Archive for the ‘ಪುಸ್ತಕ’ Category

ವರ್ಷವೊಂದು ಬಲುಬೇಗ ಉರುಳಿಹೋಯಿತು. ಕಳೆದ ವರ್ಷದಲ್ಲಿ ಮನಸ್ಸು ಮುಟ್ಟಿದ ಪುಸ್ತಕ ಯಾವುದು ಅಂತ ಪಟ್ಟಿ ಮಾಡಹೊರಟರೆ ಮನಸ್ಸಿಗೆ ತುಂಬ ಖುಷಿ. ಈ ಪಟ್ಟಿ ಕೆಲವರಿಗಾದರೂ ಮತ್ತಷ್ಟು ಓದುವ ಚಟ, ಹಟ ಹುಟ್ಟುಹಾಕುತ್ತೇನೋ ಅನ್ನುವ ಹಂಬಲದಿಂದ ಈ ಪೋಸ್ಟ್.
ಗಮನಿಸಬೇಕಾದ್ದು ಕೆಲವು ಪಾಯಿಂಟ್ಸ್. ಈ ಪಟ್ಟಿಯಲ್ಲಿರುವುದು ನಾನು ಕಳೆದ ವರ್ಷ ಓದಿದ್ದ ಪುಸ್ತಕಗಳಲ್ಲಿ ನನಗೆ ಉತ್ತಮ ಅನ್ನಿಸಿದ್ದು, ಕನ್ನಡದ ಜೊತೆ ಕೆಲ ಇಂಗ್ಲೀಷ್ ಪುಸ್ತಕವೂ ಈ ಪಟ್ಟಿಯಲ್ಲಿದೆ. ಮತ್ತು ಈ ಪಟ್ಟಿ ನನ್ನ ಇಷ್ಟದ ಕ್ರಮಪ್ರಕಾರವಾಗಿ ಇಲ್ಲ.

೧. ರಂಗವಲ್ಲಿ ಮನೆ ಎಲ್ಲಿ? (ಕಥಾ ಸಂಕಲನ) – ಗೋಪಿನಾಥ್ ರಾವ್

ಹನ್ನೊಂದು ಕಥೆಯಿರುವ ಈ ಕಥಾ ಸಂಕಲನ, ಕಳೆದ ವರ್ಷದ ಓದಿನಲ್ಲಿ ತುಂಬಾ ಖುಷಿಕೊಟ್ಟಿತು. ಕಥೆ ವಿವರಣೆ ಮತ್ತು ಮುಖ್ಯವಾಗಿ ಕಥಾ ತಂತ್ರದಿಂದ ಬಹಳ ಚಂದ ಅನ್ನಿಸುವ ಕಥೆಗಳಿವೆ ಇದರಲ್ಲಿ. ಅಕಸ್ಮಾತ್ ಆಗಿ ಓದಬೇಕಾಗಿ ಬಂದು ಸರ್ ಪ್ರೈಸ್ ಆಗಿ ನನ್ನ ಮನಸ್ಸಿನಲ್ಲಿ ನೆಲೆಸಿರುವ ಈ ಪುಸ್ತಕ ಈಗ ನನ್ನ ಲೈಬ್ರೆರಿಯಲ್ಲೂ ಸ್ಥಾನ ಪಡೆದಿದೆ. ಜೊತೆಗೆ ಈ ಲೇಖಕರ ಇನ್ನಷ್ಟು ಪುಸ್ತಕಗಳನ್ನೂ ಹುಡುಕುವಂತೆ ಮಾಡಿದೆ. ಕಳೆದ ತಿಂಗಳಷ್ಟೇ ಸಿಕ್ಕಿರುವ ಆ ಬೇರೆ ಪುಸ್ತಕಗಳನ್ನು ಇನ್ನೂ ಓದಬೇಕಿದೆಯಷ್ಟೇ.

img_20170212_135937

೨. ಲೈಫ್ ಈಸ್ ಬ್ಯೂಟಿಫುಲ್ (ಸೆಲ್ಫ್ ಹೆಲ್ಪ್ – ಲೇಖನ ಮಾಲೆ) – ಜೋಗಿ

ವ್ಯಕ್ತಿತ್ವ ವಿಕಸನ ಪುಸ್ತಕಗಳ ಸಮಾನ್ಯ ಧಾಟಿಯಿಂದ ಹೊರತಾಗಿ ಬಂದಿರುವ ವಿಶಿಷ್ಟ ಪುಟ್ಟ ಪುಸ್ತಕ ಇದು. ಜೋಗಿ ಶೈಲಿಯಲ್ಲಿ ಕಥೆಗಳ ಮೂಲಕ ನಮ್ಮ ಬದುಕನ್ನು ನೇವರಿಸುತ್ತ ಹೋಗುವ ಈ ಪುಸ್ತಕ, ಯಶ್ ರಾಧಿಕಾ ಪಂಡಿತ್ ಮದುವೆಯ ಕರೆಯೋಲೆಯ ಜೊತೆಯಲ್ಲೂ ಸ್ಥಾನ ಪಡೆದಿದ್ದು ಇನ್ನೊಂದು ವಿಶೇಷ. ಒಟ್ಟಾರೆ ನಮ್ಮನ್ನು ಒಂದಿಷ್ಟು ಚಿಂತನೆಗೆ ನೂಕುವ ಅನೇಕ ವಿಚಾರಗಳು ಈ ಪುಸ್ತಕದಲ್ಲಿದೆ.

 

img_20170212_135933

೩. ೧೦೦ ಲಿರಿಕ್ಸ್ – ಗುಲ್ಜಾರ್ (ಇಂಗ್ಲೀಷ್ ಪುಸ್ತಕ) – ಸಂಜೋಯ್ ಶೇಖರ್

ಬಾಲಿವುಡ್ಡಿನಲ್ಲಿ ಎವರ್ ಗ್ರೀನ್ ಹಿರೋ ಅಂತ ದೇವಾನಂದ್ ರನ್ನು ಕರೆಯುತ್ತಾರೆ. ಎವರ್ ಗ್ರೀನ್ ಬರಹಗಾರ ಅಂತ ಯಾರನ್ನಾದರೂ ಕರೆಯಬಹುದೆಂದರೆ ಅದು ಗುಲ್ಜಾರ್ ರನ್ನು ಮಾತ್ರ. ಈಗಿನ ಹದಿ ಹರೆಯದವರ ಎದೆಯಲ್ಲೂ ಕಿಚ್ಚೆಬ್ಬಿಸಬಲ್ಲಂಥ ರೂಪಕಗಳನ್ನು ಕೊಡುವುದರಲ್ಲಿ ಗುಲ್ಜಾರ್ ಎತ್ತಿದ ಕೈ. ಆವರ ಹೊಸ-ಹಳೆಯ ೧೦೦ ಹಾಡುಗಳ ಸಾಹಿತ್ಯ ಮತ್ತು ಅದರ ಇಂಗ್ಲೀಷ್ ಅನುವಾದ ಈ ಪುಸ್ತಿಕೆಯಲ್ಲಿದೆ. ಮಳೆ ಬರುವಾಗ, ಮೋಡವಿದ್ದಾಗ, ಎಲ್ಲೋ ಪಯಣಕ್ಕೆ ಹೊರಟಿದ್ದಾಗ, ಬೇಸರದ ಸಂಜೆಯಲ್ಲಿ- ಹೀಗೆ ಯಾವಾಗಲಾದರೂ ಯಾವ ಪುಟವಾದರೂ ತೆರೆದು ಗುಲ್ಜಾರ್ ಲೋಕದೊಳಕ್ಕೆ ನುಗ್ಗಿ ಹೋಗಲು ಈ ಪುಸ್ತಕ ಸಹಾಯ ಮಾಡುತ್ತದೆ. ಹೊಸದೊಂದು ಭಾವ ಲೋಕಕ್ಕೆ ನಿಮ್ಮನ್ನು ಹೊತ್ತೊಯ್ಯುತ್ತದೆ.

೪. Selfie ವಿಥ್ ಲೈಫ್ (ವ್ಯಕ್ತಿತ್ವ ವಿಕಸನ ಲೇಖನಮಾಲೆ) – ವಿಶ್ವೇಶ್ವರ ಭಟ್

ಎಲ್ಲೂ ಬೋರಾಗದಂತೆ ಲೇಖನ ಬರೆಯುವುದರಲ್ಲಿ ವಿಶ್ವೇಶ್ವರ ಭಟ್ ಬತ್ತದ ತೆನೆ. ಈ ಲೇಖನಮಾಲೆಯಲ್ಲೂ ಬದುಕು ತಿದ್ದಿಕೊಳ್ಳಬೇಕನ್ನಿಸುವ ಬಹಳಷ್ಟು ವಿಚಾರಧಾರೆಯಿದೆ. ಮಧ್ಯೆ ಮಧ್ಯೆ ಜೋಕುಗಳು, ನೋಟ್ ಮಾಡಿಕೊಳ್ಳಬೇಕು ಅನ್ನಿಸುವಂಥ ಕೆಲ ಪಾಯಿಂಟ್ಸ್ ಗಳು ಹೀಗೆ ಓದಿಸಿಕೊಳ್ಳುತ್ತಾ ಹೋಗುವುದರ ಜೊತೆಗೆ ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕು ಅನ್ನಿಸುವ ಸೆಲ್ಫ್ ಹೆಲ್ಪ್ ಪುಸ್ತಕ (ಅಥವಾ ಸೆಲ್ಫೀ ಪುಸ್ತಕ?) ಇದು.

೫. ಜಯಂತ ಕಾಯ್ಕಿಣಿಯವರ ಕಥನಾವರಣ – ಡಾ ಮಮತಾ ರಾವ್

ಕಾಯ್ಕಿಣಿ ಕಥಾಜಗತ್ತು ಎಲ್ಲರಿಗೂ ಗೊತ್ತಿರುವಂತೆ ಅನನ್ಯ ಮತ್ತು ವಿಶಿಷ್ಟ. ಸಂಬಂಧದೊಳಗಿನ ಸಂಕೀರ್ಣತೆಯನ್ನು ಅವರದ್ದೇ ಆದ ಆಪ್ತ ಶೈಲಿಯಲ್ಲಿ, ಅಪರೂಪದ ರೂಪಕಗಳ ಮೂಲಕ ನಮಗೆ ದಾಟಿಸುವ ಅವರ ಕಥಾನಕ ಅದ್ಭುತವಾದ್ದು. ಅವರ ಕಥನಾ ಲೋಕವನ್ನು ಪರಿಚಯಿಸುವ ಆಸಕ್ತಿಕರ ವಿಷಯವನ್ನು ಈ ಪುಸ್ತಕ ಪ್ರತಿನಿಧಿಸುತ್ತದೆ. ಮುಂಬೈಯ ಕಥೆಗಳು, ಗೋಕರ್ಣದ ಹಿನ್ನೆಲೆಯಿರುವ ಕಥೆಗಳು ಮತ್ತು ಕಾಯ್ಕಿಣಿಯವರೊಡಗಿನ ಸಂವಾದ -ಇಂಥ ವಿಷಯ ಇರುವ ಈ ಪುಸ್ತಕ ತುಂಬಾ ಇಷ್ಟವಾಯಿತು.

೬. ಸರಸ (ಲಲಿತ ಪ್ರಬಂಧಗಳ ಸಂಕಲನ)- ಈಶ್ವರಯ್ಯ

ತರಂಗದಲ್ಲಿ ಲೇಖನಮಾಲೆಯಾಗಿ ಬರುತ್ತಿದ್ದ ಸಮಯದಲ್ಲೇ ನನ್ನ ತಂದೆಯವರಿಗೆ ತುಂಬಾ ಇಷ್ಟವಾಗಿದ್ದ ಬರಹಗುಚ್ಚವಿದು. ಅಪ್ಪ ಇದರ ಕುರಿತು ಮಾತನಾಡುತ್ತಿದ್ದು ಈಗಲೂ ನೆನಪಿನ ಪದರದಲ್ಲಿ ಅಚ್ಚಳಿಯದೇ ಉಳಿದಿದೆ. ತುಂಬಾ ಲೈಟ್ ಆಗಿ ಓದಬೇಕಾದ ಖುಷಿಕೊಡುವ ಪುಟ್ಟ ಪುಟ್ಟ ಲೇಖನಗಳಿಂದ ಈ ಪುಸ್ತಕ ಕೂಡಿದೆ.

೭. ರಸವಾದಿ (ಅಲ್ಕೆಮಿಸ್ಟ್ ಪುಸ್ತಕದ ಅನುವಾದ) – ಅಬ್ದುಲ್ ರಹೀಮ್ ಟೀಕೆ

ಆಲ್ಕೆಮಿಸ್ಟ್ ಮೂಲ ಪುಸ್ತಕವನ್ನು ಓದದೇ ಸೀದಾ ಕನ್ನಡ ಅನುವಾದವಾದ ರಸವಾದಿ ಓದಿದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನಪ್ರಿಯವಾದ, ತುಂಬಾ ಜನರ ಬದುಕಿನ ಪ್ರೀತಿಯನ್ನು ನಾವೀನ್ಯಗೊಳಿಸಿದ ಇತಿಹಾಸವಿರುವ ಈ ಪುಸ್ತಕದ ಬಗ್ಗೆ ಇನ್ನೇನು ಹೇಳಲಾದೀತು.

೮. ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ (ಕಾದಂಬರಿ) – ನಾ. ಡಿಸೋಜಾ

೨೦೦೮ ಕ್ಕೆ ನನ್ನ ಮೊದಲ ವಿದೇಶ ಪಯಣಕ್ಕೆ ಗೆಳೆಯನೊಬ್ಬ ನೀಡಿದ್ದ ಉಡುಗೊರೆಯಾಗಿದ್ದ ಈ ಪುಸ್ತಕ ನನ್ನ ಲೈಬ್ರೆರಿಯಲ್ಲಿ ಒಂದು ಸುಂದರ ಓದಿಗಾಗಿ ಕಾಯುತ್ತಾ ಕುಳಿತಿತ್ತು. ಬರೋಬ್ಬರಿ ೮ ವರ್ಷದ ನಂತರ ಕೈಗೆತ್ತಿಕೊಂಡು ಓದಿ ಮುಗಿಸಿದಾಗ, ಛೇ, ಮೊದಲೇ ಓದಬೇಕಾಗಿತ್ತಲ್ಲ ಅನ್ನಿಸಿಬಿಟ್ಟಿತ್ತು.

img_20170212_135900

೯. ನನ್ನಿಷ್ಟ – ರಾಮ್ ಗೋಪಾಲ್ ವರ್ಮಾ (ಕನ್ನಡಕ್ಕೆ : ಸೃಜನ್)

ರಾಮ್ ಗೋಪಾಲ್ ವರ್ಮಾ ಬ್ಲಾಗ್ ಓದುತ್ತಾ ಅವರ ಬರಹದ್ದೂ, ಚಿಂತನಾ ವಿಧಾನದ್ದೂ ಅಭಿಮಾನಿಯಾಗಿದ್ದ ನನಗೆ ಈ ಪುಸ್ತಕ ಕನ್ನಡಕ್ಕೆ ಬಂದಿದ್ದು ತುಂಬಾ ಸಂತಸ ಕೊಟ್ಟಿತ್ತು. ಒಂದೇ ಸಿಟ್ಟಿಂಗ್ ನಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ್ದೂ ಆಗಿತ್ತು. ಇನ್ನೊಂದು ಸಲ ಓದಬೇಕೆಂದರೂ ಬೇಸರ ಮೂಡಿಸದು.

img_20170212_135841

೧೦. Eat that Frog – Brian Tracy

ಸಮಯ ಬೆರಳ ನಡುವಿನ ಮರಳಿನಂತೆ ಜಾರಿಹೋಗಬಾರದೆಂದರೆ, ನಾವು ಅಂದುಕೊಂಡ ಕೆಲಸವನ್ನು ಅಂದುಕೊಂಡ ಸಮಯಕ್ಕೆ ಮುಗಿಸಬೇಕೆಂದರೆ ಏನು ಮಾಡಬೇಕು ಅನ್ನುವ ಸರಳ ತಂತ್ರಗಳನ್ನು ಈ ಪುಸ್ತಕ ಕಲಿಸಿಕೊಟ್ಟಿತು. ತುಂಬ ಹಳೆಯ ಪುಸ್ತಕವಾದರೂ ನನ್ನ ಮರು ಓದಿಗೆ ದಕ್ಕಿದ್ದು, ವಿಚಾರ ಒಳಗಿಳಿದದ್ದು ಕಳೆದ ವರ್ಷವೇ.

ಇತ್ತೀಚೆಗೆ ಓದಿದ ಪುಸ್ತಕಗಳಲ್ಲಿ ನನ್ನನ್ನು ತುಂಬಾ ಬದಲಾಯಿಸಿದ ಪುಸ್ತಕದ ಕುರಿತು ಹೇಳಬೇಕನ್ನಿಸುತ್ತಿದೆ. ರುಜುತಾ ದಿವೇಕರ್ ಬರೆದಿರುವ ಡೋಂಟ್ ಲೂಸ್ ಯುವರ್ ಮೈಂಡ್, ಲೂಸ್ ಯುವರ್ ವೆಯ್ಟ್ – ಅನ್ನುವುದು ಆ ಪುಸ್ತಕದ ಹೆಸರು. ಕಮರ್ಷಿಯಲ್ ದೃಷ್ಟಿಯಿಂದ ಪುಸ್ತಕದ ಶೀರ್ಷಿಕೆ ತೂಕ ಇಳಿಸುವ ಬಗ್ಗೆ ಇದ್ದರೂ, ಪುಸ್ತಕದ ಒಳಗೆ ಆರೋಗ್ಯಕರವಾದ ಬದುಕನ್ನು ಕಟ್ಟಿಕೊಳ್ಳುವ ವಿಚಾರವನ್ನು ಬಹಳ ಸರಳವಾಗಿ, ತರ್ಕಬದ್ಧವಾಗಿ ಮಂಡಿಸುತ್ತಾರೆ ರುಜುತಾ. ಕರೀನಾ ಕಪೂರ್ ಗೆ ಡಯಟಿಷಿಯನ್ ಆಗಿ, ಆಕೆಯ ಜೀರೋ ಸೈಜ್ ಗೆ ಕಾರಣೀಭೂತರಾಗಿದ್ದುದರಿಂದ ಒಮ್ಮಿಂದೊಮ್ಮಲೆ ಪ್ರಸಿದ್ಧಿ ದೊರಕಿದರೂ, ಆಕೆಯ ಥಿಯರಿಗಳು ತುಂಬಾ ಸುಲಭ ಸಾಧ್ಯವಾದುದು. ಎಲ್ಲ ವರ್ಗದ ಜನರೂ ಆರಾಮಾಗಿ ಪಾಲಿಸಬಲ್ಲಂಥದ್ದು.

ಪುಸ್ತಕ ಓದಿ ಅಂತ ಹೇಳುತ್ತಲೇ ಆಕೆಯ ಕೆಲ ಮುಖ್ಯ ಥಿಯರಿಯನ್ನು ಇಲ್ಲಿ ಪಟ್ಟಿ ಮಾಡುತ್ತಿದ್ದೇನೆ. ಇನ್ನಷ್ಟು ವಿವರಗಳಿಗೆ ಕಾಪಿ ರೈಟ್ ಸಮಸ್ಯೆಯ ಕಾರಣ ನೀವು ಪುಸ್ತಕದ ಮೊರೆ ಹೋಗಬೇಕಾಗುತ್ತದೆ.

don-t-lose-your-mind-lose-your-weight-400x400-imadaryhavfhdnfv

೧. ಬೆಳಿಗ್ಗೆ ಎದ್ದ ಹತ್ತು ಹದಿನೈದು ನಿಮಿಷದಲ್ಲಿ ಹಣ್ಣು, ಡ್ರೈ ಫ್ರೂಟ್ಸ್ ಇಂತದ್ದೇನಾದರೂ ತಿನ್ನಬೇಕು. ಎದ್ದ ಕೂಡಲೇ ಕಾಫಿ ಮತ್ತು ಟೀ ಮಾತ್ರ ಯಾವ ಕಾರಣಕ್ಕೂ ಸಲ್ಲದು. ಕಾಫಿ ಇಲ್ಲದೇ ಬಾಳಲಾಗದವರು, ಎರಡನೇ ಉಪಹಾರದ ನಂತರ ಕಾಫಿ ಸೇವಿಸಬಹುದು.
೨. ದಿನವಿಡೀ ೨ ಅಥವಾ ಮೂರು ಘಂಟೆಗೊಮ್ಮೆ ಸ್ವಲ್ಪ ಆಹಾರ ಸೇವಿಸಬೇಕು. ಅಂದರೆ ಬೆಳಿಗ್ಗೆ ಉಪಹಾರಕ್ಕೆ ಏನು ತಿನ್ನುತ್ತೀರೋ ಅದರ ಅರ್ಧದಷ್ಟನ್ನು ಎರಡು ಬಾರಿ ಎರಡು ಗಂಟೆ ಗ್ಯಾಪ್ ನಲ್ಲಿ ತಿನ್ನುವುದು. ದಿನವಿಡೀ ಕಡಿಮೆ ಆಹಾರವನ್ನು, ಸಮಯದ ಗ್ಯಾಪ್ ಇಟ್ಟು, ಹೆಚ್ಚು ಬಾರಿ ಸೇವಿಸಬೇಕು.
೩. ದಿನದಲ್ಲಿ ನೀವು ಹೆಚ್ಚು ಆಕ್ಟಿವ್ ಆಗಿರುವಂಥ ಸಮಯದಲ್ಲಿ ಹೆಚ್ಚು ತಿನ್ನುವುದು, ಕಡಿಮೆ ಆಕ್ಟಿವಿಟಿ ಇರುವಾಗ ಕಮ್ಮಿ ತಿನ್ನುವುದು.
೪. ರಾತ್ರಿ ಮಲಗುವ ಎರಡು ಅಥವಾ ಮೂರು ಗಂಟೆ ಮುಂಚಿತವಾಗಿ ರಾತ್ರಿಯೂಟವನ್ನು ಮಾಡುವುದು.

ಇಷ್ಟೇ ಸಿಂಪಲ್ ಆದ ಪಾಯಿಂಟ್ಸ್ ಗಳು ಈ ಪುಸ್ತಕದ ಜೀವಾಳ. ಇದನ್ನು ಯಾಕೆ ಮಾಡಬೇಕು, ಮಾಡುವುದರಿಂದ ಪ್ರಯೋಜನವೇನು ಎಂಬುದನ್ನು ರುಜುತಾ ವಿವರಿಸಿದ್ದಾರೆ. ಜೊತೆಗೆ ಎಂಥೆಂಥ ಆಹಾರವನ್ನು ಸೇವಿಸಬಹುದು, ಸೇವಿಸಬಾರದು ಎಂಬದರ ಬಗ್ಗೆ ಕೂಲಂಕಷ ವಿವರಣೆ ಸಿಗುತ್ತದೆ. ಆಹಾರದ ಜೊತೆಗೆ ವಾರಕ್ಕೆ ಕಡಿಮೆ ಅಂದರೆ ಮೂರು ಗಂಟೆಗಳ ಕಾಲ ವ್ಯಾಯಾಮ ಅಗತ್ಯ. ಇದಕ್ಕೆ ಮಾತ್ರ ಯಾವ ಶಾರ್ಟ್ ಕಟ್ ಇಲ್ಲ ಅಂತ ಖಡಾಖಂಡಿತವಾಗಿ ಹೇಳುವ ರುಜುತಾರ ಮತ್ತೊಂದು ಪುಸ್ತಕ ವ್ಯಾಯಾಮದ ಬಗ್ಗೆಯೇ ಇದೆ.

*****

ಮೊನ್ನೆ ಸುಚಿತ್ರಾ ಫಿಲಂ ಸೊಸೈಟಿ ಅಂಗಳದಲ್ಲಿ ಯೋಗರಾಜ್ ಭಟ್ ರ ಜೊತೆ ಸಂವಾದವಿತ್ತು. ಈ ಸಂವಾದಕ್ಕೂ ಮೊದಲು ಅವರ ಉಢಾಫೆ ಪ್ರವೃತ್ತಿಯಿಂದಾಗಿ ಅವರ ಬಗ್ಗೆಯೇ ನನ್ನೊಳಗೆ ಒಂದು ಉಢಾಫೆ ಮನೆಮಾಡಿತ್ತು. ಅವರ ಆ ಎರಡು ಗಂಟೆಯ ಸಂವಾದದ ಬಳಿಕ ಅವರ ಬಗ್ಗೆ ಇದ್ದ ಪೂರ್ವಗ್ರಹ ಹೊರಟು ಹೋಯಿತು. ಯೋಗರಾಜ್ ಭಟ್ ಯಾವುದೇ ಪ್ಲಾನ್ ಇಟ್ಟುಕೊಂಡು ಮಾತಾಡುವುದಿಲ್ಲ. ಆ ಕ್ಷಣ ಅನ್ನಿಸಿದ್ದನ್ನು, ಒಂಚೂರು ತನ್ನ ಮೇಲೆ ತಾನೇ ವ್ಯಂಗ್ಯವಿಟ್ಟುಕೊಂಡು, ತೆಳು ಹಾಸ್ಯದ ಲೇಪದ ಮೂಲಕ ನಿಶ್ಕಲ್ಮಷವಾಗಿ ಹೇಳಿಬಿಡುತ್ತಾರೆ. ಇನ್ನೊಂದು ಅರಿವಾದ ವಿಚಾರವೆಂದರೆ ಅವರ ಓದಿನ ಹರವು ವಿಸ್ತಾರವಾಗಿದೆ. ಬಹುಶಃ ಇದುವರೆಗೂ ಚಿತ್ರರಂಗದಲ್ಲಿ ಗಟ್ಟಿಯಾಗಿ ತಮ್ಮ ಛಾಪನ್ನು ಉಳಿಸಿಕೊಳ್ಳಲು ಅವರ ಸಾಹಿತ್ಯಾಭಿರುಚಿಯೇ ಕಾರಣವಿರಬೇಕು. ಚಿತ್ರಗೀತೆ ಬರೆಯುವಾಗ ಎಂಥ ಎಬುಡ ತಬುಡ ಪ್ರಯೋಗಗಳ ಮಾಡಲು, ಕಾರಣ ಕನ್ನಡ ವ್ಯಾಕರಣದ ಜ್ಞಾನ, ಬೇರೆ ಬೇರೆ ಧಾಟಿಯ ಕನ್ನಡದ ಮೇಲಿನ ಹಿಡಿತ, ಸಾಹಿತ್ಯ ಬಲ್ಲ ಆತ್ಮವಿಶ್ವಾಸವೇ ಅನ್ನುವುದು ಅರಿವಾಗ್ತದೆ.

ಅವರು ಆ ದಿನ, ಈ ಮುಖ್ಯವಾದ ವಿಚಾರಗಳ ಕುರಿತು ಮಾತಾಡಿದರು (ಅವರು ಹೇಳೋ ಶೈಲಿ ಬೇರೆ, ಅದರ ಸಾರ ಮಾತ್ರ ಇಲ್ಲಿದೆ) :-
~ ಸಿನಿಮಾ ಅಂದರೆ ನನಗೆ ಯಾವಾಗಲೂ ಎರಡು ಘಟನೆಗಳು ಕಾಡುತ್ತದೆ. ಒಮ್ಮೆ ಒಂದು ಸಾಹಿತ್ಯ ಸಭೆಯಲ್ಲಿ ಲೇಖಕರೊಬ್ಬರು ಸಾಹಿತ್ಯದ ಕುರಿತು ಭೀಷಣವಾಗಿ ಭಾಷಣ ಮಾಡುತ್ತಿದ್ದರು. ಬಹುಶಃ ಭಾಷಣದ ಓಘದಲ್ಲಿ ಮೈಮರೆತು ಸಾಹಿತ್ಯವನ್ನು ಓದಿಕೊಳ್ಳದವನು ಮನುಷ್ಯನೇ ಅಲ್ಲ ಎಂದು ಬಿಟ್ಟರು. ಅಲ್ಲಿ ಕೂತಿದ್ದ ಮುದುಕನಿಗೆ ಅದು ನೋವುಂಟು ಮಾಡಿರಬೇಕು, ಸರ…ಒಂದ್ನಿಮಿಷರೀ..ಅಂದ. ಸಭೆ ಅವರತ್ತ ತಿರುಗಿತು. ಅವರು ಎದ್ದು ನಿಂತು ಅಲ್ಲಾ.. ಈ ಸಾಹಿತ್ಯ ಪಾಹಿತ್ಯ, ಕಥೀ ಪಥೀ ಓದ್ಲಿಲ್ಲಾ ಅಂದ್ರೆ ಮನುಷ್ಯಾನೇ ಅಲ್ಲ ಅಂತೀರಲ್ರೀ.. ನಾನಾಗ್ಲೀ, ನಮ್ಮಪ್ಪನಾಗ್ಲೀ, ನಮ್ಮ ದೊಡ್ಡಪ್ಪ, ನಾವು ಏಳು ಜನ ಅಣ್ಣತಮ್ಮಂದಿರಿದೀವು.. ಯಾರೂ ಇದುವರೆಗೂ ಒಂದ್ ಪೇಜೂ ಓದಿಲ್ಲ.. ನಾವ್ ಮನುಷ್ಯರು ಹೌದೋ ಅಲ್ಲೋ..? ಅಂತ ಕೇಳಿಯೇ ಬಿಟ್ಟರು.

index-yograj
ಇನ್ನೊಂದು ನಾಗತಿಹಳ್ಳಿಯವರ ಸಿನಿಮಾ ಕ್ಲಾಸ್ ನಲ್ಲಿ ನಡೆದದ್ದು -ಅದರ ಸಾರಾಂಶ ಎಂದರೆ, ಸಿನಿಮಾ ಎಂದರೇನು ಅನ್ನೊ ಪ್ರಶ್ನೆ ಬಂದಾಗ, ಭಟ್ಟರು ಹೇಳಿದ್ದು ಸಿನಿಮಾ ಅನ್ನುವುದು ಕೆಲಸವಿಲ್ಲದವರು ಮಾಡುವ ಕೆಲಸ ಅಂತ. ಕೊನೆಗೆ ಅದನ್ನು ವಿವರಿಸಲೇಬೇಕಾಗಿ ಬಂದಾಗ, “ನೀವು ಸಿನಿಮಾ ನೋಡಲು ಹೋಗಬೇಕಾಗಿ ಬಂದಾಗ, ಎಕ್ಸಾಮ್ ಇದ್ರೆ ಹೋಗಲ್ಲ, ಆಫೀಸಿನಲ್ಲಿ ಏನಾದ್ರೂ ಇಂಪಾರ್ಟೆಂಟ್ ಕೆಲ್ಸ ಇದ್ರೆ ಹೋಗಲ್ಲ, ಹತ್ತಿರದವರ್ಯಾದರೂ ತೀರ್ಕೊಂಡಿದ್ದಾಗ ಹೋಗಲ್ಲ, ಹೀಗೆ ಐದಾರು ಘಂಟೆ ಫ್ರೀ ಇದ್ದಾಗ ಮಾತ್ರ ಸಿನಿಮಾ ನೋಡೋದು ಅನ್ನೋದು ನಡೆಯುತ್ತೆ. ಹೀಗಿದ್ದಾಗ ಸಿನಿಮಾ ಅನ್ನೋದು ಕೆಲಸವಿಲ್ಲದವರು ನೋಡುವ, ಮತ್ತಷ್ಟು ಕೆಲಸ ಇಲ್ಲದವನೇ ಮಾಡೋ ಕೆಲಸ ಅನ್ನುವುದನ್ನು ಹಾಸ್ಯವಾಗಿ, ವಿಡಂಬನೆಯಿಂದ ತನ್ನನ್ನು ತಾನೇ ಗೇಲಿ ಮಾಡಿಕೋತಾ ವಿವರಿಸಿದ್ರು.
~ ಯಾವ ಯಾವ ಭಾಷೆಯಲ್ಲಿ ಸಾಹಿತ್ಯ ಸಮೃದ್ಧವಾಗಿದೆಯೋ ಅಲ್ಲಿ ಚಿತ್ರರಂಗ ತುಂಬಾ ದುರ್ಬಲವಾಗಿರುತ್ತದೆ (ಕಮರ್ಷಿಯಲ್ಲೀ). ಇದಕ್ಕೆ ಕನ್ನಡ, ಬೆಂಗಾಳೀ, ರಾಜಸ್ಥಾನೀ ಭಾಷೆಗಳು ಉದಾಹರಣೆ.
~ ಕನ್ನಡ ಚಿತ್ರಗಳನ್ನು ನೋಡುವವರು ಬಹುತೇಕ ಹದಿನಾರರಿಂದ ಇಪ್ಪತ್ತೈದು ವಯಸ್ಸಿನವರು. ಅವರು ಮೊದಲು ನೋಡಿ, ಅವರಿಗಿಷ್ಟ ಆದರೆ ಮಾತ್ರ ಅವರ ಅಪ್ಪ ಅಮ್ಮ, ಅಂಕಲ್ ಆಂಟಿ, ಅಕ್ಕ ಭಾವ ನೋಡೋಕೆ ಬರ್ತಾರೆ. ಹಾಗಾಗಿ ನನ್ನ ಸಿನಿಮಾ ಅವರನ್ನು ಓಲೈಸುವ ಹಾಗಿರುತ್ತದೆ. ಅದು ಈಗಿನ ಮಾರುಕಟ್ಟೆಯ ಅವಶ್ಯಕತೆ ಕೂಡ.
~ ಎಲ್ಲರೂ ಒಳ್ಳೆ ಸಿನಿಮಾ ಮಾಡಿ, ಒಳ್ಳೇ ಕಥೆ ಬರೀರಿ ಅಂತಾರೆ. ಮಾಡಿದರೆ ನೋಡಲ್ಲ. ಬರೆದರೆ ಓದಲ್ಲ.

~ ನಾನು ಕಥೆಯನ್ನು ಪಾತ್ರಗಳ ಮೂಲಕ ಹೇಳಲು ಬಯಸ್ತೇನೆ. ನಂಗೆ ಸಿನಿಮಾ ಮಾಡಲು ಒಂದೊಳ್ಳೆ ಪಾತ್ರ ಸಿಕ್ಕರೆ ಸಾಕು. ಇದು ತಪ್ಪು ಅಂತ ಗೊತ್ತು. ಇಲ್ಲಿ ಸಿನಿಮಾ ಮಾಡಬಯಸುವ ನಿರ್ದೇಶಕರಿಗೆ ಹೇಳೋದು ಒಳ್ಳೆ ಕಥೆ ಇಟ್ಕೊಂಡು ಸಿನಿಮಾ ಮಾಡಿ.

ಇನ್ನಷ್ಟು ಒಳ್ಳೆಯ ಸಂವಾದ ಅಲ್ಲಿ ನಡೆಯಿತು. ಮೆದುಳಿಗೆ ಒಳ್ಳೆ ಮೇವು ದೊರಕಿಂದಂತೆ ಸಂತೃಪ್ತಿಯಿಂದ ಹೊರಬಂದೆ.

ಅವಧಿ, ಓದುಗರ ಬಳಿ ಕಳೆದ ವರ್ಷ ಓದಿದ ಬೆಸ್ಟ್ ಪುಸ್ತಕಗಳ ಟಾಪ್ ಟೆನ್ ಪಟ್ಟಿ ಕೇಳ್ತಿದೆ. ಅದನ್ನು ನೋಡಿದಾಗ ನನಗೂ ಪಟ್ಟಿ ಮಾಡಬೇಕನ್ನಿಸಿತು. ಕಳೆದ ವರ್ಷ ಓದಿದ ತುಂಬಾ ಕಾಡಿದ ಪುಸ್ತಕಗಳ ಪಟ್ಟಿ ಇದು:-

೧. ಚಾರ್ಮಿನಾರ್ – ಜಯಂತ್ ಕಾಯ್ಕಿಣಿ

೨. The Professional – Subrato Bagchi

೩. ಹಲಗೆ ಬಳಪ – ಜೋಗಿ

tAzaELrA

೪. ಟೆಂಟ್ ಸಿನಿಮಾ – ಬೀಚಿ

೫. ಆಕಾಶಕ್ಕೊಂದು ಕಂದೀಲು! – ವ್ಯಾಸರಾಯ ಬಲ್ಲಾಳ

೬. ಅನುದಿನದ ಅಂತರಗಂಗೆ – ಪ್ರತಿಭಾ ನಂದಕುಮಾರ್

cDuUwUF6

೭. ಬಾಳ್ವೆಯೇ ಬೆಳಕು – ಡಾ. ಶಿವರಾಮ ಕಾರಂತ

೭. ಕಲ್ಲು ಕರಗುವ ಸಮಯ – ಪಿ.ಲಂಕೇಶ್

೮. The Winning Way – Harsha Bhogle

೯. What Young India Wants – Chethan Bhagat

ChetanBhagatWhatYoungIndiaWantsEDIT

೧೦. ಎದೆಗಾರಿಕೆ – ಅಗ್ನಿ ಶ್ರೀಧರ್