Archive for the ‘ಒಂದ್ಸಾಲಿನಲಿ ಕವಿತೆ!’ Category

ನೀನು ನಡೆದಾಡೋ ಬೆಳದಿಂಗಳು…
ಪದಗಳೇ ಸಾಲದು ನಿನ್ನ ಕೊಂಡಾಡಲು..

ಜೈಲಿಗೆ ಹಾಕಬೇಕು ನನ್ನನೂ ಚಂದ್ರನನ್ನೂ

ಅವನನ್ನು – ನಿನ್ನ ಕಂಗಳ ಬೆಳಕ ಕದ್ದ ತಪ್ಪಿಗೆ
ನನ್ನನು – ನಿನ್ನ ಲಜ್ಜೆಯಿಂದ ಈ ಕವಿತೆಯ ಬಸಿದ ತಪ್ಪಿಗೆ!

ನಿಂಗೆ ಬೇಸರ ಆದಾಗ..
ಬದುಕು ನಿಸ್ಸಾರ ಅನಿಸಿದಾಗ..
ಸಹಿಸಲಾಗದ ದುಃಖ ಆವರಿಸಿದಾಗ…

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು..
ಅಲ್ಲಿ ನಿಂಗೊಬ್ಬಳು ರಾಜಕುಮಾರಿ ಕಾಣಿಸುತ್ತಾಳೆ!

ನನ್ನ ದಿಂಬಿಗೆ ನಿನ್ನದೇ ಹೆಸರಿಟ್ಟಿರುವೆ..
ಚಳಿಯನು ಕಿಟಕಿಯಾಚೆ ಅಟ್ಟಿರುವೆ..
ಸ್ವಪ್ನದಲಿ ದಾರಿಯೊಂದ ಮಾಡಿರುವೆ…
ನೀ ಅಲ್ಲಿ ಹಾದುಹೋಗುವಾಗ
ಕದ್ದು ನೋಡಲೆಂದೇ ಕಾದಿರುವೆ…

ಬದುಕು ಕಾಲಿನ ರೀತಿ.
ಕನಸು ಕಣ್ಣಿನ ತರಹ.

ಕಣ್ಣು ಕ್ಷಣಕಾಲದಲ್ಲಿ ಮೈಲಿ ದೂರ ಸಾಗುತ್ತದೆ.

ಕಾಲಿಗೆ ಕ್ಷಣದಲ್ಲಿ ಒಂದು ಹೆಜ್ಜೆ ಇಡುವ ಅವಕಾಶ ಮಾತ್ರ.

capture

ಅಂಗಾಲಿಟ್ಟು ಎದೆಯ ಮೆಲೆ ನೀ ಕೊಟ್ಟು
ಹೋದ ಬಹುಮಾನ ಈ ವಿದಾಯ /
ಈಗಂತೂ ಎದೆಯ ಒಳಗೆ ಸದಾ ಹಸಿ
ಹಸಿರು ಗಾಯ//

ಕನಸ ಗೋಪುರದ ತುತ್ತ ತುದಿಯೇ
ನೋವಿನ ಕಳಶ /
ಇಂಥ ಅಪೂರ್ಣ ಕವಿತೆಯ ಕೊನೆಯ
ಸಾಲುಗಳೇ ನೀನು ಬಹುಶಃ//

ಹೃದಯವ ಒದ್ದೇ ಹೊರಹೋಗಿದ್ದಳು
ಕೊಟ್ಟ ಕಾರಣಗಳ ಹೊರೆ ತಾಳಲಾಗದೇ
ಒದ್ದಾಡಿದ್ದು ಖರೆಯೇ.
ಆ ದುಃಖದ ಪ್ರಮಾಣವನ್ನು ದಿಂಬಿನ ಬಳಿ ಕೇಳಬಹುದು

ಭಾವನೆಗಳನ್ನಿಟ್ಟು ಆಡಿದ್ದು ಹೌದಾದರೂ
ನನ್ನ ಪುಣ್ಯ, ನೆನಪುಗಳ ಚೀಲ ಕದ್ದು

ಓಡಲಿಲ್ಲ ಆಕೆ

ಈಗ ನೆನಪುಗಳ ಜೋಳಿಗೆಯಿಂದ
ಸ್ವಾನುಕಂಪದ ಅಮೃತ ಬಸಿದು ಕುಡಿದು
ಜೀವಂತವಿದ್ದೇನೆ.

ನಿನ್ನುಸಿರಿನ ಪಿಸುಮಾತು
ನನ್ನೊಳಗೆ ಪ್ರತಿಧ್ವನಿ

ನಿನ್ನ ತುಸುಸ್ಪರ್ಶ
ಮೈತುಂಬ ಇಬ್ಬನಿ

ನಿನ್ನ ಅಂಗಾಲಿನ ಹೆಜ್ಜೆ ಗುರುತು
ಅಕ್ಷಯವಾಗಿ
ಅಕ್ಷರವಾಗಿ
ಎದೆಯೊಳಗೆ ಕವಿತೆಯಾಗಿದೆ

ದಯವಿಟ್ಟು ನನ್ನನ್ನು

ಅದ್ಭುತ ಕಾದಂಬರಿಯಾಗಿ ಕಾಡು..
ಒಳ್ಳೆಯ ಸಿನೆಮಾ ಆಗಿ ಆವರಿಸು..
ಚಂದದ ಕಥೆಯೊಳಗಿನ ಗುಂಗಾಗಿ ಆವಹಿಸು..
ಇದು ಕಚಗುಳಿ…ಒಂದು ಹನಿಗವಿತೆಯಾಗಿ..
ಲಾಲಿತ್ಯದ ಪ್ರಬಂಧ ಆಗಿ ನೇವರಿಸು..

ಕೊನೆ ಪಕ್ಷ ಗಾಢ
ಕವಿತೆಯಾಗಿ ಆದರೂ ಸಂತೈಸು..

ಇಂದಿಗೂ ದೊಡ್ಡ ಶಹರುಗಳಲ್ಲಿ

ಬದುಕಿನ ಸಂಜೆಹೊತ್ತಲ್ಲಿರುವವರ

ನಿಟ್ಟುಸಿರ ಭಾರದಲ್ಲಿರುವುದು

ಮಂತ್ರಾಲಯ

ಗುರುರಾಯರ ಕರೆ

ಮತ್ತು

ಗುರುವಾಯನಕೆರೆ

*****

Mute Swan at Sunset

ಗುರುವಾಯನಕೆರೆಯಲಿ

ಮಳೆಹೊತ್ತು ಮೂಡುವ

ಅಸಂಖ್ಯ ಅಲೆಗಳಲ್ಲಿ

ದಡ ಸೇರುವ

ಮುಖ್ಯ ಹೆಸರು

ಆಧ್ಯಾತ್ಮ

*****

ಗುರುವಾಯನಕೆರೆಯಲಿ

ಮಿಂದೆದ್ದು ಬಂದಾಗ

ಎದೆಯೊಳಗೇ ಉಳಿದ

ಹನಿಯೊಂದರ ನೆನೆದು

ಗೀಚಿದ ಬರಹವನ್ನು ಕವಿತೆಯೆಂದು

ಸಾರಿದರು, ಖರೆ

ಕ್ರೆಡಿಟ್ಟು ಕೆರೆಗೇ ಸೇರಬೇಕು

ಯಾವುದಕ್ಕೂ ಖುದ್ದು

ಇನ್ನೊಮ್ಮೆ ಹೋದಾಗ

ಬೊಗಸೆ ನೀರು ಕದ್ದು ಬರಬೇಕು.

*****

Ziedi ūdenī (Flowers in the water, Latvia)

ಮರೆತೇ ಅಂದುಕೊಂಡು

ಖುಷಿಯಿಂದಿದ್ದ ನನ್ನನ್ನು

ಕೆರೆಯಲ್ಲಿ ಬಿದ್ದ ಹನಿಮೂಡಿಸಿದ

ಅಲೆಯಂತೆ ಅಲುಗಾಡಿಸಿದ್ದು

ಗುರುವಾಯನಕೆರೆ

ಕವಿತೆಗಳು

ಇನ್ನಂತೂ ಖಚಿತ

ಕೆರೆಯಲ್ಲೆ ಮುದ್ದಾಗಿ

ಕೂತಿದ್ದ ಚಂದಿರ

ನಂತಹ ಬದುಕು

ಪ್ರೀತಿಯ ಅಲೆಗೆ ಅಪ್ಪಳಿಸಿ

ಚೂರಾಗಲಿವೆ

*****

ಪಟ್ಟಣಗಳ ಎಡೆಯಲ್ಲಿ

ಬದುಕನ್ನು

ತಲ್ಲಣಗಳ

ಅಲ್ಲೋಲಕಲ್ಲೋಲ

ಸಾಗರವಾಗಿಸುವ

ಬದಲು

ಗುರುವಾಯನಕೆರೆಯ

ಬುದ್ಧ ಶಾಂತ

ಹನಿಯಾಗುವುದೇ ಲೇಸು

****

 

ಸೂಚನೆ: ಇದು ಜೋಗಿ ಸರ್ ಹಾಕಿಕೊಟ್ಟ ಹಾದಿಯಲ್ಲಿ ನಾನೂ ಒಂದು ಧೂಳಕಣವಾಗುವ ಪ್ರಯತ್ನ.

ಚಿತ್ರಗಳು : ಮೈಕ್ರೋಸಾಫ್ಟ್ ಡೆಸ್ಕ್ ಟಾಪ್ ಹಿನ್ನೆಲೆಚಿತ್ರಗಳ ಕೃಪೆ

ಸಿಕ್ಕಿದ್ದಕ್ಕೆಲ್ಲಾ ಕಾರಣವಿತ್ತು
ಒಮ್ಮೆ ಸಿಗು ಗೆಳೆಯಾ
ಹಾಗೆ ಸುಮ್ಮನೆ

*****

ಹೂವು ಸತ್ತು
ತುಂಬಾ ಹೊತ್ತಾಯ್ತು
ಪರಿಮಳವಿನ್ನೂ ಅರಳುತ್ತಿದೆ..

******

ಅವಳೂ ಅಂದಳು
ನಾನೂ ಅನ್ನುತ್ತಿದ್ದೆ
ಮೌನ ಇನ್ನಷ್ಟು ಆಳವಾಗುತ್ತಿತ್ತು..

*****

ಗೋಡೆ, ಮಾಡಿನಿಂದ
ಆಗದಿದ್ದ ಮನೆ, ಕಿಟಕಿ-ಬಾಗಿಲು
ಗಳಿಂದ ಆಯಿತು.

******

ಮೀಟರುಗಟ್ಟಲೆ ಚಿಗುರಿಸಿದ
ಮಳೆಯನ್ನು
ಸೆಂಟಿಮೀಟರುಗಳಿಂದ ಅಳೆದರು.

****

ಕಡಲಿಗೆ ಬಿದ್ದ ಆಗಸ
ನೀಲಿ ನೀಲಿಯಾಗಿಬಿಡ್ತು
ಪುಟ್ಟಿಯ ಕಣ್ಣಲ್ಲಿ

****

water2

ಭೇಟಿಯಾಗದಿರು ನನ್ನ
ಕನಸಲ್ಲಿ ಸಾಲ
ಇಸ್ಕೊಂಡವನ ಥರ…

****
ಸಿಮೆಂಟು, ಇಟ್ಟಿಗೆ
ಗೋಡೆ ಮಾಡು ಎಲ್ಲ ಗಟ್ಟಿ
ಒಳಗಿನ ಮೌನವೊಂದೇ ದ್ರವ
****

ಏಕಾಂತ

ನೆನಪಿನಾಳ

ಕ್ಕೆ

ಹಾಕಿ ಗಾಳ

ಹಳೆಯ ಮನದ ಗೀರೊಂದು

ಕೊಟ್ಟ ನೋವನ್ನು

ಮಧುರವಾಗಿ

ಹೀರುತ್ತಾ ಕೂರುವುದು.

******

ಕಾವ್ಯ

ಮೌನ, ರೇಷಿಮೆ ನಯ

ನೆನಪೋ ಸೂಜಿಮೊನೆ

ಘನ ಮನ

ಕಾದು ಕುಂತು

ನೇಯ್ದದ್ದು

ಕಾವ್ಯಕಸೂತಿ.

***

p8_albania050916

ಹನಿ

ಹಕ್ಕಿಯಂತೆ

ಹತ್ತಿಯಂತೆ ಹಾರಾಡಿ

ಬಾನಬಯಲಲಿ ತೇಲಾಡಿ

ಹುಡುಕಿ ಹುಡುಕಿ

ಅವಳ ನೆತ್ತಿಯ ಮೇಲುದುರಿ

ಜಾರುಬಂಡಿಯಾಡುವ

ಆಸೆ ಹೊತ್ತ

ಹನಿ

ಬಲು ಕಿಲಾಡಿ.

****

ಆಟ

ಕನಸಕೆರೆಗೆ

ಕಲ್ಲನೆಸೆದು

ನಿನಗೋ ಆಟವಾಡುವ ಲಹರಿ

ದಡದಮೂಲೆಯಲಿ

ಏಡಿಮನೆಮಾಡಿದ ಮನವಿರುವ

ನನಗೋ

ತೆರೆತೆರೆಯೂ ಸುನಾಮಿಯ ಪರಿ.

*****

 

(ಚಿತ್ರಕೃಪೆ)

 

xml-haiku-28oct2005-w

ಅತೀ ದೊಡ್ಡ ಕವಿತೆ ಬರೆದು

ಸಾಕಾಗಿ ಎಲ್ಲಾ ಸಾಲು ಅಳಿಸಿದೆ

ಮೊದಲ ಮೂರು ಬಿಟ್ಟು.

 

 

***

ಚಿತ್ರದ ಕ್ರೆಡಿಟ್ಟು : ಇಲ್ಲಿಂದ

ಬರವಣಿಗೆ : ತನ್ನೊಳಗಿನ ಭಾವಗಳಿಗೆ ನ್ಯಾಯ ದೊರಕಿಸಿಕೊಡಲು ಬರಹಗಾರ ಮಾಡುವ ಪದಯಾತ್ರೆ.

ನೀಲಾಂಜನ : ಅಮ್ಮ ಹಚ್ಚಿಟ್ಟ ನೀಲಾಂಜನಕ್ಕೆ ರಾತ್ರಿ ಅಲ್ಲಾಡುತ್ತಿದೆ!

ಸಾವು :  ಕರೆಯದೇ ಬಂದವರು, ಕರೆದೊಡನೆ ಹೊರಡುವರು

ಲಾಂದ್ರ : ಪವರ್ ಕಟ್ ಸಮಯದಲ್ಲಿ ಮನೆಯಾಗಸದ ಚಂದ್ರ.

ಚಿಗುರು : ಸತ್ತು ಬಡಗಿಯ ಕೈಯಲ್ಲಿ ಭರ್ಜರಿ ಸರ್ಜರಿ ಮಾಡಿಸಿಕೊಂಡ ಕೊಳಲು ತನ್ನೆಲ್ಲಾ ತೂತುಗಾಯದ ಮಧ್ಯೆಯೂ ಎಲ್ಲರ ಎದೆಯೊಳಗೆ ರಾಗವಾಗಿ ಚಿಗುರೊಡೆದಿದೆ.

1126_OrangeMaples

 

ವಾಸ್ತವ :  ರಾತ್ರಿ ಮೆಲ್ಲ ಬಂದು ಕನಸು ಕದಿಯದಿರಲಿ ಎಂದು ರೆಪ್ಪೆಯ ಲಾಕರಿನೊಳಗಿಟ್ಟಿದ್ದೆ; ಮುಂಜಾವು ಕಣ್ಣೆದುರೇ ಎಲ್ಲಾ ಲೂಟಿಗೈದಿತು.

ಮಿನುಗು : ಚಂದಿರನಿಲ್ಲದ ರಾತ್ರಿಗೆ ಕತ್ತಲ ಆಗಸದಂಗಳದಲ್ಲಿ ಭಯದಿಂದ ನಡುತಿದೆ ನಕ್ಷತ್ರಗಳು.

ಚಿಗುರು : ನೀರ ಹನಿ ಬೇರಿಗಿತ್ತ ಮುತ್ತಿಗೆ ಕೊರಡು ಕೊಂಬೆಗೆ ಮೂಡಿದ ರೋಮಾಂಚ!

ಚಕ್ರ : ಅವನಿಗೆ ಬಿದ್ದ ಕನಸಲ್ಲಿ, ಹಗಲಾಗಿ ಕೆಲಸಕ್ಕೆ ಹೋಗಿ ಸಂಜೆ ಸುಸ್ತಾಗಿ ಬಂದು ನಿದಿರೆಯಲಿ ಮುಳುಗಿ ಕನಸು ಕಾಣತೊಡಗಿದ.

 

(ಚಿತ್ರಕೃಪೆ : ಇಲ್ಲಿಂದ )

೧. ಇಬ್ಬನಿ : ಹೂವ ಮೊಗ್ಗು ಪರಿಮಳ ಹೆರುವಾಗ ಸುರಿದ ದಳದಳ ಬೆವರು!

೨. ಚಂದಿರ : ತಂಟೆಪುಟ್ಟ ತರಲೆಯಿಲ್ಲದೇ ಕೈತುತ್ತು ತಿನ್ನುವಂತೆ ಮಾಡಲು ಅವ್ವ ಬಳಸುವ ಅಮೂಲ್ಯ ಆಟದ ಸಾಮಾನು.

೩. ಮಳೆ : ಭೂತಾಯಿ ಬರೆದ ಅದ್ಭುತ ಹಸಿರು ಕವಿತೆಗೆ ಆಗಸ ಸುರಿಸಿದ ಚಪ್ಪಾಳೆ ಪುಷ್ಪವೃಷ್ಟಿ!

೪. ರಾಗ : ಕೊಳಲಿಗೆ ಕಿವಿಗೊಟ್ಟೆ, ಕಿವಿಯೆಲ್ಲಾ ಕಾವ್ಯ!

೫. ವಿಪರೀತ : ನಡುಗುವ ಚಳಿಯೆಂದು ಕಂಬಳಿ ಹೊದ್ದರೆ ಒಳಗೆ ಉರಿಉರಿ ಸೆಕೆ!

೬. ಕಿಟಕಿ : ನೀನು ಸಿಗದೇ ಇದ್ದ ದಿನಗಳಲಿ ಕೊಂಚ ಸಿಟ್ಟಿನಲಿ, ಕೊಂಚ ಬೇಸರದಲಿ ಇಡೀ ಜಗತ್ತನ್ನು ಕಿಟಕಿಯ ಕಂಬಿಗಳಾಚೆಗಿನ ಜೈಲಿನಲಿ ಕೋಳ ತೊಡಿಸಿಡುತ್ತೇನೆ.

೭. ಸಾಗರ : ನನಸಾದ ಸಾವಿರಾರು ತೊರೆಗಳ ಕನಸು.

೮. ಬೇರು : ನೀರ ಮೇಲಿನ ಪ್ರೀತಿಗೆ ಭೂಮಿ ಬಗೆವ ಶಕ್ತಿ.

 

(ಇದು ವಿ.ಕ. ದ ಸಿಂಪ್ಲಿಸಿಟಿ ಪೇಜಿನಲ್ಲಿ ಪ್ರಕಟವಾಗಿದೆ)