ನೀನು ನಡೆದಾಡೋ ಬೆಳದಿಂಗಳು…
ಪದಗಳೇ ಸಾಲದು ನಿನ್ನ ಕೊಂಡಾಡಲು..

ಜೈಲಿಗೆ ಹಾಕಬೇಕು ನನ್ನನೂ ಚಂದ್ರನನ್ನೂ

ಅವನನ್ನು – ನಿನ್ನ ಕಂಗಳ ಬೆಳಕ ಕದ್ದ ತಪ್ಪಿಗೆ
ನನ್ನನು – ನಿನ್ನ ಲಜ್ಜೆಯಿಂದ ಈ ಕವಿತೆಯ ಬಸಿದ ತಪ್ಪಿಗೆ!

ನಿಂಗೆ ಬೇಸರ ಆದಾಗ..
ಬದುಕು ನಿಸ್ಸಾರ ಅನಿಸಿದಾಗ..
ಸಹಿಸಲಾಗದ ದುಃಖ ಆವರಿಸಿದಾಗ…

ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡು..
ಅಲ್ಲಿ ನಿಂಗೊಬ್ಬಳು ರಾಜಕುಮಾರಿ ಕಾಣಿಸುತ್ತಾಳೆ!

ನನ್ನ ದಿಂಬಿಗೆ ನಿನ್ನದೇ ಹೆಸರಿಟ್ಟಿರುವೆ..
ಚಳಿಯನು ಕಿಟಕಿಯಾಚೆ ಅಟ್ಟಿರುವೆ..
ಸ್ವಪ್ನದಲಿ ದಾರಿಯೊಂದ ಮಾಡಿರುವೆ…
ನೀ ಅಲ್ಲಿ ಹಾದುಹೋಗುವಾಗ
ಕದ್ದು ನೋಡಲೆಂದೇ ಕಾದಿರುವೆ…

ಬದುಕು ಕಾಲಿನ ರೀತಿ.
ಕನಸು ಕಣ್ಣಿನ ತರಹ.

ಕಣ್ಣು ಕ್ಷಣಕಾಲದಲ್ಲಿ ಮೈಲಿ ದೂರ ಸಾಗುತ್ತದೆ.

ಕಾಲಿಗೆ ಕ್ಷಣದಲ್ಲಿ ಒಂದು ಹೆಜ್ಜೆ ಇಡುವ ಅವಕಾಶ ಮಾತ್ರ.

capture

ಅಂಗಾಲಿಟ್ಟು ಎದೆಯ ಮೆಲೆ ನೀ ಕೊಟ್ಟು
ಹೋದ ಬಹುಮಾನ ಈ ವಿದಾಯ /
ಈಗಂತೂ ಎದೆಯ ಒಳಗೆ ಸದಾ ಹಸಿ
ಹಸಿರು ಗಾಯ//

ಕನಸ ಗೋಪುರದ ತುತ್ತ ತುದಿಯೇ
ನೋವಿನ ಕಳಶ /
ಇಂಥ ಅಪೂರ್ಣ ಕವಿತೆಯ ಕೊನೆಯ
ಸಾಲುಗಳೇ ನೀನು ಬಹುಶಃ//

ಹೃದಯವ ಒದ್ದೇ ಹೊರಹೋಗಿದ್ದಳು
ಕೊಟ್ಟ ಕಾರಣಗಳ ಹೊರೆ ತಾಳಲಾಗದೇ
ಒದ್ದಾಡಿದ್ದು ಖರೆಯೇ.
ಆ ದುಃಖದ ಪ್ರಮಾಣವನ್ನು ದಿಂಬಿನ ಬಳಿ ಕೇಳಬಹುದು

ಭಾವನೆಗಳನ್ನಿಟ್ಟು ಆಡಿದ್ದು ಹೌದಾದರೂ
ನನ್ನ ಪುಣ್ಯ, ನೆನಪುಗಳ ಚೀಲ ಕದ್ದು

ಓಡಲಿಲ್ಲ ಆಕೆ

ಈಗ ನೆನಪುಗಳ ಜೋಳಿಗೆಯಿಂದ
ಸ್ವಾನುಕಂಪದ ಅಮೃತ ಬಸಿದು ಕುಡಿದು
ಜೀವಂತವಿದ್ದೇನೆ.

ನಿನ್ನುಸಿರಿನ ಪಿಸುಮಾತು
ನನ್ನೊಳಗೆ ಪ್ರತಿಧ್ವನಿ

ನಿನ್ನ ತುಸುಸ್ಪರ್ಶ
ಮೈತುಂಬ ಇಬ್ಬನಿ

ನಿನ್ನ ಅಂಗಾಲಿನ ಹೆಜ್ಜೆ ಗುರುತು
ಅಕ್ಷಯವಾಗಿ
ಅಕ್ಷರವಾಗಿ
ಎದೆಯೊಳಗೆ ಕವಿತೆಯಾಗಿದೆ

ದಯವಿಟ್ಟು ನನ್ನನ್ನು

ಅದ್ಭುತ ಕಾದಂಬರಿಯಾಗಿ ಕಾಡು..
ಒಳ್ಳೆಯ ಸಿನೆಮಾ ಆಗಿ ಆವರಿಸು..
ಚಂದದ ಕಥೆಯೊಳಗಿನ ಗುಂಗಾಗಿ ಆವಹಿಸು..
ಇದು ಕಚಗುಳಿ…ಒಂದು ಹನಿಗವಿತೆಯಾಗಿ..
ಲಾಲಿತ್ಯದ ಪ್ರಬಂಧ ಆಗಿ ನೇವರಿಸು..

ಕೊನೆ ಪಕ್ಷ ಗಾಢ
ಕವಿತೆಯಾಗಿ ಆದರೂ ಸಂತೈಸು..

ಪ್ರೀತಿ ಎಂದರೇನು ಅನ್ನುವುದು ತುಂಬಾ ಕ್ಲೀಷೆ ಪ್ರಶ್ನೆ.

ಹಲವಾರು ಬರಹಗಾರರು ತಮ್ಮ ತಮ್ಮ ಅನುಭವಕ್ಕನುಗುಣವಾಗಿ ಪ್ರೀತಿಯ ವ್ಯಾಖ್ಯೆಯನ್ನು ನೀಡಿದ್ದಾರೆ. ಎರಡು ಹೃದಯಗಳ ಮಿಲನ, ಎರಡು ಜೀವ ಒಂದೇ ಮನಸ್ಸು ಎಂಬುದೆಲ್ಲಾ ಪುಸ್ತಕದ ಬದನೆಕಾಯಾಯಿತು. ಸ್ಟೀಫನ್ ಕೋವೆಯಂಥ ಲೇಖಕ ಪ್ರೀತಿ ಅಂದರೆ ಕೊಡುವುದು ಅಂತ ಅಂದಿದ್ದಾನೆ. ಅವನ ಪ್ರಕಾರ ಪ್ರೀತಿ ಅನ್ನುವುದು ವರ್ಬ್. ಅಂದರೆ ಅದೊಂದು ಭಾವ ಅಲ್ಲ, ನಿರಪೇಕ್ಷೆಯಿಂದ ನೀಡುವುದು.

ತಾಯಿಯೊಬ್ಬಳು – ಪ್ರೀತಿಗೆ ಜೀವಂತ ಭಾಷ್ಯ ಬರೆಯುತ್ತಾಳೆ. ಅನ್ ಕಂಡೀಷನ್ಡ್ ಪ್ರೀತಿ ನೀಡಿ, ನಾನು ನಿನ್ನ ಪ್ರೀತಿಸುತ್ತೀನಿ ಅಂತ ಒಂದು ಮಾತೂ ಆಡದೇ ಪ್ರೀತಿಯನ್ನು ಬದುಕಿ ತೋರಿಸುತ್ತಾಳೆ. ಕೊನೆವರೆಗೂ ಕಾಳಜಿ ವಹಿಸುತ್ತಾಳೆ. ತನಗೆ ಕೂಡದ ವಯಸ್ಸಿನಲ್ಲೂ ಮಕ್ಕಳ ಕುರಿತ ಕಳಕಳಿ ಪ್ರತಿದಿನ ಇಟ್ಟುಕೊಂಡಿರುತ್ತಾಳೆ.

ಇಷ್ಟಕ್ಕೂ ನಿಜವಾಗಿ – ನಿಜವಾದ ಪ್ರೀತಿ ಅಂದರೇನು?

ನನ್ನ ಪ್ರಕಾರ – ಪ್ರೀತಿ ಅಂದರೆ ಒಂದು ಉತ್ಕಟವಾದ ಭಾವ. ಅದಕ್ಕೆ ಸಾಲಿನ, ಮಾತಿನ ಮಹಿಮೆ ಬೇಕಿಲ್ಲ. ಒಬ್ಬರನ್ನು ಪ್ರೀತಿಸುತ್ತೇನೆ ಅಂದರೆ ಅವರು ಸದಾ ಖುಷಿಯಾಗಿರಲಿ ಅಂತ ಬಯಸುತ್ತೇನೆ ಮತ್ತು ಆ ನಿಟ್ಟಿನಲ್ಲಿ ನನ್ನ ಸಾಮರ್ಥ್ಯ ಮೀರಿ ನಿಲ್ಲುತ್ತೇನೆ ಅಂತರ್ಥ. ಮತ್ತು ಅವರ ಖುಷಿಗೆ ತಾನು ಏನನ್ನಾದರೂ ಮಾಡಲು ಸಿದ್ಧ ಅನ್ನುವ ಭಾವ. ಕಷ್ಟ ಬಂದಾಗ ಹೆಗಲಾಗಿ ನಿಲ್ಲುವ ಆಶಯ. ಹಾಗಂಥ ಕಟ್ಟಿಹಾಕುವಂಥ ಬಂಧವೇನಲ್ಲ. ನೀನು ನಾನಿಲ್ಲದೆಯೂ ಖುಷಿಯಾಗಿರಬಲ್ಲೆ ಅಂತಾದರೆ- ಅದಾದರೂ ಸೈ.

ಒಟ್ಟಿನಲ್ಲಿ ನಿನ್ನ ಸಂತಸವೇ ನನ್ನ ಆಶಯ.

ನಾನು ನಿನ್ನ ಪ್ರೀತಿಸ್ತೀನಿ, ಹೇಳು ನೀ ನನಗಾಗಿ ಏನು ಮಾಡುವಿ? ನೀನೆಷ್ಟು ನನ್ನ ಪ್ರೀತಿಸ್ತೀ? ಅಂತ ಕೇಳುವುದು ಪ್ರೀತಿಯಾಗದು. ನಾನು ನಿನ್ನ ಪ್ರೀತಿಸ್ತೀನಾದ್ದರಿಂದ ನೀನೂ ನನ್ನ ಪ್ರೀತಿಸಬೇಕು ಅನ್ನುವುದು ವ್ಯವಹಾರವಾದೀತು. ಇನ್ನೊಬ್ಬ ವ್ಯಕ್ತಿಯ ಪ್ರತಿಕ್ರಿಯೆಯ ಮೇಲೆ ಅವಲಂಬಿತವಾಗಿರದ ಭಾವ. ಹಾಗಾಗಿ ಒಂದು ಸಂಬಂಧದಲ್ಲಿ ನೀನೆಷ್ಟು ನೀಡಿದೆ ಅನ್ನುವುದರ ಮೇಲೆ ನಿನ್ನ ಪ್ರೀತಿ ನಿರ್ಧಾರಿತವಾಗಿರಬೇಕೇ ವಿನಾ ಸಂಬಂಧದಲ್ಲಿ ನೀನೆಷ್ಟು ಪಡಕೊಂಡೆ, ಬಂದ ಲಾಭಕ್ಕನುಗುಣವಾದ ಲೆಕ್ಕ ಅಲ್ಲ ಅದು.

ಹೀಗೆ ವಾಪಸ್ಸು ಏನನ್ನೂ ಬಯಸದೇ, ನಿನ್ನ ದುಃಖದಲ್ಲಿ ಜತೆಯಾಗಿ, ನಿನ್ನ ಸುಖದಲ್ಲಿ ಹಿತವಾಗಿ ಮರೆಯಾಗಿ ಇರುವುದು ಉನ್ನತ ಪ್ರೇಮ.
ನೀನು ಖುಷಿಯಾಗಿರಬೇಕು ಅದಕ್ಕೆ ನಾನು ನಿನ್ನ ಜತೆಯಲ್ಲಿರಲೇಬೇಕು (ಒಟ್ಟಿನಲ್ಲಿ ನೀನೇ ಬೇಕು)- ಅನ್ನುವುದು ಮಧ್ಯಮ.

ಅಂದರೆ ನಿಜವಾದ ಪ್ರೀತಿಯಲ್ಲಿ ಜೆಲಸಿ ಬರಬಾರದು. ತಾನು ಪ್ರೀತಿಸುವ ವ್ಯಕ್ತಿ ಆನಂದದಿದ್ದರೆ ಸಾಕು ಅನ್ನುವಂಥ, ಬೇರೆಯವರ ಜೊತೆಯಾದರೂ- ಬೇರೆಲ್ಲೋ ದೂರದಲ್ಲಿ ಇದ್ದಾದರೂ- ಒಟ್ಟಿನಲ್ಲಿ ಸಂತಸವಾಗಿದ್ದರೆ ಸಾಕು ಅನ್ನುವಂಥ ಮನಸ್ಥಿತಿ ಇರಬೇಕು.

ಆದರೆ ಇದು ಕೇಳುವಷ್ಟು / ಹೇಳುವಷ್ಟು ಸುಲಭವಲ್ಲ.

ಅಂಥ ಪ್ರೀತಿ ನಿಮಗೂ ದೊರಕಿದೆಯಾದರೆ ನಿಮಗಿದೋ ಶುಭಾಶಯ. ಪ್ರಪಂಚದಲ್ಲಿ ಬಾಳುತ್ತಿರುವ ಕೋಟಿ ಕೋಟಿ ಮನುಷ್ಯರಲ್ಲಿ ನೀವೇ ಅದೃಷ್ಟವಂತರು.

ದೊಡ್ಡ ಚಿಕ್ಕ ಮುಳ್ಳಿನ
ಸತತ ತಿವಿತ ಬೆನ್ನಿಗೆ
ತಪ್ಪಿಸಿಕೊಳ್ಳುವ ಯತ್ನದಲ್ಲೇ
ಬದುಕಿನ ನಾಗಾಲೋಟ

ದಿನದ ಬ್ಯಾಸ್ಕೆಟ್ಟಿನಲ್ಲಿ
ತುರುಕುತ್ತಿದ್ದೇವೆ ಒತ್ತಿ ಒತ್ತಿ
ಬದುಕಿನ ಬಟ್ಟೆಯನು, ಉಸಿರೂ ಆಡಲಾಗದಷ್ಟು
ಒತ್ತರಿಸಿಕೊಂಡಿದೆ, ಇನ್ನೊಂದಿಷ್ಟು
ಜಾಗವಿದ್ದಿದ್ದರೆ ಮತ್ತಷ್ಟು ತುಂಬಿಸಬಹುದೇ
ಅನ್ನುವ ಚಿಂತೆ ಎಂದಿಗೂ

ಹಣ ಕೀರ್ತಿ ಆಯಸ್ಸು ಆರೋಗ್ಯ
ಎಲ್ಲಾ ಇದೆ, ಸಾಲು ಅಂಗಡಿಯಲ್ಲಿ
ಒಂದು ಬೇಕೆಂದರೆ ಇನ್ನೊಂದನ್ನು ಅಡವಿಡ
ಬೇಕು ಎನ್ನುವ ನಿಯಮವಿಟ್ಟ
ವ್ಯಾಪಾರಿ ತುಂಬಾ ಜಾಣ

ಈ ಜನಾಂಗಕ್ಕೆ ಸಮಯ ಕಮ್ಮಿ
ಯಾವುದು ಪಡೆಯಬೇಕು
ಯಾವುದು ಬಿಡಬೇಕು
ಎಂಬ ಅರಿವಾಗದ ಗೊಂದಲ
ದ ಲಗ್ಗೇಜು ಹೊತ್ತೇ
ಗೊತ್ತೇ ಇರದ, ಯಾರೂ ನಮಗಾಗಿ ಕಾಯುತ್ತಿರದ
ನಮಗೂ ಹೋಗಬೇಕೆನ್ನಿಸದ
ಕಡೆಗೆ ಅರ್ಜೆಂಟಿನ ಪಯಣ
ಅನುಪಯುಕ್ತ ಅಲೆದಾಟ
ಕಣ್ಪಟ್ಟಿ ಕಟ್ಟಿದ ಓಟ.

ಜಗತ್ತು ನನ್ನ ಕವಿಯೆಂದರೆ
ಭಯವಾಗುತ್ತದೆ..

ಇನ್ನೂ ಪದಗಳಿಗೆ ನಿನ್ನ ಬೆವರ ಘಮ ಅಂಟಿಕೊಂಡಿಲ್ಲ
ಭಾವಗಳಿಗೆ ಇನ್ನೂ ನಿನ್ನ ಕಂಗಳ ಅಮಲು ತಾಕಿಲ್ಲ
ಸಿಕ್ಕಿಲ್ಲ, ನಿನ್ನ ಮುಂಗುರುಳ ಪ್ರಾಸ
ಸಾಲುಗಳ ತುದಿಗಳಿಗೆ
ಕನಸುಗಳನ್ನು ಹುಟ್ಟಿಸುವ ನಿನ್ನ ನಡಿಗೆಯ ತಾಕತ್ತು ಬಂದಿಲ್ಲ ಇನ್ನೂ !

3004663277_d87ffedbb0.jpg

ಪ್ರೀತಿಗೆ ಕಳಂಕ ತಂದೀತೆಂಬ ಭಯವಿದ್ದರೆ
ನೀನು ಮುದ್ದು ಮಾಡುವುದು ಬೇಡ
ಅಪ್ಪಿಕೋ ಒಮ್ಮೆ ನಿನ್ನ ಕಂಗಳಲಿ
ನಿನ್ನ ಬೆವರ ನದಿ ಹರಿಯಲಿ ನನ್ನ ನರನಾಡಿಯಲಿ
ಕರಗೇ ಹೋಗಲಿ ಕನಸುಗಳು ನಿನ್ನ ತಬ್ಬುಗೆಯಲಿ

ಒಂದು ಕ್ಷಣ ಇಲ್ಲವಾಗೇ ಹೋಗುತ್ತೇನೆ ನಾನು ನಿನ್ನಲಿ..

ಬೇಕಿದ್ದರೆ ಆಗ ಒಪ್ಪಿಕೊಳ್ಳುತ್ತೇವೆ
ನನ್ನನು ಕವಿಯೆಂದರೆ!

 

ಮೈ ಡಿಯರ್ ಕುಳ್ಳೀ,

ಮೊನ್ನೆ ನೀನು ಕೈಯಲ್ಲಿ ಒಂದಿಷ್ಟು ಡ್ರಾಯಿಂಗ್ ಹಿಡಿದು ಮೆಟ್ಟಿಲು ಇಳಿದು ಬರುತ್ತಿದ್ದಾಗ ಬೇಬಿ ಡಾಲ್ ಥರ ಕಾಣಿಸಿದೆ. ಗಾಢ ನೀಲಿ ಟಾಪ್ ಮತ್ತು ಅಚ್ಚ ಬಿಳಿ ಪ್ಯಾಂಟ್ ಕಾಂಬಿನೇಷನ್ ಜತೆಗೊಂದು ಹಳದಿ ಬಣ್ಣದ ಸ್ಲಿಮ್ ಬೆಲ್ಟ್ ಹಾಕ್ಕೊಂಡು ನೀ ಮೆಟ್ಟಿಲನ್ನು ಒಂದೊಂದೇ ಹೆಜ್ಜೆ ಇಟ್ಟು ಇಳಿಯುತ್ತಿದ್ದರೆ ನನ್ನ ಬದುಕು ಪೂರ್ತಿ ಅದನ್ನೇ ನೋಡುತ್ತಾ ಕಳೆಯಬೇಕೆಂಬ ಭಾವ. ನಿನ್ನ ಚಿಟ್ಟೆ ಕ್ಲಿಪ್ಪು ಹಾರಿ ಬಂದು ನನ್ನೆದೆಯ ಮಕರಂದವನ್ನು ಹೀರಿದಂತ ಅನುಭವ. ನೀನು ನನ್ನ ಹಾದುಹೋದಾಗ ಬರುವ ಗಾಳಿಗೆ ನನ್ನ ಮನಸ್ಸಿಗೂ ತಂಪೆರೆವ ಶಕ್ತಿ. ಆ ತಂಗಾಳಿ ಒಂದಿಷ್ಟು ಹೊತ್ತು ನನ್ನನ್ನೇ ಆವರಿಸಿಕೊಂಡಂಥ ಅನುಭೂತಿ. ನಿನ್ನ ದೇಹ ಗಂಧ ನನ್ನ ಸವರಿಹೋದಾಗೆಲ್ಲಾ ಎದೆಯೊಳಗೆ ಕಪ್ಪೆಕಲ್ಲ ತರಂಗ. ನೀನು ನಡೆದ ಹಾದಿಯಲ್ಲಿ ಸುಮ್ಮನೆ ಒಮ್ಮೆ ನಾನು ನಡೆದರೂ ಒಂದೊಳ್ಳೆ ರೋಮಾಂಚನ.

love-560783_960_720

ಮರುಳಾದೆ ದಿವ್ಯ ಸಖಿ ನಿನಗೆ.. ಪ್ರಣಾಮ..
ಅಪರೂಪ ರೂಪಸಿಯೆ ನಿನಗೆ.. ಪ್ರಣಾಮ..

ನಿನ್ನನ್ನು ನೋಡಿದಾಗೆಲ್ಲಾ ನಿನ್ನನ್ನು ಒಂದು ಫ್ರೇಮ್ ಆಗಿಸಿ ಮನದಲ್ಲಿ ಸದಾ ಅಚ್ಚಾಗುವಂತೆ ಜನುಮ ಪೂರ್ತಿ ನೆನಪಿನಲ್ಲಿಡಬೇಕು ಅಂತೆಲ್ಲಾ ಅನ್ನಿಸುತ್ತೆ. ಆದರೆ ಅಷ್ಟು ಡೀಟೈಲ್ ಆಗಿ ನೋಡುವುದಕ್ಕೆ, ರೆಕಾರ್ಡ್ ಮಾಡಿಕೊಳ್ಳಲು ಒಂದು ದಿನ ಪೂರ್ತಿ ಬೇಕಾಗುತ್ತದೆ. ಕಿವಿಯ ಲೋಲಾಕ್ಕು ನೋಡುವುದರೊಳಗೆ ಮೊಗಕ್ಕೆ ನೀ ಹುಟ್ಟಿದಾಗಿನಿಂದಲೂ ಅಂಟಿಕೊಂಡಿರುವ ನಸುನಗು ಮಿಸ್ಸಾಗಬಹುದು, ಅದೇ ಕ್ಷಣದಲ್ಲಿ ನಿನ್ನ ಮುಂಗುರಳ ಲಾಲಿತ್ಯದ ದಾಖಲಾತಿ ತಪ್ಪಿಹೋದೀತು. ಜೀವದಾಳಕ್ಕೇ ಗಾಳ ಹಾಕಿ ಒಲವ ಮೀನಿಗೆ ಆಸೆ ಹುಟ್ಟಿಸುವ ನಿನ್ನ ಕುಡಿನೋಟ, ಕೆನ್ನೆಯಂಚಲ್ಲಿ ಮತ್ತಷ್ಟು ಅಂದ ಹೆಚ್ಚಿಸುತ್ತಿರುವ ಮೊಡವೆ, ಕಣ್ಣ ಬಾಣ ಬಿಡಲು ಸದಾ ಸಿದ್ಧ ಅಂತನ್ನಿತ್ತಿರುವ ಹುಬ್ಬು, ಐಸ್ ಕ್ರೀಮಿನ ತುತ್ತತುದಿಯಲ್ಲಿರುವ ಚೆರ್ರಿಯಂತೆ- ಇಂಥ ಅಂದಕ್ಕೆ ನಾನೇ ಮುಖ್ಯ ಕಾರಣ ಅಂತ ಬೀಗುತಿರುವ ಬಿಂದಿ, ಎಲ್ಲವೂ ಒಂದಕ್ಕಿಂತ ಇನ್ನೊಂದು ಅಂದ. ಇದನ್ನೆಲ್ಲಾ ಒಂದೇ ಕ್ಷಣದಲ್ಲಿ ಒಂದೇ ಫ್ರೇಮಿನಲ್ಲಿ ಹೇಗೆ ಪೇರಿಸಿಡಲು ಸಾಧ್ಯ?

ಕೇದಿಗೆ ಗರಿಯಂಥ ನಿನ್ನ ನೋಟ
ನನಗೇನೋ ಅಂದಂತೆ ಅನುಮಾನ

ಇಬ್ಬರೂ ಲಿಫ್ಟ್ ನಲ್ಲಿ ಸಿಕ್ಕಾಗಲಂತೂ ವಿಪರೀತ ಭಯ. ಎಲ್ಲಿ ನನ್ನ ಎದೆಬಡಿತ ನಿನಗೆ ಕೇಳಿಬಿಡುತ್ತದೋ ಎಂದು. ಈ ಕ್ಷಣ, ಈ ಸ್ಥಳ ಹೀಗೇ ಜನ್ಮಪೂರ್ತಿ ಇರುವಂತೆ ಯಾರಾದರೂ ಸ್ಟಾಚ್ಯೂ ಹೇಳಿಬಿಡಬಾರದಾ ಎಂಬಂಥ ಮನಸ್ಥಿತಿ. ಲಿಫ್ಟ್ ನೊಳಕ್ಕೆ ಅದೆಷ್ಟು ಜನರಿದ್ದರೂ ನಿನ್ನ ಇರುವು ನನ್ನೊಳಗೆ ಮೂಡಿಸುವ ಸಂಚಲನವನ್ನು ಅದು ಹ್ಯಾಗೆ ಪದಗಳಲ್ಲಿ ನಾ ವಿವರಿಸಲಿ? ಮೊದಲೊಮ್ಮೆ ಊಟ ಆಯ್ತಾ ಅಂತ ಕೇಳಿದ್ದರೂ ನೀನು ಉತ್ತರಿಸದೇ ಹೋಗಿದ್ದೆ. ಹಾಗಾಗಿ ಮೊದಲ ಬಾರಿಗೆ ನಿನ್ನ ಇನಿದನಿಯನ್ನು ಕೇಳಿದ್ದು ನಾ ಇದೇ ಲಿಫ್ಟ್ ನಲ್ಲವೇ? ನಿನ್ನ ಗೆಳತಿಯ ಬಳಿ ಚಪಾತಿ ತಂದಿದ್ದೀಯಾ ಅಂತೇನೋ ಕೇಳಿದ್ದ ನೆನಪು. ಕೆಲವೊಮ್ಮೆ ಅನ್ನಿಸುತ್ತದೆ, ಬಹುಷಃ ನಾನು ಹೆಚ್ಚು ನಿರೀಕ್ಷಿಸುತ್ತಿದ್ದೇನೋ ಅಂತ. ಯಾಕೆಂದರೆ ಈ ಜಗತ್ತಿನಲ್ಲಿ ಅದೆಷ್ಟು ಜನರಿದ್ದರೂ ಪ್ರತಿದಿನ ನಿನ್ನನ್ನು ನೋಡುವ, ನಿನ್ನ ನಡಿಗೆಯ ಅಂದವನ್ನು ಸವಿಯುವ ಖುಷಿ, ನಿನ್ನ ನಗುವನ್ನು ಕೇಳುವ ಸುಖ ಇದೆಲ್ಲಾ ನನಗೆ ಸಿಗುತ್ತಿರುವುದು ನನ್ನ ಅದೃಷ್ಟವೇ ಅಲ್ಲವಾ? ಇವಿಷ್ಟರಿಂದಲೇ ನನ್ನ ನೆನಪಿನ ಜೋಳಿಗೆಯನ್ನು ತುಂಬಿಸಿ ಹೊತ್ತೊಯ್ಯಲು ಸಾಲುವುದಿಲ್ಲವಾ? ಹೀಗೆಲ್ಲಾ ಅನ್ನಿಸಿ ತೃಪ್ತಿಯಾದರೂನು ಮನಸ್ಸು ತುಂಬಾ ಬಲಹೀನ. ನಿನ್ನ ಜೊತೆ ಒಮ್ಮೆಯಾದರೂ ಊಟ ಮಾಡುವ, ಒಂದೇ ಒಂದು ಸಂಜೆ ಜತೆಯಾಗಿ ಕಾಫಿ ಕುಡಿಯುವ, ಕಾಲದ ಪರಿವೇ ಇಲ್ಲದೇ ತುಂಬಾ ಮಾತಾಡುವ ಆಸೆ, ಮುದ್ದಾದ ಇಂಥ ಹಂಬಲಗಳಿಂದಲೇ ಜೀವನ ಸವೆಯುತ್ತಿದೆ. ಯಾವತ್ತೋ ಒಂದು ದಿನ ಅದು ಸಾಧ್ಯವಾಗುತ್ತದೆ ಎಂಬ ಕನಸು ಹೊತ್ತೇ ಜೀವನ ಸಾಗುತ್ತಿದೆ.

d29a4a3cfe8f43f1a21cf2ea42657e1e

ಮನಸಲಿ ಚೂರು ಜಾಗ ಬೇಕಿದೆ..
ಕೇಳಲಿ ಹೇಗೆ ತಿಳಿಯದಾಗಿದೆ..

ನಿಜಾ ಹೇಳಲಾ? ನಂಗೂ ನಿಂಗೂ ಮಧ್ಯೆ ಏನೋ ಲಿಂಕಿದೆ. ಹಳೇ ಜನ್ಮದ ಫ್ಲಾಷ್ ಬ್ಯಾಕಿದೆ. ಬೇಕಿದ್ದರೆ ನೋಡು, ನಿನ್ನ ಹಣೆಯ ಕುಂಕುಮವಿಡುವ ಭಾಗದ ಪಕ್ಕದಲ್ಲೂ ಮಚ್ಚೆಯಿದೆ, ಅದೇ ಸ್ಥಳದಲ್ಲಿ ನನಗೂ ಮಚ್ಚೆಯಿದೆ. ನಮ್ಮಿಬ್ಬರ ಕಣ್ಣ ನೋಟ ಒಂದಾದ ದಿನದಿಂದ ಜೀವ ಅದೇಕೋ ಚಡಪಡಿಸುತ್ತಿದೆ. ಇಲ್ಲದೇ ಹೋದರೆ, ನೀನು ಒಂದು ದಿನ ನೋಡೋಕೆ ಸಿಗಲಿಲ್ಲವೆಂದರೆ ನನ್ನ ಮನಸ್ಸೇಕೆ ವಿಲ ವಿಲ ಒದ್ದಾಡುತ್ತದೆ? ನಿನಗಿಂತ ಅದೆಷ್ಟು ಅಂದವತಿ ತರುಣಿಯನ್ನು ನೋಡಿದ್ದರೂ ನಾನು ನಿನ್ನತ್ತ ಯಾಕೆ ಆಕರ್ಷಿತನಾದೆ? ನಿನ್ನನ್ನು ಕಂಡಾಕ್ಷಣ ಮನಸ್ಸೇಕೆ ಗೊಂಬೆಯನ್ನು ಕಂಡ ಮಗುವಿನಂತೆ ಹಟ ಹಿಡಿಯಿತು? ಹರಿತ ಚೂರಿಯಂಥ ನಿನ್ನ ನೋಟ ಅದೇಕೆ ನನ್ನ ಎದೆಯಾಳ ಕಲಕಿತು. ನಿನ್ನ ನಗುವಿನ ಅಲೆ ನನ್ನೆದೆಗೆ ಬಡಿದಾಗ ಆಗುವ ಸಂತಸಕ್ಕೆ ಕಾರಣವೇನು? ನನಗೆ ನೀನು ಉತ್ತರಿಸದಾಗ ಅದೇಕೆ ನಾನು ತತ್ತರನಾಗುತ್ತೇನೆ? ಯಾವುದೋ ಜನ್ಮದ ಮೈತ್ರಿಯಿರದೇ ನೀನು ನನಗೊಂದು ಗುಂಗಿನಂತೆ ಹೇಗೆ ಕಾಡಬಲ್ಲೆ? ನಿನಗಷ್ಟೇ ಕೇಳುವಂತೆ ಒಲವ ಗೀತೆಯೊಂದ ಹಾಡಬೇಕು ಅಂತ್ಯಾಕೆ ಮನಸ್ಸು ಕುಣಿಯುತ್ತದೆ? ಭಕ್ತಿಯ ಲೆವೆಲ್ಲಿಗೆ ಪ್ರೀತಿ ಮುಟ್ಟೋಕೆ ಸಾಧ್ಯ ಅಂತ ಯಾಕೆ ಅನ್ನಿಸುತ್ತಿದೆ?

ನಿನ್ನಲ್ಲೆ ಜೀವವನ್ನು… ಅಡವಿಟ್ಟುಬಂದೆ ನಾನು..
ಕಣ್ಮುಚ್ಚಿಯೇ ನಾನೋದಲೇ ಪುಟವೊಂದನು… ಹರಿಯುವ ಮುನ್ನವೇ..

summer_love_wallpaper_rjtz3

ತುಂಬಾ ದಿನದಿಂದ, ಕವಿತೆ ಪೂರ್ತಿ ಮಾಡಲು ಸಿಗದ ಕೊನೆಯ ಪದದಂತೆ ನಿನ್ನದೇ ಗುಂಗು ನನ್ನ ಜೀವನವನ್ನು ವ್ಯಾಪಿಸಿದೆ. ಪ್ರತಿ ಕ್ಷಣವೂ ಈಗ ನೀನೇನು ಮಾಡುತ್ತಿದ್ದಿರಬಹುದು ಎಂಬ ಊಹೆಯ ಸವಿಯಲ್ಲೇ ಕಳೆಯುತ್ತಿದೆ. ಮರೆಯಲು ನಾ ಮಾಡಿದ ಪ್ರಯತ್ನದಲ್ಲೆಲ್ಲಾ ನನ್ನದು ಘನಘೋರ ಸೋಲಾಗಿದೆ. ಆದರೂ ಮನಸ್ಸಿಗೆ ಒಂದು ಭರವಸೆ ಉಕ್ಕಿಸಿ ಸಮಾಧಾನ ಮಾಡುತ್ತಿರುತ್ತೇನೆ. ತಿಪಟೂರಿನ ಜಾತ್ರೆಯ ಜನಜಂಗುಳಿಯಲ್ಲಿ ನಿನಗೆ ಅರಿವಿರದಂತೆ ನಿನ್ನ ಕಿರುಬೆರಳನ್ನು ಮುಟ್ಟುತ್ತೇನೆ. ಅರಳುವ ಹೂವೊಂದನ್ನು ನೋಡಿ ಖುಷಿಪಟ್ಟ ದಿನ, ಅಲ್ಲೆಲ್ಲೊ ಮರದ ಹಿಂದೆ ನಿನಗೇ ಅರಿವಿರದಂತೆ ನಿಂತು ನಾನೂ ಆನಂದ ಪಡುತ್ತೇನೆ. ನಿನ್ನ ಪಲ್ಲುವಿನ ಎಳೆಯೊಂದನ್ನು ಕದ್ದು ನನ್ನ ಪರ್ಸಿನಲ್ಲಿ ಖಾಯಂ ಆಗಿಟ್ಟುಕೊಳ್ಳುತ್ತೇನೆ. ಯಾವಾಗಲೋ ಒಮ್ಮೆ ನೀನು ನೋಡಿ ಕುತೂಹಲದಿಂದ ಕರೆ ಮಾಡುವೆ ಎಂಬ ಭರವಸೆಯಿಂದ ನಿನ್ನ ಡೈರಿಯ ಕೊನೆಯ ಪುಟಗಳಲ್ಲಿ ನನ್ನ ನಂಬರನ್ನು ಬರೆದಿಡುತ್ತೇನೆ. ತುರುವೆಕೆರೆ ತಿರುವುಗಳಲ್ಲಿ ಕೇವಲ ನಿನಗಷ್ಟೇ ಕೇಳುವಂತೆ ನಿನ್ನ ಹೆಸರನ್ನು ಕೂಗುತ್ತೇನೆ. ಮೂಲೆ ಶಂಕರೇಶ್ವರ ದೇವಸ್ಥಾನದಲ್ಲಿ ನಿನ್ನ ಹುಟ್ಟುಹಬ್ಬದ ದಿನ ನಿನ್ನ ಹೆಸರಲ್ಲಿ ಅರ್ಚನೆ ಮಾಡಿಸುತ್ತೇನೆ. ದಾಸರಿಘಟ್ಟ ಚೌಡೇಶ್ವರಿ, ಹೊನ್ನಮ್ಮನ ಬಳಿ ನಿನಗೆ ಸದಾ ಒಳ್ಳೆಯದಾಗಲಿ, ಬದುಕು ಪೂರ್ತಿ ಖುಷಿ ಇರಲಿ ಅಂತ ಹರಕೆ ಹೊತ್ತುಕೊಳ್ಳುತ್ತೇನೆ. ಇಂಥ ಸಮಾಧಾನದಿಂದಲಷ್ಟೇ ಮನಸ್ಸು, ನೀನು ನನ್ನೆಡೆ ನಗದಿದ್ದರೂ, ನನಗೆ ಉತ್ತರಿಸದಿದ್ದರೂ, ನನ್ನನ್ನು ನೆಗ್ಲೆಕ್ಟ್ ಮಾಡಿದರೂ ಸುಮ್ಮನಿದೆ. ಇಲ್ಲದೇ ಹೋಗಿದ್ದರೆ ರಚ್ಚೆ ಹಿಡಿವ ಮನಸ್ಸೆಂಬ ಮಗುವನ್ನು ಸಂತೈಸಲು ಜಗತ್ತಿನ ಎಲ್ಲಾ ಅಮ್ಮಂದಿರ ಪ್ರೀತಿಯನ್ನು ಒಟ್ಟುಹಾಕಿ ಸಂಭಾಳಿಸಬೇಕಾದೀತು!

– ನಿನ್ನ ಚಿಟ್ಟೆ ಕ್ಲಿಪ್ಪಿನ ಫ್ಯಾನ್!

ನಿಂತಿದ್ದೆ ಹಾಗೇ ನಾನು ಖಾಲಿಯಾಗಿ
ಅರ್ಥ ತೊರೆದ ಪದದಂತೆ
ನೆರಳು ತೊರೆದ ದೇಹದಂತೆ.
ಒಂದು ಕ್ಷಣದ ಹಿಂದೆ ಇರದಿದ್ದುದು
ರಪ್ಪಂಥ ಬಡಿದಿತ್ತು ವಿರಹ
ಬಿರುಗಾಳಿಯಂತೆ.

mussanje-maathu-10

ಒಮ್ಮೆ ನೀನು ತಿರುಗಿ ನನ್ನತ್ತ ನೋಡಿದ್ದರೆ ಕಾಣಸಿಗುತ್ತಿತ್ತು
ನನ್ನ ಒಡೆದ ಲೋಕ
ತುಂಬಿದ ಕಂಗಳು ಮತ್ತು ಅದರಲ್ಲಿ ಮುರಿದು ಬಿದ್ದ ಆಗಸ.
ಬದುಕು ತರಗಲೆಯೂ ಅಲುಗದ
ಸ್ತಬ್ಧ ಚಿತ್ರ.
ಮನಸ್ಸು ನಿಷ್ಫಲ ಮರ
ಕನಸಿನ ಹೂವರಳದ ಕೊಂಬೆ

ಯಾವುದೋ ಸಿಟ್ಟಿನ
ಋಷಿಯೊಬ್ಬ ಇವತ್ತಿನ ರಾತ್ರಿಗೆ ಎಂದೆಂದೂ
ಮುಗಿಯಬಾರದೆಂದು ನೀಡಿದ ಶಾಪವಿದೆ
ಬೆಳಕಿನ ತುದಿ ಸಿಗದ ಟನೆಲಿನ ಪಯಣವಿದು
ಕನಸು ಹುಟ್ಟದ ಬಂಜೆ ನಿದಿರೆ.

ವಿರಹವೆಂಬುದು ಸಾಯಿಸದ ವಿಷ
ಬದುಕಿಸದ ಅಮೃತ
ಕೊಲ್ಲದ ನೇಣು
ವಾಸಿ ಮಾಡದ ಮದ್ದು.

the-breakup_0

ಉಸಿರಾಡುವುದನ್ನು ಬದುಕುವುದು
ಅನ್ನಬಹುದಾದರೆ
ಬದುಕಿದ್ದೇನೆ ಇನ್ನೂ!

 

ಡಿಯರ್ ಗುಂಗರಮಳೆಯ ಗೊಂಬೆ

ಈಗಲೂ ಅನ್ಸೋದು; ನಿನ್ನನ್ನು ಸರಿಯಾಗಿ ನಾನಿನ್ನೂ ನೋಡೇ ಇಲ್ಲ. ಹೌದು; ತುಂಬಾ ಸಲ ಕದ್ದು ನೋಡೋಕೆ ಪ್ರಯತ್ನ ಪಟ್ಟಿದೀನಿ. ಆದರೆ, ಆ ಆಯಸ್ಕಾಂತ ಕಣ್ಣುಗಳ ಸೆಳೆತದಿಂದ ಹೊರಬಂದು ನಿನ್ನನ್ನು ಕಣ್ತುಂಬಾ ನೋಡಬೇಕು ಎಂಬ ಆಸೆ ಮರೀಚಿಕೆಯಾಗೇ ಉಳಿದಿದೆ. ನಿಜ್ಜಾ ಹೇಳ್ತೀನಿ; ನಿನ್ನ ಕಿವಿಯ ಲೋಲಾಕನ್ನು ಫೇಸ್ ಬುಕ್ ನ ಪ್ರೊಫೈಲ್ ಫೊಟೋದಲ್ಲಿ ನೋಡಿದ್ದೇನೆಯೇ ವಿನಾ ನಿಜವಾಗಿ ಅದರ ಅಂದವನ್ನು ಇನ್ನೂ ನಾ ಸವಿದೇ ಇಲ್ಲ! ನಿನ್ನ ಕಂಗಳಿಗೆ ಅದೆಂಥಾ ಶಕ್ತಿಯಿದೆಯೇ ಮಾರಾಯ್ತೀ. ದೇವರನ್ನೇ ನಂಬಬೇಕು ಅನ್ನುವಷ್ಟು! ನಿಂಗೇ ಗೊತ್ತಿರೋ ಹಾಗೆ ನಾನು ಅದೆಷ್ಟು ಸಲ ಆ ಸೆಳೆತವನ್ನು ಭರಿಸಲಾಗದೇ ಮುಖ ತಗ್ಗಿಸಿದ್ದಿದೆ. ಆ ಹೋರು ಬೆಳಕಿಗೆ ಕಣ್ಣೊಡ್ಡಲಾಗದೇ ಸೋತಿದ್ದೇನೆ. ನೀನು ನನ್ನತ್ತ ನೋಡಿದ ಒಂದು ಸೆಕೆಂಡನ್ನು ತುಂಬಿಕೊಳ್ಳಲು ಈ ಮನಸ್ಸಿಗೆ ಏದುಸಿರು. ಆ ಬೆಳಕು ಮೈಯೆಲ್ಲಾ ವ್ಯಾಪಿಸಿ, ಆತ್ಮ ಒಮ್ಮೆ ಕಂಪಿಸಿ, ಬೆಳಕಿನ ಸ್ನಾನವಾದಷ್ಟೇ ಮನಸ್ಸು ಶುದ್ಧ ಶುದ್ಧ!

images1_thumb.jpg

ನೀ ಬಂದು.. ಬಳಿ ನೀ ಬಂದು..
ಈ ಸ್ವಪ್ನದ ಗಾಯ ನೋಡು…

ನೀನು ಎ.ಆರ್.ರೆಹಮಾನ್ ಸಂಗೀತದ ಹಾಗೆ; ಗುಟುಕು ಬಿಯರಿನ ಹಾಗೆ. ಮೊದಲಿಗೆ ಇಷ್ಟ ಅನ್ನಿಸಲ್ಲ. ಆದರೆ ಒಮ್ಮೆ ಗುಂಗು ಹತ್ತಿಬಿಟ್ಟರೆ ಮತ್ತೆ ಮತ್ತೆ ನೋಡುವ ಆಸೆ. ನೀನು ಜೀವನ ಪೂರ್ತಿ ಗುನುಗುವ ಗಾನ, ಸದಾ ಎದೆಯೊಳಗೇ ಉಳಿಯುವ ರಾಗ. ನೀನು ನನ್ನ ಹೃದಯದಲ್ಲಿರುವ ಮಚ್ಚೆ. ತಿರುಮಲೇಶರ ಅಕ್ಷಯ ಕಾವ್ಯದಂತೆ – ಯಾವ ಪುಟದಿಂದಾದರೂ ಶುರು ಮಾಡಿ- ಯಾವ ಪುಟದಲ್ಲಾದರೂ ನಿಲ್ಲಿಸಿ – ಎದೆ ತುಂಬಿಕೊಳ್ಳಬಹುದಾದಂತ ಅನನ್ಯ ಕಾವ್ಯ. ಚಂದದ ಸಾಲೊಂದನ್ನು ಬರೆಯುವಾಗ ಕಾಯ್ಕಿಣಿಯ ಭಾವವಿನ್ಯಾಸದಲ್ಲಿ ಮೂಡಿದ ಪಲುಕು. ನಿನ್ನಲ್ಲೇ ಕೆ.ಎಸ್.ನ. ಕವಿತೆಯ ಎಲ್ಲಾ ನಯ ನಾಜೂಕು ಮನೆ ಮಾಡಿದೆ. ನಿನ್ನ ಕಂಗಳು ಮಣಿಕಾಂತ್ ಪುಸ್ತಕದ ಶೀರ್ಷಿಕೆಯಂತಿರುತ್ತದೆ, ಒಮ್ಮೆ ಒಳ ಹೊಕ್ಕು ನೋಡಬೇಕೆಂಬ ಆಸೆ ಹುಟ್ಟಿಸುತ್ತದೆ. ಹೊಕ್ಕರೆ ನೆನಪುಗಳ ಜೋಳಿಗೆಯಿಂದ ಮನಸ್ಸು ಭಾರ. ನಿನ್ನ ಕೂದಲಿನ ಕಪ್ಪು ಜಲಪಾತದಲ್ಲಿ ಕುವೆಂಪು ಕವಿತೆಗಳ ಗಾಢತೆ, ನವಿರುತನ ಇದೆ. ಒಂದು ಅದ್ಭುತ ಕಥೆ ಬರೆದ ಬಳಿಕ ರವಿ ಬೆಳೆಗೆರೆ ಇಡುವ ಕೊನೆಯ ಫುಲ್ ಸ್ಟಾಪ್ ನಿನ್ನ ಬಿಂದಿ ಅನ್ನಿಸುತ್ತದೆ. ನಿನ್ನ ಕೊರಳಿನ ಪದಕ ನನ್ನ ಹೃದಯ – ಎಂಬಂಥ ಸಾಲು ಬರೆದಾಗ ಎಚ್ಚೆಸ್ವಿಯಲ್ಲಿ ಮೂಡಿದ ಭಾವನೆ ನಿನ್ನ ಕಂಗಳಲ್ಲಿ ಜಿನುಗುತ್ತಿರುತ್ತದೆ. ನಂಗನ್ಸುತ್ತೆ, ನೀನ್ಯಾರನ್ನೆಲ್ಲಾ ನೋಡಿ ನಗುತ್ತೀಯೋ ಅವರೆಲ್ಲಾ ಜೋಗಿಯಂತೆ ಇಪ್ಪತ್ತೈದು ದಿನಕ್ಕೊಂದು ಕಾದಂಬರಿ ಬರೆಯಬಲ್ಲರು. ನಿನ್ನ ಕಿರುಬೆರಳ ಕರೆಗೆ ವಿಶ್ವೇಶ್ವರ ಭಟ್ಟರ ಪುಸ್ತಕದಲ್ಲಿದ್ದಂತೆ ಪ್ರಪಂಚವನ್ನೇ ಗೆಲ್ಲಬಲ್ಲಂಥ ಹುಮ್ಮಸ್ಸನ್ನು ಕೊಡಬಲ್ಲಂಥ ಶಕ್ತಿಯಿದೆ. ಒಂದೊಳ್ಳೆ ಕಥೆ ಬರೆದ ನಂತರ ಚಿತ್ತಾಲರ ಮೈ ಮುರಿಯುವಿಕೆಯ ಸುಖ ನಿನ್ನ ಆಕಳಿಕೆಯಲ್ಲಿದೆ. ನಿನ್ನ ನಗೆಯನ್ನು ಪೋಸ್ಟ್ ಮಾರ್ಟಮ್ ಮಾಡಿ ವಿಶ್ಲೇಷಿಸಿದರೆ ಅದರಲ್ಲಿ ಪೂಚಂತೇ ಬರಹದ ಸವಿಯಿದೆ. ಗಾಳಿಯೊಡನೆ ಆಟವಾಡುವ ನಿನ್ನ ಮುಂಗುರಳಲ್ಲಿ ಬೇಂದ್ರೆ ಕವಿತೆಯ ಅರ್ಥಬದ್ಧ ಪ್ರಾಸ ಇದೆ. ನಿನ್ನ ನಡೆ ನುಡಿಯಲ್ಲಿ ಭೈರಪ್ಪನವರ ಡೀಟೈಲಿಂಗ್ ಇದೆ. ನಿನ್ನ ಮನಸ್ಸು ಮಾತ್ರ – ಅಡಿಗರ ಕವಿತೆಯಂತೆ. ತಿಳಿದುಕೊಂಡಷ್ಟು ಹೊಸ ಅರ್ಥಗಳು, ಒಳಹೊಕ್ಕಷ್ಟೂ ಮತ್ತಷ್ಟು ವಿವರಗಳು.
ಒಟ್ಟಾರೆ ಹೇಳಬೇಕೆಂದರೆ- ನೀನೊಂದು ನಡೆಯುವ ಕವಿತೆ.

images

ನೀನೆಂದರೆ ನನ್ನೊಳಗೆ… ಏನೋ ಒಂದು ಸಂಚಲನ
ನಾ ಬರೆಯದ ಕವಿತೆಗಳ… ನೀನೇ ಒಂದು ಸಂಕಲನ

ನಿಂಗೆ ಎಲ್ಲಾ ಅರ್ಥ ಆಗೋದು ಲೇಟು. ಮೆಸ್ಸೇಜಿಗೆ ಉತ್ತರ ಕೊಡುವುದೂ ಅದೆಷ್ಟು ತಡ. ತುಂಬಾ ಸಲ ನಿನ್ನ ಮೆಸ್ಸೇಜಿನ ಬಾಕ್ಸ್ ನ್ನು ತೆರೆದೇ ಇಟ್ಟು ಹಸಿದ ಮನ ವೀಣಾ ಸ್ಟೋರ್ಸ್ ಮುಂದೆ ಇಡ್ಲಿಗಾಗಿ ಕಾಯುತ್ತಿರುವಂತೆ ನಿನ್ನ ಮೆಸ್ಸೇಜಿಗಾಗಿ ಕಾಯುತ್ತಿರುತ್ತೇನೆ. ಇದೀಗ ಟಣ್ ಅನ್ನುವ ಸದ್ದಿನೊಂದಿಗೆ ನಿನ್ನ ಉತ್ತರ ಬರುತ್ತದೆ ಭರವಸೆಯ ಆಶ್ವಾಸನೆಯೊಂದಿಗೆ ಅದೆಷ್ಟು ಕ್ಷಣಗಳಿಗೆ ನಾನು ಮೋಸ ಮಾಡಿಲ್ಲ? ನನ್ನ ಕಂಗಳ ಬೇಡಿಕೆ ನಿಂಗರ್ಥ ಆಗಿದ್ದಿದ್ದರೆ ಇಷ್ಟೊತ್ತಿಗೆ ಒಂದು ಸುಂದರ ಸ್ನೇಹವೊಂದು ರೂಪುಗೊಂಡಿರುತ್ತಿತ್ತು. ನಿನ್ನ ಉತ್ತರ ಮತ್ತು ನನ್ನ ಮರು ಉತ್ತರದ ನಡುವಿನ ಸಮಯದ ಲಯವೇ ಹೇಳುತ್ತದೆ; ಬಹುಷಃ ಬೆಳಗಾಗುತ್ತಲೇ ನಾನು ಗುಡ್ ಮಾರ್ನಿಂಗ್ ಹೇಳುವುದು ನಿನ್ನ ಉತ್ತರದ ನಿರೀಕ್ಷೆಗೇ. ಪ್ರತೀ ಕ್ಷಣದ ರುಚಿ ನೋಡಿ ನಿನಗಾಗಿ ಕಾಯ್ದಿರಿಸುವ ಶಬರಿ ನಾನು, ಅಂತಲೇ ನನ್ನ ಬಗ್ಗೆ ನನಗಿರುವ ಗುಮಾನಿ. ಇಷ್ಟಕ್ಕೂ ನನಗೆ ಬೇಕಿರುವುದು ಒಂದು ಸುಂದರ ಸ್ನೇಹ. ನಿನ್ನನ್ನು ಅರಿಯುವ ಸುಖ. ಬದುಕು ಪೂರ್ತಿ ಖುಷಿಯಿಂದ ಕಳೆಯಲು- ನಿನ್ನ ಜೊತೆ ಕಳೆದ ಸಮಯಗಳ ಒಂದು ಜೋಳಿಗೆಯಷ್ಟು ನೆನಪುಗಳು. ಮತ್ತು ಕೊಂಚೇ ಕೊಂಚ ಪ್ರೀತಿ.
ಜೊತೆಗೆ ನೀನು ಸದಾ ಖುಷಿಯಾಗಿರುವುದು.
ಇಷ್ಟು ಪುಟ್ಟ ಬೇಡಿಕೆಯಿಟ್ಟುಕೊಂಡು ನಿನ್ನ ಉತ್ತರಕ್ಕಾಗಿ ಪ್ರತಿದಿನ ಕಾಯುತ್ತಿರುತ್ತೇನೆ; ಎಂದಿನಂತೆ.
ಇದೇ ನನ್ನ ನಾಳೆಗಳನ್ನು ರುಚಿಕಟ್ಟಾಗಿರಿಸುತ್ತಿದೆ. ಇದೇ ಭರವಸೆಯ ನೊಗ ಹೊತ್ತು ದಿನದ ಹೊಲವನ್ನು ಉಳುತ್ತಿರುತ್ತೇನೆ.

–  ನಿನ್ನ ಕಣ್ಣುಗಳ ಫ್ಯಾನ್

ವರ್ಷವೊಂದು ಬಲುಬೇಗ ಉರುಳಿಹೋಯಿತು. ಕಳೆದ ವರ್ಷದಲ್ಲಿ ಮನಸ್ಸು ಮುಟ್ಟಿದ ಪುಸ್ತಕ ಯಾವುದು ಅಂತ ಪಟ್ಟಿ ಮಾಡಹೊರಟರೆ ಮನಸ್ಸಿಗೆ ತುಂಬ ಖುಷಿ. ಈ ಪಟ್ಟಿ ಕೆಲವರಿಗಾದರೂ ಮತ್ತಷ್ಟು ಓದುವ ಚಟ, ಹಟ ಹುಟ್ಟುಹಾಕುತ್ತೇನೋ ಅನ್ನುವ ಹಂಬಲದಿಂದ ಈ ಪೋಸ್ಟ್.
ಗಮನಿಸಬೇಕಾದ್ದು ಕೆಲವು ಪಾಯಿಂಟ್ಸ್. ಈ ಪಟ್ಟಿಯಲ್ಲಿರುವುದು ನಾನು ಕಳೆದ ವರ್ಷ ಓದಿದ್ದ ಪುಸ್ತಕಗಳಲ್ಲಿ ನನಗೆ ಉತ್ತಮ ಅನ್ನಿಸಿದ್ದು, ಕನ್ನಡದ ಜೊತೆ ಕೆಲ ಇಂಗ್ಲೀಷ್ ಪುಸ್ತಕವೂ ಈ ಪಟ್ಟಿಯಲ್ಲಿದೆ. ಮತ್ತು ಈ ಪಟ್ಟಿ ನನ್ನ ಇಷ್ಟದ ಕ್ರಮಪ್ರಕಾರವಾಗಿ ಇಲ್ಲ.

೧. ರಂಗವಲ್ಲಿ ಮನೆ ಎಲ್ಲಿ? (ಕಥಾ ಸಂಕಲನ) – ಗೋಪಿನಾಥ್ ರಾವ್

ಹನ್ನೊಂದು ಕಥೆಯಿರುವ ಈ ಕಥಾ ಸಂಕಲನ, ಕಳೆದ ವರ್ಷದ ಓದಿನಲ್ಲಿ ತುಂಬಾ ಖುಷಿಕೊಟ್ಟಿತು. ಕಥೆ ವಿವರಣೆ ಮತ್ತು ಮುಖ್ಯವಾಗಿ ಕಥಾ ತಂತ್ರದಿಂದ ಬಹಳ ಚಂದ ಅನ್ನಿಸುವ ಕಥೆಗಳಿವೆ ಇದರಲ್ಲಿ. ಅಕಸ್ಮಾತ್ ಆಗಿ ಓದಬೇಕಾಗಿ ಬಂದು ಸರ್ ಪ್ರೈಸ್ ಆಗಿ ನನ್ನ ಮನಸ್ಸಿನಲ್ಲಿ ನೆಲೆಸಿರುವ ಈ ಪುಸ್ತಕ ಈಗ ನನ್ನ ಲೈಬ್ರೆರಿಯಲ್ಲೂ ಸ್ಥಾನ ಪಡೆದಿದೆ. ಜೊತೆಗೆ ಈ ಲೇಖಕರ ಇನ್ನಷ್ಟು ಪುಸ್ತಕಗಳನ್ನೂ ಹುಡುಕುವಂತೆ ಮಾಡಿದೆ. ಕಳೆದ ತಿಂಗಳಷ್ಟೇ ಸಿಕ್ಕಿರುವ ಆ ಬೇರೆ ಪುಸ್ತಕಗಳನ್ನು ಇನ್ನೂ ಓದಬೇಕಿದೆಯಷ್ಟೇ.

img_20170212_135937

೨. ಲೈಫ್ ಈಸ್ ಬ್ಯೂಟಿಫುಲ್ (ಸೆಲ್ಫ್ ಹೆಲ್ಪ್ – ಲೇಖನ ಮಾಲೆ) – ಜೋಗಿ

ವ್ಯಕ್ತಿತ್ವ ವಿಕಸನ ಪುಸ್ತಕಗಳ ಸಮಾನ್ಯ ಧಾಟಿಯಿಂದ ಹೊರತಾಗಿ ಬಂದಿರುವ ವಿಶಿಷ್ಟ ಪುಟ್ಟ ಪುಸ್ತಕ ಇದು. ಜೋಗಿ ಶೈಲಿಯಲ್ಲಿ ಕಥೆಗಳ ಮೂಲಕ ನಮ್ಮ ಬದುಕನ್ನು ನೇವರಿಸುತ್ತ ಹೋಗುವ ಈ ಪುಸ್ತಕ, ಯಶ್ ರಾಧಿಕಾ ಪಂಡಿತ್ ಮದುವೆಯ ಕರೆಯೋಲೆಯ ಜೊತೆಯಲ್ಲೂ ಸ್ಥಾನ ಪಡೆದಿದ್ದು ಇನ್ನೊಂದು ವಿಶೇಷ. ಒಟ್ಟಾರೆ ನಮ್ಮನ್ನು ಒಂದಿಷ್ಟು ಚಿಂತನೆಗೆ ನೂಕುವ ಅನೇಕ ವಿಚಾರಗಳು ಈ ಪುಸ್ತಕದಲ್ಲಿದೆ.

 

img_20170212_135933

೩. ೧೦೦ ಲಿರಿಕ್ಸ್ – ಗುಲ್ಜಾರ್ (ಇಂಗ್ಲೀಷ್ ಪುಸ್ತಕ) – ಸಂಜೋಯ್ ಶೇಖರ್

ಬಾಲಿವುಡ್ಡಿನಲ್ಲಿ ಎವರ್ ಗ್ರೀನ್ ಹಿರೋ ಅಂತ ದೇವಾನಂದ್ ರನ್ನು ಕರೆಯುತ್ತಾರೆ. ಎವರ್ ಗ್ರೀನ್ ಬರಹಗಾರ ಅಂತ ಯಾರನ್ನಾದರೂ ಕರೆಯಬಹುದೆಂದರೆ ಅದು ಗುಲ್ಜಾರ್ ರನ್ನು ಮಾತ್ರ. ಈಗಿನ ಹದಿ ಹರೆಯದವರ ಎದೆಯಲ್ಲೂ ಕಿಚ್ಚೆಬ್ಬಿಸಬಲ್ಲಂಥ ರೂಪಕಗಳನ್ನು ಕೊಡುವುದರಲ್ಲಿ ಗುಲ್ಜಾರ್ ಎತ್ತಿದ ಕೈ. ಆವರ ಹೊಸ-ಹಳೆಯ ೧೦೦ ಹಾಡುಗಳ ಸಾಹಿತ್ಯ ಮತ್ತು ಅದರ ಇಂಗ್ಲೀಷ್ ಅನುವಾದ ಈ ಪುಸ್ತಿಕೆಯಲ್ಲಿದೆ. ಮಳೆ ಬರುವಾಗ, ಮೋಡವಿದ್ದಾಗ, ಎಲ್ಲೋ ಪಯಣಕ್ಕೆ ಹೊರಟಿದ್ದಾಗ, ಬೇಸರದ ಸಂಜೆಯಲ್ಲಿ- ಹೀಗೆ ಯಾವಾಗಲಾದರೂ ಯಾವ ಪುಟವಾದರೂ ತೆರೆದು ಗುಲ್ಜಾರ್ ಲೋಕದೊಳಕ್ಕೆ ನುಗ್ಗಿ ಹೋಗಲು ಈ ಪುಸ್ತಕ ಸಹಾಯ ಮಾಡುತ್ತದೆ. ಹೊಸದೊಂದು ಭಾವ ಲೋಕಕ್ಕೆ ನಿಮ್ಮನ್ನು ಹೊತ್ತೊಯ್ಯುತ್ತದೆ.

೪. Selfie ವಿಥ್ ಲೈಫ್ (ವ್ಯಕ್ತಿತ್ವ ವಿಕಸನ ಲೇಖನಮಾಲೆ) – ವಿಶ್ವೇಶ್ವರ ಭಟ್

ಎಲ್ಲೂ ಬೋರಾಗದಂತೆ ಲೇಖನ ಬರೆಯುವುದರಲ್ಲಿ ವಿಶ್ವೇಶ್ವರ ಭಟ್ ಬತ್ತದ ತೆನೆ. ಈ ಲೇಖನಮಾಲೆಯಲ್ಲೂ ಬದುಕು ತಿದ್ದಿಕೊಳ್ಳಬೇಕನ್ನಿಸುವ ಬಹಳಷ್ಟು ವಿಚಾರಧಾರೆಯಿದೆ. ಮಧ್ಯೆ ಮಧ್ಯೆ ಜೋಕುಗಳು, ನೋಟ್ ಮಾಡಿಕೊಳ್ಳಬೇಕು ಅನ್ನಿಸುವಂಥ ಕೆಲ ಪಾಯಿಂಟ್ಸ್ ಗಳು ಹೀಗೆ ಓದಿಸಿಕೊಳ್ಳುತ್ತಾ ಹೋಗುವುದರ ಜೊತೆಗೆ ನಮ್ಮ ಬದುಕನ್ನು ನಾವು ನೋಡಿಕೊಳ್ಳಬೇಕು ಅನ್ನಿಸುವ ಸೆಲ್ಫ್ ಹೆಲ್ಪ್ ಪುಸ್ತಕ (ಅಥವಾ ಸೆಲ್ಫೀ ಪುಸ್ತಕ?) ಇದು.

೫. ಜಯಂತ ಕಾಯ್ಕಿಣಿಯವರ ಕಥನಾವರಣ – ಡಾ ಮಮತಾ ರಾವ್

ಕಾಯ್ಕಿಣಿ ಕಥಾಜಗತ್ತು ಎಲ್ಲರಿಗೂ ಗೊತ್ತಿರುವಂತೆ ಅನನ್ಯ ಮತ್ತು ವಿಶಿಷ್ಟ. ಸಂಬಂಧದೊಳಗಿನ ಸಂಕೀರ್ಣತೆಯನ್ನು ಅವರದ್ದೇ ಆದ ಆಪ್ತ ಶೈಲಿಯಲ್ಲಿ, ಅಪರೂಪದ ರೂಪಕಗಳ ಮೂಲಕ ನಮಗೆ ದಾಟಿಸುವ ಅವರ ಕಥಾನಕ ಅದ್ಭುತವಾದ್ದು. ಅವರ ಕಥನಾ ಲೋಕವನ್ನು ಪರಿಚಯಿಸುವ ಆಸಕ್ತಿಕರ ವಿಷಯವನ್ನು ಈ ಪುಸ್ತಕ ಪ್ರತಿನಿಧಿಸುತ್ತದೆ. ಮುಂಬೈಯ ಕಥೆಗಳು, ಗೋಕರ್ಣದ ಹಿನ್ನೆಲೆಯಿರುವ ಕಥೆಗಳು ಮತ್ತು ಕಾಯ್ಕಿಣಿಯವರೊಡಗಿನ ಸಂವಾದ -ಇಂಥ ವಿಷಯ ಇರುವ ಈ ಪುಸ್ತಕ ತುಂಬಾ ಇಷ್ಟವಾಯಿತು.

೬. ಸರಸ (ಲಲಿತ ಪ್ರಬಂಧಗಳ ಸಂಕಲನ)- ಈಶ್ವರಯ್ಯ

ತರಂಗದಲ್ಲಿ ಲೇಖನಮಾಲೆಯಾಗಿ ಬರುತ್ತಿದ್ದ ಸಮಯದಲ್ಲೇ ನನ್ನ ತಂದೆಯವರಿಗೆ ತುಂಬಾ ಇಷ್ಟವಾಗಿದ್ದ ಬರಹಗುಚ್ಚವಿದು. ಅಪ್ಪ ಇದರ ಕುರಿತು ಮಾತನಾಡುತ್ತಿದ್ದು ಈಗಲೂ ನೆನಪಿನ ಪದರದಲ್ಲಿ ಅಚ್ಚಳಿಯದೇ ಉಳಿದಿದೆ. ತುಂಬಾ ಲೈಟ್ ಆಗಿ ಓದಬೇಕಾದ ಖುಷಿಕೊಡುವ ಪುಟ್ಟ ಪುಟ್ಟ ಲೇಖನಗಳಿಂದ ಈ ಪುಸ್ತಕ ಕೂಡಿದೆ.

೭. ರಸವಾದಿ (ಅಲ್ಕೆಮಿಸ್ಟ್ ಪುಸ್ತಕದ ಅನುವಾದ) – ಅಬ್ದುಲ್ ರಹೀಮ್ ಟೀಕೆ

ಆಲ್ಕೆಮಿಸ್ಟ್ ಮೂಲ ಪುಸ್ತಕವನ್ನು ಓದದೇ ಸೀದಾ ಕನ್ನಡ ಅನುವಾದವಾದ ರಸವಾದಿ ಓದಿದೆ. ಪ್ರಪಂಚದಲ್ಲೇ ಅತ್ಯಂತ ಹೆಚ್ಚು ಜನಪ್ರಿಯವಾದ, ತುಂಬಾ ಜನರ ಬದುಕಿನ ಪ್ರೀತಿಯನ್ನು ನಾವೀನ್ಯಗೊಳಿಸಿದ ಇತಿಹಾಸವಿರುವ ಈ ಪುಸ್ತಕದ ಬಗ್ಗೆ ಇನ್ನೇನು ಹೇಳಲಾದೀತು.

೮. ಕೈತಾನ್ ಗಾಂಧಿಯ ಸ್ವಾತಂತ್ರ್ಯ ಹೋರಾಟ (ಕಾದಂಬರಿ) – ನಾ. ಡಿಸೋಜಾ

೨೦೦೮ ಕ್ಕೆ ನನ್ನ ಮೊದಲ ವಿದೇಶ ಪಯಣಕ್ಕೆ ಗೆಳೆಯನೊಬ್ಬ ನೀಡಿದ್ದ ಉಡುಗೊರೆಯಾಗಿದ್ದ ಈ ಪುಸ್ತಕ ನನ್ನ ಲೈಬ್ರೆರಿಯಲ್ಲಿ ಒಂದು ಸುಂದರ ಓದಿಗಾಗಿ ಕಾಯುತ್ತಾ ಕುಳಿತಿತ್ತು. ಬರೋಬ್ಬರಿ ೮ ವರ್ಷದ ನಂತರ ಕೈಗೆತ್ತಿಕೊಂಡು ಓದಿ ಮುಗಿಸಿದಾಗ, ಛೇ, ಮೊದಲೇ ಓದಬೇಕಾಗಿತ್ತಲ್ಲ ಅನ್ನಿಸಿಬಿಟ್ಟಿತ್ತು.

img_20170212_135900

೯. ನನ್ನಿಷ್ಟ – ರಾಮ್ ಗೋಪಾಲ್ ವರ್ಮಾ (ಕನ್ನಡಕ್ಕೆ : ಸೃಜನ್)

ರಾಮ್ ಗೋಪಾಲ್ ವರ್ಮಾ ಬ್ಲಾಗ್ ಓದುತ್ತಾ ಅವರ ಬರಹದ್ದೂ, ಚಿಂತನಾ ವಿಧಾನದ್ದೂ ಅಭಿಮಾನಿಯಾಗಿದ್ದ ನನಗೆ ಈ ಪುಸ್ತಕ ಕನ್ನಡಕ್ಕೆ ಬಂದಿದ್ದು ತುಂಬಾ ಸಂತಸ ಕೊಟ್ಟಿತ್ತು. ಒಂದೇ ಸಿಟ್ಟಿಂಗ್ ನಲ್ಲಿ ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದ್ದೂ ಆಗಿತ್ತು. ಇನ್ನೊಂದು ಸಲ ಓದಬೇಕೆಂದರೂ ಬೇಸರ ಮೂಡಿಸದು.

img_20170212_135841

೧೦. Eat that Frog – Brian Tracy

ಸಮಯ ಬೆರಳ ನಡುವಿನ ಮರಳಿನಂತೆ ಜಾರಿಹೋಗಬಾರದೆಂದರೆ, ನಾವು ಅಂದುಕೊಂಡ ಕೆಲಸವನ್ನು ಅಂದುಕೊಂಡ ಸಮಯಕ್ಕೆ ಮುಗಿಸಬೇಕೆಂದರೆ ಏನು ಮಾಡಬೇಕು ಅನ್ನುವ ಸರಳ ತಂತ್ರಗಳನ್ನು ಈ ಪುಸ್ತಕ ಕಲಿಸಿಕೊಟ್ಟಿತು. ತುಂಬ ಹಳೆಯ ಪುಸ್ತಕವಾದರೂ ನನ್ನ ಮರು ಓದಿಗೆ ದಕ್ಕಿದ್ದು, ವಿಚಾರ ಒಳಗಿಳಿದದ್ದು ಕಳೆದ ವರ್ಷವೇ.

 

ಮಕರಂದವ ಬಿಟ್ಟು ಅಂದವನ್ನೇ ಸವಿಯುತ್ತಾ ನಿಂತುಬಿಟ್ಟಿವೆ ದುಂಬಿಯಿಂದು
ನೀನು
ದಾರಿಹೋಕನಿಗೆ ಹಳೆಯ ನೆನಪೊಂದನ್ನು ಮೀಟಿಸಿದ ಹೂವು

ಮಧುರ ನಿದಿರೆಯೊಂದನು ದಾಟಿ ಬಂದ ಕನಸು
ನೀನು,
ದಯವಿಟ್ಟು ಚಿವುಟದಿರಿ ಪ್ಲೀಸ್, ಮುಂದುವರಿಯಲಿ ಈ ಕನಸು ಬದುಕಿನುದ್ದಕ್ಕೂ

Image result for invicible strings between 2 ppl

ನನ್ನನ್ನು ನಿನ್ನತ್ತ ಸೆಳೆಯುತ್ತಿರುವ ಯಾವುದೋ ಒಂದು ಮಾಯೆಯಿದೆ
ನಂಬಲಾರರೇನೋ ಯಾರೂ
ಜೊತೆಗೆ ನೀನೂ,
ನಿನ್ನ ನೋಟಕ್ಕೆ ನನ್ನಾತ್ಮದ
ಜಂಘಾಬಲವನ್ನೇ ಅಲ್ಲಾಡಿಸುವ
ಶಕ್ತಿಯಿದೆಯೆಂದರೆ.

ಪ್ರೀತಿ ಸ್ನೇಹವೆಂದೆಲ್ಲಾ ಹೆಸರುಗಳ ಎಂಜಲು ಬೇಡ ಈ ಸಂಬಂಧಕ್ಕೆ,
ನಿನ್ನೊಂದಿಗಿರುವ ಕೆಲ ಕ್ಷಣಗಳ ಕಡ ಸಾಕು
ಮನದ ಜೋಳಿಗೆ ತುಂಬೀತು, ಸಾಕಷ್ಟು ಉಳಿದ ಬದುಕಿಗೆ.

ಬೇಕಿಲ್ಲ ನಿನ್ನ ಹರುಷದ ಸಮಯ,
ದುಃಖವಾದೊಡೆ ನನ್ನ ನೆನಪಾದರೆ ಸಾಕು, ಅದುವೆ ನನಗೆ ಹೆಮ್ಮೆ

ಗೋಳಿಬಜೆ!

Posted: ಮಾರ್ಚ್ 17, 2015 in ಕತೆ, ಕಥಾ ವಿಚಾರ

Golibaje(1)

ಆ ಒಂದು ಕರೆ ಬರುತ್ತಿದ್ದಂತೆ ಮನೆಯಲ್ಲಿ ಪುಟ್ಟ ಸಡಗರವೊಂದು ಮೈತಳೆದಿತ್ತು.

ಅಮ್ಮ ಆಗಲೇ ಮೈದಾ ಕಲಸುತ್ತಿದ್ದಳು. ಹೊರಗೆ ರಂಗೋಲಿಗೆ ನೀರು ಚಿಮುಕಿಸುವಂತೆ ಸಣ್ಣ ಮಳೆ. ಅಣ್ಣನಿಗೆ ಅಮ್ಮ ಅದೇನೋ ತರಲು ಹೇಳುತ್ತಿದ್ದಂತೆ ಅವ ಸೈಕಲ್ ಹತ್ತಿ ಮೊಗದಲ್ಲಿ ಸಂಭ್ರಮ ಹೊತ್ತು ಹೊರಟ. ಗುಲಾಬ್ ಜಾಮೂನ್ ಮಿಕ್ಸ್ ತರಲು ಹೇಳಿದ್ದಿರಬಹುದಾ? ಆದರೆ ನನಗೆ ಅದಕ್ಕಿಂತಲೂ ಮಹತ್ವವಾದ್ದು ಅಡುಗೆಮನೆಯಲ್ಲಿ ಸಿದ್ಧವಾಗ್ತಿತ್ತು. ಗೋಳಿಬಜೆ. ಅಮ್ಮ ಅದ್ಭುತವಾಗಿ ಮಾಡುತ್ತಿದ್ದಳು. ಬಾಯಿ ಚಪ್ಪರಿಸಿಕೊಂಡು ತುಂಬು ಖುಶಿಯಿಂದ ತಿನ್ನುತ್ತಿದ್ದೆವು. ಒಂದು – ಎರಡು – ಮೂರು….. ಉಹುಂ… ತಿಂದಷ್ಟೂ ಹೊಟ್ಟೆ ಖಾಲಿಯಾದಂತನ್ನಿಸುತ್ತಿತ್ತು. ಒಂಚೂರು ಇಂಗು, ಮತ್ತು ಅವಳಿಗಷ್ಟೇ ಗೊತ್ತಿದ್ದ ಗುಟ್ಟಿನಷ್ಟು ಉಪ್ಪು ಹಾಕಿದರೆ ಗೋಳಿಬಜೆ ಗೆ ಪ್ರಚಂಡವಾದ ರುಚಿ ಬರುತ್ತಿತ್ತು. ಮಧ್ಯೆ ಮಧ್ಯೆ ತೆಂಗಿನಕಾಯಿಯ ಚೂರು ಬಾಯಿಗೆ ಸಿಕ್ಕರಂತೂ ಕಣ್ಣು ಮುಚ್ಚಿ ತಿನ್ನಬೇಕೆಂಬ ತನ್ಮಯತೆ ರೂಢಿಯಾಗುತ್ತೆ. ಒಂದು ಗೋಳಿಬಜೆ ಎಣ್ಣೆಯೊಳಗೆ ಬಿಡುತ್ತಿದ್ದಂತೆ ಅಂಗಳದ ಯಾವ ಮೂಲೆಯಲ್ಲಿದ್ದರೂ ನನ್ನನ್ನು ಆ ಪರಿಮಳ ಮಂತ್ರಮುಗ್ಧನಂತೆ ಮಾಡಿ ಅಡುಗೆಮನೆಗೆ ಕರೆತರುತ್ತಿತ್ತು.

ಇವತ್ತೂ ಅಂಥದ್ದೇ ಒಂದು ಸಂಭ್ರಮ ತಯಾರಾಗುವಂತಿತ್ತು.

ಇಷ್ಟಕ್ಕೂ ಬರುತ್ತಿದ್ದುದು ರಾಘಣ್ಣ. ಅವ ಹಾಗೆಯೇ. ಯಾವಾಗಲೋ ಒಮ್ಮೆ ಮನಸ್ಸು ಮಾಡಿದರೆ ಕೂಡಲೇ ಕೊಲ್ಲೂರು ದೇವರ ದರುಶನವಾಗಬೇಕು. ಒಂದು ಒಳ್ಳೆಯ ಕೆಲಸ ಶುರುವಾಗಬೇಕೆಂದರೆ ಸಾಕು, ಒಂದು ದರುಶನ. ಅದೇ ಇಲ್ಲಿಯವರೆಗೂ ಅವನ ಬದುಕನ್ನು ನಡೆಸಿಕೊಂಡು ಬಂದಿದೆಯೇನೋ ಎಂಬ ನಂಬಿಕೆ. ಹಾಗೆ ಕೊಲ್ಲೂರಿಗೆ ಹೋಗುವಾಗಲೆಲ್ಲ ದರ್ಶನ ಮುಗಿಸಿ ವಪಸ್ಸು ಬರುವಾಗ ಅಮ್ಮನ ಅಡುಗೆ ಉಣ್ಣದೇ ಹೋಗುವುದು ಎಂದರೆ ದರ್ಶನವೇ ಅಪೂರ್ಣವಾದಂತೆ ಭಾವಿಸುತ್ತಿದ್ದ. ಶಿರ್ವದಲ್ಲಿನ ತನ್ನ ಮನೆಗೆ ಹೋಗುವಾಗ ಅತ್ತಿಗೆ ಅವನಿಗಾಗಿ ಅಡುಗೆ ಮಾಡಿರುವುದಿಲ್ಲ. ನಂಗೊತ್ತು ಕುಂದಾಪುರದ ದೊಡ್ಡನ ಮನೆಯಲ್ಲಿ ಉಂಡಿರುತ್ತಿ ಎಂಬುದು ಅವಳಿಗೆ ಮನವರಿಕೆಯಾಗಿರುವ ಸತ್ಯ.

ಇವತ್ತು ರಾಘಣ್ಣನ ಕರೆ ಬಂದಿತ್ತು. ಕೊಲ್ಲೂರು ದೇವಸ್ಥಾನಕ್ಕೆ ಹೋಗುವವನಿದ್ದ.

********

ಅಮ್ಮ ಯಾವತ್ತೂ ಹೇಳುತ್ತಿರುತ್ತಾಳೆ. ಊಟ, ನಿದ್ದೆ ಬ್ರಹ್ಮಾಂಡವಾಗಿರಬೇಕು ಆಗಲೇ ಚೆನ್ನಾಗಿ ಕೆಲಸ ಮಾಡಬಲ್ಲೆವು, ಆಗಲೇ ಬದುಕು ಸುಲಲಿತವಾಗಿರುತ್ತೆ ಅಂತ. ಉದಾಹರಣೆ ನನ್ನಜ್ಜನ ಕತೆ ಶುರುಮಾಡುತ್ತಿದ್ದಳು. ನನ್ನದು ತಿಂದು ಮುಗಿದಿದ್ದರೆ ಕೇಳದೇ ಓಡಿಹೋಗುತ್ತಿದ್ದೆ. ತಿಂದಾಗಿರದಿದ್ದರೆ ಸುಮ್ಮನೆ ಕೇಳುತ್ತಿದ್ದೆ.

ಊಟದ ಬಗ್ಗೆ ಅಂಥದ್ದೊಂದು ಭಾವನೆಯಿದ್ದುದರಿಂದಲೆಯೋ ಏನೋ ನೆಂಟರು ಬಂದರೆ ನಮ್ಮ ಮನೆ ಅಡುಗೆಮನೆಯಲ್ಲಿ ವಿಶೇಷ ಕಳೆ. ಮಧ್ಯಾಹ್ನವಾದರೆ ಕರಿಬೇವು ಒಗ್ಗರಣೆ ಘಮ್ಮೆನ್ನುವ ಸಾರು, ಹಪ್ಪಳ ಸಂಡಿಗೆ, ಗೋಳಿಬಜೆ, ಕ್ಯಾರೆಟ್ಟಿನದೊಂದು ಪಲ್ಯ ಇದು ಅನ್ನ ಮಾಡುವಷ್ಟೇ ಮಾಮೂಲು. ಇದನ್ನು ಹೊರತುಪಡಿಸಿ ಮಾವಿನ ಸೀಸನ್ನಾದರೆ ಮಾವಿನ ರಸಾಯನ ಇಲ್ಲವಾದರೆ ಸೀಕರಣೆ ಇಂತದ್ದೇನಾದರೂ ಒಂದು.

ಅಂತೂ ಊಟ ತುಂಬಾ ಗ್ರ್ಯಾಂಡು.

ನೆಂಟರು ಬಂದಾಗ ಇಂಥ ಲಾಭದ ಸದುಪಯೋಗ ನನಗಾಗುತ್ತಿತ್ತು. ಅದಕ್ಕೇನೆ ಯಾವುದಾದರೂ ಫಂಕ್ಷನ್ನಿಗೆ ಹೋದಾಗ ಸಿಕ್ಕವರನ್ನೆಲ್ಲಾ ನಮ್ಮನೆಗೆ ಬನ್ನಿ ಅಂತ ಪ್ರೀತಿಯಿಂದ ಕರೆಯುತ್ತಿದ್ದೆ. ಅರೇ ಇಷ್ಟು ಚಿಕ್ಕ ವಯಸ್ಸಲ್ಲಿ ಒಳ್ಳೆ ಬುದ್ಧಿ ಕಲಿತುಬಿಟ್ಟಿದಾನೆ ಅಂತ ಅವರಿಗೆಲ್ಲಾ ಅನ್ನಿಸುತ್ತಿತ್ತು. ಅಪ್ಪ ಅಮ್ಮನೂ ಒಳಗೊಳಗೇ ಹೆಮ್ಮೆ ಪಡುತ್ತಿದ್ದರೂ ನನ್ನ ಲಾಭದ ಚಿಂತನೆಯ ಕುರುಹು ಕೂಡ ಸಿಕ್ಕಿರಲಿಲ್ಲ.

ಇಂದು ಗೋಳಿಬಜೆ ಮಾಡುವ ಸೂಚನೆ ತೋರಿದ್ದರಿಂದ ಅಡುಗೆಮನೆಯ ಹತ್ತಿರ ಅಡ್ಡಾಡುತ್ತಿದ್ದೆ. ಸುಮ್ಮ ಸುಮ್ಮನೆ ಬರುತ್ತಿದ್ದನು ನೋಡಿ.. “ಹೋಗಿ ಆಡ್ಕೋಳಾ ಮಾಣಿ.. ಇವತ್ ಗೋಳಿಬಜೆ ಮಾಡುದಿಲ್ಲ” ಅಂದಳು ಅಮ್ಮ. ಬಿಸಿನೀರೊಲೆಗೆ ಚಂಬು ನೀರು ಸುರಿದಂತಾಯ್ತು. ನನ್ನ ನಿರಾಸೆ ಕಂಡ ಅವಳು “ಬಪ್ಪು ಸಂಕಷ್ಟಿ ಆದ್ಮೆಲೆ ಮಾಡ್ತೆ ಅಕಾ? ಇವತ್ ಬ್ಯಾಡ. ರಾಘಣ್ಣ ಬತ್ತ ಅಲ್ದಾ? ಅವ್ನಿಗೆ ಗೋಳಿಬಜೆ ತಿಂಬುಕಾಗ.”
ಅಚ್ಚರಿಯಾಯ್ತು. ರಾಘಣ್ಣನಿಗೆ ಗೋಳಿಬಜೆಯೆಂದರೆ ಪ್ರಾಣ. ಯಾವಾಗಲೂ ಹೇಳಿಯಾದರೂ ಮಾಡಿಸಿಕೊಂಡು ತಿಂದು ಹೋಗ್ತಾನೆ. “ಎಂತಕಮ್ಮ? ಅವ ಎಂತ ಕಾಶಿಗ್ ಹೋಯ್ನಾ? ಅಂತ ಕೇಳಿದೆ.

“ಇಲ್ದಾ.. ಕಾಶೀಲ್ ಬಿಟ್ ಬಂದದ್ದಲ್ಲ. ಅದೊಂದ್ ದೊಡ್ ಕತಿ..”

*******

ರಾಘಣ್ಣ ಸ್ಪುರದ್ರೂಪಿ. ದಪ್ಪ ಮೀಸೆ, ದೂರದಿಂದ ಕಂಡರೆ ಅನಿಲ್ ಕಪೂರನ ನೆನಪಾಗುವುದು. ಕಬಡ್ಡಿ ಆಟದಲ್ಲಿ ಪ್ರವೀಣ. ಅದಕ್ಕೇ ಏನೋ ದೈಹಿಕವಾಗಿಯೂ ಕಟ್ಟುಮಸ್ತು ಜೀವ. ಆಟದ ಖೋಟಾದಲ್ಲೇ ಬ್ಯಾಂಕೊಂದರಲ್ಲಿ ಕೆಲಸವನ್ನು ಗಿಟ್ಟಿಸಿಕೊಂಡಿದ್ದ ಅಂತ ಕೇಳಿದ್ದ ನೆನಪು. ಪುಟ್ಟ ವಯಸ್ಸಲ್ಲೇ ತಂದೆ ತೀರಿಹೋದ್ದರಿಂದ ಅಮ್ಮನ ಜತೆಗೆ ತುಂಬ ಮುದ್ದು ಮಾಡಿಸಿಕೊಂಡು ಬೆಳೆದವನು. ಅವನ ಅಮ್ಮ ಅಂದರೆ ನನ್ನ ದೊಡ್ಡಮ್ಮ ಹಪ್ಪಳ ಸಂಡಿಗೆ ಉಪ್ಪಿನಕಾಯಿ ಮಾಡಿ ಮಾರಿ ಬಂದ ಹಣದಿಂದ, ತೋಟದ ಹಣ್ಣುಗಳನ್ನು ಮಾರಿದ್ದರಿಂದ ಸ್ವಲ್ಪ ಪೆನ್ಶನ್ ನಿಂದ ಬಂದ ಹಣದಿಂದ ಹೀಗೆ ಕಷ್ಟಪಟ್ಟು ಓದಿಸಿದ್ದಳು. ತುಂಬಾ ಬುದ್ಧಿವಂತನಲ್ಲವಾದರೂ ಫಸ್ಟ್ ಕ್ಲಾಸ್ ನಲ್ಲೆ ಪಾಸಾಗಿ ಎಲ್ಲರಿಗೂ ಖುಷಿಕೊಡುತ್ತಿದ್ದ. ಸಣ್ಣ ವಯಸ್ಸಿನಲ್ಲೇ ಕಬಡ್ಡಿಯ ಬಗ್ಗೆ ಕುತೂಹಲವಿದ್ದುದರಿಂದ ಆಟದ ಮಾನಸಿಕ ವಿನ್ಯಾಸ ಕರಗತ ಮಾಡಿಕೊಂಡಿದ್ದ. ದೊಡ್ಡವನಾಗುವ ಹೊತ್ತಿಗೆ ಜಿಲ್ಲಾ ಮಟ್ಟದ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದ. ಬಿ ಕಾಮ್ ಮುಗಿಸಿ ಕೆಲಸಕ್ಕೆ ಹುಡುಕುತ್ತಿದ್ದಾಗ ಕಬಡ್ಡಿಯಿಂದಾಗಲೇ ಕೆಲಸ ಸುಲಭವಾಗಿ ಸಿಕ್ಕಿದ್ದು ಅಂತ ಸಂಬಂಧಿಕರಲ್ಲಿ ಗಾಳಿಮಾತಿತ್ತು.

ಒಂದು ದಿನ ರಾತ್ರಿ ದೊಡ್ಡಮ್ಮ ರಾಘಣ್ಣನನ್ನು ಊಟಕ್ಕೆ ಕರೆಯಲು ಅವನಿದ್ದ ಕೋಣೆಗೆ ಹೋದಾಗ ಅವನಲ್ಲಿರಲಿಲ್ಲ. ರಾಘೂ ರಾಘೂ ಅಂತ ಕೂಗುತ್ತ ಅಲ್ಲಿ ಇಲ್ಲಿ ಮನೆತುಂಬಾ ಅಲೆದಾಡಿ ಹುಡುಕಿದರೂ ಕಾಣ್ತಿಲ್ಲ. ಮುಂಬಾಗಿಲ ಬಳಿ ಸಣ್ಣ ದನಿಯಲ್ಲಿ ಗುಸು ಗುಸು ಕೇಳುತ್ತಿದ್ದರಿಂದ ಅಲ್ಲಿಗೆ ಹೋದಳು ದೊಡ್ಡಮ್ಮ. ಚೂರು ಸರಿದಿದ್ದ ಬಾಗಿಲನ್ನು ಪೂರ್ತಿ ತೆಗೆದು ನೋಡಿದರೆ ಅಲ್ಲಿ ರಾಘಣ್ಣ ತನ್ನ ಗೆಳೆಯರೊಂದಿಗೆ ಮಾತಾಡುತ್ತಿದ್ದ. ಬಾಗಿಲು ಸದ್ದಾಗಿದ್ದು ನೋಡಿ ತಿರುಗಿ, “ಅಶನೊಂಕು ಬರ್ಪೆಯಾ.. ಸಲ್ಪ ಸೈರ್ಲಾ..” ಅಂತ ತುಳುವಲ್ಲಿ ಸ್ವಲ್ಪ ಒರಟಾಗಿಯೇ ಅಂದಿದ್ದ.

ಮರುಮಾತಾಡದೇ ದೊಡ್ಡಮ್ಮ ವರಾಂಡಾ ದಲ್ಲೆ ಕೂತಳು. ಸ್ವಲ್ಪ ಹೊತ್ತಿನಲ್ಲೇ ಗುಸುಗುಸು ಮಾತು ಜೋರಾಗತೊಡಗಿತು. ಕ್ಷಣಗಳುರುಳುತ್ತಾ ಹೋದಂತೆ ದನಿಯೂ ಏರತೊಡಗಿತ್ತು. ಯಾವುದೋ ಅನಿಷ್ಟದ ಮುನ್ಸೂಚನೆ ಸಿಕ್ಕಂತಾಗಿ ದೊಡ್ಡಮ್ಮ ಬಾಗಿಲಬಳಿ ಬಂದು ನೋಡಿದಾಗ ಬಂದವರಿಬ್ಬರ ಜತೆ ರಾಘಣ್ಣ ಜಗಳಾಡುತ್ತಿದ್ದ. ಮೂವರೂ ಒಬ್ಬರಮೇಲೊಬ್ಬರು ಕೈಮಿಲಾಯಿಸುತ್ತಿದ್ದರು. ದೊಡ್ಡಮ್ಮ ಹೋ ಅಂತ ಕೂಗಿ ರಾಘಣ್ಣನ ಬಳಿ ಹೋಗುತ್ತಿದ್ದಂತೆ ಅವನ ಗೆಳೆಯರು ಇನ್ನು ಜನರೆಲ್ಲಾ ಸೇರುವರು ಎಂಬ ಭಯದಿಂದ ಕತ್ತಲಿಲ್ಲಿ ಸರಿದು ಮರೆಯಾದರು.

ಆಗಲೇ ರಾಘಣ್ಣನ ಮೂಗಿನಲ್ಲಿ ರಕ್ತ ಸೋರುತ್ತಿತ್ತು. ದೊಡ್ಡಮ್ಮ ಕೂಡಲೇ ಅವನನ್ನು ಒಳಕರೆತಂದು ಒದ್ದೆಬಟ್ಟೆಯಿಂದ ರಕ್ತ ಒರೆಸಿದಳು. ರಾಘಣ್ಣ ಇನ್ನೂ ಕುದಿಯುತ್ತಿದ್ದ. ಅವ ಶಾಂತವಾದ ಮೇಲೆ ವಿಷಯವೇನೆಂದು ಕೇಳಿದಾಗ ಕಬಡ್ಡಿ ಪಂದ್ಯದ ವಿಚಾರವಾಗಿತ್ತು. ರಾಘಣ್ಣನಿಗೆ ಹಾಯ್ ಬಾಯ್ ಪರಿಚಯವಿದ್ದ ಪುಡಿ ರೌಡಿಯೊಬ್ಬ ಅವನ ತಮ್ಮನನ್ನು ರಾಘಣ್ಣ ಕೆಲಸ ಮಾಡುವ ಬ್ಯಾಂಕಿನ ತಂಡಕ್ಕೆ ಸೇರಿಸಿಕೊಳ್ಳಬೇಕು ಅನ್ನುವ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳಕ್ಕೇರಿತ್ತು.

ಅಂದು ರಾತ್ರಿಯಿಡೀ ದೊಡ್ಡಮ್ಮ ಅತ್ತಿದ್ದೇ. ಒಬ್ಬನೇ ಮಗ. ನೀ ಕೆಲಸಕ್ಕೆ ಹೋಗದಿದ್ದರೂ ಪರವಾಗಿಲ್ಲ, ಈ ಜಗಳಗಳೆಲ್ಲ ಬೇಡ ಅಂತ ಕಣ್ಣೀರು ಸುರಿಸಿದಳು. ಮೊದಮೊದಲು ಹಠಮಾಡಿ ಒಪ್ಪದಿದ್ದರೂ ಕೊನೆಗೆ ಕರಗಿ, ಅದ್ಯಾವುದೋ ಒಂದು ಪರೀಕ್ಷೆ ಬರೀಬೇಕು ಅದಾದ ಮೇಲೆ ಆಡುವುದನ್ನು ಬಿಡುತ್ತೇನೆ ಅಂತ ರಾಘಣ್ಣ ಅಂದ ಮೇಲೆಯೇ ದೊಡ್ಡಮ್ಮನಿಗೆ ಸಮಾಧಾನ.

****

ಬದುಕು ಕಾಲಿಗೆ ಚಕ್ರಹಾಕಿಕೊಂಡು ಓಡುತ್ತಿತ್ತು. ರಾಘಣ್ಣ ಪರೀಕ್ಷೆ ಬರೆದ. ಪ್ರಮೋಶನ್ ಸಿಕ್ಕಿತು. ಮದುವೆಯೂ ಆಯಿತು. ದೊಡ್ಡಮ್ಮನಿಗೆ ಈಗಲೂ ಸಂಡಿಗೆ, ಉಪ್ಪಿನಕಾಯಿ ಮಾಡದೇ ಹೋದರೆ ಹುಚ್ಚು ಹಿಡಿದಂತಾಗುತ್ತಿತ್ತು. ಅಂಗಳಕ್ಕಿಳಿದು ಸಗಣಿ ಸಾರಿಸದಿದ್ದರೆ ಒಳಗೇ ಉಳಿದು ಹಿಂಸಿಸುವ ಕ್ಯಾನ್ಸರಿನಂತ ಅಸಮಾಧಾನ. ಮನೆಯ ದನ ಲಕ್ಷ್ಮೀಯನ್ನು ಮಾರಿಬಿಡೋಣ ನಿಂಗೆ ನೋಡಿಕೊಳ್ಳೊಕೆ ಕಷ್ಟ ಆಗ್ತದಲ್ವಾ ಅಂತ ರಾಘಣ್ಣ ಹೇಳಿದರೆ ಕೆಂಡದಂತ ಕೋಪಮಾಡುತ್ತಿದ್ದಳು. ಅದನ್ನು ನೋಡಿಕೊಳ್ಳೊಕೇನು ಕಷ್ಟ? ನಂಗೆ ನೀನೂ ಬೇರೆಯಲ್ಲ ಲಕ್ಷ್ಮೀ ಬೇರೆಯಲ್ಲ. ಇನ್ನು ಹೀಗಂದ್ರೆ ಸರಿಯಿರಲ್ಲ ಅಂತ ತುಳುವಿನಲ್ಲಿ ರೇಗುತ್ತಿದ್ದಳು.

ಸೊಸೆ ಸಹಾಯಕ್ಕೆ ಬಂದರೂ ತಡೆದು, ಬೇಕಿದ್ದರೆ ಅಡುಗೆ ಮನೆಯಲ್ಲಿ ಸಹಾಯ ಮಾಡು ಇಲ್ಲಿ ಬೇಡ ಅನ್ನುವಂತೆ ಸೌಮ್ಯವಾಗಿ ಹೇಳ್ತಾ ಇದ್ದಳು.

ಹೀಗೆ ಅಂದರೂ ಕೆಲವೊಮ್ಮೆ ಹಾಳುಕಾಲುನೋವು ಅವಳನ್ನು ಬಾಧಿಸುತ್ತಿತ್ತು. ಲಕ್ಷ್ಮೀಯೂ ಮೊದಲೆಲ್ಲ ದೊಡ್ಡಮ್ಮ ನನ್ನು ಆಟ ಆಡಿಸುತ್ತಿತ್ತು. ಅಂದರೆ ದೊಡ್ಡಮ್ಮ ಲಕ್ಷ್ಮೀಯನ್ನು ಗದ್ದೆಗೆ ಕರೆದೊಯ್ಯುವಾಗ ಬೇಕಂತಲೇ ಓಡಿ ದೊಡ್ಡಮ್ಮನನ್ನು ಸಿಟ್ಟಿಗೇರಿಸುತ್ತಿತ್ತು. ಒಮ್ಮೆ ದೊಡ್ಡಮ್ಮ ಎಷ್ಟು ಗಟ್ಟಿಯಾಗಿ ಹಿಡಿದಿದ್ದರೂ ಲಕ್ಷ್ಮೀ ಓಡುವಾಗ ಹಿಡಿತ ತಪ್ಪಿ ದೊಡ್ಡಮ್ಮ ಧೊಪ್ಪನೆ ಬಿದ್ದಳು. ಲಕ್ಷ್ಮೀ ಆತಂಕಕ್ಕೊಳಗಾಗಿ ಅಂಬಾ ಅಂಬಾ ಅಂತ ಕೂಗಿತ್ತು. ಪುಣ್ಯವಶಾತ್ ದೊಡ್ಡಮ್ಮನಿಗೇನೂ ಆಗಿರಲಿಲ್ಲ. ಮೊದಲಿನಿಂದಲೂ ಪ್ರೀತಿಯಿದ್ದಿದ್ದರೂ ಈ ಘಟನೆ ನಂತರ ದೊಡ್ಡಮ್ಮನಿಗೆ ಲಕ್ಷ್ಮೀ ಎಂದರೆ ವಿಶೇಷ ಮಮತೆ.

ಈಗೆಲ್ಲಾ ಕಾಲುನೋವಿನಿಂದ ಮೆಲ್ಲಗೆ ಚೂರು ಕುಂಟುಕೊಂಡು ನಡೆವ ದೊಡ್ಡಮ್ಮನನ್ನು ಅರಿತೋ ಏನೋ, ಲಕ್ಷ್ಮೀ ಹಾಗೆಲ್ಲ ತುಂಟತನ ಮಾಡೊಲ್ಲ. ಆದರೂ ಸೊಸೆಯೇನಾದರೂ ಹಾಲು ಕರೆಯಲು, ಗೋಮಯ ಸಾಫ್ ಮಾಡಲು ಬಂದರೆ ಲಕ್ಷ್ಮೀ ಎಂದಿಗೂ ಸಹಕರಿಸುವುದಿಲ್ಲ.

ಒಮ್ಮೆ ನನಗೆ ಸರಿಯಾಗಿ ನೆನಪು. ದೊಡ್ಡಮ್ಮನಿಗೆ ಅವತ್ತು ವಿಪರೀತ ಜ್ವರ. ಎದ್ದು ನಡೆದಾಡಲೂ ಆಗದಷ್ಟು ವೀಕ್ ನೆಸ್. ಅಂಥ ಸಮಯದಲ್ಲಿ ಲಕ್ಷ್ಮೀಯ ಆರೈಕೆ ಸಾಧ್ಯವೆ? ಹೀಗಾಗಿ ಸೊಸೆ ಕೊಟ್ಟಿಗೆ ಕ್ಲೀನ್ ಮಾಡಲು ಹಿಡಿಸುಡಿ ಹಿಡಿದು ತಯಾರಾದಾಗ ಲಕ್ಷ್ಮೀ ಕೊಟ್ಟಿಗೆಯಿಂದ ಹೊರಹೋಗಲು ಕೇಳಳು. ದೊಡ್ಡಮ್ಮನ ಜ್ವರದಷ್ಟೇ ವಿಪರೀತ ಲಕ್ಷ್ಮೀಯ ಹಠ. ಸೊಸೆಯ ಬೈಗುಳ, ಲಕ್ಷ್ಮೀಯ ಕೂಗು ಕೇಳಿ ದೊಡ್ಡಮ್ಮ ಹೇಗೋ ಕಷ್ಟಪಟ್ಟು ಕೊಟ್ಟಿಗೆ ಬಳಿ ಬಂದಿದ್ದಳು. ದೊಡ್ಡಮ್ಮ ಬಂದು ಲಕ್ಷ್ಮೀಯನ್ನು ಮಾತಾಡಿಸಿದಾಗಲೇ ಅದಕ್ಕೆ ಸಮಾಧಾನ.

ಮತ್ತೊಮ್ಮೆ ಮಗ ಸೊಸೆ ಇಲ್ಲದಾಗ ದೊಡ್ಡಮ್ಮ ಲಕ್ಷ್ಮೀಯ ಹತ್ತಿರ ತುಳುವಿನಲ್ಲಿ ಮಾತಾಡುತ್ತಿದ್ದಳು. ನೀ ಯಾಕೆ ಹೀಗೆ ಹಠ ಮಾಡ್ತೀ? ನನ್ನ ಸೊಸೆ ಹತ್ರ ನೀ ಹೀಗೆ ನಡ್ಕೊಂಡ್ರೆ ನಾನು ಸತ್ತುಹೋದ ಮೇಲೆ ನಿನ್ನನ್ನ ಯಾರ್ ನೋಡ್ಕೋತಾರೆ? ನನ್ ಮೇಲೆ ಎಷ್ಟ್ ಪ್ರೀತಿ ಇಟ್ಟಿದೀಯೋ ಅವಳಿಗೂ ತೋರ್ಸು.. ಎಷ್ಟಂದ್ರೂ ನನ್ ಸೊಸೆ ಅಲ್ವಾ?

ಲಕ್ಷ್ಮೀಗೆಷ್ಟು ಅರ್ಥವಾಯ್ತೊ?

****

ದೊಡ್ಡಮ್ಮನಿಗೆ ಕಾಲುನೋವು ಜಾಸ್ತಿಯಾಗ್ತಾ ಇದ್ದಂತೆ ರಾಘಣ್ಣ ಉಡುಪಿಯಲ್ಲಿರೋ ಡಾಕ್ಟರುಗಳ ಹತ್ತಿರವೆಲ್ಲಾ ಸುತ್ತಾಡಿದ. ಆಯುರ್ವೇದಿಕ್, ಅಲೋಪತಿ ಎಲ್ಲಾ ಮಾರ್ಗಗಳನ್ನೂ ಜಾಲಾಡಿದ್ದಯಿತು. ದೊಡ್ಡಮ್ಮನ ಕಾಲುನೋವು ವಾಸಿಯಾಗಲಿಲ್ಲ. ಕೆಲವೊಮ್ಮೆ ಡಾಕ್ಟರ್ ಬಳಿ ಹೋಗುವುದಕ್ಕೂ ಆಗದಂಥ ಪೀಡಿಸುತ್ತಿತ್ತು. ಕಾಲು ನೋವಿಂದ ದಿನೇ ದಿನೇ ದೊಡ್ಡಮ್ಮ ಹೈರಾಣಾಗುತ್ತಿದ್ದ ಸಮಯದಲ್ಲಿ ರಾಘಣ್ಣ ಒಂದು ಕಾರು ಕೊಂಡ. ಬಿಳೀ ಬಣ್ಣದ ಮಾರುತಿ ಒಮಿನಿ. ದೊಡ್ಡಮ್ಮ ಪಕ್ಕದ ಮನೆಯವರ ಬಳಿ ” ಎನ್ನ ಈ ಕಾರ್ ನಂಬೆರೆಗಾಪುರಿ.. ಐಕೆ ಮಗೆ ಎಂಕು ಆ ಕಾರ್ ಕೊಣತಿನಿ” (ನನ್ನ ಈ ಕಾಲು ನಂಬಲಾಗದು, ಅದಕ್ಕೆ ಮಗ ಆ ಕಾರ್ ತಂದಿದ್ದು) ಅಂತಾ ಇದ್ಲು.

ರಾಘಣ್ಣ ರಜೆ ಇದ್ದಾಗಲೆಲ್ಲ ದೊಡ್ಡಮ್ಮನನ್ನು ದೇವಸ್ಥಾನಗಳಿಗೆ ಸುತ್ತಾಡಿಸುತ್ತಿದ್ದ. ಕರಾವಳಿಯಲ್ಲಿ ತಿಂಗಳಿಡೀ ತಿರುಗಿದರೂ ಒಂದಿಷ್ಟು ದೇವಸ್ಥಾನಗಳು ನೋಡಲು ಬಾಕಿಯಿರುವಷ್ಟಿವೆ. ಭಾನುವಾರ ಬಂದರೆ ಸಾಕು, ಬೆಳಿಗ್ಗೆಯೇ ಕಾರು ಹತ್ತುತ್ತಿದ್ದರು. ದೊಡ್ಡಮ್ಮ ಕಾರಿನಲ್ಲಿ ರಾಘಣ್ಣನಿಗೆ ಹೇಳುತ್ತಿದ್ದರು.. ದೇವಸ್ಥಾನಗಳನ್ನೆಲ್ಲಾ ನಿಮ್ ವಯಸ್ಸಲ್ಲೇ ನೋಡಬೇಕಿತ್ತು, ಈಗ ನೋಡು ತುಂಬಾ ಕಷ್ಟ ಅದಕ್ಕೇ ಎಲ್ಲಾ ದೇವಸ್ಥಾನಗಳು ಬೆಟ್ಟದ ಮೇಲಿವೆ.. ಸುಲಭವಾಗಿ ನೋಡಬೇಕೆಂದರೆ ಚಿಕ್ಕ ವಯಸ್ಸಲ್ಲೇ ನೋಡಬೇಕು, ಇಲ್ಲಾಂದರೆ ನೋಡು ನನಗಾದಂಥ ಪಜೀತಿಗಳು.. ಅನ್ನುತ್ತಿದ್ದಳು. ದೇವಸ್ಥಾನಗಳಿಗೆ ಸ್ವಲ್ಪ ಮೆಟ್ಟಿಲುಗಳಿದ್ದರೂ ದೊಡ್ಡಮ್ಮನಿಗೆ ತ್ರಾಸವಾಗುತ್ತಿತ್ತು.

ಹೀಗೆ ತಿಂಗಳುಗಳುರುಳಿದವು. ಅದೊಮ್ಮೆ ದೊಡ್ಡಮ್ಮ ಇನ್ನು ಎಲ್ಲಿಗೂ ಬರಲಾಗುವುದಿಲ್ಲ ಎಂಬಂತೆ ಕೂತುಬಿಟ್ಟಳು. ರಾಘಣ್ಣನಿಗೂ ಆತಂಕವಾಯ್ತು. ಸಂಜೆ ಕೆಲಸದಿಂದ ಬರುತ್ತಲೇ ಕಾರ್ ನವರೆಗಾದರೂ ಬಾ ಡಾಕ್ಟರ್ ಬಳಿ ಕರ್ಕೊಂಡು ಹೋಗ್ತೀನಿ ಅಂತ ಒತ್ತಾಯಿಸಿದ. ಒಂದು ಬಗಲನ್ನು ಸೊಸೆ ಕೈಗಿತ್ತು ಇನ್ನೊಂದನ್ನು ಮಗನ ಕೈಗಿತ್ತು ಹೇಗೋ ಕಾರ್ ಹತ್ತಿ ಕೂತಳು.

***

ಆಸ್ಪತ್ರೆಯಲ್ಲಿ ಎರಡು ದಿನ ಇದ್ದ ನಂತರ ದೊಡ್ಡಮ್ಮ ಸ್ವಲ್ಪ ಗೆಲುವಾದಳು. ರಾಘಣ್ಣನಿಗೂ ನಿರಾಳವಾಯ್ತು. ತುಂಬಾ ಕಟ್ಟುನಿಟ್ಟಾಗಿ ಮನೆಗೆ ಹೋಗಿ ರೆಸ್ಟ್ ತಗೋಬೇಕು ಕೆಲ್ಸ ಮಾಡಿದರೆ ನೋಡು ಅಂತ ಪ್ರೀತಿಯಿಂದ ಬೈದ. ಆಸ್ಪತ್ರೆಯಿಂದ ಬರುತ್ತಾ ಇರುವಾಗ ಸೊಸೆ ತರಕಾರಿ ತಗೆದುಕೊಳ್ಳಬೇಕಿತ್ತು ಅನ್ನುವುದನ್ನು ನೆನಪಿಸಿಕೊಂಡಳು. ದೊಡ್ಡಮ್ಮನನ್ನು ಕಾರಿನಲ್ಲೇ ಇರಿಸಿ ರಾಘಣ್ಣ ಮತ್ತವನ ಹೆಂಡತಿ ತರಕಾರಿ ಕೊಂಡುಕೊಳ್ಳಲು ಹೋದರು. ಅದು ರಥಬೀದಿ. ಕಾರನ್ನು ರಥಬೀದಿಯ ಆವರಣದ ಹೊರಗೇ ನಿಲ್ಲಿಸಬೇಕಿತ್ತು.

MANGALORE BAJJI

ದೊಡ್ಡಮ್ಮ ಕಾರಿಂದ ಹೊರ ನೋಡುತ್ತಿದ್ದರೆ ಬಾಲ್ಯದ, ಯೌವ್ವನದ ದಿನಗಳೆಲ್ಲ ನೆನಪಾದವು. ತುಂಬಾ ಹಳೇಯ ರಥಬೀದಿ, ಅಂಥ ಬದಲಾವಣೆಗಳೇನೂ ಆಗಿದ್ದಿಲ್ಲ. ಅಲ್ಲಿ ಇಲ್ಲಿ ಎಟಿಎಮ್ಮುಗಳಾದವು ಅನ್ನೋದು ಬಿಟ್ಟರೆ ಮತ್ತೆಲ್ಲಾ ಹಾಗೆ ಇದೆ. ಮನಸ್ಸು ಹೊರ ಹೋಗಬೇಕು ರಥಬೀದಿಯ ಆ ತಿರುವಲ್ಲೇನಿದೆ ಅಂತ ನೋಡಬೇಕು ಅಂತೆಲ್ಲಾ ಅನ್ನಿಸಿದರೂ ದೇಹ ಸಹಾಯಮಾಡದು. ಕೊಂಚ ಮುಂದೆ ಹೋಗಿ ಬಲಕ್ಕೆ ತಿರುಗಿದರೆ ಅಲ್ಲೊಂದು ಹೋಟೆಲು.. ಹಾಂ.. ಹೋಟೆಲ್ ಜನತಾ… ಆ ಹೋಟೆಲ್ಲಿನ ಗೋಳಿಬಜೆ ನೆನಪಾಯಿತು. ಆ ಹೋಟೆಲ್ಲು ಈಗಲೂ ಇದ್ದಿರಬಹುದಾ? ಗೋಳಿಬಜೆ ಈಗಲೂ ಅಲ್ಲಿ ಫೇಮಸ್ಸಾ? ಮೆಲ್ಲ ಹನಿವ ಮಳೆಯಲ್ಲಿ ಹೋಟೆಲು ಹೊಕ್ಕು ಚಿನ್ನದ ಬಣ್ಣದ ಬಿಸಿ ಬಿಸಿ ಗೋಳಿಬಜೆಯನ್ನು ಚಟ್ನಿಯಲ್ಲಿ ಮೆಲ್ಲಿದರೆ… ಒಂದೊಂದೇ ತುಂಡು ಬಾಯಲ್ಲಿರಿಸಿಕೊಂಡು ಕಣ್ಮುಚ್ಚಿದರೆ.. ಗೋಳಿಬಜೆಯ ಹದ ಬಿಸಿ, ಅದು ಚಟ್ನಿಯ ಜೊತೆ ಸೇರಿ ನಾಲಿಗೆಗೆ ತಾಕಿದೊಡನೆ ಆಗುವ ಉನ್ಮಾದ.. ಅಗಿಯುವಾಗ ಮಧ್ಯೆ ಕಾಯಿಯ ತುಂಡು ಬಾಯಿಗೆ ಸಿಕ್ಕಾಗ ಆಗುವ ಪರಮಾನಂದ… ಜತೆಗೆ ಚೂರು ಬಿಸೀ ಫಿಲ್ಟರ್ ಕಾಫಿಯಿದ್ದಿದ್ದರೆ…

ದೊಡ್ಡಮ್ಮನ ಬಾಯಲ್ಲಿ ನೀರೂರಿತು.

*****

ರಾಘಣ್ಣ ಹೆಂಡತಿ ಬರುವ ಹೊತ್ತಿಗೆ ದೊಡ್ಡಮ್ಮ ನಿದ್ದೆ ಹೋಗಿದ್ದರು. ಬಾಯಲ್ಲಿ ಜೊಲ್ಲು ಸುರಿದಿತ್ತು. ರಾಘಣ್ಣ ತನ್ನ ಅಮ್ಮನ ಮುಖದಲ್ಲಿನ ಭಾವ ನೋಡಿದೊಡನೆಯೆ ಒಂಥರಾ ಆಯಿತು. ಎದೆಯ ಮೂಲೆಯಲ್ಲೆಲ್ಲೋ ಮುಳ್ಳೊಂದು ಚುಚ್ಚಿದ ಭಾವ. ದೊಡ್ಡಮ್ಮನ ಹತ್ತಿರ ಬಂದು ಜೊಲ್ಲು ಒರೆಸಿದ.

ದೊಡ್ದಮ್ಮನಿಗೆ ಎಚ್ಚರವಾಗದಂತೆ ಕಾರು ಮೆಲ್ಲಗೇ ಓಡಿಸಿದರೂ ರಸ್ತೆಯಲ್ಲಿ ವಿಪರೀತ ಜನಸಂದಣಿಯಿದ್ದಿದ್ದರಿಂದ ಮಧ್ಯೆ ಅವಳಿಗೆ ಎಚ್ಚರವಾಯಿತು. ಅದೇ ಸಮಯದಲ್ಲಿ ತನ್ನ ಕಾರಿಗೆ ಸ್ಕೂಟರೊಂದು ತಾಕಿದ್ದರಿಂದ ಡೆಂಟ್ ಆಗಿತ್ತು. ರಾಘಣ್ಣ ಕಾರಿಳಿದು ಸ್ಕೂಟರಿನವನೊಂದಿಗೆ ಜಗಳಾಡಿದ. ಸ್ಕೂಟರಿನವನು ರಾಘಣ್ಣನಿಗೇ ಬೈದು, ತಪ್ಪೆಲ್ಲಾ ರಾಘಣ್ಣನದೇ ಎಂದು ವಾದಿಸಿದ. ಜನ ಸೇರಿದರು. ಟ್ರಾಫಿಕ್ಕು ಜಾಮ್ ಆಯಿತು. ಟ್ರಾಫಿಕ್ ಪೋಲಿಸ್ ಬಂದು ಎರಡೂ ವಾಹನದ ನಂಬರ್ ಬರೆದುಕೊಂಡ. ಜನರಲ್ಲೇ ಒಬ್ಬ ಯಾಕೆ ಸುಮ್ಮನೆ ಜಗಳ ಸಾರ್ ಬಿಟ್ಬಿಡಿ ಎಂದ. ಟ್ರಾಫಿಕ್ ಪೋಲಿಸ್ ಕೂಡ ಹತ್ತಿರ ಇದ್ದುದರಿಂದ ಇಬ್ಬರೂ ಸುಮ್ಮನೆ ವಿವಾದ ಯಾಕೆ ಅಂತ ಬರೀ ಫೋನ್ ನಂಬರ್ ಇಸ್ಕೊಂಡು ನಂತರ ಮಾತಾಡೋಣ ಅಂತ ಜಗಳ ಬಿಟ್ಟರು.

ದೊಡ್ಡಮ್ಮನಿಗೆ ಎಚ್ಚರಾದ ಕೂಡಲೇ ರಾಘಣ್ಣ ಕಾರಿಳಿದು ಸ್ಕೂಟರಿನವನ ಹತ್ತಿರ ಜಗಳಕ್ಕಿಳಿದಿದ್ದ. ಸುತ್ತಲೂ ಅಯೋಮಯವಾಗಿ ನೋಡಿದ ದೊಡ್ಡಮ್ಮ ಅಂದಿದ್ದು ’ರಥಬೀದಿ ಬುಡ್ತಾನಾ” (ರಥಬೀದಿ ಬಿಟ್ಟಾಯ್ತಾ?).

ಜಗಳ ಮುಗಿಸಿ ಮತ್ತೆ ಡ್ರೈವ್ ಮಾಡಲು ಕುಳಿತ ರಾಘಣ್ಣ ನ ಸಿಟ್ಟಿನ್ನೂ ಇಳಿದಿರಲಿಲ್ಲ. ತನ್ನ ಹೆಂಡತಿ ಬಳಿ ನೋಡು ಹೇಗಿದ್ದಾನೆ, ತಪ್ಪೆಲ್ಲಾ ನನ್ ಮೇಲೆ ಹಾಕುವಷ್ಟು ಕೊಬ್ಬು.. ಅನ್ನುತ್ತಿರಬೇಕಾದರೆ ತಾಲ್ಲೂಕಾಫೀಸು ತಿರುವು ಬಂದಿತ್ತು. ದೊಡ್ಡಮ್ಮ, “ರಾಘೂ, ಜನತೊಂಕ್ ಪೋವೊಳಿ ಇತ್ತ್ಂಡ್.. ಗೋಳಿಬಜೆ ತಿನರೆಗ್ ಮನಸಾನ್…” (ರಾಘೂ, ಜನತಾಕ್ಕೆ ಹೋಗ್ಬಹುದಿತ್ತು, ಗೋಳಿಬಜೆ ತಿನ್ನೋಕೆ ಮನಸ್ಸಾಗ್ತಿದೆ)

ರಾಘಣ್ಣ ಸಿಟ್ಟಿಂದ ಇಲ್ಲಿಗ್ ಬಂದಾದ್ಮೇಲೆ ಹೇಳ್ಬೇಕಾ? ಈ ಟ್ರಾಫಿಕ್ಕ್ ನಲ್ಲಿ ಮತ್ತೆ ನನ್ಗೆ ವಾಪಸ್ ಹೋಗೋಕ್ಕಾಗಲ್ಲ ಅಂತ ಬೈದ.

ದೊಡ್ಡಮ್ಮ ಮರುಮಾತಾಡಲಿಲ್ಲ.

*****

ಮತ್ತೆ ಆ ದಿನ ರಾತ್ರಿ ದೊಡ್ಡಮ್ಮನಿಗೆ ಜ್ವರ ಜಾಸ್ತಿಯಾಯ್ತು. ಕಾಲುನೋವಿನ ಜತೆಗೆ ಬೆನ್ನೂ ನೋಯುತ್ತಿದೆ ಅಂತ ತ್ರಾಸಪಡುತ್ತಾ ಹೇಳುತ್ತಿದ್ದಳು. ಸೊಸೆಗೆ ಏನು ಮಾಡಲೂ ತೋಚದಂಥ ಭಯ. ಡಾಕ್ಟರನ್ನು ಕರ್ಕೊಂಡು ಬರ್ತೀನಿ ಅಂತ ಹೋದ ರಾಘಣ್ಣ ವಾಪಸ್ಸ್ ಬರುವುದರೊಳಗೆ ದೊಡ್ಡಮ್ಮ ಪ್ರಾಣ ಬಿಟ್ಟಳು.

****

ರಾಘಣ್ಣ ಗೋಳಿಬಜೆ ಕೊಡಿಸಲಾಗದ ಗಿಲ್ಟ್ ನಿಂದ ನಲುಗಿಹೋದ. ಹೆಂಡತಿ ಹತ್ತಿರ ಸುಮ್ಮ ಸುಮ್ಮನೆ, ಅಮ್ಮನನ್ನು ಮತ್ತೊಂದು ದಿನ ಕರ್ಕೊಂಡು ಹೋಗ್ತೇನೆ ಅಂದುಕೊಂಡಿದ್ದೆ ಅನ್ನೋದನ್ನ ನೀನಾದ್ರೂ ನಂಬ್ತೀಯಲ್ವಾ ಅಂತ ಕೇಳ್ತಿದ್ದ. ಮತ್ತೆ ಈ ಜನ್ಮದಲ್ಲಿ ಗೋಳಿಬಜೆ ತಿನ್ನಲ್ಲ ಅಂತ ಶಪಥ ಮಾಡಿದ.

****

ಹೊರಗೆ ಕೀಂ ಕೀಂ ಕಾರು ಹಾರ್ನ್ ಕೇಳಿಸಿತು. ರಾಘಣ್ಣ. ಬಿಳೀ ಮಾರುತಿ ಒಮಿನಿ. ಹೇಗಿದ್ದೀಯೋ ಅಂತ ತಲೆ ನೇವರಿಸಿ ಕೇಳಿದ. ನನ್ನಮ್ಮನಿಗೆ ಕಾಲುನೋವು ಹೇಗಿದೆ ಅಂತ ವಿಚಾರಿಸಿದ. ಎಲ್ಲೋ ಮಲೆನಾಡಿನಿಂದ ತಂದ ನೋವಿನೆಣ್ಣೆ ಹಾಕಿಕೊ ಅಂತ ಕೊಟ್ಟ. ಖುಷಿಯಿಂದ ಊಟ ಮಾಡಿದ. ಅಡುಗೆ ಸೂಪರ್ರಾಗಿದೆ ಅಂದ.

ಎಲ್ಲಿಗಾದರೂ ಹೋಗಬೇಕಿದೆ, ಯಾವುದಾದರೂ ಸ್ಥಳ ನೋಡಬೇಕಾಗಿದೆ ಅನ್ನಿಸಿದರೆ ಹೇಳು ಕರ್ಕೊಂಡು ಹೋಗ್ತೀನಿ ಅಂದ.

ರಾಘಣ್ಣ ಹೊರಟು ನಿಂತಾಗ ನನ್ನಮ್ಮನನ್ನು ನೋಡಿದ. ಅದು ಥೇಟ್ ರಾಘಣ್ಣ ದೊಡ್ಡಮ್ಮನನ್ನು ನೋಡಿದ ಹಾಗೆಯೇ ಅನ್ನಿಸಿತು. “ಅಮ್ಮ, ರಾಘಣ್ಣನನ್ನು ಇಲ್ಲೇ ಇಪ್ಪುಕೆ ಹೇಳಮ್ಮ” ಅಂದೆ. ಅಮ್ಮ ನಸುನಕ್ಕು, “ಈಗ ಅವ ಹೋಯಾಯ್ತಲ್ಲ.. ಇನ್ನೊಂದ್ಸಲ ಬರ್ಲಿ.. ಹೋಪುಕ್ ಬಿಡೂದೇ ಬ್ಯಾಡ’ ಅಂದಳು.

~END~

(“ಸಖಿ” ವಾರಪತ್ರಿಕೆಯಲ್ಲಿ ಪ್ರಕಟಿತ)