹಳೆ ನೆನಪೊಂದು ಗೀಚಿದ ಕವನ

ಮರಳುಗಾಡಿನಂತಿದ್ದವನ

ಒಳಗೇ ಕಾಮನಬಿಲ್ಲಾದಂಥ ರೋಮಾಂಚನ

 

ಯುಗವೊಂದನ್ನು ಜೀಕಿದ ಅನುಭವ

ಕ್ಷಣದ ಕಾಲಿಗೆ

ಕಣ್ಣಲ್ಲೇ ಸಾವಿರ ಕನಸನು ಹುಟ್ಟಿಸಿದವಳು ಇನ್ನು

ವರ್ಣಿಸಲೇನು ಉಳಿದಿದೆ ಅಕ್ಷರಗಳ ಪಾಲಿಗೆ

 

ಅವನಿಗಿನ್ನು ಕವಿಯಾದರಷ್ಟೇ ಬಿಡುಗಡೆ

ಇಲ್ಲದಿರೆ ವಿರಹದ ಸುಡುಗಾಡೇ

ಎಂದರೂ

ಬಾಯ್ಬಿಟ್ಟು ಕಾದಿಹರೆಲ್ಲರೂ

ಚೆಲುವ ಮೋಡಿ ನೋಡಿ

ಅವ ಗೀಚಬಹುದಾದ ಹಾಡಿಗೆ

bch_bduc_solitude_small

ಅವ ಮಾತ್ರ ಪದಗಳ ಕಾಡಲ್ಲಿ

ಹಾದಿಮರೆತ ಗುಂಗಲಿ,

ಎಲ್ಲ ಮರೆತು ತಾನು ತನ್ನ ಪಾಡಿಗೆ..!

 

(ಫೋಟೋ ಕೃಪೆ : ಈ ವೆಬ್ ಸೈಟ್)

ಸಾಧನೆ.

 

ಇದುವರೆಗೂ ಸಾಧಿಸಿದ್ದನ್ನೆಲ್ಲವ ಗಂಟು ಮೂಟೆ ಕಟ್ಟಿ
ಅದನ್ನು ಜೂಜಿನಲಿ ಪಣಕ್ಕಿಟ್ಟು
ಸೋತರೂ ಮರುಮಾತಾಡದೇ
ಮತ್ತೆ ಮೊದಲಿಂದ ಬದುಕು ಶುರುಮಾಡಬಲ್ಲೆ ಅನಿಸಿದರೆ..

ಬದುಕನ್ನು ಕೊಲ್ಲುತ್ತಾ ಸಾಗುವ
ನಿರ್ದಯಿ ನಿಮಿಷಗಳಲ್ಲಿ
ಅರವತ್ತು ಸೆಕೆಂಡುಗಳ ಸಾಧನೆ ತುಂಬಬಲ್ಲೆಯಾದರೆ..

ಈ ಜಗತ್ತು ನಿನ್ನದಾಗುವುದು ಮತ್ತು
ಎಲ್ಲಕ್ಕಿಂತ ಮುಖ್ಯವಾಗಿ
ನೀನೊಬ್ಬ ಗಂಡುಗಲಿಯಾಗುವೆ!

-ರುಡ್ಯಾರ್ಡ್ ಕಿಪ್ಲಿಂಗ್.

 

(ರುಡ್ಯಾರ್ಡ್ ಕಿಪ್ಲಿಂಗ್ ರ “If”  ಕವಿತೆಯ ಸ್ಪೂರ್ತಿದಾಯಕ ಸಾಲುಗಳ ಅನುವಾದ)

ದೊಡ್ದವನಾದ ಬೇಸರ!

ಚಿಕ್ಕಂದಿನಲ್ಲಿ ಮಿಂಚ

ನ್ನು ಲಾವಂಚ

ವಾಗಿಸಿ

ಮೋಡಗಳೊಳಗೆ ಅದ್ದಿ

ಆ ಸುಮಧುರ, ಸುವಾಸಿತ

ನೀರನ್ನು ಗಟಗಟನೆ

ಕುಡಿಯಬೇಕು ಅನ್ನಿಸಿತ್ತು

thunder_storm

ನಕ್ಷತ್ರದ ಕೈಗಳನ್ನು

ಶಕ್ತಿ ಹಾಕಿ ಎಳೆದು

ಉದ್ದ ಮಾಡಿ ನಮ್ಮನೆ

ಅಕ್ವೇರಿಯಮ್ಮಿನ

ಮೀನುಗಳ ಜತೆ ಬಿಟ್ಟು

ನಕ್ಷತ್ರ ಮೀನಾಗಿಸುವ

ಆಸೆಯಿತ್ತು.

 

ಗ್ಯಾಸಂಡೆ ಖಾಲಿಯಾದ ದಿನ

ಅವ್ವ ಅವತ್ತು ದೋಸೆಯಿಲ್ಲ ಅಂದಾಕ್ಷಣ

ಆ ಬೇಸರಕ್ಕೆ

ಸೂರ್ಯನನ್ನು ಅಳತೆ ಮಾಡಿ

ಕಾವಲಿಗಿಂತ ಚಿಕ್ಕದಿರುವುದು ಲೆಕ್ಕಹಾಕಿ

ಅವನ ಮೇಲೆ ಕೂಡ ಸ್ಕೆಚ್ ಹಾಕಿದ್ದುಂಟು.

 

ಒಮ್ಮೆ ದೊಡ್ಡವನಾದ ಮೇಲೆ ಇದೆಲ್ಲವನೂ

ಸಾಧಿಸುವೆ ಅಂತ ಅಂದುಕೊಂಡಾಗ

ಮಿಂಚು, ನಕ್ಷತ್ರ, ಸೂರ್ಯನ ಕಣ್ಣಲ್ಲಿ

ಸಣ್ಣ ಆತಂಕವೊಂದನ್ನು ಕಂಡಿದ್ದ

ನೆನಪು ಇನ್ನೂ ಹಸಿ ಹಸಿ.

2652241110_f081b78c91

ಆದರೀಗ 

ದೊಡ್ಡವನಾಗಿ

ಅದು ಅಸಾಧ್ಯ ಅನ್ನಿಸಿ

ಕಂಡಾಪಟ್ಟೆ ಬೇಸರವಾಗಿದೆ!

 

ಮತ್ತೆ ಅವುಗಳ ಕಣ್ಣಲ್ಲಿ

ಮಿರುಗು,

ಬದುಕುಳಿದ ಹಿರಿಹಿರಿಹಿಗ್ಗು!

 

 

(ಚಿತ್ರದ ಕ್ರೆಡಿಟ್ಟು : ಗ್ರೇಟ್ ವಾಟ್ಸಿತ್ ಮತ್ತು ಇಲ್ಲಿಂದ )

ಅಪಾಯದ ಭಯವೂ ನಮ್ಮ ಜತೆ ಟಿಕೆಟ್ಟಿಲ್ಲದೇ ಪಯಣಿಸುತ್ತಿರುತ್ತದೆ!

ಮಂಗಳೂರು ವಿಮಾನ ದುರಂತ ನಡೆದ ಎರಡು ದಿನದ ಹಿಂದೆಯಷ್ಟೇ ಅಲ್ಲೇ ನಾನೂ ಇಳಿದಿದ್ದೆ ಅಂತ ಊಹಿಸಿದರೆನೇ ಭಯವಾಗುತ್ತದೆ.

ಅಂದು ಇಳಿದಿದ್ದಾಗ ಅಂಥ ಭಯವಿರಲಿಲ್ಲ. ಮೋಡಗಳ ರಾಶಿಯ ಮಧ್ಯೆ ವಿಮಾನ ಅಲುಗಾಡಿದಾಗ, ಲ್ಯಾಂಡಿಂಗ್ ಹೊತ್ತಿನಲ್ಲಿ ವಿಮಾನದ ಚಕ್ರ ಭೂಸ್ಪರ್ಶವಾದಾಗ ಆಗುವ ಜರ್ಕ್ ಗೆ, ಅದೇನೋ ಆದವರಂತೆ ಗಗನಸಖಿಗಳು ಆಚೆ ಈಚೆ ಜೋರಾಗಿ ಓಡಾಡುವಾಗ, ಏರೋಸೋಲ್ ನ್ನು ವಿಮಾನದೊಳಗೆ ಸಿಂಪಡಿಸುವಾಗೆಲ್ಲಾ ನದಿಗಿಳಿದಾಗ ದೋಣಿಯ ಅಂಬಿಗನ ಮೇಲಿನ ನಂಬುಗೆಯಂತೆ ಸಲಿಲವಾಗಿತ್ತು ಮನಸು. ಏನೇ ಆದರೂ ಎಲ್ಲ ಸರಿಮಾಡುವರು, ಅನುಭವವುಳ್ಳವರು ಅನ್ನುವ ನಂಬಿಗೆ.

ಇನ್ನು ಹಾಗಿಲ್ಲ. ವಿಮಾನದುರಂತದ ಪರಿಣಾಮವನ್ನು ಕಣ್ಣಿಗೆ ಕಟ್ಟಿದ ಹಾಗೆ ತೋರಿಸಿದ ಮಾಧ್ಯಮಗಳ ಕೃಪೆಯಿಂದ ವಿಮಾನ ಕೊಂಚ ಅಲುಗಿದರೂ ಎದೆಯೊಳಗೊಂದು ಪುಕುಪುಕು ಹೆದರಿಕೆ ಜನ್ಮತಾಳುತ್ತದೆ. ಕಿಟಕಿಯಾಚೆಗೇ ಕೀಲುಹಾಕಿದಂತೆ ಕಣ್ಣು ಅಪಾಯವೊಂದಕ್ಕೆ, ವಿಮಾನ ಸೀಳಿದರೆ ಹಾರಲು ತಯಾರಾಗುವಂತೆ ಬೆಲ್ಟಿನಲ್ಲೆ ಕೈಯಿರುತ್ತದೆ. ಸುಖಾಸುಮ್ಮನೆ ಅಪಾಯದ ಹೆದರಿಕೆಯೊಂದು ನಮ್ಮ ಜತೆಯೇ ಟಿಕೆಟ್ಟಿಲ್ಲದೇ ಪಯಣ ಮಾಡುತ್ತಿರುತ್ತದೆ.

ಆದರೆ ಎಂಥ ಭಯವಿದ್ದರೂ ಎಂಥ ದುರಂತವಾದರೂ ಬದುಕು ನಿಲ್ಲುವುದಿಲ್ಲ. ಮೊನ್ನೆ ಯಾರೋ ಒಬ್ಬ ಭಯದಂಟುರೋಗ ಹರಡುವವರು ಕೇಳಿದ್ದರು. "ಅಲ್ಲಾ ಕಣ್ರೀ, ಅದ್ಯಾವ ಗ್ಯಾರೆಂಟಿ ಮೇಲೆ ವಿಮಾನ ಪ್ರಯಾಣ ಮಾಡ್ತೀರ್ರಿ?" ಅವರು ಹಿಂದಿನ ದಿನವಷ್ಟೇ ಯಾವುದೋ ಚಾನೆಲ್ ಒಂದರಲ್ಲಿ ತೋರಿಸಿದ ಎಲ್ಲಾ ವಿಮಾನ ಅಪಘಾತದ ಚಿತ್ರಣವೊಂದರ ಪ್ರೋಗ್ರಾಮ್ ನ್ನು ನೋಡಿದ್ದರಂತೆ. ಅವರೊಳಗೆ ಮೂಡಿದ್ದ ಭಯವನ್ನು ನನ್ನವರೆಗೂ ಹರಡಲು ಮಾತಿಗಾರಂಭಿಸಿದ್ದರು.

ನಾವಿಬ್ಬರೂ ಕೂತಿದ್ದ ಬಸ್ಸು ಆಗಷ್ಟೇ ಅಪಾಯಕಾರಿಯಾದ ಓವರ್ ಟೇಕ್ ನ್ನು ಯಶಸ್ವಿಯಾಗಿ ಮುಗಿಸಿ ಬಸ್ಸೊಳಗಿದ್ದವರ ನಿಟ್ಟುಸಿರು ಇನ್ನೂ ಮುಗಿದಿರಲಿಲ್ಲ. " ಸರ್, ನೀವು ಈ ಬಸ್ಸಿನಲ್ಲಿ ಕೂತು ಧೈರ್ಯವಾಗಿ ಇದರ ಕುರಿತು ಹೇಗೆ ಮಾತಾಡ್ತಿದ್ದೀರೋ ಅದೇ ಗ್ಯಾರೆಂಟಿ ಮೇಲೆ" ಅಂದೆ. ಸಾವು ಬದುಕಿನ ಗ್ಯಾರೆಂಟಿಗಳ ಕುರಿತೇ ಇದ್ದ ಯಕ್ಷ ಪ್ರಶ್ನೆಯೊಂದು ನೆನಪಾಯ್ತು.

ಇಷ್ಟಕ್ಕೂ ಸ್ವಲ್ಪ ದಿನದ ಹಿಂದೆ ಲಿಬಿಯಾದಲ್ಲೊಂದು ಭೀಕರ ವಿಮಾನ ದುರಂತ ಆಗಿತ್ತು. ಆಗ ಅನ್ನಿಸದಿದ್ದ ಅಪಾಯ ಈಗೇಕೆ ಅನ್ನುವ ಪ್ರಶ್ನೆಯೊಂದು ಈಗ ಮನದಲ್ಲಿ ಮನೆ ಮಾಡಿದೆ.

ಅದೇನೆ ಇರಲಿ, ಮನಸ್ಸಿನ ಭಯವನ್ನೆಲ್ಲಾ ನಂಬಿಕೆಗಳು ಹೊಡೆದುಹಾಕಲಿ. "ಮತ್ತೆ ಬನ್ನಿ" ಅನ್ನುವ ಫಲಕ ನಮಗೆ ಖುಷಿ ನೀಡಲಿ.  ಜಗದ ಎಲ್ಲರ ಪಯಣಗಳು ಸುಖಕರವಾಗಿರಲಿ.

ಮೇ ಮೂವತ್ತಕ್ಕೆ ಕುಂದಾಪುರದಿಂದ ಹೊರಟ ನನ್ನ ಸಿಂಗಪೂರ್ ಪಯಣವೂ ಸೇರಿ.

ಮತ್ತೊಂದಿಷ್ಟು ಶಬ್ದಚಿತ್ರಗಳು..

೧. ಇಬ್ಬನಿ : ಹೂವ ಮೊಗ್ಗು ಪರಿಮಳ ಹೆರುವಾಗ ಸುರಿದ ದಳದಳ ಬೆವರು!

೨. ಚಂದಿರ : ತಂಟೆಪುಟ್ಟ ತರಲೆಯಿಲ್ಲದೇ ಕೈತುತ್ತು ತಿನ್ನುವಂತೆ ಮಾಡಲು ಅವ್ವ ಬಳಸುವ ಅಮೂಲ್ಯ ಆಟದ ಸಾಮಾನು.

೩. ಮಳೆ : ಭೂತಾಯಿ ಬರೆದ ಅದ್ಭುತ ಹಸಿರು ಕವಿತೆಗೆ ಆಗಸ ಸುರಿಸಿದ ಚಪ್ಪಾಳೆ ಪುಷ್ಪವೃಷ್ಟಿ!

೪. ರಾಗ : ಕೊಳಲಿಗೆ ಕಿವಿಗೊಟ್ಟೆ, ಕಿವಿಯೆಲ್ಲಾ ಕಾವ್ಯ!

೫. ವಿಪರೀತ : ನಡುಗುವ ಚಳಿಯೆಂದು ಕಂಬಳಿ ಹೊದ್ದರೆ ಒಳಗೆ ಉರಿಉರಿ ಸೆಕೆ!

೬. ಕಿಟಕಿ : ನೀನು ಸಿಗದೇ ಇದ್ದ ದಿನಗಳಲಿ ಕೊಂಚ ಸಿಟ್ಟಿನಲಿ, ಕೊಂಚ ಬೇಸರದಲಿ ಇಡೀ ಜಗತ್ತನ್ನು ಕಿಟಕಿಯ ಕಂಬಿಗಳಾಚೆಗಿನ ಜೈಲಿನಲಿ ಕೋಳ ತೊಡಿಸಿಡುತ್ತೇನೆ.

೭. ಸಾಗರ : ನನಸಾದ ಸಾವಿರಾರು ತೊರೆಗಳ ಕನಸು.

೮. ಬೇರು : ನೀರ ಮೇಲಿನ ಪ್ರೀತಿಗೆ ಭೂಮಿ ಬಗೆವ ಶಕ್ತಿ.

 

(ಇದು ವಿ.ಕ. ದ ಸಿಂಪ್ಲಿಸಿಟಿ ಪೇಜಿನಲ್ಲಿ ಪ್ರಕಟವಾಗಿದೆ)

ಕೊನೆಗೂ ಐಶ್ವರ್ಯ ತೀರಿಸಿಕೊಂಡ ಸೇಡಿನ ಕಥೆ!

ಫ್ಲಾಶುಬ್ಯಾಕು :

ಅದು ೨೦೦೫ ನೇ ಇಸವಿ ಆಗಸ್ಟ್ ನ ೨೫ ರ ಆಜೂಬಾಜೂ. ಭಾರತೀಯರ ಪಾಲಿಗೆ ಪ್ರೀತಿಯಿಂದ "ಆಶ್" ಅಂತಲೇ ಕರೆಯಲ್ಪಡುವ ಐಶ್ವರ್ಯಾ ರೈ ಅಂದು ನ್ಯೂಯಾರ್ಕ್ ಗೆ ಹೋಗುವುದಕ್ಕೆ ತಯಾರಾಗಿದ್ದರು.

ಐರ್ ಪೋರ್ಟಿನಲ್ಲಿ ಆಕೆ ವಿಮಾನಕ್ಕಾಗಿ ಕಾಯುತ್ತಿದ್ದಾಗ ಆ ಸುದ್ಧಿ ಬಂದಿತ್ತು. ಏನೆಂದರೆ ಅಲ್ಲಿ ಚಂಡಮಾರುತವೊಂದು ಬೀಸುತ್ತಿರುವುದರಿಂದ ಅಮೇರಿಕೆಗೆ ಹೊರಡುವ ಎಲ್ಲಾ ವಿಮಾನಗಳೂ ತನ್ನ ಪ್ರಯಾಣ ರದ್ದು ಮಾಡಿದೆ ಎಂಬುದಾಗಿ.

ಮತ್ತು ಆ ಹರಿಕೇನ್ ನ ಹೆಸರು "ಕತ್ರಿನಾ" ಎಂದಾಗಿತ್ತು.

 ash-katrina

೨೦೧೦ :

ಏಪ್ರಿಲ್ ಮಧ್ಯಂತರ ಸಮಯ. ಐಪಿಯೆಲ್ಲಿನ ಮಧ್ಯದಲ್ಲೇ ಕತ್ರಿನಾ ಗೆ ತನ್ನ ಮನೆಯ ನೆನಪಾಗಿ ಲಂಡನ್ ಗೆ ಹೋಗುವುದಕ್ಕೆ ಎಲ್ಲಾ ಸಿದ್ಧತೆ ನಡೆಸಿದ್ದರು. ಒಂದು ಸುದ್ಧಿ ಆಕೆಯನ್ನು ಸ್ವಲ್ಪ ದಿನಗಳ ಕಾಲ ಮನೆಗೆ ಹೋಗದಂತೆ ನಿರ್ಬಂಧಿಸಿತು.

ಅದಕ್ಕೆ ಕಾರಣ ಉತ್ತರ ಯೂರೋಪ್ ನಲ್ಲಿ ಉಂಟಾದ ವೋಲ್ಕಾನೋ ಆಗಿತ್ತು. ಅದರ ಹೆಸರು Eyjafjallajökul.

ಈ ಹೆಸರು ಕೇಳಿದಾಗ ತಲೆಬುಡ ಅರ್ಥವಾಗದ ಕತ್ರಿನಾ ಸ್ವಲ್ಪ ಸುಲಭವಾಗಿ ಅರ್ಥವಾಗುವಂತೆ ತಿಳಿಸಿ ಅಂದಾಗ, ಅವರು ಇದಕ್ಕೆ "ಆಶ್" ಕ್ಲೌಡ್ ಅಂತಾರೆ ಮೇಡಮ್ ಅಂದರಂತೆ!

ಬರೋಬ್ಬರಿ ಐದು ವರ್ಷದ ನಂತರ ಅಂತೂ ಆಶು ತನ್ನ ಹವಾಮಾನ ಪ್ರಕೋಪಾಸ್ತ್ರದಿಂದ ಸೇಡು ತೀರಿಸಿಕೊಂಡರು!

 

********

ಚಿತ್ರಕೃಪೆ : ಇಲ್ಲಿಂದ

ದಾಂಪತ್ಯಗೀತ..

ಗಂಟು ಕಟ್ಟಿ ನಂಟು ಬೆಳೆಸಿ

ವರ್ಷಾನುಗಟ್ಟಲೆ

ಯಾದರೂ ಆ ಮನೆಯಲ್ಲಿ ಒಂದು ಕಟ್ಟಲೆ

ಪ್ರತೀ ದಿನ

ಅವನು ತಲೆಬಾಗಿ ನನ್ನ ಪ್ರೀತಿಸ್ತೀಯಾ ಅಂತ ಕೇಳಬೇಕು

ಅವಳು ಇಲ್ಲಾ, ನಾ ಒಲ್ಲೆ ಅಂತನ್ನಬೇಕು

 

ಹಾಗೆಂದೊಡೆ ಅವ ಮತ್ತಷ್ಟು ಪ್ರೀತಿಸುತ್ತಾನೆ

ಗೋರಿಯೊಳಗೆ ಸೇರೊದರೊಳಗೆ ಒಮ್ಮೆ

ಒಪ್ಪುಗೆ ಪಡೆಯುತ್ತೇನೆ ಎಂಬ ನಂಬುಗೆಯಿಂದ.

ಅವಳಿಗೂ ಒಂದೆಡೆ ಯಾವುದೋ ಒಂದು ದಿನ

ಬೇಸರಾಗಿ ಅವ ಕೇಳದೇ ಹೋದರೆ

ಎಂಬ ಒಲುಮೆಯ ಭಯ.

03_Impasto_Painting_01

ಅವ ಹಾಗೆ ಕೇಳದೇ ಹೋಗಿದ್ದರೆ ಅಥವ

ಅವಳೆಲ್ಲಾದರೂ ಹೂಂ ಅಂದುಬಿಟ್ಟಿದ್ದರೆ

ಸಂಸಾರ ಟೇಕಿಟ್ ಗ್ರಾಂಟೆಡ್ ಆಗಿ

ದಿನ ಸಾಮಾನ್ಯವಾಗಿಬಿಡುವ ಅಪಾಯವಿತ್ತು.

ಬಯಸುತ್ತಲ್ಲವೇ ಹೂಗಿಡದ ಬೇರು

ದಿನ ದಿನ ಪ್ರೀತಿಯ ನೀರು.

 

ಆದರೂ ಅವಳ ಒಲ್ಲೆಯಲ್ಲೆ ಅವನ

ಮತ್ತು ಅವನ ಬೇಡಿಕೆಯಲ್ಲೆ ಅವಳ

ಗೆಲುವು,

ನಾಳೆಗೊಂದು ಭರವಸೆ,

ಮತ್ತಷ್ಟು ಪ್ರೀತಿಸಿ ಒಪ್ಪಿಗೆ ಪಡೆದೇ ಪಡೆವ

ನಂಬುಗೆ.

 

ಹಾಗಾಗಿ ದಿನ ಶುರುವಾದಾಗೆಲ್ಲಾ

ಅವರು ಮತ್ತಷ್ಟು ಖುಷಿಯಿಂದ ಹೊರಡುತ್ತಾರೆ,

ಪ್ರೀತಿ ನೀಡುವ, ಕೊಟ್ಟು ವಾಪಸ್ಸು ಬಯಸದ

ಸುಖಕ್ಕಾಗಿ.

 

(ಫೋಟೋಕೃಪೆ : ಇಲ್ಲಿಂದ)

ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು…

ನನ್ನ ಪ್ರಪಂಚ ತುಂಬ ಚಿಕ್ಕದು.

ಇಲ್ಲಿ ದೇವಕಿ ಎಂಬ ಮೂರಕ್ಷರದ ಅಸ್ತಿತ್ವ ಬಿಟ್ಟರೆ ಬೇರೆ ಅಂಥಾ ವಿಶೇಷಗಳಿಲ್ಲ. ಅಲ್ಲಲ್ಲ, ಬೇರೆ ವಿಶೇಷಗಳೇ ಇಲ್ಲ. ಯಾರ ಕಾಲ್ ಬಂದರೂ ನಿನ್ನದಿರಬಹುದೆಂಬ ನಿರೀಕ್ಷೆಯಿಂದಲೇ ಫೋನ್ ಎತ್ತಲ್ಪಡುತ್ತದೆ. ನನ್ನೊಳಗಿನ ಸಿಕ್ತ್ ಸೆನ್ಸ್ ದಿನಾ ನೀನು ಬರಬಹುದೆಂಬ ಸೂಚನೆ ನೀಡುತ್ತಿರುತ್ತದೆ. ನನ್ನೆಡೆಗೆ ಬರುವ ಎಲ್ಲಾ ದಾರಿಯ ತಿರುವಲ್ಲಿ ಸದಾ ನಿನ್ನ ಬಿಂಬ. ದಿನವಿಡೀ ಕಾದ ಮನವು ಸಂಜೆ ನೀ ಬಾರದೇ ಇರಬಹುದಾದ ಭಯದಿಂದ ಬಂಜೆಯಾಗುತ್ತದೆ. ರಾತ್ರಿಯೆಂದರೆ ಬಾನು ಚುಕ್ಕಿ ಜೋಡಿಸುವ ಹುಡುಗಿಗೆ ಕಾದ ಅಂಗಳ. ಅಲ್ಲೂ ಕಾಯುವಿಕೆಯೇ ಕಣ್ಕುಕ್ಕುತ್ತದೆ.

 waiting
ನಿಜ, ಈ ಜಗತ್ತಿನಲ್ಲಿ ಎಲ್ಲಾ ಕಾಯುತ್ತಿದ್ದಾರೆ, ಏನೋ ಒಂದಕ್ಕೆ. ವೈಟಿಂಗ್ ಫಾರ್ ಗೋಡೋ ನಾಟಕದಲ್ಲಿ ಗೋಡೋ ಗೆ ಕಾಯ್ವಂತೆ. ಸುಖಕ್ಕೆ, ಪ್ರಮೋಶನ್ ಗೆ, ರೇಶನ್ ಗೆ, ಬೆಲೆ ಇಳಿಕೆಗೆ, ಇನ್ನೊಂದು ಇಲೆಕ್ಷನ್ ಗೆ, ಪ್ರೀತಿಗೆ, ನೋವಿನ ನಿವಾರಣೆಗೆ, ಒಳ್ಳೆಯ ಕನಸಿಗೆ, ಕನಸು ನನಸಾಗುವ ಘಳಿಗೆಗೆ, ಗೆಲುವಿಗೆ..
ಕೊನೆಗೆ ಕೆಲವರು ಸಾವಿಗೂ!

ನೀರೊಳಗೆ ಮುಳುಗಿರುವವನು ಉಸಿರು ಬಯಸುವಷ್ಟು ನಿನ್ನ ಇಷ್ಟಪಡ್ತಿದೀನಿ ಅನ್ನಿಸ್ತಿದೆ. ನಿನ್ನ ಇಷ್ಟಪಡುವುದು ನನ್ನ ಕನಸು ಅಲ್ಲ, ಬದುಕು! ಕಾಲ ನನ್ನನು ಕರೆದೊಯ್ಯುವ ಕೊನೆಘಳಿಗೆಯ ಕೊನೆಯ ತಿರುವಿನಲ್ಲೂ ನಿನ್ನ ಒಂದು ನಗುವಿಗೆ, ನಿನ್ನ ಬರುವಿಕೆಗೆ ಕಾಯ್ತೀನಿ.

ಒಂದು ಮಿಸ್ಡ್ ಕಾಲ್ ಸಾಕು. ಒಂದು ಪುಟ್ಟ ಗೆಳೆತನ ಸಾಕು. ನನ್ನೆಡೆಗಿನ ಒಂದಿಷ್ಟು ಕಾಳಜಿ, ಚೂರೇ ಚೂರು ಪ್ರೀತಿ ಸಿಕ್ಕರೂ ಸಾಕು,

ದೇವರು ನನಗಿತ್ತ ಬದುಕನ್ನು ಸಾರ್ಥಕಗೊಳಿಸಿದ್ದೇನೆಂದು ಅವನಿಗೆ ತಿಳಿಸೋಕೆ ಏನಾದರೂ ಒಂದು ಮಾಡು ಸಾಕು ದೇವಕಿ. ಮುಂದಿನ ಅದಷ್ಟೂ ಜನ್ಮಕ್ಕೆ ನಿನ್ನ ಋಣದಲ್ಲಿರ್ತೀನಿ.

ಇದೊಂದು ಸಹಾಯ ಮಾಡ್ತೀಯಾ ಅಲ್ವ?

 

*****

 

(ನನ್ನ ದೇವಕಿ ಬ್ಲಾಗಿಗಾಗಿ ಬರೆದದ್ದು. ಫೋಟೋ ಕೃಪೆ : ಇಲ್ಲಿಂದ)