-೧-
ಒಂದು ಬ್ಯಾಂಕಿನ ಬ್ಯೂಸಿ ದಿನ. ಜನ ಗಿಜಿಗುಟ್ಟುತ್ತಿದ್ದರು.
ಅಲ್ಲಿ ಮುಲ್ಲಾ ನಸೀರುದ್ದೀನ್ ಕೂಡ ಇದ್ದಿದ್ದರು. ಕೊಂಚ ಹೊತ್ತಿನ ಬಳಿಕ ಮುಲ್ಲಾ ಒಂದು ಅನೌನ್ಸ್ ಮೆಂಟ್ ನೀಡಿದರು.
ಇಲ್ಲಿ ಯಾರದ್ದಾದರೂ ಲಕ್ಷ ರೂಪಾಯಿಯ ಕಟ್ಟು ಬಿದ್ದು ಹೋಗಿದೆಯಾ?
ಎಲ್ಲರೂ ನನ್ನದು ನನ್ನದು ಅಂತ ಮುಗಿಬೀಳಲು ಅನುವಾದರು.
ಮುಲ್ಲಾ ಶಾಂತವಾಗಿ, "ಅದಕ್ಕೆ ಕಟ್ಟಿದ್ದ ರಬ್ಬರ್ ಬ್ಯಾಂಡ್ ನನಗೆ ಸಿಕ್ಕಿದೆ, ತಗೆದುಕೊಂಡುಹೋಗಬಹುದು" ಅಂದರು!
-೨-
ಒಬ್ಬ ಮನಶ್ಯಾಸ್ತ್ರಜ್ಞ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ನಾಲ್ವರು ಹುಡುಗರು ಜಗಳ ಆಡುತ್ತಿರುವುದು ಕಾಣಿಸುತ್ತದೆ. ಅದರಲ್ಲಿ ಒಬ್ಬ ಹುಡುಗನ ಕೈಯ್ಯಲ್ಲಿ ಮುದ್ದಾದ ಪುಟಾಣಿ ನಾಯಿಮರಿ ಇದೆ. ’ಯಾಕೆ ಜಗಳ ಆಡ್ತಾ ಇದೀರಿ’ ಅಂತ ಮನಶ್ಯಾಸ್ತ್ರಜ್ಞ ಕೇಳಿದ.
ಈ ನಾಯಿಮರಿ ದಾರೀಲಿ ಸಿಕ್ತು, ಯಾರ್ ತಗೊಡ್ ಹೋಗ್ಬೇಕೋ ಗೊತ್ತಾಗ್ತಿಲ್ಲ. ಎಲ್ರೂ ತಂಗೇ ಬೇಕು ಅಂತ ಹಠ ಹಿಡಿದಿದ್ದಾರೆ. ನಂಗೂನು ಬೇಕು ಅನ್ನಿಸ್ತಿದೆ ಅಂತ ಒಬ್ಬ ಹುಡುಗ ಹೇಳಿದ.
ಮತ್ತೊಬ್ಬ ’ ಅದ್ಕೇ, ನಮ್ಮಲ್ಲಿ ಯಾರ್ ದೊಡ್ಡ ಸುಳ್ಳು ಹೇಳ್ತಾರೋ ಅವ್ರಿಗೇ ಕೊಡೋದು ಅಂತ ನಿರ್ಧರಿಸಿ, ಒಬ್ಬೊಬ್ಬರಾಗಿ ಸುಳ್ಳು ಹೇಳ್ತಾ ಇದೀವಿ ಅಂದ.
ಮನಶ್ಯಾಸ್ತ್ರಜ್ಞನಿಗೆ ಬೇಸರವಾಯಿತು. ಇನ್ನೂ ಶಾಲೆಗೆ ಹೋಗುತ್ತಿರೋ ಹುಡುಗರು, ಅರಳುವ ಮೊಗ್ಗುಗಳು. ಈಗಲೇ ಸುಳ್ಳಿನತ್ತ ವ್ಯಾಮೋಹ, ಸುಳ್ಳು ಹೇಳುವ ಕಲೆ ಕರಗತವಾಗಿಬಿಟ್ಟರೆ ಮುಂದೆ ಏನೆಲ್ಲಾ ಆಗಿ ಇವರು ತಯಾರಾಗುವರೋ ಎಂಬ ಆತಂಕ ಹುಟ್ಟಿತು. ದೊಡ್ಡ ದೊಡ್ಡ ಹೆಸರಿನ ಮಾನಸಿಕ ಖಾಯಿಲೆಗಳ ಹೆಸರೆಲ್ಲಾ ಕಣ್ಮುಂದೆ ಬಂತು.
"ಸುಳ್ಳು ಹೇಳೋದು ತಪ್ಪು ಮಕ್ಕಳೇ, ನೀವೆಲ್ಲಾ ಭವಿಷ್ಯದ ಕುಡಿಗಳು. ಅಬ್ದುಲ್ ಕಲಾಂ ಆಗುವ ಕನಸು ಹುಟ್ಟಿಸಿಕೊಳ್ಳಬೇಕು, ನೋಡಿ ನನ್ನನ್ನು. ನಿಮ್ಮ ವಯಸ್ಸಿನಲ್ಲಿ ಸುಳ್ಳು ಹೇಳಿದ್ದರೆ ಈಗ ನಾನು ಈ ಊರಿನ ದೊಡ್ಡ ಮನಶ್ಯಾಸ್ತ್ರಜ್ಞ ಆಗ್ತಿದ್ದೆನಾ? ಗಾಂಧಿ ಆತ್ಮಕಥೆ ನಾನು ಓದಿದ್ದು ನಿಮ್ಮ ವಯಸ್ಸಿನಲ್ಲೇ, ಆಗಲೇ ನಾನು ಸುಳ್ಳು ಹೇಳಲ್ಲ ಅಂತ ನಿರ್ಧರಿಸಿದ್ದೆ. ಈಗ ನೀವೆಲ್ಲಾ ಈ ಸುಳ್ಳು ಹೇಳೋ ಆಟದ ಬದಲು, ಯಾರು ಬುದ್ಧಿವಂತರೋ ಅವರಿಗೆ ನಾಯಿಮರಿ ಅಂತ ನಿರ್ಧರಿಸಿ" ಅಂದ.
ಅಲ್ಲಿ ಪೂರ್ತಿ ನಿಶ್ಯಬ್ಧ ಆವರಿಸಿತು. ಮಕ್ಕಳು ಒಬ್ಬರನ್ನೊಬ್ಬರು ನೋಡಿಕೊಂಡರು.
ಒಬ್ಬ ಹುಡುಗ "ಲೋ..ಇವ್ರೇ ಹೇಳಿದ್ರಿಂದ.. ನಾಯಿಮರೀನ ಈವಯ್ಯಂಗೇ ಕೊಟ್ ಬಿಡಾಣ ಕಣ್ರೋ!’ ಅಂದ!
-೩-
ಎಂಟು ಜನ ಎಂ ಬಿ ಎ ವಿದ್ಯಾರ್ಥಿಗಳು ಮಾರನೇ ದಿನ ’ಟೀಂ ವರ್ಕ್’ ವಿಷಯದಲ್ಲಿ ಪರೀಕ್ಷೆ ಬರೆಯಬೇಕು. ಆದರೆ ಅವತ್ತು ಫ್ರೆಂಡ್ ಶಿಪ್ ಡೇ ಇದ್ದಿದ್ದರಿಂದ ಪರೀಕ್ಷೆಗೆ ತಯಾರಾಗಲು ಸಾಧ್ಯವಾಗಲಿಲ್ಲ. ಅದಕ್ಕೆ ಅವರೆಲ್ಲಾ ಸೇರಿ ಒಂದುಪಾಯ ಮಾಡಿದರು. ಮರುದಿನ ಒಟ್ಟಾಗಿ ಪ್ರೊಫೆಸರ್ ಬಳಿಗೆ ಹೋಗಿ ರಾತ್ರಿ ಪರೀಕ್ಷೆಗಾಗಿ ಬರುವಾಗ ವಾಹನದ ಟೈರ್ ಪಂಕ್ಚರ್ ಆಯ್ತು, ಸ್ಪೇರ್ ಟೈರ್ ಇಲ್ಲವಾದ್ದರಿಂದ ಬಹಳ ದೂರ ನಡೆದುಕೊಂಡು ಹೋಗಿ ಸರಿ ಮಾಡಿಸಿಕೊಂಡು ಬರಬೇಕಾಯ್ತು, ನಿದ್ದೆಯಿಲ್ಲವಾದ್ದರಿಂದ ಪರೀಕ್ಷೆ ಬರೆಯಲಾಗದು, ದಯವಿಟ್ಟು ಪರೀಕ್ಷೆಯನ್ನ ಐದು ದಿನ ನಂತರ ಇಡಬೇಕು ಅಂತ ಕೋರಿಕೆಯಿಟ್ಟರು.
ಪ್ರೊಫೆಸರ್ ಮರು ಮಾತಾಡದೇ ಒಪ್ಪಿಗೆಯಿತ್ತರು.
ಐದು ದಿನದ ನಂತರ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ತೆಗೆದುನೋಡಿದರೆ ಪ್ರಶ್ನೆಗಳು ಈ ರೀತಿಯಾಗಿವೆ:
೧. ಐದು ದಿನದ ಹಿಂದೆ ನೀವು ಹೋದ ಕಾರಿನ ಯಾವ ಚಕ್ರ ಪಂಕ್ಚರ್ ಆಯಿತು? ಮುಂದಿನದಾ? ಹಿಂದಿನದಾ? ಬಲಗಡೇದ್ದಾ? ಎಡಗಡೇದ್ದಾ? (೯೫ ಅಂಕಗಳು)
೨. ಟೀಂ ವರ್ಕ್ ಗೆ ಬೇಕಾದ ಮುಖ್ಯ ಲಕ್ಷಣಗಳೇನು? (೫ ಅಂಕಗಳು)
ಎಲ್ಲರಿಗೂ ಐದು ಅಂಕಗಳೇ ಬಂದವು. ತಮ್ಮ ತಪ್ಪು ತಿಳಿದುಕೊಂಡ ಎಲ್ಲರೂ ಸರಿಸುಮಾರು ಒಂದೇ ಉತ್ತರ ಬರೆದರು.
"..ಯಾವ ಕೆಲಸ ಮಾಡಿದರೂ, ಯಾವ ಸುಳ್ಳು ಹೇಳಿದರೂ, ಇಡೀ ಟೀಂ ಎಲ್ಲಾ ಕೂಡಿ ಚರ್ಚಿಸಿ, ಪೂರ್ತಿ ಅವಗಾಹನೆಯಿಂದ ಮಾಡಬೇಕು."
***
ಟಿಪ್ಪಣಿ: ಕೊನೆಯೆರಡು ಕಥೆ ಯಂಡಮೂರಿ ಪುಸ್ತಕದಿಂದ ಆರಿಸಿದ್ದು. ಬಹುಶಃ ಅದು ಇಂಟರ್ನೆಟ್ ಮೂಲದ್ದಿರಬಹುದು.
[…] ನೀಲಿ ಹೂವು […]