Home > ಕತೆ > ಸಾವಿನ ಮಾತು..!

ಸಾವಿನ ಮಾತು..!

Deathspeaksfinal
ಕಥೆ ಹೇಳುವ ಬಗೆ ಒಬ್ಬೊಬ್ಬರದು ಒಂದೊಂದು ತರಹ.

ಮುಂಗಾರುಮಳೆಯ ದೃಶ್ಯ ನೆನಪಿಸಿಕೊಳ್ಳಿ. ಹೀರೋಗೂ ವಿಲನ್ ಗೂ ನಡೆದ ಹೊಡೆದಾಟವನ್ನು ಮನೆಯ ಕೆಲಸಗಾರ, ಅನಂತ್ ನಾಗ್ ಗೆ ತಿಳಿಸುವ ಸನ್ನಿವೇಶ. ” ಮೈಕೈಯೆಲ್ಲಾ ಊದ್ಕಂಬಿಟ್ಟೈತೆ..” ಅನ್ನುವುದರಿಂದ ತನ್ನ ಕಥನವನ್ನು ಶುರು ಮಾಡುತ್ತಾನಾತ. ಹೊಡೆದಾಟ ನಡೆದ ವಿಷಯವನ್ನು ಅವನು ಹೇಗೂ ಪ್ರಾರಂಭಿಸಿ, ಹೇಗಾದರೂ ಮುಗಿಸಬಹುದಿತ್ತು. ಅವನ ಕಥೆ ಹೇಳುವ ಶೈಲಿ ಆ ರೀತಿ. ನಮ್ಮೆಲ್ಲರ ಅಜ್ಜ-ಅಜ್ಜಿಯಂದಿರು ಕಥೆಯಲ್ಲಿ ಎಂಥಾ ಪವಾಡ ನಡೆದರೂ ಅದು ನಡೆಯಬಲ್ಲದು ಎಂದು ನಂಬಿಸಲಿಕ್ಕೇನೋ ಎಂಬಂತೆ ” ಒಂದಾನೊಂದು ಕಾಲದಲ್ಲಿ… ಯಾವುದೋ ಒಂದು ಊರಿನಲ್ಲಿ..” ಅಂತಲೇ ಶುರುಮಾಡುತ್ತಾರೆ. ಅದು ಈ ಊರಾದರೆ, ಈಗಿನ ಕಾಲಘಟ್ಟವಾದರೆ ಕತೆಯ ಮಧ್ಯದ ರೋಮಾಂಚಕತೆಯನ್ನು, ಬೇಕಾದ ಮ್ಯಾಜಿಕಲ್ ರಿಯಲಿಸ್ಮ್ ನ್ನು, ಅನೂಹ್ಯ ತಿರುವುಗಳನ್ನು ಮಕ್ಕಳ ಲಾಜಿಕ್ಕು, ಪ್ರಶ್ನೆಗಳು ತಿಂದುಹಾಕುತ್ತದಲ್ಲವಾ!

ಉಪೇಂದ್ರ ತನ್ನ “ಉಪೇಂದ್ರ” ಎಂಬ ವಿಚಿತ್ರ ಕತೆಯನ್ನು ಹೇಳಲು ಬಳಸಿದ್ದು, ವಿಕ್ರಮ-ಬೇತಾಳ ಕತೆಯೊಳಗೆ ಕತೆಯಾಗಿ. ಅಲ್ಲಿಗೆ ತನ್ನ ಕತೆಯಲ್ಲಿ ಬರುವ ಎಲ್ಲಾ ವಿಚಿತ್ರಗಳಿಗೆ ಒಂದು ಲಾಜಿಕ್ಕಿನ ಚೌಕಟ್ಟು ದೊರಕಿಸಿಕೊಂಡ.

ಜಯಂತ್ ಕಾಯ್ಕಿಣಿ, ಸುನಂದಾ ಕಡಮೆ, ವಸುಧೇಂದ್ರ, ಅಲಕಾ ತೀರ್ಥಹಳ್ಳಿ ಅವರ ಕತೆಗಳು ಕಣ್ಣಮುಂದೆ ನಡೆಯುತ್ತಿವೆ ಎಂಬಂತೆ, ಚಿತ್ರಣಗಳನ್ನು ಪದಗಳಲ್ಲಿ ಕಟ್ಟಿಕೊಡುತ್ತಾ ಹೋಗುತ್ತಾರೆ. ಕತೆಯ ವಿವರಗಳಿಗೆ ಚಂದದ ಹೋಲಿಕೆಗಳ, ಉಪಮೆಗಳ ಲೇಪವಿರುತ್ತದೆ,ಕೊನೆಗೊಂದು ನೆನಪಲ್ಲುಳಿವ ತಿರುವು ಅಥವಾ ಗಾಢವಾದ ಭಾವವಿರುತ್ತದೆ.

ಹೀಗೆ ಉದಾಹರಣೆ ನೀಡುತ್ತಾ ಹೋದರೆ ಇದಕ್ಕೆ ಕೊನೆಯಿರದು.

ಒಂದೇ ಕಥೆಯನ್ನು ಬೇರೆ ಬೇರೆ ಲೇಖಕರಿಗೆ ನೀಡಿದರೆ ಅವರೊಳಗಿನ ಸೃಜನಶೀಲತೆ, ಅನುಭವ, ಬುದ್ಧಿವಂತಿಕೆ, ತಂತ್ರಗಳ ಪ್ರಕಾರ ಪ್ರತೀ ಕಥೆಯೂ ಭಿನ್ನವಾಗಿರುತ್ತದೆ. ಮೂರ್ತಿ ಮಾಡುವವನಿಗೆ ಜೇಡಿಮಣ್ಣು ಸಿಕ್ಕಿದಂತೆ, ಹೊಳಹು ದೊರಕಿದ ಕೂಡಲೇ ಲೇಖಕನ ಮನದೊಳಗೆ ಪಾತ್ರಗಳು ಎದ್ದು ಓಡಾಡುತ್ತದೆ. ಸನ್ನಿವೇಶಗಳು ಕಣ್ಣ ಮುಂದೆ ಸರಿಯುತ್ತಿರುತ್ತದೆ. ಬರೆಯುತ್ತ ಕುಳಿತಾಗ ಪಾತ್ರಗಳೇ ಎದುರುಬಂದು ನಾನಾ ವಿಧದ ಪ್ರಶ್ನೆಗಳನ್ನು ಕೇಳುತ್ತದೆ. ಮಾತಿನ ಶೈಲಿ ಬದಲಾದರೂ ಸಾಕು, ಅನ್ಯಾಯವಾಗಿದೆ ಎಂದು ಮೂದಲಿಸುತ್ತದೆ.

ಕಥೆ ಓದಿಯಾದ ನಂತರ ಓದುಗನಿಗೆ ಒಟ್ಟಾರೆ ಕಥೆ ಏನೆಂದು ಗೊತ್ತಾದ ಬಳಿಕ, ಆ ಲೇಖಕ ಕಥೆ ಹೇಳಲು ಯಾವ ರೀತಿ ಪ್ರಯತ್ನಿಸಿದ್ದಾನೆ ಎಂದು ಊಹಿಸಬಹುದು. ಯಾವ ವಿಷಯ ಮೊದಲು ಪ್ರಸ್ತಾಪಿಸಿದ್ದು? ಕೊನೆಯ ತಿರುವನ್ನು ತಿಳಿಸಲು ಯಾವ್ಯಾವ ತರಹ ತಿಣುಕಾಡಿದ್ದಾನೆ, ಯಾವ ತಂತ್ರ ಬಳಸಿದ್ದಾನೆ, ಪಾತ್ರಪೋಷಣೆಗೆ, ವಿವರಣೆಗಳಿಗೆ, ರೂಪಕಗಳಿಗೆ ಏನೆಲ್ಲಾ ಪ್ರಯತ್ನಿಸಿದ್ದಾನೆ.. ಎಂದೆಲ್ಲಾ ಚಿಂತನೆ ಮಾಡಿದರೆ ಕಥನಕಲೆ ಸ್ವಲ್ಪ ಸ್ವಲ್ಪವಾಗಿ ಅರಗಿಸಿಕೊಂಡಂತೆಯೇ.

ಹೀಗೆ ಅಲ್ಲಿ-ಇಲ್ಲಿ ಕಥೆಗಳನ್ನು ಓದುತ್ತಾ, ಕಥನ ಶೈಲಿಯನ್ನು ಅಭ್ಯಸಿಸುತ್ತಿದ್ದಾಗ ಒಂದು ಕಥೆ ತೀವ್ರವಾಗಿ ಗಮನ ಸೆಳೆಯಿತು. ಇದರ ಲೇಖಕ ಯಾರೋ ತಿಳಿಯದು. ಬಹುಶಃ ಅರಾಬಿಕ್ ಮೂಲದಿಂದ ಬಂದಿರುವಂತದ್ದು. ಸಾಮರ್ಸೆಟ್ ಮಾಮ್ ನ ’ಶೆಪ್ಪಿ’ ನಾಟಕದಲ್ಲೂ ಕಾಣಿಸಿಕೊಳ್ಳುತ್ತದೆ. ಜೆಫ್ರಿ ಆರ್ಚರ್ ತನ್ನ “ಟು ಕಟ್ ಅ ಲಾಂಗ್ ಸ್ಟೋರಿ ಶಾರ್ಟ್” ಎಂಬ ಕಥಾಸಂಕಲನದ ಮುನ್ನುಡಿಯಲ್ಲಿ ಪ್ರಸ್ತಾಪಿಸುತ್ತಾ “ಸರಳ ರೀತಿಯಲ್ಲಿ ಕತೆ ಹೇಳುವ ಇದಕ್ಕಿಂತ ಒಳ್ಳೆಯ ಉದಾಹರಣೆ ನನಗೆ ಸಿಕ್ಕಿಲ್ಲ..” ಎಂದಿದ್ದಾನೆ.  ಪುಟ್ಟ ಕತೆಯಾದರೂ ಕಥನ ತಂತ್ರ, ಕೊನೆ ತಿರುವು, ಓದುಗನಿಗೆ ತಟ್ಟುವ ಅಂಶದಿಂದ ಬಹಳ ಇಷ್ಟವಾಗುತ್ತದೆ.

ಅನಾಮಿಕ ಅರಾಬಿಕ್ ಲೇಖಕನಿಗೊಂದು ಥ್ಯಾಂಕ್ಸ್ ಹೇಳುತ್ತ ಈ ಕತೆಯ ಅನುವಾದ ನಿಮಗೆ ನೀಡುತ್ತಿದ್ದೇನೆ.

**********

ಸಾವು ಹೇಳಿದ್ದು..!

ಬಾಗ್ದಾದಿನ ವ್ಯಾಪಾರಿಯೊಬ್ಬ ಅಂದು ತನ್ನ ಸೇವಕನನ್ನು ದಿನಸಿ ಸಾಮಾನು ಖರೀದಿಸಲು ಕಳುಹಿಸಿದ್ದ. ಆದರೆ ಹೋದ ಸ್ವಲ್ಪ ಹೊತ್ತಿನಲ್ಲೇ ಸೇವಕ ಭಯಭೀತನಾಗಿ ವಾಪಸ್ಸಾಗಿದ್ದ. ಅವನ ಮುಖದಲ್ಲಿ ಸಾಲು ಸಾಲು ಬೆವರ ಹನಿ. ಭೀತಿಯ ದನಿಯಲ್ಲಿ “ಸಾಹುಕಾರನೇ, ಮಾರ್ಕೆಟ್ಟಿನ ಜನಸಂದಣಿಯಲ್ಲಿ ಓರ್ವ ಹೆಂಗಸು ನನಗೆ ಡಿಕ್ಕಿ ಹೊಡೆದಳು. ಯಾರೆಂದು ತಿರುಗಿ ನೋಡಿದಾಗ ಆಕೆ ಸಾವಾಗಿದ್ದಳು. ನನ್ನತ್ತ ಭಯ ಹುಟ್ಟಿಸುವ ರೀತಿಯಲ್ಲಿ ನೋಡಿದಳು. ಹಾಗಾಗಿ ಅಲ್ಲಿಂದ ಜೀವ ಕೈಯಲ್ಲಿ ಹಿಡಿದು ಓಡಿ ಬಂದಿದ್ದಾಯ್ತು,” ಎಂದು ಸ್ವಲ್ಪ ಸುಧಾರಿಸಿಕೊಂಡು “ಈಗ ನೀವು ತಮ್ಮ ಕುದುರೆ ಕೊಟ್ಟರೆ ಆಕೆಯಿಂದ ತಪ್ಪಿಸಿಕೊಳ್ಳಲು “ಸಮಾರ್ರಾ” ಗೆ ಹೋಗುವೆ, ಅಲ್ಲಿ ಆಕೆಗೆ ತಿಳಿಯದ ಜಾಗದಲ್ಲಿ ಅಡಗಿಕೊಳ್ಳುವೆ…ದಯವಿಟ್ಟು ಕುದುರೆ ಕೊಟ್ಟು ನನ್ನ ರಕ್ಷಿಸಿ” ಎಂದು ಬೇಡಿಕೊಂಡನು.

ವ್ಯಾಪಾರಿಯಿಂದ ಕುದುರೆ ಪಡೆದು, ಏರಿ ಕುಳಿತು, ತಡ ಮಾಡದೇ ಸೇವಕ ವೇಗವಾಗಿ ಸಮಾರ್ರಾ ಕಡೆಗೆ ಓಡಿಸಿದ.

ಕುತೂಹಲದಿಂದ ವ್ಯಾಪಾರಿ ತಾನೇ ಮಾರ್ಕೆಟ್ಟಿಗೆ ಬಂದು ಜನಸಾಗರದಲ್ಲಿ ಹುಡುಕಿ, ನನ್ನ ಕಂಡೊಡನೆ ಬಳಿಗೆ ಬಂದನು. ನೇರವಾಗಿ “ಈ ಬೆಳಿಗ್ಗೆ ನನ್ನ ಸೇವಕ ನಿನಗೆ ಸಿಕ್ಕಿದಾಗ ಅವನತ್ತ ಭಯಹುಟ್ಟಿಸುವ ರೀತಿಯಲ್ಲಿ ನೋಡಲು ಕಾರಣವೇನು?” ಎಂದು ಪ್ರಶ್ನಿಸಿದ.

ನಾನು ಹೇಳಿದೆ,” ವ್ಯಾಪಾರಿಯೇ,ಅದು ಭಯಪಡಿಸುವ ನೋಟವಲ್ಲ. ಆತನನ್ನು ಇಲ್ಲಿ ಬಾಗ್ದಾದಿನಲ್ಲಿ ನೋಡಿದೊಡನೆ ಅಚ್ಚರಿಯಾಯಿತು. ಯಾಕೆಂದರೆ ನನಗೆ ಅವನ ಭೇಟಿ ಇಂದು ರಾತ್ರಿ “ಸಮಾರ್ರಾ”ದಲ್ಲಿ ಎಂದು ನಿಗದಿಯಾಗಿತ್ತು”!

Categories: ಕತೆ
  1. minchulli
    May 14, 2009 at 5:58 am | #1

    beautiful,…

  2. ವಿಜಯರಾಜ್ ಕನ್ನಂತ
    May 14, 2009 at 7:45 am | #2

    baala sandaakaite

  3. May 14, 2009 at 7:50 am | #3

    Saral katheyadaru tannolage tanna kathana tantradind manaseleyuttade.

    -Shettaru

  4. Shailaja
    May 14, 2009 at 8:33 am | #4

    Hai Adigare,
    Super collection- yello odhidde,matthe nenapagisiddakke thanks.

  5. May 14, 2009 at 9:58 am | #5

    Very good narration. Good post. Thank you.

  6. May 14, 2009 at 12:53 pm | #6

    ಕತೆ ಮಸ್ತಾಗಿದೆ!

  7. ಸಂತೋಷ್
    May 14, 2009 at 5:03 pm | #7

    ನಮ್ಮ ಪುರಾಣದ ಯಾವುದೋ ಕತೆಯಲ್ಲಿ ಕೇಳಿದ ನೆನಪು…ಇದೇ ತರಹದ ಕತೆ.
    ” ಸಾಯಬೇಕಾದ್ದನ್ನು ಕಾಪಾಡಬೇಕೆಂಬ ಉದ್ದೇಶದಿಂದ ಗರುಢ ಸಾಯಬೇಕಾದವನನ್ನು ಬಹಳ ದೂರಕ್ಕೆ ಓಯ್ದು ಸಾವಿನ ದವಡೆಗೆ ತಲುಪಿಸುವ ಕತೆ “…ಇರಲಿ.

    ಕತೆಯ ಶೈಲಿ ಚೆನ್ನಾಗಿದೆ.ಆದರೆ ಭಾಷಾನುವಾದಕ್ಕಿಂತ ಭಾವಾನುವಾಗಿದ್ದರೆ ಮತ್ತಷ್ಟು ಸುಂದರವಾಗಿರುತ್ತಿರುತ್ತಿತ್ತು.

    ನಿಮ್ಮಿಂದ ಇನ್ನು ಉತ್ತಮ ಕಥೆಗಳ ನಿರೀಕ್ಷೆಯಲ್ಲಿ………

  8. May 15, 2009 at 4:22 am | #8

    This is Really Gud..

  9. H.S.ARUNKUMAR
    May 15, 2009 at 10:40 am | #9

    ಕಥೆ ಚನ್ನಾಗಿದೆ

  10. roopa satish
    May 15, 2009 at 10:57 am | #10

    tumbaane chennaagide Ranjith…
    aaadru, saavu andre yaako tumba hedarike…. aa padave tumbaa bhaya hutsutte. Bahusha, saavanna tumbaa hattiradinda nodida anubhavadindalo eno gottilla…
    Nimma title odidamele i restricted myself from not reading it for some time, but again… made up my mind to read thru.
    nice writing….

  11. ಸಂತೋಷ್
    May 15, 2009 at 6:01 pm | #11

    ನನ್ನ ಮೊದಲ ಕಮೆಂಟ್ ನಲ್ಲಿ “ಸಾಯಬೇಕಾದ್ದನ್ನು” ಅನ್ನುವುದನ್ನು ಸಾಯಬೇಕಾದವನನ್ನು ಅಂತ ಓದ್ಕೊಳ್ಳಿ ರಂಜಿತ್. ಮುದ್ರರಾಕ್ಷಸ ತಪ್ಪಿಸಿಕೊಂಡು ಬಿಟ್ಟಿದ್ದ !

  12. May 16, 2009 at 5:09 am | #12

    ರಂಜಿತ್ ಸರ್,

    ಕತೆ ಹೇಳುವುದರ ಬಗ್ಗೆ ಬರೆಯುವುದರ ಬಗ್ಗೆ ನಿಮ್ಮ ಬರವಣಿಗೆ ತುಂಬಾ ಚೆನ್ನಾಗಿದೆ. ಖುಷಿಯಾಯಿತು. ಕತೆಗಾರನ ಎಲ್ಲಾ ಒಳ ಮನಸ್ಸುಗಳನ್ನು ಸಾಧ್ಯವಾದಷ್ಟು ಬಿಂಬಿಸಿದ್ದೀರಿ…ಏನೋನೊ ಗೀಚುವ ನಮ್ಮಂಥವರಿಗೆ ಇದು ಖಂಡಿತ ಉಪಯುಕ್ತ ವಿಚಾರ.

    ಮತ್ತು ಕತೆ ತುಂಬಾ ಚೆನ್ನಾಗಿದೆ. ಅಂತ್ಯವೇ ಸೊಗಸು ಮತ್ತು ಅದರ ಯಶಸ್ಸು. ಮೂಲ ಕತೆಗಾರನಿಗೆ ಮತು ಅದನ್ನು ನಮ್ಮೊಂದಿಗೆ ಹಂಚಿಕೊಂಡ ನಿಮಗೂ ಧನ್ಯವಾದಗಳು.

    ನಾನು ಪೆಬ್ರುವರಿಯಲ್ಲಿ ಬ್ಲಾಗಿಗೆ ಹಾಕಿದ “ಈ ದೇಹದಿಂದ ದೂರನಾದೆ ಏಕೆ ಆತ್ಮನೇ….ಈ ಸಾವು ನ್ಯಾಯವೇ ? ” http://chaayakannadi.blogspot.com/2009/02/blog-post_12.html

    ಪುಟ್ಟಕತೆಯಲ್ಲಿ ಬರುವ ಈ ಕೆಳಗಿನ ಸಾಲುಗಳು

    “ರೈಲು ನಿಂತಿತು…ಒಂದಷ್ಟು ಜನ ಹತ್ತಿಳಿದರು….ಮತ್ತೊಂದು ಬೋಗಿಯಲ್ಲಿ ” ಈ ದೇಹದಿಂದ…………ಹಾಡು ಕೇಳಿ ಕೆಲವು ಮಕ್ಕಳು ಮತ್ತು ಮಕ್ಕಳ ಮನಸ್ಸಿನವರು ಪ್ರೀತಿಯಿಂದ, ಇನ್ನೂ ಕೆಲ ದೊಡ್ಡ ಮನಸ್ಸಿನವರು ಕರುಣೆಯಿಂದ, ತಮ್ಮ ಗಂಬೀರ ಚರ್ಚೆಗೆ ತೊಂದರೆಯಾಯಿತೆಂದು ಬೇಸರದಿಂದ ಕೆಲವರು ಪುಡಿಗಾಸು ಹಾಕಿದರೆ, ಇನ್ನೂ ಕೆಲವರು ಹಾಕಬೇಕೆಂದು ಕೈಯನ್ನು ಜೇಬಿಗಿಳಿಸಿ ಮುಂದಿನ ನಿಲ್ದಾಣದಲ್ಲಿ ಸಿಗರೇಟಿಗೆ ಬೇಕಾಗುತ್ತದೆ ಅಂತ ಸುಮ್ಮನಾದರು……ಬರಿಕೈ ಹೊರತೆಗೆದರೆ ಕೈಗೆ ನಾಚಿಕೆಯಾಗುತ್ತದೆಂದು ಕೈಯನ್ನು ಜೀಬಿನಲ್ಲೇ ಬಿಟ್ಟರು……”

    ನಿಮ್ಮದೇ ಒಂದೆರಡು ಸಾಲಿನ ಕತೆಗಳ ಸ್ಫೂರ್ತಿಯಿಂದ ಬರೆದದ್ದು…

    ಧನ್ಯವಾದಗಳು

  13. May 16, 2009 at 9:56 am | #13

    ಮಿಂಚುಳ್ಳಿ ಶಮಾ, ವಿಜಯರಾಜ್ ಕನ್ನಂತ್, ಶೆಟ್ಟರೇ, ಸುಶ್ರುತ

    ಥ್ಯಾಂಕ್ಸ್ ನಿಮ್ಮ ಪ್ರಶಂಸೆಗೆ

    ಶೈಲಜಾ,

    ನಿಮ್ಗೆ ನೀಲಿಹೂವಿಗೆ ಸ್ವಾಗತ. ನೀವೆಲ್ಲಿ ಓದಿರಬಹುದು ಅನ್ನೋದನ್ನೂ ಲೇಖನದಲ್ಲಿ ಕೊಟ್ಟಿದೀನಿ ಗಮನಿಸಿ.. ನಿಮ್ಮ ಅಭಿಪ್ರಾಯಕ್ಕೆ ನನ್ನದೊಂದು ಥ್ಯಾಂಕ್ಸ್.

  14. May 16, 2009 at 9:57 am | #14

    ಸುನಾಥ್ ಸರ್, ಅರುಣ್ ಕುಮಾರ್, ಕಲ್ಲರೆ

    ನಿಮ್ಮ ಪ್ರೋತ್ಸಾಹದ ಮಾತುಗಳಿಗೆ ಋಣಿ.

  15. May 16, 2009 at 10:08 am | #15

    ರೂಪ,

    ಸಾವು ಅನ್ನೋದೇ ಇಲ್ಲದಿದ್ದರೆ ಆಗಬಲ್ಲಂತ ಅನಾಹುತಗಳನ್ನು ಯೋಚಿಸಿದ್ದೀರಾ? ಆ ನಿಟ್ಟಿನಲ್ಲಿ ನೋಡಿದರೆ ಸಾವಿನ ಅವಶ್ಯಕತೆ ಮನುಷ್ಯನಿಗಿದೆ.

    ಇರುವಷ್ಟು ದಿನ ಚೆನ್ನಾಗಿ ಬಾಳುವುದೇ ನಾವು ಸಾವಿಗೆ ನೀಡಬಹುದಾದ ಗೌರವ ಅನ್ನಿಸುತ್ತದೆ.

    ಹೋದ ಮೇಲೆ ಒಂದಿಷ್ಟು ಜನ “ಛೇ.. ಇವನಿದ್ದಿದ್ದರೆ ಚೆನ್ನಿತ್ತು” ಅಂದುಕೊಂಡರೆ ಬಹುಶಃ ಸಾವಿಗೂ ಪಶ್ಚಾತ್ತಪವಾದೀತು ನಮ್ಮನ್ನು ಕೊಂಡೊಯ್ದದ್ದಕ್ಕೆ.

    ಅಂತಹ ಬಾಳ್ವೆ ಸಿಕ್ಕರೆ ಸಾಕು ಅಂದುಕೊಳ್ಳುವೆ ಕೆಲವು ಸಲ. ನನಗೂ ಈ ಸಾವು ಮತ್ತು ಪ್ರೀತಿ ಎರಡೂ ಕಾಡುವ ವಿಷಯಗಳು.

    ಇಷ್ಟಕ್ಕೂ ಇಲ್ಲಿ ನೀಡಿದ ಸಣ್ಣ ಕತೆ ಹೇಳುವುದೇ ಸಾವು ಎಂದಿಗಾದರೂ ಬರಲೇಬೇಕು ಅನ್ನುವ ಸತ್ಯವನ್ನು.

    ನಾನು ಅಂದಿದ್ದರಲ್ಲಿ ಏನಾದರೂ ತಪ್ಪಿದ್ದಲ್ಲಿ ಮನ್ನಿಸಿ.

    ಸಾವಿನ ಬಗ್ಗೆ ಅನೇಕ ಪ್ರಶ್ನೆಗಳು ನನ್ನನ್ನೂ ಆಗಾಗ ಕಾಡುವುದರಿಂದ ಇಷ್ಟೆಲ್ಲಾ ಅನ್ನಬೇಕಾಯ್ತು.

    ನಿಮ್ಮ ಅನಿಸಿಕೆಗೆ ಥ್ಯಾಂಕ್ಸ್.

  16. May 16, 2009 at 10:17 am | #16

    ಸಂತೋಷ್,

    ಮೂಲಬರಹಕ್ಕೆ ಮೋಸವಾಗಬಾರದೆಂಬ ಉದ್ದೇಶದಿಂದ ಭಾಷಾಂತರವಷ್ಟೇ ಮಾಡಬೇಕಾಯ್ತು.

    ಭಾಷಾಂತರಕ್ಕೂ ಮೋಸವಾಗಿದ್ದಲ್ಲಿ ತಿಳಿಸಿ..:)

    ಪುರಾಣದ ಆ ಕತೆ ನನಗೆ ಗೊತ್ತಿದ್ದಿಲ್ಲ..( ನೋಡಿ, ನಾನು ನಿಮ್ಮಷ್ಟು ಓದಿಕೊಂಡಿಲ್ಲ..:)). ಗೊತ್ತಿದ್ದಿದ್ದರೆ ಅದನ್ನೂ ಇದಕ್ಕೆ ಜುಗಲ್ ಬಂದಿಯಾಗಿ ಬಳಸಿಕೊಳ್ಳುತ್ತಿದ್ದೆ.

    ಕತೆಯ ವಿಧಿ ವಿಧಾನಗಳನ್ನು ಕಲಿತುಕೊಳ್ಳುತ್ತಿದ್ದೇನೆ.. ಮುಂದೆ ನೀವು ನನ್ನ ಕತೆಯನ್ನೂ ಸಹಿಸಿಕೊಳ್ಳಬೇಕಾದೀತು ಅಂತ ಈಗಲೇ ಹೆದರಿಸುತ್ತಿದ್ದೇನೆ..;)

    ಆ ಗರುಡ ಕತೆಯ ವಿವರಗಳಿದ್ದರೆ ನನಗೆ ಮೈಲ್ ಮಾಡುವಿರಾ?

    ನಿಮ್ಮ ಕಾಮೆಂಟ್ ಓದಿ ಖುಷಿಯಾಯ್ತು, ಧನ್ಯವಾದಗಳೊಂದಿಗೆ

  17. May 16, 2009 at 10:33 am | #17

    ಶಿವು,

    ಕತೆಗಾರನ ಎಲ್ಲ ಒಳಹೊಳಹುಗಳನ್ನು ಈ ಲೇಖನ ಬಿಂಬಿಸಿಲ್ಲ. ಸುಮ್ಮನೆ ಮೇಲ್ ಮೇಲಾಗಿ ನೋಡುವ ಯತ್ನವಷ್ಟೇ. ಅಲ್ಲದೇ ಆ ಕತೆಯನ್ನು ಕನ್ನಡಕ್ಕೆ ತರಬೇಕೆಂದು ತುಂಬಾ ಅನ್ನಿಸಿತ್ತು.

    ನಿಜವಾಗಿಯಾದರೆ ಇನ್ನೂ ಬಹಳಷ್ಟು ಉದಾಹರಣೆ ಹೇಳುವುದಿತ್ತು…

    ನಿಮ್ಮ ಆ ಕತೆಯನ್ನು ಮೊದಲೇ ಓದಿದ್ದೇನೆ.

    ನಿಮ್ಮ ಉತ್ಸಾಹ ,ಪ್ರಯತ್ನ, ಗ್ರಹಿಕೆ, ಒಳನೋಟ ಗಳಿಂದ ಹುಟ್ಟಿದ ಅದನ್ನು ನನ್ನ ಒಂದ್ಸಾಲು ಕತೆಗಳ ಸ್ಪೂರ್ತಿಯೆಂದು ಹೇಳಿ ನಿಮ್ಮ ಮನೋವೈಶಾಲ್ಯತೆ ತೋರಿಸಿದ್ದೀರಿ.

    ಧನ್ಯವಾದಗಳು ಸರ್

  18. May 18, 2009 at 5:16 am | #18

    ತುಂಬಾ ಚೆನ್ನಾಗಿ ಗಮನಿಸಿದ್ದೀರಿ ರಂಜಿತ್ .
    ಕಥೆಯೂ ಸುಂದರ
    ಅಭಿನಂದನೆಗಳು .
    ಸುನಿಲ್ .

  1. No trackbacks yet.